ಕರ್ನಾಟಕ

karnataka

ETV Bharat / city

ವರ್ಷದ ಸಂಭ್ರಮದಲ್ಲಿರುವ ಬೊಮ್ಮಾಯಿ‌ ಸರ್ಕಾರಕ್ಕೆ ಬಿಟ್ಟು ಬಿಡದೆ ಕಾಡಿದ 'ವಿವಾದಾತ್ಮಕ ಹೇಳಿಕೆ'ಗಳ ತಲೆವರಿ - ಸಿಎಂ ಬೊಮ್ಮಾಯಿ ಸರ್ಕಾರದಲ್ಲಿ ರಾಜಕೀಯ ಮುಖಂಡರ ವಿವಾದಾತ್ಮಕ ಹೇಳಿಕೆಗಳು

ಬೊಮ್ಮಾಯಿ‌ ಸರ್ಕಾರ ಒಂದು ವರ್ಷದ ಸಂಭ್ರಮದಲ್ಲಿದೆ. ಕಳೆದು ಹೋದ ಈ ಒಂದು ವರ್ಷದಲ್ಲಿ ಸಾಕಷ್ಟು ಘಟನೆಗಳು, ಬದಲಾವಣೆಗಳು, ವಿವಾದಗಳು ನಡೆದಿವೆ. ಸಚಿವರುಗಳ ವಿವಾದಾತ್ಮಕ ಹೇಳಿಕೆಗಳ ಮೂಲಕ 'ಬೊಮ್ಮಾಯಿ ಸರ್ಕಾರ' ಜನಾಕ್ರೋಶದ ಜತೆಗೆ ಪ್ರತಿಪಕ್ಷಗಳ ಟೀಕೆಗೂ ಆಹಾರವಾಯಿತು.

CM Bommai, Araga Jnanendra and Minister Sudhakar
ಸಿಎಂ ಬೊಮ್ಮಾಯಿ, ಆರಗ ಜ್ಞಾನೇಂದ್ರ ಹಾಗೂ ಸಚಿವ ಸುಧಾಕರ್​

By

Published : Jul 24, 2022, 7:25 AM IST

ಬೆಂಗಳೂರು: ಸಚಿವರುಗಳ ವಿವಾದಾತ್ಮಕ ಹೇಳಿಕೆಗಳಿಂದ ಬೊಮ್ಮಾಯಿ‌ ಸರ್ಕಾರ ಪ್ರತಿಪಕ್ಷಗಳ ಟೀಕೆ ಹಾಗೂ ಜನಾಕ್ರೋಶಕ್ಕೆ ಕಾರಣವಾಯಿತು. ಕಳೆದ ಒಂದು ವರ್ಷದ ಆಡಳಿತದಲ್ಲಿ ಬೊಮ್ಮಾಯಿ ಸರ್ಕಾರವನ್ನು ಕಾಡಿದ ವಿವಾದಿತ ಹೇಳಿಕೆಗಳ ವಿವರ ಇಲ್ಲಿದೆ.

1. ನೈತಿಕ‌ ಪೊಲೀಸ್‌ಗಿರಿ ಬಗ್ಗೆ ಸಿಎಂ ಹೇಳಿಕೆ:ಸ್ವತಃ ಸಿಎಂ ಬೊಮ್ಮಾಯಿ‌ 'ನೈತಿಕ ಪೊಲೀಸ್‌ಗಿರಿ' ಬಗ್ಗೆ ವಿವಾದಿತ ಹೇಳಿಕೆ ನೀಡಿ ಪ್ರತಿಪಕ್ಷಗಳ ಬಾಯಿಗೆ ಆಹಾರವಾದರು‌‌. ಸಮಾಜದಲ್ಲಿ ಅನೇಕ ಭಾವನೆಗಳಿವೆ. ಆ ಭಾವನೆಗಳನ್ನು ಕೆರಳಿಸಬಾರದು. ಒಂದು ವೇಳೆ ಭಾವನೆಗಳಿಗೆ ಧಕ್ಕೆ ಬಂದರೆ ಕ್ರಿಯೆಗೆ ಪ್ರತಿಕ್ರಿಯೆ ಇದ್ದೇ ಇರುತ್ತದೆ ಎಂದು ಮಂಗಳೂರಿನಲ್ಲಿ ಹೇಳಿಕೆ ನೀಡಿದ್ದರು.


