ಕರ್ನಾಟಕ

karnataka

By

Published : Nov 28, 2021, 1:52 PM IST

ETV Bharat / city

ಇಸ್ರೋ ಖಾಸಗೀಕರಣದ ವಿರುದ್ಧ ಡಿಕೆಶಿ ಕಿಡಿ: ಸರ್ಕಾರಕ್ಕೆ 'ಒಂದು ಪ್ರಶ್ನೆ' ಕೇಳಿದ ಕೈ ನಾಯಕ

ಇಸ್ರೋ ಸಂಸ್ಥೆಯ ಹ್ಯೂಮನ್ ಸ್ಪೇಸ್ ಫ್ಲೈಟ್ ಪ್ರೋಗ್ರಾಮ್​ ಅನ್ನು ಗುಜರಾತ್​​ಗೆ ಕೊಂಡೊಯ್ಯುವ ಪ್ರಯತ್ನ ನಡೆಯುತ್ತಿದೆ. ಈ ಯೋಜನೆಯನ್ನ ಗುಜರಾತ್​ಗೆ ಹೈಜಾಕ್​ ಮಾಡೋ ನಿರ್ಧಾರ ಸರಿಯೇ? ಎಂದು ಡಿ ಕೆ ಶಿವಕುಮಾರ್ ಸರ್ಕಾರಕ್ಕೆ ಪ್ರಶ್ನೆ ಕೇಳಿದ್ದಾರೆ.

DK Shivakumar
ಡಿಕೆಶಿ

ಬೆಂಗಳೂರು: ಇಸ್ರೋ ಸಂಸ್ಥೆಯ ಮಾನವಸಹಿತ ಬಾಹ್ಯಾಕಾಶ ಯೋಜನೆಯನ್ನ ರಾಜ್ಯದಿಂದ ಸ್ಥಳಾಂತರಿಸುವ ಯತ್ನ ನಡೆಯುತ್ತಿದ್ದು, ಇದನ್ನು ಖಂಡಿಸಬೇಕು ಎಂದು ನಾಡಿನ ಜನತೆಗೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಕರೆ ನೀಡಿದ್ದಾರೆ.

'ಒಂದು ಪ್ರಶ್ನೆ' (#OnduPrashne) ಎಂಬ ಹ್ಯಾಶ್​​ ಟ್ಯಾಗ್​​ನಡಿ ಟ್ವಿಟರ್​ನಲ್ಲಿ ವಿಡಿಯೋ ಬಿಡುಗಡೆ ಮಾಡಿರುವ ಅವರು, ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಸಾಕಷ್ಟು ಯೋಜನೆಗಳನ್ನು ಕರ್ನಾಟಕದಿಂದ ಬೇರೆ ರಾಜ್ಯಗಳಿಗೆ ಹೈಜಾಕ್ ಮಾಡುವಂತಹ ಪ್ರಯತ್ನ, ಹುನ್ನಾರ ನಡೆದಿದೆ. ವಿಶ್ವವಿಖ್ಯಾತ ಏರ್ ಶೋ ಹಾಗೂ ನಾಡಿನ ಜನಪ್ರಿಯ ಸಂಸ್ಥೆಯಾದ ಎಚ್ಎಎಲ್ ನಾಗಪುರಕ್ಕೆ ಕೊಂಡೊಯ್ಯಬೇಕು ಎಂಬ ಪ್ರಯತ್ನ ನಡೆದಿತ್ತು. ಕನ್ನಡಿಗರು ಹೋರಾಟ ಮಾಡಿ ಅದನ್ನು ತಡೆದಿದ್ದೇವೆ. ಇದೀಗ ಇಸ್ರೋ ಸಂಸ್ಥೆಯ ಹ್ಯೂಮನ್ ಸ್ಪೇಸ್ ಫ್ಲೈಟ್ ಪ್ರೋಗ್ರಾಮ್​ ಅನ್ನು ಗುಜರಾತ್​​ಗೆ ಕೊಂಡೊಯ್ಯುವ ಪ್ರಯತ್ನ ನಡೆಯುತ್ತಿದೆ. ಈ ಯೋಜನೆಯನ್ನ ಗುಜರಾತ್​ಗೆ ಹೈಜಾಕ್​ ಮಾಡೋ ನಿರ್ಧಾರ ಸರಿಯೇ? ಎಂದು ಸರ್ಕಾರಕ್ಕೆ ಪ್ರಶ್ನೆ ಕೇಳಿದ್ದಾರೆ.

