ಕರ್ನಾಟಕ

karnataka

By

Published : Jul 1, 2021, 6:17 PM IST

ETV Bharat / city

ದಿಕ್ಕಿಗೊಬ್ಬರಿದ್ದ ಮೂಲ ಕಾಂಗ್ರೆಸ್ಸಿಗರ ಒಗ್ಗಟ್ಟಿಗೆ ಕಾರಣವಾಯ್ತಾ 'ಸಿದ್ದು ಆಪ್ತರ ಸಿಎಂ' ಹೇಳಿಕೆ?

2018ರಲ್ಲಿ ಜೆಡಿಎಸ್ ಜೊತೆ ಕಾಂಗ್ರೆಸ್ ಮೈತ್ರಿ ಮಾಡಿಕೊಂಡು ರಚಿಸಿದ ಸರ್ಕಾರ ಪತನವಾದ ನಂತರ ಕಾಂಗ್ರೆಸ್ಸಿಗರು ದಿಕ್ಕಿಗೆ ಒಬ್ಬರಂತೆ ತೆರಳಿದ್ದರು. ಎಲ್ಲಿಯೂ ಒಂದಾಗುವ ಪ್ರಯತ್ನ ಮಾಡಿರಲಿಲ್ಲ. ಆದರೆ ಇದೀಗ ಮುಂದಿನ ಸಿಎಂ ಸಿದ್ದರಾಮಯ್ಯ ಎಂಬ ಕೂಗು ಇವರನ್ನು ಬಡಿದೆಬ್ಬಿಸಿದ್ದು, ಎಲ್ಲರೂ ಮೂಲ ಕಾಂಗ್ರೆಸ್ಸಿಗರು ಎಂಬ ವೇದಿಕೆಯಡಿ ಒಂದಾಗುವ ಪ್ರಯತ್ನ ಆರಂಭಿಸಿದ್ದಾರೆ. ಈ ಮೂಲಕ ಸಿದ್ದರಾಮಯ್ಯ ಮೂಲ ಕಾಂಗ್ರೆಸ್ಸಿಗರು ಒಂದಾಗಲು ಪರೋಕ್ಷವಾಗಿ ಕಾರಣರಾಗಿದ್ದಾರೆ.

congress
ಕಾಂಗ್ರೆಸ್ ಪಕ್ಷ

ಬೆಂಗಳೂರು: ಆಪ್ತ ಶಾಸಕರಿಂದ ಮುಂದಿನ ಸಿಎಂ ಎಂದು ಕರೆಸಿಕೊಂಡ ಸಿದ್ದರಾಮಯ್ಯ ಇದೀಗ ದಿಕ್ಕಿಗೊಂದು ಮುಖ ಮಾಡಿಕೊಂಡಿದ್ದ ಮೂಲ ಕಾಂಗ್ರೆಸ್ಸಿಗರ ಒಗ್ಗಟ್ಟಿಗೆ ಪರೋಕ್ಷವಾಗಿ ಕಾರಣರಾಗಿದ್ದಾರೆ. ತಾವಾಯ್ತು ತಮ್ಮ ಕೆಲಸವಾಯ್ತು ಅಂತ ಸುಮ್ಮನಿದ್ದ ಮೂಲ ಕೈ ನಾಯಕರು ಒಂದಾಗುತ್ತಿದ್ದಾರೆ.

