ಕರ್ನಾಟಕ

karnataka

By

Published : Oct 8, 2020, 12:24 PM IST

ETV Bharat / city

ಕೋವಿಡ್​ ಎಫೆಕ್ಟ್​: ಸಾಲದ ಸುಳಿಗೆ ಸಿಲುಕಿ ಸ್ವ-ಸಹಾಯ ಸಂಘಗಳು ತತ್ತರ!

ಲಾಕ್​​​ಡೌನ್​ನ ಮೂರು ತಿಂಗಳು ಸಾಲ ಕಟ್ಟುವುದು ಬೇಡವೆಂದು ಹೇಳಿದ್ದ ಸರ್ಕಾರ ಬಡ್ಡಿ ಪಾವತಿಸುವಂತೆ ಪೀಡಿಸುತ್ತಿದೆ. ಅಲ್ಲದೆ, ಸಂಘ-ಸಂಸ್ಥೆಗಳು ಬ್ಯಾಂಕ್ ಲೋನ್, ಬಡ್ಡಿ ಮಾತ್ರ ಬೆಳೆಯುತ್ತಲೇ ಇದೆ. ಹೀಗಾಗಿ, ಸ್ವ-ಸಹಾಯ ಸಂಘದವರಿಗೆ ಸಾಲ ತಲೆನೋವಾಗಿ ಪರಿಣಮಿಸಿದೆ.

Covid impact on Self Help Group activities
ಸ್ವ-ಸಹಾಯ ಸಂಘಗಳು ತತ್ತರ

ಬೆಂಗಳೂರು: ಕೊರೊನಾ ವೈರಸ್ ಎಷ್ಟರ ಮಟ್ಟಿಗೆ ಜನಜೀವನ ಅಸ್ತವ್ಯಸ್ತ ಮಾಡಿದೆ ಅಂದ್ರೆ ಮತ್ತೆ ಮೇಲೇಳಲು ಸಾಧ್ಯವಾಗದಷ್ಟು ಪೆಟ್ಟು ಕೊಟ್ಟಿದೆ. ಕೊರೊನಾ ಬಂದು ಬರೋಬ್ಬರಿ 7 ತಿಂಗಳೇ ಕಳೆದಿವೆ. ಆದರೂ ಸೋಂಕಿನ ಅಟ್ಟಹಾಸ ನಿಯಂತ್ರಣಕ್ಕೇ ಬಂದಿಲ್ಲ. ಮತ್ತೊಂದೆಡೆ ಅದರ ಹೊಡೆತಕ್ಕೆ ಒಳಗಾಗದವರು ಚೇತರಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಎಲ್ಲ ಕ್ಷೇತ್ರದ ಬುಡವನ್ನು ಮುಟ್ಟಿ ಕೆದಕಿ ಬಂದಿರುವ ವೈರಸ್,​​ ಸ್ವ-ಸಹಾಯ ಗುಂಪುಗಳಿಗೂ ದೊಡ್ಡ ಮಟ್ಟದ ಸಂಕಷ್ಟವನ್ನೇ ತಂದೊಡ್ಡಿದೆ.

ಕೋವಿಡ್​​​ ಪರಿಣಾಮ ಸಾವಿರಾರು ಸ್ವ-ಸಹಾಯ ಗುಂಪುಗಳ ಸಾವಿರಾರು ಮಹಿಳೆಯರ ಬದುಕು ಅತಂತ್ರದಲ್ಲಿದೆ. ಸಾಲ ಪಡೆದು ಸಣ್ಣಪುಟ್ಟ ಉದ್ಯಮ ಶುರು ಮಾಡಿದವರಿಗೆ ಸಾಲ ಮರುಪಾವತಿ ಮಾಡುವುದೇ ದೊಡ್ಡ ಸಮಸ್ಯೆಯಾಗಿದೆ. ಸ್ವಸಹಾಯ ಗುಂಪುಗಳ ಮೂಲಕ ಉದ್ಯಮಗಳನ್ನು ಆರಂಭಿಸಿ ಬದುಕು ಕಟ್ಟಿಕೊಂಡವರೆಷ್ಟೋ ಮಂದಿ ನಡು ಬೀದಿಗೆ ಬಂದು ನೆರವಿಗಾಗಿ ಕೈಚಾಚಿದ್ದಾರೆ.

