ಬೆಂಗಳೂರು: ಕೋವಿಡ್ ಮತ್ತು ನೆರೆ ಹಿನ್ನೆಲೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಈ ವರ್ಷ ಜನ್ಮದಿನ ಆಚರಿಸಿಕೊಳ್ಳದಿರಲು ನಿರ್ಧರಿಸಿದ್ದಾರೆ. ಕೋವಿಡ್ ಹಿನ್ನೆಲೆಯಲ್ಲಿ ಜನರು ಸಂಕಷ್ಟಕ್ಕೆ ಸಿಲುಕಿದ್ದು, ಜತೆಗೆ ಮಳೆ-ನೆರೆ ವಿಕೋಪಗಳಿಂದ ತತ್ತರಿಸಿದ್ದಾರೆ. ಹೀಗಾಗಿ ವಿಜೃಂಭಣೆಯಿಂದ ನನ್ನ ಹುಟ್ಟುಹಬ್ಬ ಮಾಡುವುದು ಬೇಡ ಎಂದು ಅವರು ಮನವಿ ಮಾಡಿದ್ದಾರೆ.
ಕೋವಿಡ್ ಕಾರಣಕ್ಕೆ ನಾವೆಲ್ಲರೂ ಸಂಕಷ್ಟದಲ್ಲಿದ್ದೇವೆ. ಅಪಾರ ಸಾವು-ನೋವು ಕಂಡಿದ್ದೇವೆ. ಮಳೆ-ನೆರೆ ವಿಕೋಪಗಳಿಂದ ತತ್ತರಿಸಿದ್ದೇವೆ. ರೈತರು ಕಣ್ಣೀರಲ್ಲಿ ಕೈ ತೊಳೆಯುತ್ತಿದ್ದಾರೆ. ಈ ಕಷ್ಟದಲ್ಲಿ ಅದ್ಧೂರಿ ಜನ್ಮದಿನ ಆಚರಣೆ ನನ್ನ ಮನಸ್ಸಿಗೆ ಒಪ್ಪುವುದಿಲ್ಲ ಎಂದಿದ್ದಾರೆ.
ಹಾರ-ತುರಾಯಿ ಹಾಕಿ, ಕೇಕ್ ಕತ್ತರಿಸಿ ಸಂಭ್ರಮಿಸುವುದು ಬೇಡ. ನಮ್ಮ ಪಕ್ಷದ ಎಲ್ಲ ಕಾರ್ಯಕರ್ತರು, ಮುಖಂಡರು, ಹಿತೈಷಿಗಳು, ಅಭಿಮಾನಿಗಳು, ಕಾರ್ಯಕರ್ತರು ಹಣ ಖರ್ಚು ಮಾಡಿಕೊಂಡು ನನ್ನಲ್ಲಿಗೆ ಬರುವುದು ಬೇಡ. ನೀವಿದ್ದಲ್ಲಿಯೇ ಬಡವರಿಗೆ, ದೀನ ದಲಿತರಿಗೆ, ಮಳೆ-ನೆರೆಯಿಂದ ತತ್ತರಿಸಿದ ಜನರಿಗೆ ನೆರವಾಗುವ ಮೂಲಕ ನನ್ನ ಜನ್ಮದಿನಕ್ಕೆ ಸಾರ್ಥಕತೆ ತನ್ನಿ ಎಂದು ಹೆಚ್ಡಿಕೆ ಮನವಿ ಮಾಡಿದ್ದಾರೆ.
ಶುಭ ಕೋರಿದ ಮುಖಂಡರು:ಇಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರ ಜನ್ಮದಿನದ ಅಂಗವಾಗಿ ಪಕ್ಷದ ಮುಖಂಡರು, ಅಭಿಮಾನಿಗಳು ಶುಭ ಕೋರಿದ್ದಾರೆ.
ಇದನ್ನೂ ಓದಿ:ರಾಜ್ಯದಲ್ಲೇ ಮೊದಲ ಬಾರಿಗೆ ಕಪ್ಪು ಶಿಲೆಯಲ್ಲಿ ಅಪ್ಪು ಪುತ್ಥಳಿ ನಿರ್ಮಾಣ.. ದಾವಣಗೆರೆಯಲ್ಲಿ ಪ್ರತಿಮೆ ಅನಾವರಣ