ಕರ್ನಾಟಕ

karnataka

ETV Bharat / city

ಜಾತಿ ಸಮೀಕ್ಷೆ ತಿರಸ್ಕಾರಕ್ಕೆ ಕಾಂಗ್ರೆಸ್ ನಾಯಕರು ಗರಂ - ಕಾಂಗ್ರೆಸ್ ನಾಯಕರು ಗರಂ

ಜಾತಿ ಸಮೀಕ್ಷೆ ವರದಿ ತಿರಸ್ಕರಿಸಿದ್ದಕ್ಕೆ ಕಾಂಗ್ರೆಸ್ ನಾಯಕರು ಆಕ್ರೋಶ ವ್ಯಕ್ತಪಡಿಸಿ, ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.

ಸಂಗ್ರಹ ಚಿತ್ರ

By

Published : Oct 3, 2019, 6:13 AM IST

ಬೆಂಗಳೂರು: ರಾಜ್ಯ ಸರ್ಕಾರದ ಜಾತಿ ಸಮೀಕ್ಷೆಯ ವರದಿ ತಿರಸ್ಕಾರಕ್ಕೆ ಕಾಂಗ್ರೆಸ್ ನಾಯಕರು ತೀವ್ರ ಬೇಸರ ಹಾಗೂ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜಾತಿ ಸಮೀಕ್ಷೆ ತಿರಸ್ಕಾರ ವಿಚಾರದ ಕುರಿತು ಮಾತನಾಡಿದ ಮಾಜಿ ಡಿಸಿಎಂ ಡಾ. ಜಿ ಪರಮೇಶ್ವರ್, ದುರುದ್ದೇಶದಿಂದ ವರದಿಯನ್ನ ಈ ಸರ್ಕಾರ ತಿರಸ್ಕರಿಸಿರಬಹುದು. ಇದರಿಂದ ಗೊತ್ತಾಗುತ್ತೆ ಬಿಜೆಪಿ ದಲಿತ, ಹಿಂದುಳಿದ, ಅಲ್ಪಸಂಖ್ಯಾತರ ವಿರೋಧಿ ಅಂತಾ. ಈ ವರದಿಯ ಉಪಯೋಗವನ್ನ ಸರ್ಕಾರ ಪಡೆಯಬಹುದಿತ್ತು ಎಂದಿದ್ದಾರೆ.

ಸಿದ್ದರಾಮಯ್ಯ ನೇತೃತ್ವದಲ್ಲಿ ಸಮಿತಿ ರಚಿಸಿ ಜಾತಿ ಜನಗಣತಿ ಮಾಡಲು ನಿರ್ಧರಿಸಲಾಗಿತ್ತು. ಚುನಾವಣೆ ಬಂದಿದ್ದಕ್ಕೆ ಹಾಗೂ ಸರ್ಕಾರಗಳು ಬದಲಾದ ಕಾರಣ ವರದಿ ಅನುಷ್ಠಾನಕ್ಕೆ ತರಲು ಸಾಧ್ಯವಾಗಲಿಲ್ಲ. ಆದರೆ ಇದೀಗ ಬಿಜೆಪಿ ಸರ್ಕಾರ ಇದನ್ನು ತಿರಸ್ಕರಿಸಿದೆ. ಸಮೀಕ್ಷೆಯ ಉದ್ದೇಶವನ್ನೇ ಬಿಜೆಪಿ ಸರ್ಕಾರ ಅರಿತಿಲ್ಲ ಅನ್ನಿಸುತ್ತದೆ. ಹಿಂದೆ ಕೇಂದ್ರ ಸರ್ಕಾರ ನೇಮಿಸಿದ್ದ ಸಾಚಾರ್ ಸಮಿತಿ ವರದಿ ಮಾದರಿಯನ್ನೇ ಆಧಾರವಾಗಿಟ್ಟುಕೊಂಡು ಬಜೆಟ್​ನಲ್ಲಿ ಹಣ ನಿಗದಿ ಪಡಿಸಲಾಗಿತ್ತು. ರಾಜ್ಯದಲ್ಲಿ ಶೈಕ್ಷಣಿಕವಾಗಿ ಹಿಂದುಳಿದವರ ಹಾಗೂ ಸಾಮಾಜಿಕವಾಗಿ ಮುನ್ನೆಲೆಗೆ ಬಾರದವರ ಸಮೀಕ್ಷೆ ನಡೆಸಿ ಅವರನ್ನು ಮುನ್ನೆಲೆಗೆ ತರಬೇಕೆಂಬ ಪ್ರಯತ್ನಕ್ಕೆ ಈ ಆಯೋಗ ರಚಿಸಲಾಗಿತ್ತು. ಸಮಾಜದಲ್ಲಿ ಹಿಂದುಳಿದವರು, ತಿರಸ್ಕಾರಕ್ಕೆ ಒಳಗಾದವರು ಮುನ್ನೆಲೆಗೆ ಬರೋದು ಬೇಡ ಎನ್ನುವ ಭಾವನೆ ಬಿಜೆಪಿಗಿದೆ ಎನ್ನುವುದು ತಿಳಿಯುತ್ತದೆ ಎಂದರು.

