ಕರ್ನಾಟಕ

karnataka

ನಕಲಿ ಬಿಲ್ ಆರೋಪ: ಜಾಗೃತ ದಳದಿಂದ ತನಿಖೆ, ತಪ್ಪಿತಸ್ಥರ ವಿರುದ್ಧ ಕ್ರಮ: ಗೋವಿಂದ ಕಾರಜೋಳ

By

Published : Jan 5, 2022, 8:41 AM IST

ನೀರಾವರಿ ನಿಗಮದ ಅಥಣಿ ವಿಭಾಗದಲ್ಲಿ 28 ಕೋಟಿ ರೂಪಾಯಿ ನಕಲಿ ಬಿಲ್ಲಿನ ಪಾವತಿ ಬೆಳಕಿಗೆ ಬಂದಿದ್ದು, 20 ಜನ ಅಧಿಕಾರಿಗಳನ್ನು ಅಮಾನತ್ತಿನಲ್ಲಿರಿಸಲಾಗಿದೆ ಮತ್ತು ಇವರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗಿದೆ. ಇಂತಹ ಬೇರೆ ಯಾವುದಾದರೂ ಪ್ರಕರಣಗಳು ಗಮನಕ್ಕೆ ಬಂದರೆ ಅಂತವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಲಾಗುವುದು ಎಂದು ಸಚಿವ ಗೋವಿಂದ ಕಾರಜೋಳ ತಿಳಿಸಿದರು.

Govinda Karajola
ಪ್ರಗತಿ ಪರಿಶೀಲನೆ ಸಭೆ ನಡೆಸಿ ಬಳಿಕ ಮಾತನಾಡಿದ ಗೋವಿಂದ ಕಾರಜೋಳ

ಬೆಂಗಳೂರು: ಜಲ‌ ನಿಗಮಗಳಲ್ಲಿ ನಕಲಿ ಬಿಲ್ ಆರೋಪ ಕೇಳಿ ಬರುತ್ತಿದ್ದು ಈ ಹಿನ್ನೆಲೆ ನಿಗಮಗಳ ಅನುಮಾನಾಸ್ಪದ ಹಣಕಾಸು ವಹಿವಾಟನ್ನು ಜಾಗೃತ ದಳದ ತನಿಖೆಗೆ ಒಪ್ಪಿಸಲಾಗಿದೆ. ಪ್ರಕರಣಗಳು ಗಮನಕ್ಕೆ ಬಂದರೆ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಎಚ್ಚರಿಕೆ ನೀಡಿದರು.

ವಿಕಾಸ ಸೌಧದಲ್ಲಿ ಕರ್ನಾಟಕ ನೀರಾವರಿ ನಿಗಮದ ಪ್ರಗತಿ ಪರಿಶೀಲನೆ ಸಭೆ ನಡೆಸಿ ಬಳಿಕ ಮಾತನಾಡಿದ ಅವರು, ನೀರಾವರಿ ನಿಗಮದ ಅಥಣಿ ವಿಭಾಗದಲ್ಲಿ 28 ಕೋಟಿ ರೂಪಾಯಿ ನಕಲಿ ಬಿಲ್ಲಿನ ಪಾವತಿ ಬೆಳಕಿಗೆ ಬಂದಿದ್ದು, 20 ಜನ ಅಧಿಕಾರಿಗಳನ್ನು ಅಮಾನತ್ತಿನಲ್ಲಿರಿಸಲಾಗಿದೆ ಮತ್ತು ಇವರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗಿದೆ.

ಆಸ್ತಿ ಪರಭಾರೆ ಆಗದಂತೆ ನಿಯಮಾನುಸಾರ ಋಣಭಾರ ಸೃಷ್ಟಿಸಲು ಜಿಲ್ಲಾಧಿಕಾರಿಗಳನ್ನು ಮತ್ತು ಉಪ ನೋಂದಣಾಧಿಕಾರಿಗಳನ್ನು ಕೋರಲಾಗಿದೆ. ಇಂತಹ ಪ್ರಕರಣಗಳನ್ನು ಜಾಗೃತ ದಳದ ತನಿಖೆಗೆ ಒಪ್ಪಿಸಲಾಗಿದೆ. ಬೇರೆ ಯಾವುದಾದರೂ ಪ್ರಕರಣಗಳು ಗಮನಕ್ಕೆ ಬಂದರೆ ಅಂತವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಲಾಗುವುದೆಂದು ತಿಳಿಸಿದರು.

