ಕರ್ನಾಟಕ

karnataka

By

Published : May 1, 2022, 1:29 PM IST

Updated : May 1, 2022, 1:35 PM IST

ETV Bharat / city

ಸಾರಿಗೆ ನಿಗಮದ ಇತಿಹಾಸದಲ್ಲೇ ಪ್ರಥಮ ಬಾರಿಗೆ 7,200 ನೌಕರರ ಶಿಸ್ತು ಪ್ರಕರಣ ಮನ್ನಾ‌

ನಿಗಮದ ಒಟ್ಟು ಸಿಬ್ಬಂದಿ 35,000. ಅದರಲ್ಲಿ 8,414 ಶಿಸ್ತು ಪ್ರಕರಣಗಳಿವೆ. ಕಳೆದ‌ ಮೂರು ದಿನಗಳಿಂದ 7,200 ಶಿಸ್ತು ಪ್ರಕರಣಗಳನ್ನು ಅತೀ ಕಡಿಮೆ ಮೊತ್ತದ ದಂಡ ಅಂದರೆ ರೂ100, ರೂ 200, ಗರಿಷ್ಠ ರೂ.500 ವಿಧಿಸಿ ಮುಕ್ತಾಯಗೊಳಿಸಲಾಗಿದೆ.

MD Anbukumar wished employees who had completed the disciplinary proceedings by giving order copy
ಶಿಸ್ತು ಪ್ರಕರಣಗಳು ಮುಕ್ತಾಯಗೊಂಡಿರುವ ನೌಕರರಿಗೆ ಆದೇಶ‌ದ‌ ಪ್ರತಿಯನ್ನು ಸಿಹಿ ವಿತರಿಸಿ ಎಂಡಿ ಅನ್ಬುಕುಮಾರ್ ಶುಭ ಕೋರಿದರು.

ಬೆಂಗಳೂರು: ಇಂದು ಸಾರಿಗೆ ನಿಗಮದ‌ ಎಲ್ಲಾ ವಿಭಾಗಗಳ ವ್ಯಾಪ್ತಿಯಲ್ಲಿ ಕಾರ್ಮಿಕರ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ನಿಗಮದ ಇತಿಹಾಸದಲ್ಲಿಯೇ ಪ್ರಪ್ರಥಮ ಬಾರಿಗೆ 7,200 ನೌಕರರ ಶಿಸ್ತು ಪ್ರಕರಣಗಳನ್ನು ಒಂದು ಬಾರಿಗೆ ಮಾತ್ರ ಅನ್ವಯಿಸುವಂತೆ ಮನ್ನಾ‌ ಮಾಡಲಾಗಿದೆ.

ಹತ್ತು ತಿಂಗಳುಗಳ ಅವಧಿಗಿಂತ ಕಡಿಮೆ ಅವಧಿಯೊಳಗಿನ ಗೈರುಹಾಜರಿಯನ್ನು ಮನ್ನಿಸಿ ಕೂಡಲೇ ಕರ್ತವ್ಯಕ್ಕೆ ಹಾಜರಾಗುವ ನೌಕರರ ವಿಚಾರಣೆಯನ್ನು ರದ್ದುಗೊಳಿಸಿ, ಬಸ್ಸನ್ನು ನೀಡಿ ಚಾಲನೆಗೆ ಅನುವು ಮಾಡಿಕೊಡಲಾಗಿದೆ. ಅದರಂತೆ ಗೈರುಹಾಜರಾಗಿದ್ದ 110 ನೌಕರರು ಕಳೆದ ಮೂರು ದಿನಗಳಿಂದ ಕರ್ತವ್ಯ ಹಾಜರಾಗಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