ಸಿಎಂ ಈ ಹೇಳಿಕೆ ನೈತಿಕ ಪೊಲೀಸ್‌ಗಿರಿಗೆ ಇಂಬು ನೀಡುವಂತಿದೆ ಎಂದು ಪ್ರತಿಪಕ್ಷಗಳ ತೀವ್ರ ಟೀಕೆಗೆ ಗುರಿಯಾಗಬೇಕಾಯಿತು. ಹಿಂದೂ ಸಂಘಟನೆಗಳ ಕಾರ್ಯಕರ್ತರು ಮಂಗಳೂರಿನ ಮೆಡಿಕಲ್‌ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ ಪ್ರಕರಣ ಸಂಬಂಧ ಪ್ರತಿಕ್ರಿಯಿಸುತ್ತಾ ಸಿಎಂ ನೈತಿಕ ಪೊಲೀಸ್‌ಗಿರಿ ಎಂಬುದು ಸೂಕ್ಷ್ಮ ವಿಚಾರ. ಯುವಕರು ಕೂಡ ಸಾಮಾಜಿಕವಾಗಿ ಧಕ್ಕೆ ಆಗದಂತೆ ನೋಡಿಕೊಳ್ಳಬೇಕಾಗುತ್ತದೆ. ನೈತಿಕತೆ ಇಲ್ಲದೆ ಬದುಕೋಕೆ ಆಗುತ್ತಾ?. ನಮ್ಮೆಲ್ಲ ಸಂಬಂಧಗಳು ಮತ್ತು ಶಾಂತಿ ಸುವ್ಯವಸ್ಥೆ ಇರುವುದು ನಮ್ಮ ನೈತಿಕತೆ ಮೇಲೆ. ಇದು ಇಲ್ಲದಾಗ ಆಕ್ಷನ್ಸ್, ರಿಯಾಕ್ಷನ್ಸ್ ಆಗುತ್ತೆ ಎಂದು ತಿಳಿಸಿದ್ದರು. ಸಂಘಟನೆಯೊಂದು ಸಿಎಂ ಬೊಮ್ಮಾಯಿಗೆ ಈ ವಿವಾದಾತ್ಮಕ ಹೇಳಿಕೆ ಸಂಬಂಧ ಲೀಗಲ್ ನೋಟಿಸ್​​ ಜಾರಿ ಮಾಡಿತ್ತು.

2. ಇಕ್ಕಟ್ಟಿಗೆ ಸಿಲುಕಿಸಿದ ಕೆ.ಎಸ್.ಈಶ್ವರಪ್ಪ ಹೇಳಿಕೆಗಳು: ಕಮಿಷನ್ ಆರೋಪದ‌ ಮಸಿಯಿಂದ ಮಂತ್ರಿಗಿರಿ ಕಳೆದುಕೊಂಡ ಬಿಜೆಪಿ ಹಿರಿಯ ನಾಯಕ ಕೆ.ಎಸ್.ಈಶ್ವರಪ್ಪ ಸದಾ ವಿವಾದಾತ್ಮಕ ಹೇಳಿಕೆಗಳ ಮೂಲಕವೇ ಸುದ್ದಿಗೆ ಗ್ರಾಸವಾಗುತ್ತಾರೆ. ಒಂದಲ್ಲಾ ಒಂದು ವಿವಾದಾತ್ಮಕ ಹೇಳಿಕೆ ನೀಡಿ ಸರ್ಕಾರವನ್ನು ಪೇಚಿಗೆ ಸಿಲುಕಿದ ಪ್ರಸಂಗ ಸಾಕಷ್ಟಿದೆ.