ಮಾಜಿ ಡಿಸಿಎಂ ಜಿ ಪರಮೇಶ್ವರ್, ರಾಜ್ಯಸಭೆ ಸದಸ್ಯ ಮಲ್ಲಿಕಾರ್ಜುನ ಖರ್ಗೆ, ಮಾಜಿ ಸಂಸದ ಕೆ ಎಚ್ ಮುನಿಯಪ್ಪ, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ಮಾಜಿ ಸಚಿವರಾದ ಎಂ ಬಿ ಪಾಟೀಲ್, ಎಚ್ ಕೆ ಪಾಟೀಲ್, ಆರ್ ವಿ ದೇಶಪಾಂಡೆ ಸೇರಿದಂತೆ ಬಹುತೇಕ ನಾಯಕರು ಕಾರ್ಯಕ್ಷೇತ್ರದಲ್ಲಿ ತಮ್ಮ ಪಾಡಿಗೆ ಕಾರ್ಯನಿರ್ವಹಿಸುತ್ತಿದ್ದರು. ಪರಸ್ಪರ ಒಂದೇ ವೇದಿಕೆಗೆ ಆಗಮಿಸಿ ನಾವೆಲ್ಲ ಒಂದು ಎನ್ನುವ ರೀತಿ ಕಾಣಿಸಿಕೊಂಡಿರಲಿಲ್ಲ. 2018ರಲ್ಲಿ ಜೆಡಿಎಸ್ ಜೊತೆ ಕಾಂಗ್ರೆಸ್ ಮೈತ್ರಿ ಮಾಡಿಕೊಂಡು ರಚಿಸಿದ ಸರ್ಕಾರ ಪತನವಾದ ನಂತರ ಕಾಂಗ್ರೆಸ್ಸಿಗರು ದಿಕ್ಕಿಗೆ ಒಬ್ಬರಂತೆ ತೆರಳಿದ್ದರು. ಎಲ್ಲಿಯೂ ಒಂದಾಗುವ ಪ್ರಯತ್ನ ಮಾಡಿರಲಿಲ್ಲ. ಆದರೆ ಇದೀಗ ಮುಂದಿನ ಸಿಎಂ ಸಿದ್ದರಾಮಯ್ಯ ಎಂಬ ಕೂಗು ಇವರನ್ನು ಬಡಿದೆಬ್ಬಿಸಿದ್ದು, ಎಲ್ಲರೂ ಮೂಲ ಕಾಂಗ್ರೆಸ್ಸಿಗರು ಎಂಬ ವೇದಿಕೆಯಡಿ ಒಂದಾಗುವ ಪ್ರಯತ್ನ ಆರಂಭಿಸಿದ್ದಾರೆ. ಈ ಮೂಲಕ ಸಿದ್ದರಾಮಯ್ಯ ಮೂಲ ಕಾಂಗ್ರೆಸ್ಸಿಗರು ಒಂದಾಗಲು ಪರೋಕ್ಷವಾಗಿ ಕಾರಣರಾಗಿದ್ದಾರೆ.

ಆಕಾಂಕ್ಷಿಗಳು ಹತ್ತಾರು

ಇನ್ನೆರಡು ವರ್ಷಕ್ಕೆ ಬರುವ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ತಾವೇ ಸಿಎಂ ಆಗಬೇಕು ಎಂದು ಹತ್ತಕ್ಕೂ ಹೆಚ್ಚು ಆಕಾಂಕ್ಷಿಗಳು ಇದ್ದಾರೆ. ಇವರಲ್ಲಿ ಸಿದ್ದರಾಮಯ್ಯ, ಡಿಕೆಶಿ ಹಾಗೂ ಪರಮೇಶ್ವರ್ ಮುಂಚೂಣಿಯಲ್ಲಿ ತಮ್ಮ ಹೆಸರು ಚಾಲ್ತಿಯಲ್ಲಿರುವಂತೆ ನೋಡಿಕೊಂಡಿದ್ದಾರೆ. ಪಕ್ಷದ ಹೈಕಮಾಂಡ್ ಇದುವರೆಗೂ ಯಾರನ್ನೂ ಮುಂದಿನ ಸಿಎಂ ಅಭ್ಯರ್ಥಿ ಎಂದು ಘೋಷಿಸಿಲ್ಲ.

ಪಕ್ಷದ ಸಂಪ್ರದಾಯದಲ್ಲಿ ಚುನಾವಣೆ ನಂತರ ಅಧಿಕಾರಕ್ಕೆ ಬಂದರೆ ಆಗಲೇ ಘೋಷಿಸುವುದು ವಾಡಿಕೆ. ಈ ಹಿಂದೆ ಐದು ವರ್ಷ ಸಿಎಂ ಆಗಿ ಅಧಿಕಾರ ಅನುಭವಿಸಿರುವ ಸಿದ್ದರಾಮಯ್ಯ ಇನ್ನೊಂದು ಅವಕಾಶ ಸಿಕ್ಕರೆ ನೋಡಿಯೇ ಬಿಡೋಣ ಎನ್ನುವ ಸಿದ್ಧತೆಯಲ್ಲಿದ್ದಾರೆ. ಇನ್ನೊಂದೆಡೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಪಕ್ಷ ಸಂಘಟನೆಯಲ್ಲಿ ತೊಡಗಿದ್ದು, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಸಿಎಂ ಆಗುವ ಹಂಬಲ ಹೊಂದಿದ್ದಾರೆ. ಮತ್ತೊಂದೆಡೆ ಮೈತ್ರಿ ಸರ್ಕಾರದಲ್ಲಿ ಡಿಸಿಎಂ ಆಗಿದ್ದ ಪರಮೇಶ್ವರ್ ತಾವು ಸಹ ಆಕಾಂಕ್ಷಿ ಎಂದು ಹೈಕಮಾಂಡ್ ಮುಂದೆ ಹೇಳಿಕೊಂಡಿದ್ದಾರೆ. ಎಂ ಬಿ ಪಾಟೀಲ್ ಸೇರಿದಂತೆ ಹಲವು ನಾಯಕರು ಸಿಎಂ ಆಕಾಂಕ್ಷಿಗಳ ಪಟ್ಟಿಯಲ್ಲಿದ್ದು, ತಮ್ಮ ಸಮುದಾಯದ ಮಠಗಳಿಗೆ ಭೇಟಿ ಕೊಟ್ಟು ಹೇಳಿಕೆಗಳನ್ನು ನೀಡಲು ಆರಂಭಿಸಿದ್ದಾರೆ.

