ಕರ್ನಾಟಕ

karnataka

ಅನ್ಯ ರೋಗವಿಲ್ಲದೇ ಕೊರೊನಾಗೆ ಬಲಿಯಾದವರ ಸಂಖ್ಯೆ 620: ಕಾರಣ ?

By

Published : Oct 14, 2020, 1:24 PM IST

ಸೋಂಕಿತರು ತಡವಾಗಿ ಆಸ್ಪತ್ರೆ ಸೇರುವುದನ್ನು ತಪ್ಪಿಸಲು, ಹೋಂ ಐಸೋಲೇಷನ್​​​ನಲ್ಲಿ ಇರುವವರ ಆರೋಗ್ಯ ಸ್ಥಿತಿಯನ್ನು ಫೋನ್ ಮೂಲಕ ನಿತ್ಯ ಮಾಹಿತಿ ಪಡೆಯಲಾಗುವುದು ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಹೇಳಿದರು.

death cases review in bangalore
ಕೊರೊನಾಗೆ ಬಲಿ

ಬೆಂಗಳೂರು:ನಗರದಲ್ಲಿ ಕೋವಿಡ್ ರೋಗಿಗಳು ಮೃತಪಡಲು ಕಾರಣ ಏನೆಂದು ತಿಳಿಯಲು ಬಿಬಿಎಂಪಿ ಮರಣ ಪ್ರಕರಣಗಳ ಪರಿಶೀಲನೆ (ಡೆತ್‌ ಆಡಿಟ್) ನಡೆಸಿದೆ. ಅದರ ಪ್ರಕಾರ ಆಸ್ಪತ್ರೆಗಳಲ್ಲಿ ತೀವ್ರ ನಿಗಾ ಘಟಕದಲ್ಲಿ (ಐಸಿಯು) ಹಾಸಿಗೆಗಳ ಕೊರತೆಯಿಂದ ಸೂಕ್ತ ಸಮಯಕ್ಕೆ ಚಿಕಿತ್ಸೆ ಸಿಗದೇ ಸಾವು ಸಂಭವಿಸಿರುವುದು ಹೆಚ್ಚು. ಹಾಗೆಯೇ ಸೋಂಕಿತರು ತೀರಾ ತಡವಾಗಿ ಆಸ್ಪತ್ರೆಗೆ ದಾಖಲಾಗುತ್ತಿರುವುದು ಹಾಗೂ ಕೆಲ ಖಾಸಗಿ ಆಸ್ಪತ್ರೆಗಳ ನಿರ್ಲಕ್ಷ್ಯ ಧೋರಣೆ ಕೂಡ ಸೇರಿದೆ.

ನಗರದಲ್ಲಿ ಕೋವಿಡ್​ನಿಂದ ಮೃತಪಟ್ಟಿರುವವರ ಸಂಖ್ಯೆ 3 ಸಾವಿರ ದಾಟಿದೆ. ಆದರೆ, 2,936 ಮಂದಿ ಮೃತಪಟ್ಟವರ ವರದಿಗಳನ್ನು ಮಾತ್ರ ಡೆತ್​ ಆಡಿಟ್​ ನಡೆಸಲಾಗಿದೆ. ಈ ಪ್ರಕರಣಗಳ ಪೈಕಿ 620 ಮಂದಿ ಯಾವುದೇ ಕಾಯಿಲೆ ಇಲ್ಲದೇ, ಬರಿ ಸೋಂಕು ತಗುಲಿ ಬಲಿಯಾಗಿದ್ದಾರೆ. ಉಳಿದ ಮೃತಪಟ್ಟ (2,316) ಸೋಂಕಿತರು ಅನ್ಯ ಕಾಯಿಲೆಯಿಂದ ಬಳಲುತ್ತಿದ್ದರು.