  • "ಹಿಂದುತ್ವದ ಬಗ್ಗೆ ಮಾತಾಡಿದ್ರೆ ಕೊಲೆ ಆಗ್ತಾ ಇತ್ತು": ಆಗಸ್ಟ್ 2021ರಲ್ಲಿ ಶಿವಮೊಗ್ಗದಲ್ಲಿ ನಡೆದ ಬಿಜೆಪಿ ನಗರ ಕಾರ್ಯಕಾರಣಿ ಸಭೆಯಲ್ಲಿ ಮಾತನಾಡುತ್ತಾ ಕೆ.ಎಸ್.ಈಶ್ವರಪ್ಪ, ಈ ಹಿಂದೆ ಹಿಂದುತ್ವದ ಬಗ್ಗೆ ಮಾತಾಡಿದ್ರೆ ಕೊಲೆ ಆಗ್ತಾ ಇತ್ತು. ಕೇರಳದಲ್ಲಿ ಸಾಕಷ್ಟು ಹಿಂದೂ ಕಾರ್ಯಕರ್ತರ ಕೊಲೆಯಾಗಿದೆ. ಆಗ ವಾಪಾಸ್ ಹೊಡಿಯೋ ಶಕ್ತಿ ನಮಗೆ ಇರಲಿಲ್ಲ. ಆದರೆ ಈಗ ದೇಶದಲ್ಲಿ ಬಿಜೆಪಿ ದೊಡ್ಡದಾಗಿ ಬೆಳೆಯುತ್ತಿದೆ. ನಮಗೆ ಈಗ ತಿರುಗಿಸಿ ಹೊಡೆಯುವ ಶಕ್ತಿ ಬಂದಿದೆ. ಹೀಗಾಗಿ ಯಾರು ನಮ್ಮ ಕಾರ್ಯಕರ್ತರ ಮೇಲೆ ಯಾವುದರಲ್ಲಿ ಹೊಡೀತಾರೋ ಅದರಲ್ಲಿತೇ ತಿರುಗಿಸಿ ಹೊಡೆಯಿರಿ. ಒಂದಕ್ಕೆ ಎರಡು ತೆಗೀರಿ ಎಂಬ ಪ್ರಚೋದನಾಕಾರಿ ಹೇಳಿಕೆ ನೀಡಿದ್ದರು.
  • "ಭಾಗವಧ್ವಜ ರಾಷ್ಟ್ರೀಯ ಧ್ವಜವಾಗಬಹುದು":ಫೆಬ್ರವರಿ 2022ರಂದು ವಿಧಾನಸೌಧದಲ್ಲಿ ಮಾತನಾಡುತ್ತಾ, ಮುಂದೊಂದು ದಿನ ಭಾಗವಧ್ವಜವೇ ರಾಷ್ಟ್ರ ಧ್ವಜ ಆಗಬಹುದು ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆ ದೇಶದ್ಯಾಂತ ಭಾರಿ ಸುದ್ದಿಗೆ ಗ್ರಾಸವಾಗಿತ್ತು. ಇತ್ತ ಬೊಮ್ಮಾಯಿ ಸರ್ಕಾರ ಈಶ್ವರಪ್ಪರ ಹೇಳಿಕೆಯಿಂದ ಮುಜುಗರಕ್ಕೊಳಗಾಗಬೇಕಾಯಿತು. ಈ ಹೇಳಿಕೆಯನ್ನು ಖಂಡಿಸಿ ಹಾಗೂ ಮಂತ್ರಿಗಿರಿಯಿಂದ ವಜಾಗೊಳಿಸುವಂತೆ ಆಗ್ರಹಿಸಿ ಕಾಂಗ್ರೆಸ್ ಪಕ್ಷ ಸದನದಲ್ಲಿ ಅಹೋರಾತ್ರಿ ಧರಣಿ ನಡೆಸಿತ್ತು.
    ಅರಣ್ಯ ಸಚಿವ ಉಮೇಶ್ ಕತ್ತಿ