ಆದರೆ, ಈ ಸಂಕಷ್ಟದ ಸಮಯದಲ್ಲೂ ಕೊಂಚ ನಿರಾಳರಾಗಿದ್ದು ಹೊಲಿಗೆ ಯಂತ್ರ ಹೊಂದಿದ್ದ ಮಹಿಳೆಯರು ಮಾತ್ರ.‌ ಕೊರೊನಾಗೂ ಮುನ್ನ ಬೇರೆ ಉತ್ಪನ್ನಗಳನ್ನು ತಯಾರಿಸುತ್ತಿದ್ದವರಿಗೆ ಕೈಕಾಲು ಕಟ್ಟಿ ಹಾಕಿದಂತಾಗಿತ್ತು. ಮಾಸ್ಕ್ ಹಾಗೂ ಗೌನ್​​​ಗೆ ಹೆಚ್ಚು ಬೇಡಿಕೆ ಬಂದ ಪರಿಣಾಮ ಇದರ ತಯಾರಿಗೆ ಹೊಸ ದಾರಿ ತೋರಿಸಿತು.

ಸಂಕಷ್ಟಕ್ಕೆ ಸಿಲುಕಿದ ಸ್ವ-ಸಹಾಯ ಸಂಘಗಳು

ಶಿವಮೊಗ್ಗದಲ್ಲಿ ಕೋವಿಡ್​ನಿಂದ ಜನರ ಆರ್ಥಿಕ ಸ್ಥಿತಿ ಪಾತಾಳಕ್ಕೆ ಕುಸಿದಿದೆ. ಮಹಿಳೆಯರು ಸ್ವಾವಲಂಬಿಯಾಗಿ ಜೀವನ ನಡೆಸಬೇಕೆಂದು ಸರ್ಕಾರ ಮಹಿಳಾ ಸ್ವಸಹಾಯ ಸಂಘಗಳಿಗೆ ಸಾಲ ನೀಡಲು ಪ್ರಾರಂಭಿಸಿದೆ. ಆದರೆ, ಶೇ.2ರಷ್ಟು ಸ್ವ-ಸಹಾಯ ಸಂಘದವರು ಮಾತ್ರ ಅಡಿಕೆ ತಟ್ಟೆ ತಯಾರಿ, ಉಪ್ಪಿನಕಾಯಿ, ಹಪ್ಪಳ ತಯಾರಿಕೆ ಸೇರಿದಂತೆ ಹಲವು ಗೃಹೋಪಯೋಗಿ ವಸ್ತುಗಳ ತಯಾರಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಮತ್ತೊಂದೆಡೆ ಲಾಕ್​​​ಡೌನ್​ನ ಮೂರು ತಿಂಗಳು ಸಾಲ ಕಟ್ಟುವುದು ಬೇಡವೆಂದು ಹೇಳಿದ್ದ ಸರ್ಕಾರ ಬಡ್ಡಿ ಪಾವತಿಸುವಂತೆ ಪೀಡಿಸುತ್ತಿದೆ. ಅಲ್ಲದೆ, ಸಂಘ-ಸಂಸ್ಥೆಗಳು ಬ್ಯಾಂಕ್ ಲೋನ್, ಬಡ್ಡಿ ಮಾತ್ರ ಬೆಳೆಯುತ್ತಲೇ ಇದೆ. ಇದು ಸ್ವ-ಸಹಾಯ ಸಂಘದವರನ್ನು ಚಿಂತೆಗೀಡು ಮಾಡಿದೆ.

ಸಾಲ ತೆಗೆದುಕೊಂಡವರು ಅದರ ಮರುಪಾವತಿಗೆ ಮತ್ತೆ ಸಾಲ ಮಾಡುವ ಪರಿಸ್ಥಿತಿ ಬಂದೊದಗಿದೆ. ಮುಂದೆ ಸರಿ ಹೋಗುವ ಲಕ್ಷಣಗಳಿದ್ದರೂ ಅಲ್ಲಿವರೆಗೂ ಬ್ಯಾಂಕ್​ನವರು ಬಡ್ಡಿ ನೀಡಲೇಬೇಕೆಂದು ಪೀಡಿಸುತ್ತಿದ್ದಾರೆ ಎಂಬುದು ನೊಂದವರ ಅಳಲು. ಹೀಗಾಗಿ, ಮಹಿಳಾ ಸ್ವ-ಸಹಾಯ ಸಂಘಗಳಿಗೆ ಸರ್ಕಾರ ನೆರವಿನ ಹಸ್ತ ಚಾಚಬೇಕಿದೆ.

ABOUT THE AUTHOR

...view details