ಅದರಲ್ಲಿ 1,800 ಮಂದಿ 51-75 ವರ್ಷದವರು, 600 ಮಂದಿ 26 - 50 ವರ್ಷದವರು ಮೃತಪಟ್ಟಿದ್ದಾರೆ. ಇನ್ನು ಕೋವಿಡ್​​​ನ ಜೀವನ್ಮರಣದ ಹೋರಾಟದಲ್ಲಿ 315 ಮಂದಿ ಆಸ್ಪತ್ರೆಗೆ ಸೇರಿದ 24 ಗಂಟೆಯೊಳಗೆ ಮೃತಪಟ್ಟರೆ, 414 ಮಂದಿ 48 ಗಂಟೆಯೊಳಗೆ, 2,043 ಮಂದಿ ನಾಲ್ಕು ದಿನಕ್ಕಿಂತ ಹೆಚ್ಚು ದಿನ ಆಸ್ಪತ್ರೆಯಲ್ಲಿದ್ದು, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಲಾಕ್​​ಡೌನ್ ಸಡಿಲಿಸಿದ ಬಳಿಕ ಸಾವಿನ ಪ್ರಮಾಣ ಏರಿಕೆ ಕಂಡಿದೆ. ಮಾಸ್ಕ್ ಧರಿಸದಿರುವುದು, ಸಾಮಾಜಿಕ ಅಂತರ ಪಾಲಿಸದಿರುವುದೇ ಇದಕ್ಕೆಲ್ಲ ಕಾರಣ ಎನ್ನಲಾಗಿದೆ.

ತೀವ್ರ ಸೋಂಕಿನ ಲಕ್ಷಣ ಹಾಗೂ ಉಸಿರಾಟದ ಸಮಸ್ಯೆಯಿಂದ ಹೆಚ್ಚು ಮಂದಿ ಮೃತಪಡುತ್ತಿದ್ದಾರೆ. ಸಾರಿ ಪ್ರಕರಣ 1,843 ಹಾಗೂ ಸೋಂಕಿನ ಲಕ್ಷಣ ಹೊಂದಿದ್ದ 1,093 ಮಂದಿ ಮೃತಪಟ್ಟಿದ್ದು, ಅದರಲ್ಲಿ 955 ಮಹಿಳೆಯರು, 1981 ಪುರುಷರು. ಕೆ.ಸಿ ಜನರಲ್, ಬೌರಿಂಗ್, ರಾಜಾಜಿನಗರ ಸೇರಿದಂತೆ 147 ಆಸ್ಪತ್ರೆಗಳಲ್ಲಿ ಮೃತಪಟ್ಟವರ ವರದಿ ಪರಿಶೀಲನೆ ನಡೆಸಲಾಗಿದೆ.

ಖಾಸಗಿ ಆಸ್ಪತ್ರೆಗಳಿಂದ ಸರ್ಕಾರದ ಮೀಸಲಾತಿಯ ಹಾಸಿಗೆ ಸಿಗದಿರಲು ಪ್ರಮುಖ ಕಾರಣ, ಸರ್ಕಾರ ನಿಗದಿತ ಅವಧಿಯಲ್ಲಿ ಚಿಕಿತ್ಸಾ ವೆಚ್ಚವನ್ನು ಪಾವತಿಸದೇ ವಿಳಂಬ ಮಾಡುತ್ತಿರುವುದರಿಂದ ಕೊರೊನಾ ಸೋಂಕಿತರ ಚಿಕಿತ್ಸೆ, ಸಿಬ್ಬಂದಿಗಳ ನಿರ್ವಹಣೆ, ಉಪಕರಣಗಳ ಖರೀದಿಗೆ ಸಮಸ್ಯೆಯಾಗುತ್ತಿವೆ ಎಂದು ಡೆತ್ ‌ಅನಾಲಿಸಿಸ್ ಕಮಿಟಿಗೆ ಖಾಸಗಿ ಆಸ್ಪತ್ರೆಗಳು ದೂರು ನೀಡಿವೆ ಎನ್ನಲಾಗಿದೆ.

ನಗರದ ಐಸಿಯು ಬೆಡ್​​ಗಳ ಹೆಚ್ಚಳಕ್ಕೆ ಕ್ರಮ ವಹಿಸಲು ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಹಾಸಿಗೆ ಲಭ್ಯತೆ ಕುರಿತು ಪರಿಶೀಲಿಸಲು ಹತ್ತು ಹೊಸ ತಂಡಗಳನ್ನು ರಚನೆ ಮಾಡಲಾಗುತ್ತಿದೆ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ತಿಳಿಸಿದರು.

ABOUT THE AUTHOR

...view details