MBBS, M.Tech ಇತರೆ ಹೆಚ್ಚಿನ ವಿದ್ಯಾಭ್ಯಾಸ ಮಾಡಿರುವ ನೌಕರರ ಮಕ್ಕಳಿಗೆ ಸನ್ಮಾನ

ನಿಗಮದ ಸಮಸ್ತ ಸಿಬ್ಬಂದಿ 35,000, ಅದರಲ್ಲಿ ಒಟ್ಟು 8414 ಶಿಸ್ತ ಪ್ರಕರಣಗಳಿದ್ದು, ಕಳೆದ‌ ಮೂರು ದಿನಗಳಿಂದ 7200 ಶಿಸ್ತು ಪ್ರಕರಣಗಳನ್ನು ಅತೀ ಕಡಿಮೆ ಮೊತ್ತದ ದಂಡ ಅಂದರೆ, ರೂ100, ರೂ 200, ಗರಿಷ್ಠ ರೂ.500 ಅನ್ನು ವಿಧಿಸಿ ಪ್ರಕರಣಗಳನ್ನು ಮುಕ್ತಾಯಗೊಳಿಸಲಾಗಿದೆ. ಈ ಪ್ರಕರಣಗಳಿಗೆ ಕನಿಷ್ಠವೆಂದರೆ ರೂ.25,000 ದಂಡ ವಿಧಿಸಬಹುದಾದ ಪ್ರಕರಣಗಳಾಗಿದ್ದವು.‌ ಇಂದು ಶಿಸ್ತು ಪ್ರಕರಣಗಳು ಮುಕ್ತಾಯಗೊಂಡಿರುವ ನೌಕರರಿಗೆ ಆದೇಶ‌ದ‌ ಪ್ರತಿಯನ್ನು ಸಿಹಿ ವಿತರಿಸಿ ಎಂಡಿ ಅನ್ಬುಕುಮಾರ್ ಶುಭ ಕೋರಿದರು.

ಬಳಿಕ ಮಾತನಾಡಿದ ಅವರು, ಕಾರ್ಮಿಕ ದಿನಾಚರಣೆಯ ಇತಿಹಾಸ, ಸಿದ್ಧಾಂತ, ವಿಶೇಷತೆ ಕುರಿತು ವಿವರಿಸಿ, ನಮ್ಮ ಸಾರಿಗೆ ಸಂಸ್ಥೆಯ ಬೆನ್ನುಲುಬು ನಮ್ಮ ಕಾರ್ಮಿಕರು, ಅವರ ಕ್ಷೇಮ‌ ಲಾಭವೇ ನಮ್ಮ‌ ಪ್ರಮುಖ ಆದ್ಯತೆಯಾಗಿರಬೇಕು. ನಮ್ಮ ಸಂಸ್ಥೆ ನಡೆಯುತ್ತಿರುವುದು ಚಾಲಕ,‌ ನಿರ್ವಾಹಕ, ತಾಂತ್ರಿಕ ಸಿಬ್ಬಂದಿಯಿಂದಾನೇ ಹೊರತು ವ್ಯವಸ್ಥಾಪಕ ನಿರ್ದೇಶಕರಿಂದಲ್ಲ ಎಂದರು.

ವ್ಯವಸ್ಥಾಪಕ ನಿರ್ದೇಶಕರು ಬಸ್ಸನ್ನು ಚಾಲನೆ ಮಾಡಲು ಸಾಧ್ಯವಿಲ್ಲ. ಅಧಿಕಾರಿ/ನೌಕರರ ಬಾಂಧವ್ಯ ಚೆನ್ನಾಗಿದ್ದರೆ ಮಾತ್ರ ಸಂಸ್ಥೆ ಚೆನ್ನಾಗಿರುತ್ತದೆ. ಆಡಳಿತ ವರ್ಗ ಅಂದರೆ ಶಿಕ್ಷೆ ಕೊಡುವುದು ಮಾತ್ರವಲ್ಲ, ನೌಕರರ ಶ್ರೇಯೋಭಿವೃದ್ದಿಗಾಗಿ ದುಡಿಯುವುದು‌ ಕೂಡ ನಮ್ಮ ಕರ್ತವ್ಯವಾಗಿರಬೇಕು. ಆದರೆ ನೌಕರರು ಮತ್ತೊಮ್ಮೆ ಅಪರಾಧ/ಅಪಘಾತ/ಗೈರು‌ ಹಾಜರಿ ಪ್ರಕರಣಗಳಲ್ಲಿ ಭಾಗಿಯಾಗದಂತೆ ಎಚ್ಚರಿಕೆ ಸಹ ನೀಡಿದರು.

