ಕರ್ನಾಟಕ

karnataka

By

Published : May 20, 2021, 1:58 PM IST

ETV Bharat / city

ಕಪ್ಪು ಶಿಲೀಂಧ್ರ ರೋಗಕ್ಕೆ ಔಷಧಿ ಕೊರತೆ, ಸೂಕ್ತ ಪರಿಹಾರ ಕಲ್ಪಿಸುವುದು ಸರ್ಕಾರದ ಹೊಣೆ: ಹೆಚ್​ಡಿಕೆ

ಕಪ್ಪು ಶಿಲೀಂಧ್ರ ಚಿಕಿತ್ಸೆಗೆ ಅಗತ್ಯವಿರುವ ಲಿಪೊಸೋಮಲ್ ಆಂಫೊಟೆರಿಸಿನ್ ಬಿ ಔಷಧ ಕೊರತೆ ನಿವಾರಿಸುವುದು ಈ ಹೊತ್ತಿನ ಅಗತ್ಯ. ಕಪ್ಪು ಶಿಲೀಂಧ್ರ ರೋಗ ಕೋವಿಡ್​ನಂತೆ ಅಲ್ಲ. ಅದಕ್ಕಿಂತಲೂ ಭೀಕರ.

ಹೆಚ್​ಡಿಕೆ
ಹೆಚ್​ಡಿಕೆ

ಬೆಂಗಳೂರು: ಕಪ್ಪು ಶಿಲೀಂಧ್ರ ರೋಗಕ್ಕೆ ಚಿಕಿತ್ಸೆ ನಿರಾಕರಿಸುವಂತಿಲ್ಲ ಎಂದು ಸರ್ಕಾರ ಹೇಳಿದೆ. ಆದರೆ ರೋಗದ ಚಿಕಿತ್ಸೆಗೆ ಅಗತ್ಯವಿರುವ ಲಿಪೊಸೋಮಲ್ ಆಂಫೊಟೆರಿಸಿನ್ ಬಿ ಔ‍ಷಧ ದಾಸ್ತಾನು ರಾಜ್ಯದಲ್ಲಿ ಇಲ್ಲ. ದೊಡ್ಡ ಮಟ್ಟದಲ್ಲಿ ಕಾಡುವ ಮುನ್ಸೂಚನೆ ನೀಡಿರುವ ರೋಗದ ನಿಯಂತ್ರಣಕ್ಕೆ ಸರ್ಕಾರ ಯಾವ ಹಂತಕ್ಕೆ ಸಿದ್ಧವಾಗಿದೆ ಎಂಬುದಕ್ಕೆ ಔಷಧ ಕೊರತೆ ಸಾಕ್ಷಿ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ದೂರಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ಕಪ್ಪು ಶಿಲಿಂಧ್ರ ರೋಗಕ್ಕೆ ಆರಂಭದಲ್ಲೇ ಚಿಕಿತ್ಸೆ ನೀಡಬೇಕು. ಯಾಕೆಂದರೆ ರೋಗ ಅತ್ಯಂತ ವೇಗವಾಗಿ ವ್ಯಾಪಿಸುತ್ತದೆ. 2-3 ದಿನಗಳಲ್ಲಿ ಅದು ಕಣ್ಣು, ಕಿವಿ ಮತ್ತು ಮೆದುಳನ್ನು ವ್ಯಾಪಿಸುತ್ತದೆ ಎನ್ನುತ್ತಾರೆ ತಜ್ಞರು. ಹೀಗಾಗಿ ಇದಕ್ಕೆ ತುರ್ತು ಚಿಕಿತ್ಸೆ ಅನಿವಾರ್ಯ. ಅತ್ಯಂತ ತುರ್ತಿನ ಈ ಕಾಯಿಲೆಯನ್ನು ಔಷಧವೇ ಇಲ್ಲದೆ ಎದುರಿಸಲು ಸಾಧ್ಯವೇ? ಎಂದು ಪ್ರಶ್ನಿಸಿದ್ದಾರೆ.

