ಕರ್ನಾಟಕ

karnataka

ETV Bharat / city

ಕೃಷಿ ಆಧಾರಿತ ಉದ್ಯಮ ಸ್ಥಾಪನೆ, ಗ್ರಾಮೀಣ ಆರ್ಥಿಕತೆ ಸುಧಾರಣೆಗೆ ಒತ್ತು: ಹೂಡಿಕೆದಾರರಿಗೆ ಸಿಎಂ ಮನವಿ

ಸ್ವಿಟ್ಜರ್​​ಲೆಂಡ್​​ನ ದಾವೋಸ್​​ನಲ್ಲಿ ಜರುಗುತ್ತಿರುವ ವಿಶ್ವ ಆರ್ಥಿಕ ಸಮ್ಮೇಳನದಲ್ಲಿ ವಿವಿಧ ಹೂಡಿಕೆದಾರರು ಹಾಗೂ ಉದ್ಯಮಿಗಳೊಂದಿಗೆ ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ಚರ್ಚೆ ನಡೆಸಿ, ಹೆಚ್ಚಿನ ಉದ್ಯೋಗ ಸೃಷ್ಟಿಗೆ ಒತ್ತು ನೀಡುವಂತೆ ಹೂಡಿಕೆದಾರರಿಗೆ ಮನವಿ ಮಾಡಿದ್ದಾರೆ.

By

Published : Jan 21, 2020, 8:13 PM IST

BSY Discussion with Investors & Entrepreneurs
ಹೂಡಿಕೆದಾರರಿಗೆ ಮುಖ್ಯಮಂತ್ರಿ ಮನವಿ

ದಾವೊಸ್/ ಬೆಂಗಳೂರು:ರಾಜ್ಯದಲ್ಲಿ ಕೃಷಿ ಕೇಂದ್ರಿತ ಉದ್ಯಮ ಸ್ಥಾಪನೆಗೆ ಹಾಗೂ ಹೆಚ್ಚಿನ ಉದ್ಯೋಗ ಸೃಷ್ಟಿಗೆ ಒತ್ತು ನೀಡುವಂತೆ ಹೂಡಿಕೆದಾರರಿಗೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಮನವಿ ಮಾಡಿದ್ದಾರೆ.

ಸ್ವಿಟ್ಜರ್​​ಲೆಂಡ್​​ನ ದಾವೋಸ್​​ನಲ್ಲಿ ನಡೆಯುತ್ತಿರುವ ವಿಶ್ವ ಆರ್ಥಿಕ ಸಮ್ಮೇಳನದಲ್ಲಿ ವಿವಿಧ ಹೂಡಿಕೆದಾರರು ಹಾಗೂ ಉದ್ಯಮಿಗಳೊಂದಿಗೆ ಸಿಎಂ ಬಿಎಸ್​​ವೈ ಚರ್ಚೆ ನಡೆಸಿದರು. ಸ್ವಿಸ್ ಮೂಲದ 2000 ವ್ಯಾಟ್ ಕಂಪನಿಯ ಪ್ರತಿನಿಧಿಗಳೊಂದಿಗಿನ ಚರ್ಚೆಯ ಸಂದರ್ಭದಲ್ಲಿ ಮುಖ್ಯಮಂತ್ರಿ ಅವರು, ರೈತರ ಆತ್ಮಹತ್ಯೆ ತಡೆಯುವ ನಿಟ್ಟಿನಲ್ಲಿ ಕೃಷಿ ಆಧಾರಿತ ಆರ್ಥಿಕತೆ ಸುಧಾರಿಸುವ ಯೋಜನೆಗಳ ಕುರಿತು ಅಪೇಕ್ಷೆ ವ್ಯಕ್ತಪಡಿಸಿದರು.

ರಾಜ್ಯಕ್ಕೆ ಹೊಸ ಯೋಜನೆಗಳು, ಬಂಡವಾಳ ಹೂಡಿಕೆ ಖಂಡಿತ ಬರಬೇಕು. ಆರ್ಥಿಕತೆಗೆ ಉತ್ತೇಜನ ನೀಡುವ ಜೊತೆಗೆ ಯುವಕರನ್ನು ಸ್ವಾವಲಂಬಿಗಳನ್ನಾಗಿಸಲು ಉದ್ಯೋಗಾವಕಾಶ ಸೃಷ್ಟಿಸಬೇಕಾಗಿದೆ. ಸಭೆಯಲ್ಲಿ ವ್ಯಾಟ್ ಕಂಪನಿಯ ಫುಡ್ ಕ್ಲಸ್ಟರ್​​​ಗಳ ಅಭಿವೃದ್ಧಿ ಯೋಜನೆ ಕುರಿತು ವಿಶೇಷ ಆಸಕ್ತಿ ವಹಿಸಿದ ಸಿಎಂ, ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ ಮಾಡುವಂತಹ ಯೋಜನೆಗಳು ಅಗತ್ಯ ಎಂದು ಅಭಿಪ್ರಾಯಪಟ್ಟರು.