3. ಉಮೇಶ್ ಕತ್ತಿ ಪ್ರತ್ಯೇಕ ರಾಜ್ಯದ ವರಸೆ: ಅರಣ್ಯ ಸಚಿವ ಉಮೇಶ್ ಕತ್ತಿಯ ಪ್ರತ್ಯೇಕ ರಾಜ್ಯ ರಚಿಸುವ ವಿವಾದಾತ್ಮಕ ಹೇಳಿಕೆ ಬೊಮ್ಮಾಯಿ‌ ಸರ್ಕಾರವನ್ನು ತೀವ್ರ ಮುಜುಗರಕ್ಕೆ ಸಿಲುಕುವಂತೆ ಮಾಡಿತು. "ಪ್ರಧಾನಿ ಮೋದಿ ಅವರು ಉತ್ತರ ಕರ್ನಾಟಕವನ್ನು ಪ್ರತ್ಯೇಕ ರಾಜ್ಯ ಮಾಡಲಿದ್ದಾರೆ" ಎಂಬ ಹೇಳಿಕೆ ಸರ್ಕಾರವನ್ನು ತೀವ್ರ ಇಕ್ಕಟ್ಟಿಗೆ ಸಿಲುಕಿಸಿತು. ಕತ್ತಿ ಅವರ ಪ್ರತ್ಯೇಕ ರಾಜ್ಯ ಕುರಿತ ಹೇಳಿಕೆಯನ್ನು ಆರೂವರೆ ಕೋಟಿ ಕನ್ನಡಿಗರ ಪರ ಖಂಡಿಸುತ್ತೇನೆಂದು ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥ ನಾರಾಯಣ ಅಸಮಾಧಾನ ಹೊರಹಾಕಿದರೆ, ಸರ್ಕಾರದ ಮುಂದೆ ಪ್ರತ್ಯೇಕ ರಾಜ್ಯದ ಪ್ರಸ್ತಾಪವೇ ಇಲ್ಲ ಎಂದು ಮುಖ್ಯಮಂತ್ರಿ ಬೊಮ್ಮಾಯಿ ಸ್ಪಷ್ಟನೆ ನೀಡಿದ್ದರು.

4. ಸಚಿವ ಸುಧಾಕರ್ ಎಡವಟ್ಟು ಹೇಳಿಕೆ: ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, "ದೇಶದಲ್ಲಿನ ಆಧುನಿಕ ಮಹಿಳೆಯರು ಒಬ್ಬರೇ ಜೀವನ ನಡೆಸಲು ಬಯಸುತ್ತಿದ್ದಾರೆ. ವಿವಾಹವಾದರೂ ಮಕ್ಕಳಿಗೆ ಜನ್ಮ ನೀಡಲು ಇಷ್ಟ ಪಡುತ್ತಿಲ್ಲ. ಬದಲಾಗಿ ಬಾಡಿಗೆ ತಾಯ್ತನವನ್ನು ಅನುಸರಿಸುತ್ತಿದ್ದಾರೆ" ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಜನಕ್ರೋಶ ವ್ಯಕ್ತವಾಗಿತ್ತು‌.

ಆರೋಗ್ಯ ಸಚಿವ ಡಾ.ಕೆ.ಸುಧಾಕರ್

5. ಸರ್ಕಾರವನ್ನು ಕಾಡಿದ ಆರಗ ಹೇಳಿಕೆಗಳು: ಗೃಹ ಸಚಿವ ಆರಗ ಜ್ಞಾನೇಂದ್ರ ವಿವಾದಾತ್ಮಕ ಹೇಳಿಕೆಗಳು ಬೊಮ್ಮಾಯಿ ಸರ್ಕಾರವನ್ನು ತೀವ್ರವಾಗಿ ಕಾಡಿತು. ಪದೇ ಪದೆ ವಿವಾದಿತ ಹೇಳಿಕೆ ನೀಡುವ ಮೂಲಕ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿತ್ತು.