ಪ್ರಗತಿ ಪರಿಶೀಲನೆ ಸಭೆ ನಡೆಸಿ ಬಳಿಕ ಮಾತನಾಡಿದ ಗೋವಿಂದ ಕಾರಜೋಳ

ಕರ್ನಾಟಕ ನೀರಾವರಿ ನಿಗಮದ ಪ್ರಗತಿ ಪರಿಶೀಲನೆ ಕೈಗೊಳ್ಳಲಾಗಿದ್ದು, 18,000 ಕೋಟಿ ರೂಪಾಯಿ ವೆಚ್ಚದ ನೀರಾವರಿ ಕಾಮಗಾರಿಗಳು ನಡೆಯುತ್ತಿದೆ. ನಿಗಮದ ಒಟ್ಟಾರೆ ನೀರಾವರಿ ಸಾಮರ್ಥ್ಯದ ಗುರಿ 17,14,337 ಹೆಕ್ಟೇರ್ ಆಗಿದ್ದು, ಈ ಪೈಕಿ ನವೆಂಬರ್ 2021 ರ ಅಂತ್ಯದ ವೇಳೆಗೆ 14,66,251 ಹೆಕ್ಟೇರ್ ಸಾಮರ್ಥ್ಯ ಸೃಷ್ಟಿಸಲಾಗಿದ್ದು, ಇನ್ನೂ 2,45,086 ಹೆಕ್ಟೇರ್ ಗುರಿ ಸಾಧಿಸಬೇಕಿದೆ. ಪ್ರಸ್ತುತ ಸಾಲಿನಲ್ಲಿ 45,337 ಹೆಕ್ಟೇರ್ ನೀರಾವರಿ ವ್ಯಾಪ್ತಿಗೆ ಒಳಪಡಿಸಲಾಗಿದೆ ಎಂದು ವಿವರಿಸಿದರು.

ನಿನ್ನೆ ಇಡೀ ದಿನ ನೀರಾವರಿ ನಿಗಮದ ಪ್ರಗತಿ ಪರಿಶೀಲನೆ ಕೈಗೊಳ್ಳಲಾಗಿದ್ದು, ಯೋಜನಾವಾರು ಪ್ರಗತಿಯ ವಿವರಗಳನ್ನು ಪರಿಶೀಲನೆ ಮಾಡಲಾಗಿದೆ ಎಂದು ಸಚಿವರು ತಿಳಿಸಿದರು. ಪ್ರಸ್ತುತ 18,153 ಕೋಟಿ ರೂ. ಯೋಜನೆಗಳು ಚಾಲ್ತಿಯಲ್ಲಿದ್ದು, ಕರ್ನಾಟಕ ನೀರಾವರಿ ನಿಗಮಕ್ಕೆ 5,809 ಕೋಟಿ ರೂಪಾಯಿಗಳ ಮುಂಗಡ ಅಂದಾಜು ಮಂಜೂರಾಗಿದೆ. ಈ ಪೈಕಿ ನವೆಂಬರ್ ಅಂತ್ಯದ ವೇಳೆಗೆ 3,200 ಕೋಟಿ ರೂ. ವೆಚ್ಚ ಮಾಡಲಾಗಿದೆ ಎಂದು ಅವರು ವಿವರಿಸಿದರು.

ಡ್ರಿಪ್ ಇರಿಗೇಷನ್​ಗೆ ರೈತರು ಸ್ಪಂದಿಸುತ್ತಿಲ್ಲ, ರೈತರಿಗೆ ಉಪಯೋಗ ಮಾಡಿಕೊಡುವಲ್ಲಿ ವಿಫಲವಾಗಿದೆ. ಡ್ರಿಪ್ ಬದಲು ರೈಸಿಂಗ್ ನೀರಾವರಿ ಅಳವಡಿಕೆಗೆ ನಿರ್ಧರಿಸಿದ್ದೇವೆ. ಭೂ ಸ್ವಾಧೀನ ಕೂಡ ವಿಳಂಬವಾಗ್ತಿದೆ. ವಿಳಂಬ ಮಾಡಿದರೆ ರೈತರು, ಸರ್ಕಾರಕ್ಕೂ ತೊಂದರೆಯಾಗುತ್ತದೆ. ಭೂ ಸ್ವಾಧೀನಕ್ಕೆ ಮೊದಲ ಆದ್ಯತೆ ಕೊಟ್ಟಿದ್ದೇವೆ ಎಂದರು.

