ಕರ್ನಾಟಕ

karnataka

ETV Bharat / city

ಅಪೆಕ್ಸ್ ಬ್ಯಾಂಕ್ ಜೊತೆ ಡಿಸಿಸಿ ಬ್ಯಾಂಕ್ ವಿಲೀನ: ಗುಜರಾತ್, ಕೇರಳಕ್ಕೆ ಅಧ್ಯಯನ ತಂಡ ಕಳಿಸಲು ನಿರ್ಧಾರ - Co-operative Minister S.T.Somashekhar

ಡಿಸಿಸಿ ಬ್ಯಾಂಕ್​ಗಳನ್ನು ಅಪೆಕ್ಸ್​ ಬ್ಯಾಂಕ್​ ಜೊತೆ ವಿಲೀನಗೊಳಿಸುವ ಯೋಚನೆ ಮಾಡಿದ್ದರೂ, ಇದರಿಂದಾಗುವ ಅನುಕೂಲ ಹಾಗೂ ಅನಾನುಕೂಲಗಳನ್ನು ತಾಳೆ ಹಾಕದೆ ಯಾವುದೇ ನಿರ್ಧಾರಗಳನ್ನು ಕೈಗೊಳ್ಳಲಾಗುವುದಿಲ್ಲ ಎಂದು ಸಹಕಾರ ಸಚಿವ ಎಸ್​.ಟಿ.ಸೋಮಶೇಖರ್​ ಸ್ಪಷ್ಟಪಡಿಸಿದ್ದಾರೆ.

Minister ST Somashekhar
Minister ST Somashekhar

By

Published : Mar 29, 2022, 3:47 PM IST

ಬೆಂಗಳೂರು: ಗುಜರಾತ್,‌ ಕೇರಳ ಮಾದರಿಯಲ್ಲಿ ರಾಜ್ಯದಲ್ಲಿಯೂ ಡಿಸಿಸಿ ಬ್ಯಾಂಕ್​ಗಳನ್ನು ಅಪೆಕ್ಸ್ ಬ್ಯಾಂಕ್ ಜೊತೆ ವಿಲೀನ ಮಾಡುವ ಚಿಂತನೆ ನಡೆಸಲಾಗಿದೆ. ಈ ಕುರಿತು ಸಾಧಕ ಬಾಧಕ ನೋಡಿಕೊಂಡು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಿಕೊಡಲಾಗುತ್ತದೆ ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ತಿಳಿಸಿದ್ದಾರೆ.

ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ವೈ.ಎ. ನಾರಾಯಣಸ್ವಾಮಿ ಪ್ರಶ್ನೆಗೆ ಉತ್ತರಿಸಿದ ಸಚಿವರು, ಗುಜರಾತ್, ಛತ್ತೀಸ್​ಗಡ, ಕೇರಳದಲ್ಲಿ ಡಿಸಿಸಿ ಬ್ಯಾಂಕ್​ಗಳನ್ನು ಅಪೆಕ್ಸ್ ಬ್ಯಾಂಕ್​ಗಳ ಜೊತೆ ವಿಲೀನ ಮಾಡಲಾಗಿದೆ. ವಿಲೀನದಿಂದ ಡಿಸಿಸಿ ಬ್ಯಾಂಕ್​ನ ಕಮೀಷನ್ ನೇರವಾಗಿ ರೈತರಿಗೆ ಸಿಗಲಿದೆ ಎನ್ನುವ ಕಾರಣಕ್ಕೆ ಈ ನಿರ್ಧಾರವನ್ನು ಅಲ್ಲಿ ಕೈಗೊಳ್ಳಲಾಗಿದೆ ಎಂದು ಹೇಳಿದರು.

ಅದರ ಹಿನ್ನೆಲೆಯಲ್ಲಿ ನಮ್ಮ 21 ಡಿಸಿಸಿ ಬ್ಯಾಂಕ್ ಎಂಡಿಗಳ ಜೊತೆ ಪ್ರಾಥಮಿಕ ಸಭೆ ಮಾಡಿದ್ದೇವೆ. ಈ ರೀತಿ ನಮ್ಮಲ್ಲಿಯೂ ಮರ್ಜ್ ಮಾಡುವುದರಿಂದ ಏನೇನು ಅನುಕೂಲ, ಅನಾನುಕೂಲ ಆಗಲಿದೆ ಎನ್ನುವ ಕುರಿತು ‌ಚರ್ಚೆಯಾಗಿದೆ. ಕೇರಳ, ಗುಜರಾತ್, ಛತ್ತೀಸ್​ಗಡಕ್ಕೆ ಅಧಿಕಾರಿಗಳ ತಂಡ ಕಳಿಸಿ ಅಲ್ಲಿ ಮರ್ಜ್ ಮಾಡಿರುವುದರಿಂದ ಆಗಿರುವ ಅನುಕೂಲದ ಕುರಿತು ವರದಿ ತರಿಸಿಕೊಂಡು ಸಾಧಕ-ಬಾಧಕ ಚರ್ಚಿಸಿ ನಂತರ ಕೇಂದ್ರಕ್ಕೆ ಪ್ರಸ್ತಾಪ ಕಳುಹಿಸಿ ಕೊಡಲಾಗುತ್ತದೆ ಎಂದರು.