ಟ್ವಿಟರ್​ನಲ್ಲಿ ವಿಡಿಯೋ ಬಿಡುಗಡೆ ಮಾಡಿದ ಡಿಕೆಶಿ

ಇಸ್ರೋ ಕೇಂದ್ರ ಕಚೇರಿ ಇರುವುದು ಬೆಂಗಳೂರಿನಲ್ಲಿ. ಈ ಸಂಸ್ಥೆ ಈ ಹಂತಕ್ಕೆ ಬೆಳೆಯುವಲ್ಲಿ ರಾಜ್ಯದ ಪಾತ್ರ ಬಹಳಷ್ಟಿದೆ. ನಮಗೆ ಅದರ ಬಗ್ಗೆ ಹೆಮ್ಮೆ ಇದೆ. ಸಂಸ್ಥೆಯನ್ನು ಖಾಸಗೀಕರಣಗೊಳಿಸುವ ಬಗ್ಗೆ ವರದಿಗಳು ಕೇಳಿಬರುತ್ತಿವೆ. ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಅವರ ಅವಧಿಯಲ್ಲಿ ಸಂಸ್ಥೆಗೆ ಅಡಿಪಾಯ ಹಾಕಿದ್ದರು. 1963ರ ನವೆಂಬರ್ 23ರಂದು ಭಾರತದಿಂದ ಪ್ರಥಮ ರಾಕೆಟ್ ಉಡಾವಣೆ ಆಗಿತ್ತು. ಎತ್ತಿನ ಗಾಡಿಯಲ್ಲಿ, ಸೈಕಲ್ ಗಳಲ್ಲಿ ರಾಕೆಟುಗಳನ್ನು ಸಾಗಿಸುತ್ತಿದ್ದ ಬಗ್ಗೆ ನಾವು ಮಾಹಿತಿ ಕೇಳಿದ್ದೇವೆ. ಆ ಹಂತದಿಂದ ಇಲ್ಲಿಯವರೆಗೆ ಪ್ರಯಾಣ ಬೆಳೆಸಿರುವ ಇಸ್ರೋ ಹಲವಾರು ಕಠಿಣ ಸಂದರ್ಭಗಳನ್ನು ಎದುರಿಸಿದೆ. ಈ ಸಂಸ್ಥೆಯ ಖಾಸಗೀಕರಣ ಯಾವ ನ್ಯಾಯ? ಈ ವಿಚಾರವಾಗಿ ಜನರ ಆಲೋಚನೆಗಳು ಬೇರೆಯೇ ಇರಬಹುದು. ಅದನ್ನು ತಿಳಿದುಕೊಳ್ಳಲು ನಾನು ಬಯಸುತ್ತಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಈ ಸಂಬಂಧ ಪ್ರತಿಕ್ರಿಯೆ ನೀಡಿ ಎಂದು ಡಿಕೆಶಿ ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಮೇಕೆದಾಟಿಗೆ ಆಗಮಿಸಿ ಪರಿಶೀಲನೆ: ಹೋರಾಟ ಮಾಡುವುದಾಗಿ ಶಪಥ ಮಾಡಿದ ಡಿಕೆಶಿ

ಕರುನಾಡು ಹೆಜ್ಜೇನಿನ ಗೂಡು. ನಾವೆಷ್ಟು ಸಿಹಿಯೋ, ಕರ್ನಾಟಕದ ಸಂಸ್ಕೃತಿ, ಸ್ವಾಭಿಮಾನಕ್ಕೆ ಕಲ್ಲೆಸೆದಾಗ, ಕನ್ನಡಿಗರು ಅಷ್ಟೇ ಸಿಟ್ಟು, ಸೆಡವು ತೋರಿದ್ದೇವೆ. ಈ ವಾರ ನಾನು ಕೇಳೋ ಒಂದು ಪ್ರಶ್ನೆ ಕನ್ನಡ ನಾಡಿನ ಪರಂಪರೆಗೆ ಸಂಬಂಧಿಸಿದ್ದು. ಕನ್ನಡದ ಸಿಂಹಗಳು ಹೋರಾಟಕ್ಕೆ ಸಜ್ಜಾಗಬೇಕಿದೆ ಎಂದು ಅವರು ಕರೆ ಕೊಟ್ಟಿದ್ದಾರೆ. ಕೆಪಿಸಿಸಿ ವತಿಯಿಂದ ಇಸ್ರೋ ಯೋಜನೆಯ ಸ್ಥಳಾಂತರ ಬಗ್ಗೆ ಸಿಎಂ ಬೊಮ್ಮಾಯಿ ಹಾಗೂ ಪ್ರಧಾನಿ ನರೇಂದ್ರ ಮೋದಿಯವರಿಗೂ ಡಿಕೆಶಿ ಪತ್ರ ಬರೆದು ಇದನ್ನು ತಡೆಯುವಂತೆ ಒತ್ತಾಯಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಗೆ ಡಿಕೆಶಿ ಪತ್ರ

ಸಿಎಂ ಪ್ರತಿಕ್ರಿಯೆ

ಡಿ ಕೆ ಶಿವಕುಮಾರ್​ರ ಒಂದು ಪ್ರಶ್ನೆಗೆ ಅತ್ಯಂತ ತ್ವರಿತವಾಗಿ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು, ಖಾಸಗೀಕರಣ ಮಾಡುವ ಪ್ರಶ್ನೆಯೇ ಇಲ್ಲ. ಇದೊಂದು ಕಂಪನಿ ಅಲ್ಲ, ಸಂಸ್ಥೆ ಎಂದು ಸ್ಪಷ್ಟಪಡಿಸಿದ್ದಾರೆ.

ಸಿಎಂ ಬೊಮ್ಮಾಯಿಗೆ ಡಿಕೆಶಿ ಪತ್ರ

ABOUT THE AUTHOR

...view details