ಇಂಥ ಸಮೀಕ್ಷೆಗಳನ್ನು ತಿರಸ್ಕರಿಸಬಾರದು:
ಜಾತಿ ಸಮೀಕ್ಷೆ ತಿರಸ್ಕಾರ ವಿಚಾರ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮಾತನಾಡಿ, ಇಂತಹ ಸಮೀಕ್ಷೆಗಳನ್ನ ತಿರಸ್ಕಾರ ಮಾಡಬಾರದು. ಸರ್ಕಾರದ ನಿರ್ಧಾರ ಸರಿಯಲ್ಲ. ಈ ವರದಿಯ ಉಪಯೋಗವನ್ನ ಬಿಜೆಪಿ ಸರ್ಕಾರ ಮಾಡಿಕೊಳ್ಳಬೇಕಿತ್ತು. ಆದ್ರೆ ದ್ವೇಷದ ರಾಜಕಾರಣ ಅನ್ನಬಹುದು. ಏಕಾಏಕಿ ತಿರಸ್ಕಾರ ಮಾಡಿರೋದು ಸರಿಯಲ್ಲ. ಸರ್ಕಾರಿ ಅಧಿಕಾರಿಗಳು ಸಾಕಷ್ಟು ಶ್ರಮವಹಿಸಿ ಈ ವರದಿ ಸಿದ್ಧಪಡಿಸಿದ್ದರು. ಮನೆಮನೆಗೆ ತೆರಳಿ ಮಾಹಿತಿ ಸಂಗ್ರಹಿಸಿದ್ದರು. ಇದು ದ್ವೇಷದ ರಾಜಕಾರಣಕ್ಕೆ ಸಾಕ್ಷಿಯಾಗಿದೆ. ಹಿಂದೆ ಯಾವ ಸರ್ಕಾರವು ಇಂತಹ ಕಾರ್ಯ ಮಾಡಿಲ್ಲ. ಇದನ್ನು ನಾನು ಖಂಡಿಸುತ್ತೇನೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನರೇಂದ್ರ ಮೋದಿ ಅವರನ್ನು ದೇವರು ಎಂದಿರುವ ಸಂಸದ ಪ್ರತಾಪ್ ಸಿಂಹ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಬಿಜೆಪಿಗೆ ಇಂದು ಯಾವ ಕೆಲಸವನ್ನು ಮಾಡಲಾಗದೆ, ಪ್ರಧಾನಿಯನ್ನ ಪ್ರಶ್ನಾತೀತ ವ್ಯಕ್ತಿ ಎಂದು ಬಿಂಬಿಸಲು ಹೊರಟಿದೆ. ಹೀಗೆ ಮಾಡಲು ಹೊರಟರೆ ಪ್ರಜಾಪ್ರಭುತ್ವ ಯಾಕೆ ಬೇಕು? ನಮ್ಮಂತ ಶಾಸಕರು ಯಾಕಿರಬೇಕು? ಪ್ರತಿಪಕ್ಷಗಳು ಯಾಕಿರಬೇಕು?. ಪ್ರಜಾಪ್ರಭುತ್ವದಲ್ಲಿ ಈ ರೀತಿ ನಡೆದುಕೊಳ್ಳುವುದು ಸರಿಯಲ್ಲ ಇದನ್ನು ಪ್ರತಾಪ್ ಸಿಂಹ ಅರ್ಥಮಾಡಿಕೊಳ್ಳಬೇಕು ಎಂದು ಹೇಳಿದರು.

ABOUT THE AUTHOR

...view details