ಬೆಂಗಳೂರು:ವೈದ್ಯೋ ನಾರಾಯಣ ಹರಿ ಅಂತಾರೆ. ಕೋವಿಡ್ ಸಮಯದಲ್ಲಿ ಆ ದೇವರು, ಸಂಬಂಧಿಕರು ಯಾರೂ ಸಹಾಯಕ್ಕೆ ಬರಲಿಲ್ಲ. ಆದರೆ, ವೈದ್ಯರು ಕುಟುಂಬವನ್ನೆಲ್ಲ ಬಿಟ್ಟು ಜನರ ಆರೈಕೆ ಮಾಡಿದರು. ನಾಳೆ ವೈದ್ಯರ ದಿನ. ಸಂಭ್ರಮಿಸಬೇಕಾದ ದಿನದಲ್ಲಿ ವೈದ್ಯರ ಮೇಲೆ ಹಲ್ಲೆಗಳಾಗುತ್ತಿರುವುದು ಬೇಸರದ ಸಂಗತಿ.
ಕಳೆದ ಕೆಲ ದಿನಗಳ ಹಿಂದೆ ನಗರದ ಫೋರ್ಟಿಸ್ ಆಸ್ಪತ್ರೆಯ ಹಿರಿಯ ಸಲಹೆಗಾರ ಹಾಗೂ ಕ್ರಿಟಿಕಲ್ ಕೇರ್ ಮೆಡಿಸನ್ ವೈದ್ಯ ಡಾ.ಪದ್ಮಕುಮಾರ್ ಎ.ವಿ ಮೇಲೆ ರೋಗಿಯ ಕುಟುಂಬಸ್ಥರಿಂದ ಹಲ್ಲೆ ಮಾಡಲಾಗಿತ್ತು. ಈ ಕೋವಿಡ್ ಮಹಾಮಾರಿ ವಕ್ಕರಿಸಿದಾಗಿನಿಂದ ಒಂದು ದಿನವೂ ರಜೆ ಪಡೆಯದೇ ಜನರ ಸೇವೆ ಮಾಡಿದ್ದರ ಫಲವಾಗಿ ನನಗೆ ಸಿಕ್ಕಿದ್ದು ಹಲ್ಲೆ ಮಾತ್ರ ಎಂದು 'ಈಟಿವಿ ಭಾರತ'ದೊಂದಿಗೆ ತಮ್ಮ ಮನದಾಳದ ನೋವನ್ನು ಹಂಚಿಕೊಂಡಿದ್ದಾರೆ.
ಕೋವಿಡ್ ಪಾಸಿಟಿವ್ ಆಗಿದ್ದ ಇಳಿ ವಯಸ್ಸಿನ ವ್ಯಕ್ತಿಯನ್ನು ಅವರ ಕುಟುಂಬದವರು ಬನ್ನೇರುಘಟ್ಟದ ಫೋರ್ಟಿಸ್ ಆಸ್ಪತ್ರೆಗೆ ದಾಖಲಿಸಿದ್ದರು. ರೋಗಿ ಪಾಸಿಟಿವ್ ಜೊತೆಗೆ ಬಹು ಅಂಗಾಂಗ ವೈಫಲ್ಯ ಹಾಗೂ ಪಾರ್ಶ್ವವಾಯು ಸಮಸ್ಯೆಯಿಂದಲೂ ಬಳಲುತ್ತಿದ್ದರು. ಕೋವಿಡ್ ಪಾಸಿಟಿವ್ ಆದ ಬಳಿಕ ಈ ಎಲ್ಲಾ ಸಮಸ್ಯೆಗಳು ತೀವ್ರವಾದ್ದರಿಂದ ಅವರು ಬದುಕುವುದು ಕಷ್ಟವೆಂದು ಹೇಳಲಾಗಿತ್ತು. ಆದರೂ ಅವರ ಕುಟುಂಬದವರು ಬದುಕಿಸಲೇಬೇಕೆಂಬ ಹಠದ ಧೋರಣೆ ತೋರಿದ್ದರು. ಪ್ರಾರಂಭದಲ್ಲಿ ನಾವು ಅವರಿಗೆ ರೋಗಿಯ ಆರೋಗ್ಯದ ಸ್ಥಿತಿಯನ್ನು ಅರ್ಥ ಮಾಡಿಸಲು ಪ್ರಯತ್ನ ಪಟ್ಟೆವು. ಆದರೆ, ರೋಗಿಯ ಮಗ ಇದನ್ನು ಕೇಳಲು ತಾಳ್ಮೆಯೇ ವಹಿಸುತ್ತಿರಲಿಲ್ಲ. ನಾವು ಸಾಧ್ಯವಾದಷ್ಟು ಪ್ರಯತ್ನ ಪಡುವುದಾಗಿಯೂ ಭರವಸೆ ನೀಡಿದ್ದೆವು.