ಬೆಂಗಳೂರು: ಹಿರಿಯ ಸಚಿವ ಕೆ.ಎಸ್ ಈಶ್ವರಪ್ಪ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿರುವ ಡಿಸಿಎಂ ಡಾ. ಸಿ.ಎನ್. ಅಶ್ವತ್ಥನಾರಾಯಣ್, ನಮ್ಮ ಪಕ್ಷಕ್ಕೆ ಪ್ಲಾನೆಟ್ನಿಂದ ಯಾರೂ ಬಂದಿಲ್ಲ. ನಮ್ಮಲ್ಲಿ ಹೊರಗಿನವರು ಯಾರೂ ಇಲ್ಲ, ಎಲ್ಲರೂ ನಮ್ಮವರೇ ಎಂದರು.
ವಿಕಾಸಸೌಧದಲ್ಲಿಂದು ಅಧಿಕಾರಿಗಳ ಜೊತೆ ಸಭೆ ನಡೆಸಿದ ನಂತರ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಈಶ್ವರಪ್ಪನವರು ಸಹ ನಮ್ಮ ಸರ್ಕಾರದ ಅಂಗವಾಗಿದ್ದು, ಪಕ್ಷದ ಭಾಗವಾಗಿದ್ದಾರೆ. ಈಗ ನಮ್ಮ ಜೊತೆ ಇದ್ದಾರೆ. ಅವರು (17 ಶಾಸಕರು ) ನಮ್ಮ ಪಕ್ಷಕ್ಕೆ ಶಕ್ತಿ ತುಂಬಿದ್ದಾರೆ ಎಂದರು. ಬೇರೆ ಪಕ್ಷ ತ್ಯಜಿಸಿ ಬಂದವರೆಲ್ಲರೂ ನಮ್ಮವರೇ. ಇವತ್ತೇ ಅಲ್ಲ, ಮೊದಲಿನಿಂದಲೂ ಇದನ್ನೇ ಹೇಳುತ್ತಿದ್ದೇನೆ.
ಹೊರಗಿನಿಂದ ಬಂದವರಿಂದಲೇ ಪಕ್ಷ ಅಧಿಕಾರಕ್ಕೆ ಬಂದಿದೆ. ಅದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಡಿಸಿಎಂ, ಹಿರಿಯ ನಾಯಕರ ಹೇಳಿಕೆ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ ಎಂದು ಹೇಳಿದರು.
ಈಶ್ವರಪ್ಪ ಹೇಳಿಕೆಗೆ ಅಶ್ವತ್ಥನಾರಾಯಣ ಪ್ರತಿಕ್ರಿಯೆ ಅರುಣ್ ಸಿಂಗ್ ಭೇಟಿ ವಿಶೇಷ ಏನೂ ಇಲ್ಲ :ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರು ರಾಜ್ಯಕ್ಕೆ ಭೇಟಿ ನೀಡುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಡಿಸಿಎಂ, ಪಕ್ಷದಲ್ಲಿ ಸಮಾಲೋಚನೆ ನಡೆಯುವುದು ಸಹಜ. ಅದರಂತೆ ಈಗ ಶಾಸಕರ ಜೊತೆ ಸಮಾಲೋಚನೆ ನಡೆಯುತ್ತದೆ ಎಂದರು. ಇದರಲ್ಲಿ ಯಾವುದೇ ರೀತಿಯ ವಿಶೇಷತೆ ಇಲ್ಲ ಎಂದರು.
ಕೋರ್ ಕಮೀಟಿ ಮೀಟಿಂಗ್ ನಡೆಯಲಿದೆ. ಆಡಳಿತಾತ್ಮಕವಾಗಿ ಹೇಗೆ ನಡೆಯುತ್ತಿದೆ ಮತ್ತು ಪಕ್ಷ ಸಂಘಟನೆ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಯಲಿದೆ. ಇದರಲ್ಲಿ ವಿಶೇಷ ಏನೂ ಇಲ್ಲ ಎಂದು ಅವರು ಇದೇ ವೇಳೆ ಹೇಳಿದರು. 17 ಶಾಸಕರು ಬಂದ ಮೇಲೆ ಪಕ್ಷದಲ್ಲಿ ಗೊಂದಲಗಳಾಗಿದ್ದು ನಿಜ ಎಂದು ಈಶ್ವರಪ್ಪ ಹೇಳಿಕೆ ನೀಡಿದ್ದರು.