ವಿಶ್ವ ಆರ್ಥಿಕ ಸಮ್ಮೇಳನದಲ್ಲಿ ಬಿಎಸ್​​ವೈ, ಜಗದೀಶ್​ ಶೆಟ್ಟರ್​​

ಈ ಕುರಿತು ಪ್ರಾತ್ಯಕ್ಷಿಕೆ ನೀಡಿದ ಕಂಪನಿ ಪ್ರತಿನಿಧಿಗಳು, ತಮ್ಮ ಬಳಿ ತಂತ್ರಜ್ಞಾನ ಇರುವುದಾಗಿ ಹಾಗೂ ಕೃಷಿ ಉತ್ಪನ್ನಗಳಿಗೆ ಉತ್ತಮ ಬೆಲೆ ದೊರಕಿಸಲು ಪೂರಕವಾದ ಫುಡ್ ಕ್ಲಸ್ಟರ್​ಗಳ ಅಭಿವೃದ್ಧಿಯಲ್ಲಿ ಹೂಡಿಕೆ ಮಾಡಲು ಆಸಕ್ತಿ ಹೊಂದಿರುವುದಾಗಿ ವಿವರಿಸಿದರು. ಸತ್ವಪೂರ್ಣ ಆಹಾರ ಬೆಳೆಯಲು ಅಗತ್ಯವಿರುವ ಎಲ್ಲ ನೆರವು ಮತ್ತು ವೈಜ್ಞಾನಿಕ ಕೃಷಿ ತಂತ್ರಜ್ಞಾನಗಳನ್ನು ಒದಗಿಸುತ್ತೇವೆ. ಈ ಉತ್ಪನ್ನಗಳ ಮೌಲ್ಯವರ್ಧನೆ ಮೂಲಕ ಉತ್ತಮ ಮಾರುಕಟ್ಟೆ ಒದಗಿಸಲಾಗುವುದು ಎಂದು ಸಂಸ್ಥೆಯ ವಿಜ್ಞಾನಿ ಆಂಡ್ರಿಯಾಸ್ ಬಿಂಕರ್ಟ್ ತಿಳಿಸಿದರು.

ಕಂಪನಿಯ ಸಂಸ್ಥಾಪಕ ಪಾಲುದಾರ ಮಾಧವ್ ಭಾಗವತ್ ಅವರು ಬಿ.ಎಸ್. ಯಡಿಯೂರಪ್ಪ ಹಾಗೂ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಅವರಿಗೆ ಸ್ಮಾರ್ಟ್ ಸಿಟಿಯ ವಿನೂತನ ಪರಿಕಲ್ಪನೆ ಬಗ್ಗೆ ಮಾಹಿತಿ ನೀಡಿದ್ರು. ತಮ್ಮ ಕಂಪನಿಯು ಇಂಗಾಲ ತಟಸ್ಥ ಸ್ಮಾರ್ಟ್ ಉಪನಗರಗಳ ಅಭಿವೃದ್ಧಿಯಲ್ಲಿ ಪರಿಣತಿ ಹೊಂದಿದೆ. ಈಗಾಗಲೇ ಪುಣೆ ಮಹಾನಗರ ಪ್ರದೇಶಾಭಿವೃದ್ಧಿ ಪ್ರಾಧಿಕಾರದೊಂದಿಗೆ ಒಪ್ಪಂದ ಮಾಡಿಕೊಂಡಿರುವುದಾಗಿ ತಿಳಿಸಿದರು.

