ಕರ್ನಾಟಕ

karnataka

By

Published : Jun 16, 2020, 11:35 AM IST

ETV Bharat / city

ಶರವೇಗದಲ್ಲಿ ನಡೀತಿದೆ ಸೈಬರ್ ಕ್ರೈಮ್​: ಪತ್ತೆ ಹಚ್ಚೋದ್ರಲ್ಲಿ ಪೊಲೀಸರು ಹಿಂದೆ ಹಿಂದೆ!

ರಾಜ್ಯದಲ್ಲಿ ಸೈಬರ್ ವಂಚನೆ ಪ್ರಕರಣಗಳು ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಿವೆ. ಆದರೆ, ಇವುಗಳನ್ನು ಪತ್ತೆ ಹಚ್ಚಲು ರಾಜ್ಯದ ಪೊಲೀಸರು ಹಲವು ಕಾರಣದಿಂದ ಹಿಂದುಳಿದಿದ್ದಾರೆ. ಈ ಬಗ್ಗೆ ವಿಸ್ಕೃತ ವರದಿ ಇಲ್ಲಿದೆ.

cyber crime
ಸೈಬರ್ ಕ್ರೈಮ್

ಬೆಂಗಳೂರು:ತಂತ್ರಜ್ಞಾನ ಬೆಳೆಯುತ್ತಿದ್ದಂತೆ ತಂತ್ರಜ್ಞಾನದ ದುರ್ಬಳಕೆ ಪ್ರಮಾಣವೂ ಹೆಚ್ಚಾಗುತ್ತಿವೆ. ರಾಜಧಾನಿ ಬೆಂಗಳೂರಿನಲ್ಲಿ ಶರವೇಗದಲ್ಲಿ ಸೈಬರ್ ಅಪರಾಧ‌ಗಳು ಒಂದೇ ಸಮನೆ ಏರಿಕೆ ಆಗುತ್ತಿರುವುದು ಕಳವಳಕ್ಕೆ ಕಾರಣವಾಗಿದೆ.

ಸಮೀಕ್ಷೆಯೊಂದರ ಪ್ರಕಾರ ದೇಶದಲ್ಲಿ ಸೈಬರ್ ಕ್ರೈಂ ನಡೆಯುವ ನಗರಗಳಲ್ಲಿ ಬೆಂಗಳೂರು ಅಗ್ರಸ್ಥಾನದಲ್ಲಿರುವುದು ವಿರ್ಪಯಾಸ. ದೇಶ ಅಥವಾ ಯಾವುದೇ ನಗರದಲ್ಲಿ ಕುಳಿತು ಸೈಬರ್ ಅಪರಾಧ ಎಸಗುವ ವಂಚಕರ ವಿರುದ್ಧ ರಾಜ್ಯದಲ್ಲಿ ಸಾವಿರಾರು ಪ್ರಕರಣಗಳ ದಾಖಲಾದರೂ ನೂರಾರು ಸಂಖ್ಯೆಯಲ್ಲಿ ಮಾತ್ರ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ತೃಪ್ತಿಪಟ್ಟುಕೊಳ್ಳುತ್ತಿದ್ದಾರೆ.‌ ಈ ವಿಚಾರದಲ್ಲಿ ಪೊಲೀಸರು ಹಿಂದುಳಿಯಲು ಸಿಬ್ಬಂದಿ‌ ಕೊರತೆ, ಮೂಲಸೌಕರ್ಯ ಕೊರತೆ, ತಾಂತ್ರಿಕ ಕೌಶಲ ತರಬೇತಿ ಇಲ್ಲದಿರುವುದು, ಸಮನ್ವಯ ಕೊರತೆಯಿಂದಾಗಿ ಮುಂತಾದ ಕಾರಣಗಳನ್ನು ನೀಡಬಹುದಾಗಿದೆ.