  • 'ರೇಪ್' ಪದ ಬಳಸಿ ಹೇಳಿಕೆ: ಮೈಸೂರಿನ ವೈದ್ಯಕೀಯ ವಿದ್ಯಾರ್ಥಿನಿ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವರು 'ರೇಪ್' ಪದ ಬಳಸಿ ಹೇಳಿಕೆ ನೀಡಿರುವುದು ವಿಪಕ್ಷಗಳಿಗೆ ಆಹಾರ ಒದಗಿಸಿದಂತಾಗಿತ್ತು.‌ ಅದಕ್ಕೂ ಮುನ್ನ ಯುವತಿ ಸಂಜೆ ವೇಳೆಗೆ ನಿರ್ಜನ ಪ್ರದೇಶಕ್ಕೆ ಹೋಗಬಾರದಿತ್ತು. ಆದರೆ ಹೋಗಬೇಡಿ ಅಂತಾ ತಡೆಯಲೂ ಆಗಲ್ಲ ಎಂದು ಬೇಜವಾಬ್ದಾರಿತನದ ಹೇಳಿಕೆ ನೀಡಿದ್ದರು. ಈ ಬಗ್ಗೆ ಕಾಂಗ್ರೆಸ್​​ನಿಂದ ಟೀಕೆ ವ್ಯಕ್ತವಾಗ್ತಿದ್ದಂತೆ ಕಾಂಗ್ರೆಸ್ ನವರು ನನ್ನನ್ನು ರೇಪ್ ಮಾಡುತ್ತಿದ್ದಾರೆ ಎಂದು ಮತ್ತೊಂದು ಎಡವಟ್ಟು ಹೇಳಿಕೆ ನೀಡಿದ್ದರು.
    ಗೃಹ ಸಚಿವ ಆರಗ ಜ್ಞಾನೇಂದ್ರ

ತಮ್ಮ ಮಾತು ವಿವಾದದ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆಯೇ ಎಚ್ಚೆತ್ತುಕೊಂಡು ಕಾಂಗ್ರೆಸ್‌ನವರು ಗೃಹ ಸಚಿವರ ಮೇಲೆ ರೇಪ್ ಮಾಡ್ತಿದ್ದಾರೆ ಎಂದು ಅವರ ಮನಸ್ಸಿಗೆ ನೋವುಂಟು ಮಾಡಲು ಹೇಳಿಲ್ಲ. ತಮಾಷೆ ರೀತಿಯಲ್ಲಿ ಮಾತಾಡಿದ್ದೇನೆ ಎಂದು ಸಮಜಾಯಿಷಿ ನೀಡಿದ್ದರು. ತೀವ್ರ ಮುಜುಗರಕ್ಕೆ ಒಳಗಾದ ಸಿಎಂ ಬಸವರಾಜ ಬೊಮ್ಮಾಯಿ ಕಡೆಯಿಂದಲೂ ಕಟ್ಟುನಿಟ್ಟಿನ ಸೂಚನೆ ಬಂದಿತ್ತು. ಗೃಹ ಸಚಿವರ ಹೇಳಿಕೆಗೆ ನನ ಸಹಮತವಿಲ್ಲ ಎಂದು ಸಿಎಂ ಬೊಮ್ಮಾಯಿ ತಿಳಿಸಿದ್ದರು.