ಡಿಸಿಸಿ ಬ್ಯಾಂಕ್ ತನಿಖೆ:ಕೋಲಾರ ಡಿಸಿಸಿ ಬ್ಯಾಂಕ್ ಬಹಳ ಉತ್ತಮವಾಗಿ ಕೆಲಸ ಮಾಡುತ್ತಿದೆ. ಎಲ್ಲ ಮಾದರಿಯ ಸಾಲವನ್ನು ಪ್ರತಿ ವರ್ಷ ನೀಡುತ್ತಾ ಬರಲಾಗಿದೆ. ಬೇರೆ ಬೇರೆ ಕಾರಣಕ್ಕೆ ಆ ಡಿಸಿಸಿ ಬ್ಯಾಂಕ್​ನ ವ್ಯವಹಾರ ತನಿಖೆಗೆ ಆದೇಶಿಸಲಾಗಿದೆ. ನಿಯಮ 64 ಅಡಿ ತನಿಖೆಗೆ ಆದೇಶಿಸಿ ಎರಡು ತಿಂಗಳಾಗಿದ್ದು, ಇನ್ನೊಂದು ತಿಂಗಳಿನಲ್ಲಿ ತನಿಖೆ ಪೂರ್ಣಗೊಳಿಸಿ ಕ್ರಮ ಕೈಗೊಳ್ಳಲಾಗುತ್ತದೆ. ಸಾಲ ನೀಡಿಕೆಯಲ್ಲಿ ಡುಪ್ಲಿಕೇಷನ್ ಇದ್ದಲ್ಲಿ ಅದನ್ನೂ ತನಿಖೆಗೆ ಒಳಪಡಿಸಲಾಗುತ್ತದೆ ಎಂದು ಸಚಿವರು ಹೇಳಿದರು.

ಇದನ್ನೂ ಓದಿ:ಶೇ.40 ಕಮಿಷನ್ ವಿಚಾರ; ಪರಿಷತ್‌ನಲ್ಲಿ ಕಾಂಗ್ರೆಸ್‌ ಶೂನ್ಯವೇಳೆಯಲ್ಲಿ ಪ್ರಸ್ತಾಪಕ್ಕೆ ಬಿಜೆಪಿ ವಿರೋಧ, ವಾಗ್ವಾದ

ಕೃಷಿ, ಅಭಿವೃದ್ಧಿ, ಬಂಗಾರ, ವೇತನದಾರರಿಗೆ ಸಾಲ ಕೊಡಲಾಗುತ್ತದೆ. ಕೇವಲ ಕೃಷಿ ಮಾತ್ರವಲ್ಲ, ಕೃಷಿಯೇತರ ಸಾಲವನ್ನೂ ನೀಡಲಾಗುತ್ತಿದೆ. ಕೃಷಿಯೇತರರಿಗೆ ನೀಡಿರುವ ಸಾಲದಲ್ಲಿ 2.40 ಕೋಟಿ ಮಾತ್ರ ಬಾಕಿ ಇದೆ. ಕೆಲವರು ಡೀಫಾಲ್ಟ್ ಆಗಿದ್ದಾರೆ. 31 ಜನಕ್ಕೆ ಮನೆ ಸಾಲ ನೀಡಲಾಗಿದೆ. ಅದರಲ್ಲಿ ಒಬ್ಬರು ಮಾತ್ರ ಡಿಫಾಲ್ಟರ್ ಆಗಿದ್ದಾರೆ. ಕೃಷಿಯೇತರ ಸಾಲ ಪಡೆದು ಡೀಫಾಲ್ಟರ್ ಆಗಿರುವವರ ವಿರುದ್ಧ ಪ್ರಕರಣ ದಾಖಲಿಸಿ ಸಾಲ ವಸೂಲಿ ಕೆಲಸ ಆರಂಭಿಸಲಾಗಿದೆ. ಆದರೆ ರೈತರ ವಿರುದ್ಧ ಕೇಸು ಹಾಕಿಲ್ಲ ಎಂದು ಸ್ಪಷ್ಟಪಡಿಸಿದರು.

ABOUT THE AUTHOR

...view details