ಸೈಬರ್ ತಜ್ಞ ಬಿ‌.ಎನ್.ಫಣಿಂದರ್

ಕಳೆದ ವರ್ಷ ರಾಜ್ಯದಲ್ಲಿ 12,041 ಸಾವಿರ ಸೈಬರ್ ವಂಚನೆ ಪ್ರಕರಣಗಳು ದಾಖಲಾಗಿದ್ದವು. ಆದರೆ, ಪತ್ತೆ ಹಚ್ಚಿದ್ದು193 ಕೇಸ್​ಗಳನ್ನು ಮಾತ್ರ. ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳ ಕಮಿಷನರೇಟ್ ವ್ಯಾಪ್ತಿ ಸೇರಿ ಒಟ್ಟು 35 ವಿಭಾಗಗಳಲ್ಲಿ ಸೈಬರ್ ಅಪರಾಧ ಪ್ರಕರಣಗಳು ದಾಖಲಾಗಿವೆ. ಅಚ್ಚರಿಯ ವಿಚಾರ ಎಂದರೆ 27 ವಿಭಾಗಗಳಲ್ಲಿ ದಾಖಲಾಗಿದ್ದ ಪ್ರಕರಣಗಳ ಪೈಕಿ ಒಂದೇ ಒಂದು ಪ್ರಕರಣವನ್ನು ಪೊಲೀಸರಿಗೆ ಪತ್ತೆಹಚ್ಚಲು ಸಾಧ್ಯವಾಗಿಲ್ಲ.

ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಾಗುತ್ತಿರುವ ಅಪರಾಧಗಳ ಕುರಿತಂತೆ ಅಂತರ್ಜಾಲ, ಜಾಲತಾಣ ಕಂಪನಿಗಳ ಅಸಹಕಾರ, ದೀರ್ಘಾವಧಿ ಪತ್ರ ವ್ಯವಹಾರ ಒಂದೆಡೆಯಾದರೆ ಪೊಲೀಸರ ತನಿಖೆಯಲ್ಲಿ ಅವೈಜ್ಞಾನಿಕತೆ, ಸೈಬರ್ ಕ್ರೈಂ ಕುರಿತಂತೆ ಪೊಲೀಸ್ ಸಿಬ್ಬಂದಿಗೆ ಜ್ಞಾನ, ಕೌಶಲ್ಯ ಹಾಗೂ ತರಬೇತಿ ಕೊರತೆಯಿಂದ ಪ್ರಕರಣಗಳು ಪತ್ತೆ ಹಚ್ಚಲು ಸಾಧ್ಯವಾಗುತ್ತಿಲ್ಲ.
ರಾಜ್ಯ ಅಪರಾಧ ದಾಖಲಾತಿ ಘಟಕ (ಎಸ್​​ಸಿಆರ್​​ಬಿ) ಮಾಹಿತಿ ಪ್ರಕಾರ ರಾಜ್ಯದಲ್ಲಿ ಸೈಬರ್ ಕ್ರೈಂ ದಾಖಲಾಗುವ ಪ್ರಕರಣಗಳಲ್ಲಿ ಶೇಕಡಾ 0.6ರಷ್ಟನ್ನು ಮಾತ್ರ ಭೇದಿಸಲು ಪೊಲೀಸರಿಂದ ಸಾಧ್ಯವಾಗುತ್ತಿದೆ.


18 ಸಾವಿರ ಕೇಸ್​​ಗಳಲ್ಲಿ 8 ಪ್ರಕರಣಗಳಲ್ಲಿ ಚಾರ್ಜ್ ಶೀಟ್ ಸಲ್ಲಿಕೆ

ಸೈಬರ್ ಕ್ರೈಂ ಹತ್ತಿಕ್ಕಲು ಬೆಂಗಳೂರಿನಲ್ಲಿ‌ ಕಮೀಷನರ್ ಕಚೇರಿಯಲ್ಲಿ 2017ರಲ್ಲಿ ಸೈಬರ್ ಕ್ರೈಂ ಪೊಲೀಸ್ ಠಾಣೆ ನಿರ್ಮಾಣವಾಗಿತ್ತು. ಅಂದಿನಿಂದ ಇದುವರೆಗೂ 18 ಸಾವಿರಕ್ಕಿಂತ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಈ ಪೈಕಿ ಕೇವಲ 8 ಪ್ರಕರಣಗಳಲ್ಲಿ ಮಾತ್ರ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಕೆಯಾಗಿದೆ. 763 ಪ್ರಕರಣಗಳು ಸಿ ರಿಪೋರ್ಟ್ (ಘಟನೆ ನಡೆದಿದ್ದು ಆರೋಪಿ ಪತ್ತೆಯಾಗಿಲ್ಲ) ನೀಡಿದರೆ ಇನ್ನೂ ಉಳಿದ ಪ್ರಕರಣಗಳು ತನಿಖಾ ಹಂತದಲ್ಲಿವೆ.

ಸೈಬರ್ ತಜ್ಞರು ಹೇಳೋದೇನು ?

