ಬೆಂಗಳೂರು: ರಾಜ್ಯದ ನಾಲ್ಕು ಕಂದಾಯ ವಿಭಾಗದಲ್ಲಿ ಎಸ್.ಸಿ.ಪಿ, ಟಿ.ಎಸ್.ಪಿ ಅನುದಾನದಡಿ ತಲಾ ಒಂದೊಂದು ಸೈನಿಕ ಶಾಲೆ ಆರಂಭಕ್ಕೆ ಸರ್ಕಾರ ಮುಂದಾಗಿದ್ದು, ಶೇ. 50ರಷ್ಟು ಸೀಟು ನಮ್ಮ ರಾಜ್ಯದ ಎಸ್ಸಿ, ಎಸ್ಟಿ ವಿದ್ಯಾರ್ಥಿಗಳಿಗೆ ನೀಡುವ ಷರತ್ತಿನೊಂದಿಗೆ ಅಗತ್ಯ ಭೂಮಿ, ಅನುದಾನವನ್ನು ಸರ್ಕಾರವೇ ನೀಡಲಿದೆ ಎಂದು ಡಿಸಿಎಂ ಗೋವಿಂದ ಕಾರಜೋಳ ತಿಳಿಸಿದರು.
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದ ವೇಳೆ ಬೀದರ್ ಜಿಲ್ಲೆಯಲ್ಲಿ ಎಸ್.ಸಿ.ಪಿ, ಟಿ.ಎಸ್.ಪಿಗಾಗಿ ಬಿಡುಗಡೆಯಾದ ಅನುದಾನ ಮತ್ತು ಅವ್ಯವಹಾರ ಕುರಿತು ಉನ್ನತಮಟ್ಟದ ತನಿಖೆಗೆ ಒತ್ತಾಯಿಸಿದ ಸದಸ್ಯ ಅರವಿಂದ ಕುಮಾರ ಅರಳಿ ಪ್ರಶ್ನೆಗೆ ಉತ್ತರಿಸಿದ ಡಿಸಿಎಂ, ಎಸ್ಸಿ, ಎಸ್ಟಿ ಜನಾಂಗದ ಅನುದಾನ ದುರುಪಯೋಗವಾಗಬಾರದು. ಎಸ್ಸಿ, ಎಸ್ಟಿ ಮನೆಗಳ ಮುಂದೆ ಮಾತ್ರ ಕಾಂಕ್ರೀಟ್ ರಸ್ತೆ ಮಾಡಿದರೆ ಸಾಲದು, ಅವರು ಸಂಚರಿಸುವ ಎಲ್ಲಾ ಕಡೆ ನಿರ್ಮಿಸಬೇಕು ಎಂದರು.
ನನ್ನ ಅವಧಿಯಲ್ಲಿ ರಸ್ತೆಗೆ ಹಣ ಕಡಿಮೆ ಮಾಡಿ ಎಸ್ಸಿ, ಎಸ್ಟಿ ವಿದ್ಯಾರ್ಥಿಗಳಿಗೆ ವಸತಿ ಶಾಲೆಗಳ ನಿರ್ಮಾಣಕ್ಕೆ ಹೆಚ್ಚಿನ ಅನುದಾನ ನೀಡಿದ್ದೇನೆ. ಇದರಲ್ಲಿ ದುರುಪಯೋಗದ ಪ್ರಶ್ನೆಯೇ ಇಲ್ಲ. ಬೋಗಸ್ ಬಿಲ್, ಕೆಲಸ ಮಾಡದೇ ಬಿಲ್ ಪಡೆದಿದ್ದರೆ ತನಿಖೆಗೆ ಆದೇಶಿಸಲಾಗುತ್ತದೆ. ಬೀದರ್, ಔರಾದ್, ಬಾಲ್ಕಿಯಲ್ಲಿ ಹೆಚ್ಚು ಅವ್ಯವಹಾರವಾಗಿದೆ ಎನ್ನುವ ಆರೋಪ ಕೇಳಿ ಬಂದಿದ್ದು, ಈ ಕುರಿತು ಮಾಹಿತಿ ನೀಡಿದಲ್ಲಿ ತನಿಖೆ ನಡೆಸಲಾಗುತ್ತದೆ ಎಂದರು.
ಈ ವೇಳೆ, ಮಧ್ಯಪ್ರವೇಶಿಸಿದ ಕಾಂಗ್ರೆಸ್ ಸದಸ್ಯ ಸಿ.ಎಂ.ಇಬ್ರಾಹಿಂ, ದಲಿತರ ಕೇರಿ, ಇತರರ ಕೇರಿಗಳಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡಿರುವುದರಿಂದ ಸಾಮರಸ್ಯ ಬೆಳೆಯುತ್ತದೆ. ಸವರ್ಣೀಯರ ಕೇರಿಗೂ ರಸ್ತೆ ಮಾಡಿದರೆ ಎಲ್ಲರೂ ಒಂದೇ ಎನ್ನುವ ಭಾವನೆ ಬೆಳೆಯಲಿದೆ ಎಂದು ಸಲಹೆ ನೀಡಿದರು.