ಸಿಎಂ ಸಮರಕ್ಕೆ ಸಿದ್ದರಾಮಯ್ಯ ಕಾರಣ?

ಇದಕ್ಕೆಲ್ಲ ಮೂಲ ಕಾರಣ ಸಿದ್ದರಾಮಯ್ಯ. ತಮ್ಮ ಬೆಂಬಲಿಗರ ಮೂಲಕ ಮುಂದಿನ ಸಿಎಂ ಎಂದು ಅವರು ಹೇಳಿಕೊಂಡಿದ್ದಾರೆ ಎಂಬ ಆರೋಪ ಮೂಲ ಕಾಂಗ್ರೆಸ್ ನಾಯಕರು ಮಾಡುತ್ತಿದ್ದಾರೆ. ದಿಕ್ಕಿಗೊಂದು ಮುಖ ಮಾಡಿಕೊಂಡಿದ್ದ ಮೂಲ ಕಾಂಗ್ರೆಸ್ಸಿಗರು ಒಂದಾಗುವಂತೆ ಮಾಡಿದ್ದಾರೆ. ಪರಮೇಶ್ವರ್ ಹಾಗೂ ಕೆಎಚ್ ಮುನಿಯಪ್ಪ ಒಂದಾಗಿ ಕುಳಿತು ವಿಧಾನಪರಿಷತ್ ಸದಸ್ಯ ಬಿ.ಕೆ ಹರಿಪ್ರಸಾದ್ ನಿವಾಸದಲ್ಲಿ ಸುದೀರ್ಘ ಸಭೆ ನಡೆಸಿದ ನಂತರ ದಿಲ್ಲಿಗೆ ತೆರಳಿ ಅಲ್ಲಿ ದಲಿತರಿಗೆ ಸಿಎಂ ಪಟ್ಟ ಕೊಡಬೇಕು ಎಂಬ ಒತ್ತಾಯ ಮಾಡಿ ವಾಪಸಾಗಿದ್ದಾರೆ.

ಈ ರೀತಿ ಮುಂದಿನ ಸಿಎಂ ಎಂಬ ಹೇಳಿಕೆ ನೀಡಿ ತೆರೆಮರೆಗೆ ಸರಿದಿದ್ದ ದಲಿತ ಸಿಎಂ ಎಂಬ ಟ್ರಂಪ್ ಕಾರ್ಡನ್ನು ಮತ್ತೊಮ್ಮೆ ಮೂಲ ಕಾಂಗ್ರೆಸ್ಸಿಗರು ಬಳಸುವಂತೆ ಸಿದ್ದರಾಮಯ್ಯ ಮಾಡಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಸದ್ಯ ತಾವು ಮುಂದಿನ ಸಿಎಂ ಎಂಬ ಹೇಳಿಕೆಯನ್ನು ಕೊಡಬೇಡಿ ಎಂದು ಅಭಿಮಾನಿಗಳಿಗೆ ಸಿದ್ದರಾಮಯ್ಯ ಸೂಚಿಸಿದರೂ, ಇದು ತುಂಬಾ ತಡವಾಗಿದೆ. ಸಿದ್ದರಾಮಯ್ಯ ವಿರುದ್ಧ ಮೂಲ ಕಾಂಗ್ರೆಸ್ಸಿಗರು ಎಲ್ಲಾ ಒಂದಾಗಿದ್ದಾರೆ ಎಂಬ ಮಾತು ರಾಜಕೀಯ ಪಂಡಿತರು ಆಡುತ್ತಿದ್ದಾರೆ.

ಒಟ್ಟಾರೆ ತಮ್ಮ ಪಾಡಿಗೆ ತಾವಿದ್ದ ಮೂಲ ಕಾಂಗ್ರೆಸ್ಸಿಗರನ್ನು ಒಂದಾಗಿದ್ದು, ಸಿದ್ದರಾಮಯ್ಯ ಮುಂಬರುವ ದಿನಗಳಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ತಾವು ಸಿಎಂ ಗಾದಿಗೆ ತೊಡಕಾಗಿರುವ ಮಾರ್ಗವನ್ನು ಯಾವ ರೀತಿ ಸರಿಪಡಿಸಿಕೊಳ್ಳುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.

ABOUT THE AUTHOR

...view details