ಸೈಬರ್ ವಂಚನೆಗೆ ಒಳಗಾದ ಹೆಣ್ಣು ಮಕ್ಕಳ‌ ರಕ್ಷಣೆಗಾಗಿ ರಾಜ್ಯದಲ್ಲಿ ಅಗತ್ಯಕ್ಕೆ ಅನುಗುಣವಾಗಿ ಸೈಬರ್ ಕ್ರೈಂ ಪೊಲೀಸ್ ಠಾಣೆ ನಿರ್ಮಿಸಲು ಸರ್ಕಾರ ಅನುದಾನ ನೀಡಿದೆ. ಬಹುತೇಕ ರಾಜ್ಯಗಳಲ್ಲಿ ಅನುದಾನ ಸರ್ಮಪಕವಾಗಿ ಬಳಕೆಯಾಗಿಲ್ಲ. ಇಂದಿನ ಡಿಜಿಟಲ್ ಯುಗದಲ್ಲಿ ಹಿರಿಯ ನಾಗರಿಕರನ್ನು ಟಾರ್ಗೆಟ್ ಮಾಡಿಕೊಂಡು ಪರಿಚಯಸ್ಥರ ಸೋಗಿನಲ್ಲಿ ವಂಚಿಸುವವರ ಸಂಖ್ಯೆ ಅಧಿಕವಾಗುತ್ತಿವೆ. ಹೀಗಾಗಿ ಸೈಬರ್ ಕ್ರೈಂ ಬಗ್ಗೆ ಹಿರಿಯ ನಾಗರಿಕರಿಗೆ ಜಾಗೃತಿ ಮೂಡಿಸಬೇಕು. ಎಷ್ಟೋ ಮಂದಿ ಜಡ್ಜ್, ವಕೀಲರು ಹಾಗೂ ಪೊಲೀಸರಿಗೆ ಮಾಹಿತಿ ತಂತ್ರಜ್ಞಾನ ಕಾಯ್ದೆ - 2000 ಬಗ್ಗೆ ಸಂಪೂರ್ಣವಾಗಿ ಮಾಹಿತಿ ಇರುವುದಿಲ್ಲ. ಈ ಬಗ್ಗೆ ಮೊದಲು ಅವರಲ್ಲಿ ಅರಿವು ಮೂಡಿಸುವುದು ಅಗತ್ಯವಾಗಿದೆ ಎನ್ನುತ್ತಾರೆ ಸೈಬರ್ ತಜ್ಞರಾದ ಬಿ‌.ಎನ್.ಫಣಿಂದರ್.


ಸೈಬರ್ ಕ್ರೈಂ ನಿಯಂತ್ರಣಕ್ಕೆ ಮಾಡಬೇಕಾದದ್ದೇನು ?

ಕೇಂದ್ರ ಹಾಗೂ ರಾಜ್ಯದಲ್ಲಿ ಸೈಬರ್ ಕ್ರೈ ತಡೆಯಲು ಪ್ರತ್ಯೇಕವಾಗಿ ಸೈಬರ್ ಕ್ರೈಂ ನಿರ್ವಹಣಾ ಕೇಂದ್ರ ಸ್ಥಾಪಿಸಬೇಕು. ಇದರಿಂದ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುವ ಸುಳ್ಳು ಸುದ್ದಿಗಳಿಗೆ ಬ್ರೇಕ್ ಹಾಕಬಹುದು. ಸೈಬರ್ ಕ್ರೈಂ ಕುರಿತಂತೆ ಪೊಲೀಸರಿಗೆ ಸೂಕ್ತ ತರಬೇತಿ ನೀಡಬೇಕು. ಪ್ರಕರಣಗಳ ತನಿಖೆ ತ್ವರಿತವಾಗಿ ಭೇದಿಸಲು ವಿಧಿ ವಿಜ್ಞಾನ ಪ್ರಯೋಗಾಲಯಗಳೊಂದಿಗೆ ಒಡಂಬಡಿಕೆ ಮಾಡಿಕೊಳ್ಳಬೇಕು. ವಿದೇಶಗಳಲ್ಲಿ ಸೈಬರ್ ಬಗ್ಗೆ ಇರುವ ಕಠಿಣ ಕಾನೂನು ಜಾರಿ ತರಬೇಕು. ಸೈಬರ್ ಭದ್ರತೆಗಾಗಿ ಸರ್ಕಾರ ಪ್ರತ್ಯೇಕ ಸಮಿತಿ ರಚಿಸಬೇಕು.

ABOUT THE AUTHOR

...view details