ಕರ್ನಾಟಕ

karnataka

By

Published : Jan 20, 2022, 10:49 PM IST

ETV Bharat / city

ರಾಜ್ಯದಲ್ಲಿ ಕೋವಿಡ್ ಹೆಚ್ಚುತ್ತಿದ್ದರೂ ಸರ್ಕಾರ ಬೆಚ್ಚಗೆ ಮಲಗಿದೆ: ಸಿದ್ದರಾಮಯ್ಯ ಆರೋಪ

ನೆಗಡಿ, ಕೆಮ್ಮು, ಜ್ವರದಿಂದ ಬಳಲುತ್ತಿರುವವರಲ್ಲಿ ಶೇ.90-93 ರಷ್ಟು ಜನ ಆಸ್ಪತ್ರೆಗೆ ಹೋಗದೆ ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮಾಧ್ಯಮ ವರದಿಗಳು ಹೇಳುತ್ತಿವೆ. ಇವರಲ್ಲಿ ಕೊರೊನಾ ಸೋಂಕಿತರೆಷ್ಟು? ಬೇರೆ ಖಾಯಿಲೆ ಪೀಡಿತರೆಷ್ಟು ಎಂಬ ಬಗ್ಗೆ ನಿಖರವಾದ ಮಾಹಿತಿ ಸರ್ಕಾರದಲ್ಲಿಯೂ ಇಲ್ಲ. ಇದು ಅಪಾಯಕಾರಿ ಅಲ್ಲವೇ? ಎಂದಿದ್ದಾರೆ.

siddaramaiah
ಸಿದ್ದರಾಮಯ್ಯ

ಬೆಂಗಳೂರು:ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಸಂದರ್ಭದಲ್ಲಿ ಯಾವುದೇ ಕ್ರಮ ಕೈಗೊಳ್ಳದೆ ಸರ್ಕಾರ ಬೆಚ್ಚಗೆ ಮಲಗಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.

ಟ್ವೀಟ್ ಮೂಲಕ ತಮ್ಮ ಬೇಸರ ವ್ಯಕ್ತಪಡಿಸಿರುವ ಅವರು, ಕೊರೊನಾ ಉಲ್ಭಣಿಸುತ್ತಿದ್ದರೂ ರೋಗಿಗಳ ಆರೈಕೆಯನ್ನು ಖಾಸಗಿ ಆಸ್ಪತ್ರೆಗಳಿಗೆ ವಹಿಸಿ ಬಿಜೆಪಿ ಸರ್ಕಾರ ಬೆಚ್ಚಗೆ ಮಲಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ, ಪತ್ರಿಕೆಗಳಿಗೆ ಸುಳ್ಳು ಜಾಹೀರಾತು ನೀಡಿ ತನ್ನ ಬೆನ್ನು ತಾನೇ ತಟ್ಟಿಕೊಳ್ಳುವುದಲ್ಲ, ಅದೇ ಪತ್ರಿಕೆಗಳು ಪ್ರಕಟಿಸುತ್ತಿರುವ ಸತ್ಯ ಸಂಗತಿಗಳ ವರದಿಗಳನ್ನೂ ಓದಿ, ಎಚ್ಚೆತ್ತುಕೊಳ್ಳಿ ಎಂದಿದ್ದಾರೆ.

ಕೊರೊನಾ ಸೋಂಕಿನ ಜೊತೆ ಅದೇ ರೀತಿಯ ರೋಗ ಲಕ್ಷಣಗಳ ಶೀತ-ನೆಗಡಿ-ಜ್ವರಗಳ ಬಾಧೆಯೂ ಹೆಚ್ಚುತ್ತಿರುವುದರಿಂದ ಯಾವುದು ಕೊರೊನಾ ಯಾವುದು ಅಲ್ಲ ಎನ್ನುವುದನ್ನು ತಿಳಿದುಕೊಳ್ಳಲಾಗದೆ ಜನ ಗೊಂದಲದಲ್ಲಿದ್ದಾರೆ. ಸೋಂಕಿತರು ಮನೆಯಲ್ಲಿಯೇ ಇರಿ ಎಂದು ರಾಜ್ಯ ಬಿಜೆಪಿ ಸರ್ಕಾರವೇ ಹೇಳಿ, ಆ ಗೊಂದಲವನ್ನು ಇನ್ನಷ್ಟು ಹೆಚ್ಚಿಸುತ್ತಿದೆ ಎಂದಿದ್ದಾರೆ.