ನೀರಾವರಿ ನಿಗಮದಲ್ಲಿ 64 ಯೋಜನೆಗಳಿವೆ. 2,297 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಇದ್ದು, ಇದಕ್ಕೆ 90,1176 ಕೋಟಿ ರೂ. ಮೀಸಲಿಡಲಾಗಿದೆ. 817 ಕೆರೆಗಳಿಗೆ ನೀರು ತುಂಬಿಸಲಾಗ್ತಿದೆ ಎಂದು ತಿಳಿಸಿದರು.

ಕಮಿಷನ್ ಆರೋಪದಲ್ಲಿ ಹುರುಳಿಲ್ಲ:

ಟೆಂಡರ್​ನಲ್ಲಿ 40% ಕಮಿಷನ್ ವಿಚಾರವಾಗಿ ಮಾತನಾಡಿದ ಅವರು, ರಾಜ್ಯದಲ್ಲಿ 42 ಸಾವಿರ ಜನ ಗುತ್ತಿಗೆದಾರರು ಇದ್ದಾರೆ. ಅಧಿಕೃತವಾಗಿ ನೋಂದಣಿ ಮಾಡಿಕೊಂಡವರಿದ್ದಾರೆ. ಆರೋಪ ಮಾಡುತ್ತಿರುವ ಗುತ್ತಿಗೆದಾರ ಕೆಂಪಣ್ಣನವರ ಸಂಘದಲ್ಲಿ 820 ಜನ ಇದ್ದಾರೆ. ಕೆಂಪಣ್ಣ ರಾಜಕೀಯ ಪ್ರೇರಿತವಾಗಿ ಆರೋಪ ಮಾಡ್ತಿದ್ದಾರೆ ಎಂದು ಕಿಡಿ ಕಾರಿದರು.

ಗುತ್ತಿಗೆದಾರರ ಸಂಘ ಸಂಘವೇ ಅಲ್ಲ. ಅದಕ್ಕೆ ಕಿಮ್ಮತ್ತಿದ್ಯಾ?, ಇಲ್ವೋ ನೀವೇ ಯೋಚಿಸಿ. ಅವರ ಬಳಿ ದಾಖಲಾತಿ ಇದ್ದರೆ ಕೊಡಲಿ. ನಾವು ತನಿಖೆ ಮಾಡುತ್ತೇವೆ. ಅವರು ಶೇ 40ರಷ್ಟು ಕಮಿಷನ್ ಕೊಟ್ಟಿದ್ದೇವೆ ಎಂದು ಆರೋಪಿಸಿದ್ದಾರೆ. ಜೊತೆಗೆ ಸರ್ಕಾರಕ್ಕೆ ಜಿಎಸ್ ಟಿ, ರಾಯಲ್ಟಿ ಎಲ್ಲವೂ ಸೇರಿ ಶೇ 20ರಷ್ಟು ತೆರಿಗೆ ಪಾವತಿಸಬೇಕು. ಅಲ್ಲಿಗೆ ಅವರು ಕಮಿಷನ್ ಮತ್ತು ತೆರಿಗೆ ಸೇರಿಶೇ 60ರಷ್ಟು ಕೊಟ್ಟ ಹಾಗೆ ಆಯಿತು. ಉಳಿದಿರುವ ಶೇ 40ರಷ್ಟು ಹಣದಲ್ಲಿ ಅವರು ಯಾವ ಕಾಮಗಾರಿ ಮಾಡಿದ್ದಾರೆ ಎಂದು ತೋರಿಸಲಿ ಎಂದು ಸವಾಲು ಹಾಕಿದರು.

ABOUT THE AUTHOR

...view details