ಇದಕ್ಕೂ ಮುನ್ನ ರಿನ್ಯೂ ಪವರ್ ಪ್ರತಿನಿಧಿಗಳು ರಾಜ್ಯದ ಬರಡು ಭೂಮಿಯಲ್ಲಿ ವಿಶೇಷವಾಗಿ ಉತ್ತರ ಕರ್ನಾಟಕದ ವಿಜಯಪುರ, ಕಲಬುರಗಿ, ಕೊಪ್ಪಳ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಸೌರ ವಿದ್ಯುತ್ ಸ್ಥಾವರಗಳನ್ನು ಸ್ಥಾಪಿಸಲು ಆಸಕ್ತಿ ತೋರಿದರು. ಕಂಪನಿ ಸಿಇಓ ಸಮಂತ್ ಸಿನ್ಹಾ ಅವರು ತಮ್ಮ ಕಂಪನಿಯು ರಾಜ್ಯದ ಬೇಡಿಕೆಗಿಂತ ಹೆಚ್ಚುವರಿಯಾಗಿ ವಿದ್ಯುತ್ ಸಂಗ್ರಹಿಸುವ ಬ್ಯಾಟರಿಗಳು ಮತ್ತು ಇತರ ಉಪಕರಣಗಳನ್ನು ಅಳವಡಿಸಲು ಯೋಜಿಸಿರುವುದಾಗಿ ತಿಳಿಸಿದರು. ಆಡಳಿತಾತ್ಮಕ ಮತ್ತು ಕಾನೂನು ತೊಡಕುಗಳನ್ನು ನಿವಾರಿಸಲು ಸರ್ಕಾರ ಕ್ರಮ ವಹಿಸುವಂತೆ ಅವರು ಸಲಹೆ ನೀಡಿದರು.

ಹೂಡಿಕೆದಾರರು ಹಾಗೂ ಉದ್ಯಮಿಗಳೊಂದಿಗೆ ಬಿಎಸ್​​ವೈ ಚರ್ಚೆ

ಮಂಗಳವಾರ ಮುಖ್ಯಮಂತ್ರಿಯವರು ಹಾಗೂ ಸರ್ಕಾರದ ಅಧಿಕಾರಿಗಳನ್ನು ಭೇಟಿ ಮಾಡಿದ ಕಂಪನಿಗಳ ಪ್ರತಿನಿಧಿಗಳಲ್ಲಿ ಬಹುತೇಕ ಮಂದಿ ರೈತರಿಂದ ಜಮೀನು ಖರೀದಿಸಲು ಸರ್ಕಾರದ ಕೆಲವು ಅನಪೇಕ್ಷಿತ ನಿಯಮಗಳನ್ನು ತಿದ್ದುಪಡಿ ಅಥವಾ ರದ್ದುಪಡಿಸುವ ಅಗತ್ಯವಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಮುಖ್ಯಮಂತ್ರಿಯವರು ಸಭೆಯಲ್ಲಿ ಭಾಗವಹಿಸಿದ್ದ ಎಲ್ಲ ಹೂಡಿಕೆದಾರರ ನಿಯೋಗಗಳೊಂದಿಗೆ ಚರ್ಚಿಸುವಾಗ ಗ್ರಾಮೀಣ ಆರ್ಥಿಕತೆ ಸುಧಾರಿಸುವ, ಹೆಚ್ಚು ಉದ್ಯೋಗ ಸೃಷ್ಟಿಸುವ ವಿಷಯಕ್ಕೆ ಹೆಚ್ಚು ಒತ್ತು ನೀಡಿದ್ರು. ರೈತರು ಮತ್ತು ಗ್ರಾಮೀಣ ಯುವಕರ ಹಿತರಕ್ಷಣೆಗೆ ಬರುವ ಹೂಡಿಕೆದಾರರು ಹಾಗೂ ಕೈಗಾರಿಕೆಗಳಿಗೆ ಸರ್ಕಾರ ವಿಶೇಷ ಆದ್ಯತೆ ನೀಡಲಿದೆ ಎಂದು ಅವರು ನುಡಿದರು.

ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್, ಐಟಿ, ಬಿಟಿ ಅಪರ ಮುಖ್ಯ ಕಾರ್ಯದರ್ಶಿ ಡಾ.ಇ.ವಿ. ರಮಣರೆಡ್ಡಿ, ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಗೌರವ್ ಗುಪ್ತಾ, ಮುಖ್ಯಮಂತ್ರಿ ಕಾರ್ಯದರ್ಶಿ ಸೆಲ್ವಕುಮಾರ್ ಉಪಸ್ಥಿತರಿದ್ದರು.

ABOUT THE AUTHOR

...view details