ನಿಗಮದ ಪ್ರತಿದಿನದ ಸರಾಸರಿ ಆದಾಯ 10 ಕೋಟಿ ರೂ ಇರಬೇಕು. ಆದರೆ ನಮಗೆ ಸರಾಸರಿ 8 ಕೋಟಿ ಮಾತ್ರ ಬರುತ್ತಿದೆ. ಇದರಲ್ಲಿ 70% ಡೀಸೆಲ್ ಪಾವತಿಗೆ ಸಂದಾಯ ಮಾಡಬೇಕಾಗಿದೆ. ಆದ್ದರಿಂದ ನಿಗಮದ ಆರ್ಥಿಕ ಪರಿಸ್ಥಿತಿಯು ಕ್ಲಿಷ್ಟಕರವಾದ ಸ್ಥಿತಿಯಲ್ಲಿದೆ. ನಮ್ಮ‌ ನೌಕರರು ಸಹ ನಮ್ಮ ಸಾರಿಗೆ ಸೇವೆಯನ್ನು ಬಲಪಡಿಸಿ, ಉತ್ತಮ ಸೇವೆಯನ್ನು ಸಾರ್ವಜನಿಕರಿಗೆ ನೀಡಲು ನಮ್ಮೊಡನೆ ಕೈಜೋಡಿಸಬೇಕು. ಆಗ ಮಾತ್ರ ಸಂಸ್ಥೆ ಇನ್ನೂ ಬೆಳವಣಿಗೆ ಕಾಣಲು ಸಾಧ್ಯ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ MBBS, M.Tech ಇತರೆ ಹೆಚ್ಚಿನ ವಿದ್ಯಾಭ್ಯಾಸ ಮಾಡಿರುವ ನೌಕರರ ಮಕ್ಕಳನ್ನು ಸನ್ಮಾನಿಸಿ,‌ ಮುಂದೆ ನೀವುಗಳು ಕೂಡ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾಗಿ ಈ ಸಂಸ್ಥೆಯನ್ನು ಮುನ್ನಡೆಸುವ ಶುಭ ಕಾಲ ಬರಲಿ, ಶಿಕ್ಷಣ ಒಂದೇ ಆಯುಧ ಅದನ್ನು ನಮ್ಮ‌ ನೌಕರರು ತಮ್ಮ ಮಕ್ಕಳಿಗೆ ನೀಡಿ ಪ್ರೋತ್ಸಾಹಿಸಬೇಕು ಎಂದು ತಿಳಿಸಿದರು.

ಈ‌‌ ಸಂದರ್ಭದಲ್ಲಿ ಮುಖ್ಯ ಯಾಂತ್ರಿಕ ಶಿಲ್ಪಿ, ಮುಖ್ಯ ಸಂಚಾರ ವ್ಯವಸ್ಥಾಪಕರು, ಮುಖ್ಯ ಕಾರ್ಮಿಕ ಕಲ್ಯಾಣಾಧಿಕಾರಿ, ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ, ವಿಭಾಗೀಯ ‌ನಿಯಂತ್ರಣಾಧಿಕಾರಿ ಹಾಗೂ ಇತರರು ಉಪಸ್ಥಿತರಿದ್ದರು.

ಇದನ್ನೂ ಓದಿ:ಕಾರ್ಮಿಕರ ದಿನ: ಶುಭ ಕೋರಿದ ಸಿಎಂ ಬೊಮ್ಮಾಯಿ, ಬಿಎಸ್​​ವೈ

Last Updated : May 1, 2022, 1:35 PM IST

ABOUT THE AUTHOR

...view details