ನೆಗಡಿ, ಕೆಮ್ಮು, ಜ್ವರದಿಂದ ಬಳಲುತ್ತಿರುವವರಲ್ಲಿ ಶೇ.90-93 ರಷ್ಟು ಜನ ಆಸ್ಪತ್ರೆಗೆ ಹೋಗದೆ ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮಾಧ್ಯಮ ವರದಿಗಳು ಹೇಳುತ್ತಿವೆ. ಇವರಲ್ಲಿ ಕೊರೊನಾ ಸೋಂಕಿತರೆಷ್ಟು? ಬೇರೆ ಕಾಯಿಲೆ ಪೀಡಿತರೆಷ್ಟು ಎನ್ನುವುದರ ಬಗ್ಗೆ ನಿಖರವಾದ ಮಾಹಿತಿ ಸರ್ಕಾರದಲ್ಲಿಯೂ ಇಲ್ಲ. ಇದು ಅಪಾಯಕಾರಿ ಅಲ್ಲವೇ? ಎಂದು ಪ್ರಶ್ನಿಸಿದ್ದಾರೆ.

ಕೋವಿಡ್ ಚಿಕಿತ್ಸೆಗೆ ನಿಗದಿತ 1.94 ಲಕ್ಷ ಹಾಸಿಗೆಗಳಲ್ಲಿ 51,093 ಹಾಸಿಗೆಗಳು ಮಾತ್ರ ಸರ್ಕಾರಿ, ಉಳಿದೆಲ್ಲವೂ ಖಾಸಗಿ ಆಸ್ಪತ್ರೆಗಳಿಗೆ ಸೇರಿವೆ ಎಂದು ವರದಿಗಳು ಹೇಳುತ್ತಿವೆ. ಈ ವ್ಯವಸ್ಥೆ ಜನಹಿತಕ್ಕಾಗಿಯೇ? ಇಲ್ಲವೆ, ಖಾಸಗಿ ಆಸ್ಪತ್ರೆಗಳ ಹಿತಕ್ಕಾಗಿಯೇ? ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದ್ದಾರೆ.

ಕೊರೊನಾ ಸೋಂಕು ಹಳ್ಳಿಗಳಿಗೆ ಹರಡುತ್ತಿದೆ ಎಂದು ರಾಜ್ಯ ಬಿಜೆಪಿ ಸರ್ಕಾರ ಹೇಳುತ್ತಿದೆ. ಹಿಂದಿನ ವೈಫಲ್ಯಗಳ ಅನುಭವದ ಹೊರತಾಗಿಯೂ ಗ್ರಾಮೀಣ ಪ್ರದೇಶದಲ್ಲಿ ಆರೋಗ್ಯ ಮೂಲಸೌಕರ್ಯಗಳನ್ನು ಹೆಚ್ಚಿಸುವ ಕೆಲಸವನ್ನು ಮಾಡದೆ ಕರ್ಫ್ಯೂ, ಲಾಕ್​ಡೌನ್​ಗಳನ್ನು ನಂಬಿ ಕೂತಿದೆ ಎಂದು ಲೇವಡಿ ಮಾಡಿದ್ದಾರೆ.

ಇದನ್ನೂ ಓದಿ:ರಾಜ್ಯದಲ್ಲಿಂದು 47,754 ಹೊಸ ಕೋವಿಡ್ ಕೇಸ್​​​.. ದಿಢೀರ್​ ಹೆಚ್ಚಾಯ್ತು ಮರಣ ಪ್ರಮಾಣ!

ABOUT THE AUTHOR

...view details