ಕೋವಿಡ್‌ನಿಂದ ಚೇತರಿಕೆ ಕಂಡು ಬಿಡುಗಡೆಯಾಗಿರುವವರ ಪೈಕಿ ವಾರಕ್ಕೆ 400 ಮಂದಿ ಕಪ್ಪು ಶಿಲೀಂಧ್ರ ರೋಗಕ್ಕೆ ತುತ್ತಾಗಲಿದ್ದಾರೆ ಎಂದು ಸರ್ಕಾರಕ್ಕೆ ತಜ್ಞರು ತಿಳಿಸಿದ್ದಾರೆ. ಸೋಂಕಿತರಿಗೆ ನೀಡುತ್ತಿರುವ ಚಿಕಿತ್ಸೆ ವಿಧಾನ ಈ ರೋಗಕ್ಕೆ ಮೂಲ ಕಾರಣ. ಹೀಗಾಗಿ ಇದು ಸರ್ಕಾರವೇ ಆಹ್ವಾನಿಸಿದ ಅಪಾಯ. ಸೂಕ್ತ ಪರಿಹಾರ ಕಲ್ಪಿಸುವುದೂ ಸರ್ಕಾರದ ಹೊಣೆ ಎಂದು ಹೇಳಿದ್ದಾರೆ.

ಕಪ್ಪು ಶಿಲೀಂಧ್ರ ಚಿಕಿತ್ಸೆಗೆ ಅಗತ್ಯವಿರುವ ಲಿಪೊಸೋಮಲ್ ಆಂಫೊಟೆರಿಸಿನ್ ಬಿ ಔಷಧ ಕೊರತೆ ನಿವಾರಿಸುವುದು ಈ ಹೊತ್ತಿನ ಅಗತ್ಯ. ಕಪ್ಪು ಶಿಲೀಂಧ್ರ ರೋಗ ಕೋವಿಡ್​ನಂತೆ ಅಲ್ಲ. ಅದಕ್ಕಿಂತಲೂ ಭೀಕರ. ಈ ಕಾಯಿಲೆಯಲ್ಲಿ ಸಾವಿನ ಪ್ರಮಾಣವೂ ಅಧಿಕವಾಗಿರುವುದು ಆತಂಕ ಮತ್ತು ಗಮನಿಸಲೇಬೇಕಾದ ಸಂಗತಿ. ಸರ್ಕಾರ ಔಷಧ ಹೊಂದಿಸುವುದರತ್ತ ಕೂಡಲೇ ಗಮನ ಹರಿಸಲಿ ಎಂದು ಸಲಹೆ ನೀಡಿದ್ದಾರೆ.

ಭಾರತದ ಸೇರಂ​ ಇನ್ಸ್​ಟಿಟ್ಯೂಟ್​, ಸನ್ ಫಾರ್ಮಾ, ನೈಲಾನ್​, ಸಿಪ್ಲಾ, ಗುಫಿಕ್ ಸೆಲೋನ್ ಕಂಪನಿಗಳು ಮತ್ತು ವಿದೇಶದ ಸ್ವಿಸ್ ಪೇರೆಂಟರಲ್ಸ್ (ಸ್ವಿಟ್ಜರ್ಲೆಂಡ್), ಆಸ್ಪೆನ್ (ಆಸ್ಟ್ರೇಲಿಯಾ), ಅಬಾಟ್ ಲ್ಯಾಬೋರೇಟರೀಸ್​ (ಯುಎಸ್ಎ), ಅರ್ಕೋಫಾರ್ಮಾ (ಯುಎಸ್ಎ) ಕಂಪನಿಗಳು ಕಪ್ಪು ಶಿಲೀಂಧ್ರ ರೋಗಕ್ಕೆ ಔಷಧ ತಯಾರಿಸುತ್ತವೆ. ಈ ಕಂಪನಿಗಳಿಂದ ಸರ್ಕಾರ ಕೂಡಲೇ ಔಷಧ ತರಿಸಿಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ABOUT THE AUTHOR

...view details