  • ಹಳೇಗುಡ್ಡದಹಳ್ಳಿಯಲ್ಲಿ ನಡೆದ ಯುವಕನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಪ್ಪಾಗಿ ಹೇಳಿಕೆ ಕೊಟ್ಟು ವಿರೋಧ ಪಕ್ಷದ ನಾಯಕರ ಟೀಕೆಗೆ ಗುರಿಯಾಗಿದ್ದರು. ಹಳೇಗುಡ್ಡದಹಳ್ಳಿಯಲ್ಲಿ ನಡೆದ ಯುವಕನ ಕೊಲೆಗೆ ಆತನಿಗೆ ಉರ್ದು ಮಾತನಾಡಲು ಬರದಕ್ಕೆ ಕೊಲೆ ನಡೆದಿದೆ ಎಂದು ಹೇಳುವ ಮೂಲಕ ವಿವಾದ ಸೃಷ್ಟಿಸಿದ್ದರು. ಈ ಹೇಳಿಕೆ ಸರ್ಕಾರವನ್ನು ಮುಜುಗರಕ್ಕೀಡು ಮಾಡಿತ್ತು.

ಬಳಿಕ ತಪ್ಪಿನ‌ ಅರಿವಾಗಿ ಆರಂಭದಲ್ಲಿ ಸಿಕ್ಕಿದ ಮಾಹಿತಿಯನ್ನು ಕೂಲಂಕಷವಾಗಿ ಪರಿಶೀಲಿಸದೆ ಆತುರವಾಗಿ ಹೇಳಿಕೆ ನೀಡಿದ್ದು ತಪ್ಪಾಗಿದೆ. ತಕ್ಷಣಕ್ಕೆ ಸಿಕ್ಕಿದ ಮಾಹಿತಿಯನ್ನು ಮಾಧ್ಯಮಗಳ ಮುಂದೆ ಹೇಳಿಬಿಟ್ಟೆ. ಈಗ ವಿಸ್ತೃತ ಮಾಹಿತಿ ಸಿಕ್ಕಿದೆ ಎಂದು ಗೃಹ ಸಚಿವರು ಸ್ಪಷ್ಟನೆ ನೀಡಿದ್ದರು.

ಶಿಕ್ಷಣ ಸಚಿವ ಬಿ.ಸಿ ನಾಗೇಶ್

6. ಬಿ.ಸಿ.ನಾಗೇಶ್ ಎಡವಟ್ಟು ಹೇಳಿಕೆ: ಮಕ್ಕಳು ಶಾಲೆಗೆ ಬರುವುದು ಅಭ್ಯಾಸ ಮಾಡುವುದಕ್ಕೋ ಅಥವಾ ಶೂ, ಸಾಕ್ಸ್ ಹಾಕಿಕೊಳ್ಳುವುದಕ್ಕೋ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿಕೆ ವಿವಾದಕ್ಕೆ ಈಡಾಗಿತ್ತು. ಸೈಕಲ್, ಶೂ ಹಾಗೂ ಸಾಕ್ಸ್ ಕೊಡದೇ ಇರುವ ಬಗ್ಗೆ ವಿಚಾರವಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ ಸಂಬಂಧ ಕಲಬುರಗಿಯಲ್ಲಿ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಸಚಿವರು ಈ ರೀತಿ ಹೇಳಿಕೆ ನೀಡಿದ್ದರು.

ಸಚಿವರ ಈ ವಿವಾದಿತ ಹೇಳಿಕೆ ವಿರುದ್ಧ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿ ಕಾಂಗ್ರೆಸ್ ನಾಯಕರು ಸರ್ಕಾರ ವಿರುದ್ಧ ವಾಗ್ದಾಳಿ ನಡೆಸಿದ್ದರು. ಇದೊಂದು ಅಮಾನವೀಯ, ಕ್ರೂರತನದ ಹೇಳಿಕೆ ಎಂದು ಟೀಕಿಸಿದ್ದರು.

ಇದನ್ನೂ ಓದಿ:ಸಾಲು ಸಾಲು ಅಕ್ರಮ ಆರೋಪಗಳು: ಬೊಮ್ಮಾಯಿ ಸರ್ಕಾರಕ್ಕೆ ಎದುರಾದ ಅಗ್ನಿಪರೀಕ್ಷೆ!

ABOUT THE AUTHOR

...view details