ಕರ್ನಾಟಕ

karnataka

By

Published : Mar 20, 2020, 10:13 PM IST

ETV Bharat / city

ಪ್ರಧಾನಿ ಮೋದಿ ಜನತಾ ಕರ್ಫ್ಯೂಗೆ ದೇವೇಗೌಡರ ಬೆಂಬಲ

ಪ್ರಧಾನಮಂತ್ರಿ ನರೇಂದ್ರ ಮೋದಿ ನೀಡಿರುವ ಜನತಾ ಕರ್ಫ್ಯೂವನ್ನು ಮಾಜಿ ಪ್ರಧಾನಿ ಹೆಚ್​.ಡಿ.ದೇವೇಗೌಡ ಬೆಂಬಲಿಸಿದ್ದಾರೆ. ಅಲ್ಲದೆ ಪ್ರಧಾನಿ ಮೋದಿ ಕರೆ ಸಮಯೋಚಿತ ಮತ್ತು ಆಚರಣೆ ಯೋಗ್ಯವಾಗಿದೆ ಎಂದು ಹೇಳಿದ್ದಾರೆ.

deve-gowda-support-for-the-janata-curfew-announced-by-prime-minister-modi
ಮಾಜಿ ಪ್ರಧಾನಿ ದೇವೇಗೌಡ

ಬೆಂಗಳೂರು: ಡಿಸೆಂಬರ್ ತಿಂಗಳಿನಿಂದ ಇಡೀ ಜಗತ್ತನ್ನೇ ತಲ್ಲಣಗೊಳಿಸಿರುವ ಮಹಾಮಾರಿ 'ಕೊರೋನಾ' ವೈರಸ್​ಗೆ ಸದ್ಯ ಯಾವುದೇ ಔಷಧ ಕಂಡುಹಿಡಿದಿಲ್ಲ. ಈ ಸಾಂಕ್ರಾಮಿಕ ವೈರಸ್ ಹಬ್ಬುತ್ತಿರುವ ಪರಿ ಯಾರಿಗಾದರೂ ಆತಂಕವುಂಟು ಮಾಡುವಂತಹದ್ದು ಎಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರು ಕಳವಳ ವ್ಯಕ್ತಪಡಿಸಿದ್ದಾರೆ.

130 ಕೋಟಿ ಜನಸಂಖ್ಯೆ ಇರುವ ನಮ್ಮ ದೇಶದಲ್ಲಿನ ಭೌಗೋಳಿಕ ಲಕ್ಷಣ, ಜನನಿಬಿಡತೆ, ವಿಶಿಷ್ಟ ಸಾಮಾಜಿಕ ನಡವಳಿಕೆಗಳಿರುವ ಸಂದರ್ಭದಲ್ಲಿ ಈ ಎರಡು ತಿಂಗಳಲ್ಲಿ ನಾಲ್ಕು ಸಾವು ಸಂಭವಿಸಿದ್ದು, ಸುಮಾರು 185 ಜನರು ಸೋಂಕಿಗೆ ಒಳಗಾಗಿದ್ದಾರೆ. ಈ ವ್ಯಾಪಕ ಜನಸಾಂದ್ರತೆಯಿರುವ ನಮ್ಮ ದೇಶದಲ್ಲಿ ಇಷ್ಟರಮಟ್ಟಿಗೆ ಈ ಮಹಾಮಾರಿಯನ್ನು ಕಟ್ಟಿಹಾಕುವಲ್ಲಿ ಕೇಂದ್ರ ಸರ್ಕಾರ ಮತ್ತು ದೇಶದ ಎಲ್ಲಾ ರಾಜ್ಯ ಸರ್ಕಾರಗಳು ತೆಗೆದುಕೊಂಡಿರುವ ಮುನ್ನೆಚ್ಚರಿಕೆಯ ಕ್ರಮಗಳಿಗಾಗಿ ನಾನು ಅವರೆಲ್ಲರನ್ನೂ ಅಭಿನಂದಿಸುತ್ತೇನೆ ಎಂದು ಹೇಳಿದ್ದಾರೆ.

ವಿಶೇಷವಾಗಿ ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ನಿನ್ನ ರಾತ್ರಿ ದೇಶದ ಜನತೆಯನ್ನು ಉದ್ದೇಶಿಸಿ ಮಾಡಿದ ಭಾಷಣ ಮತ್ತು ಕೊಟ್ಟ ಕರೆ ಅತ್ಯಂತ ಸಮಯೋಚಿತವೂ ಮತ್ತು ಆಚರಣೆ ಯೋಗ್ಯವೂ ಆಗಿದೆ. ಸಾಮಾಜಿಕ ಕರ್ತವ್ಯದ ದೃಷ್ಟಿಯಿಂದ ಇದೇ ಮಾರ್ಚ್ 22ರಂದು ಇಡೀ ದೇಶದ ಸಮಸ್ತ ಜನತೆ ತಮಗೆ ತಾವೇ ಕರ್ಫ್ಯೂ ವಿಧಿಸಿಕೊಂಡು ಮನೆಯಲ್ಲೇ ಉಳಿದುಕೊಂಡು ಜನತಾ ಕರ್ಫ್ಯೂ ಯಶಸ್ವಿಗೊಳಿಸಬೇಕೆಂದು ಪ್ರಧಾನಿಯವರು ನೀಡಿರುವ ಕರೆಯನ್ನು ನಾವೆಲ್ಲರೂ ಪಾಲಿಸಲೇಬೇಕು ಎಂದಿದ್ದಾರೆ.

ಅರವತ್ತೈದು ವರ್ಷ ಮೇಲ್ಪಟ್ಟ ವೃದ್ಧರು ಮತ್ತು 10 ವರ್ಷಗಳೊಳಗಿನ ಮಕ್ಕಳು ಕಡ್ಡಾಯವಾಗಿ ಮನೆಯಿಂದ ಹೊರ ಬಾರಬಾರದೆಂಬ ಪ್ರಧಾನಿಯವರ ವಿನಂತಿಯ ಹಿಂದಿರುವ ಕಾಳಜಿಯನ್ನು ನಾವೆಲ್ಲರೂ ಅರ್ಥ ಮಾಡಿಕೊಳ್ಳಬೇಕಾಗಿದೆ. ಈ ಅಗೋಚರ ಶತ್ರುವಿನ ವಿರುದ್ಧದ ಹೋರಾಟ ಇಡೀ ಜನತೆಯ ಪ್ರಜ್ಞೆ ಮತ್ತು ಸಂಯಮಪೂರ್ಣ ಪಾಲ್ಗೊಳ್ಳುವಿಕೆಯಿಂದ ಮಾತ್ರ ಯಶಸ್ವಿಯಾಗಬಲ್ಲದು ಎಂದು ಪ್ರಕಟಣೆಯಲ್ಲಿ ಹೇಳಿದ್ದಾರೆ.

ABOUT THE AUTHOR

...view details