ಬೆಂಗಳೂರು:ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟುಮಾಡಿದ ಆರೋಪ ಪ್ರಕರಣದಲ್ಲಿ ಸಿಲುಕಿರುವ ಲೇಖಕ ಪ್ರೊ.ಕೆ.ಎಸ್ ಭಗವಾನ್ ಶುಕ್ರವಾರ ಪೊಲೀಸ್ ಬಿಗಿ ಭದ್ರತೆ ನಡುವೆ ನ್ಯಾಯಾಲಯಕ್ಕೆ ಹಾಜರಾಗಿದ್ದಾರೆ.
ಹಿಂದೂಗಳ ಭಾವನೆಗಳನ್ನು ಘಾಸಿಗೊಳಿಸಿದ ಆರೋಪ ಎದುರಿಸುತ್ತಿರುವ ಲೇಖಕರ ವಿರುದ್ಧದ ಪ್ರಕರಣವನ್ನು ನಗರದ 8ನೇ ಎಸಿಎಂಎಂ ಕೋರ್ಟ್ ನ್ಯಾಯಾಧೀಶ ವೀರನಗೌಡ ಎಸ್. ಪಾಟೀಲ ವಿಚಾರಣೆ ನಡೆಸಿದರು. ಈ ವೇಳೆ ಪ್ರೊ. ಭಗವಾನ್ ಪೊಲೀಸ್ ಬಿಗಿಭದ್ರತೆಯಲ್ಲಿ ನ್ಯಾಯಾಲಯಕ್ಕೆ ಹಾಜರಾದರು. ಚಂದ್ರಶೇಖರ ಪಾಟೀಲ (ಚಂಪಾ) ಹಾಗೂ ತಮಿಳ್ ಸೆಲ್ವಿ ಅವರಿಗೂ ಸಮನ್ಸ್ ಜಾರಿಯಾಗಿತ್ತಾದರೂ ಇಬ್ಬರೂ ಗೈರು ಹಾಜರಾಗಿದ್ದರು.
ಇವರ ವಕೀಲರು ವಿನಾಯಿತಿ ಕೋರಿದ ಕಾರಣದಿಂದ ಆರೋಪಿಗಳೆಲ್ಲರೂ ಹಾಜರದ ನಂತರವೇ ಪ್ರಕರಣದ ವಿಚಾರಣೆ ನಡೆಸುವುದಾಗಿ ತಿಳಿಸಿದ ನ್ಯಾಯಾಲಯ ವಿಚಾರಣೆಯನ್ನು 2022ರ ಏಪ್ರಿಲ್ 4ಕ್ಕೆ ಮುಂದೂಡಿತು.
ಪೆರಿಯಾರ್ ಜನ್ಮದಿನದ ಪ್ರಯುಕ್ತ ಬೆಂಗಳೂರಿನ ಗಾಂಧಿ ಭವನದಲ್ಲಿ ನಡೆದಿದ್ದ ಕಾರ್ಯಕ್ರಮದಲ್ಲಿ ಪ್ರೊ. ಕೆ.ಎಸ್ ಭಗವಾನ್, ಪ್ರೊ. ಚಂದ್ರಶೇಖರ್ ಪಾಟೀಲ (ಚಂಪಾ) ಹಾಗೂ ತಮಿಳ್ ಸೆಲ್ವಿ ಅತಿಥಿಗಳಾಗಿ ಭಾಗವಹಿಸಿ ಭಾಷಣ ಮಾಡಿದ್ದರು. ಈ ವೇಳೆ ಶ್ರೀರಾಮ ಹಾಗೂ ಮಹಾಭಾರತ ಕುರಿತು ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ್ದರು.