ಕರ್ನಾಟಕ

karnataka

ನಾಯಕತ್ವ ಬದಲಾವಣೆ ವಿಚಾರ: ಕಾಂಗ್ರೆಸ್ - ಬಿಜೆಪಿ ನಡುವೆ ತೀವ್ರಗೊಂಡ ಟ್ವೀಟ್ ವಾರ್

By

Published : Jul 20, 2021, 6:36 AM IST

ನಾಯಕತ್ವ ಬದಲಾವಣೆ ವಿಚಾರದಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಮೇಲೆ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳು ಟ್ವೀಟ್ ವಾರ್ ನಡೆಸಿವೆ. ಕಾಂಗ್ರೆಸ್ ಪಕ್ಷವು ಬಿಜೆಪಿ ವರ್ಸಸ್ ಬಿಜೆಪಿ ಹೆಸರಿನಲ್ಲಿ ಸರಣಿ ಟ್ವೀಟ್ ಮಾಡಿದ್ದರೆ, ಬಿಜೆಪಿ ಪಕ್ಷವು ಮಹಾನಾಯಕ ವರ್ಸಸ್ ಮೀರ್ ಸಾದಿಕ್ ಹೆಸರಿನಲ್ಲಿ ಟ್ವೀಟ್ ಮಾಡಿ ಪ್ರತಿಕ್ರಿಯೆ ನೀಡಿದೆ.

Congress bjp tweet war
ಕಾಂಗ್ರೆಸ್-ಬಿಜೆಪಿ ನಡುವೆ ತೀವ್ರಗೊಂಡ ಟ್ವೀಟ್ ವಾರ್

ಬೆಂಗಳೂರು:ರಾಜ್ಯ ಬಿಜೆಪಿ ನಾಯಕತ್ವ ಬದಲಾವಣೆ ವಿಚಾರದಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಮೇಲೆ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳು ಟ್ವೀಟ್ ವಾರ್ ನಡೆಸಿವೆ. ಟ್ವೀಟ್ ಮಾಡಿ ಪರಸ್ಪರ ಲೇವಡಿ ಮಾಡಿಕೊಂಡಿರುವ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳು ಪಕ್ಷದ ಕೆಲ ನಾಯಕರ ವಿಚಾರವಾಗಿ ಸಾಕಷ್ಟು ಕಿತ್ತಾಟ ನಡೆಸಿಕೊಂಡಿವೆ. ಕಾಂಗ್ರೆಸ್ ಪಕ್ಷವು ಬಿಜೆಪಿ ವರ್ಸಸ್ ಬಿಜೆಪಿ ಹೆಸರಿನಲ್ಲಿ ಸರಣಿ ಟ್ವೀಟ್ ಮಾಡಿದ್ದರೆ, ಬಿಜೆಪಿ ಪಕ್ಷವು ಮಹಾನಾಯಕ ವರ್ಸಸ್ ಮೀರ್ ಸಾದಿಕ್ ಹೆಸರಿನಲ್ಲಿ ಟ್ವೀಟ್ ಮಾಡಿ ಪ್ರತಿಕ್ರಿಯೆ ನೀಡಿದೆ.

ಮೊದಲು ಟ್ವೀಟ್ ಮಾಡಿದ ಕಾಂಗ್ರೆಸ್ ಪಕ್ಷ, ಸಿಎಂ ಬಿ.ಎಸ್.ಯಡಿಯೂರಪ್ಪ ವಿರುದ್ಧ ಕತ್ತಿ ಮಸೆಯುತ್ತಿದ್ದ ಮೀರ್ ಸಾದಿಕ್ ಯಾರೆನ್ನುವುದು ಈಗ ತಿಳಿದಿದೆ. ಪಕ್ಷದ ರಾಜ್ಯಾಧ್ಯಕ್ಷರಾಗಿ ನಿರಂತರವಾಗಿ ವಾಗ್ದಾಳಿ ನಡೆಸುತ್ತಿದ್ದ ಯತ್ನಾಳ್ ಅವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಸಚಿವ ಯೋಗೇಶ್ವರ್ ವಿರುದ್ಧ ಕ್ರಮ ಕೈಗೊಂಡಿರಲಿಲ್ಲ. ಏಕೆಂದರೆ ಸಂಚಿನ ಸೂತ್ರದಾರನೇ ನಳಿನ್ ಕುಮಾರ್ ಕಟೀಲು ಎಂದು ಲೇವಡಿ ಮಾಡಿದೆ.

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ಕೂಡ ಟ್ವೀಟ್ ಮೂಲಕವೇ ಕಾಲೆಳೆದಿದ್ದು, ಬಿಜೆಪಿ ರಾಜ್ಯಾಧ್ಯಕ್ಷರ ಹೆಸರಿನಲ್ಲಿ ಸೃಷ್ಟಿಯಾದ ನಕಲಿ ಆಡಿಯೋ ಹಿಂದಿರುವ ಹಸ್ತ, ಕಾಂಗ್ರೆಸ್ ಪಕ್ಷದ ಮಹಾನಾಯಕನದ್ದೋ ಅಥವಾ ಮೀರ್ ಸಾಧಿಕ್‌ನದ್ದೋ? ಮಹಾನಾಯಕನ ಪ್ರಭಾವ ಕಡಿಮೆ ಮಾಡಲು ಮತ್ತು ದೆಹಲಿಯ ಮಹಾನಾಯಕಿಯನ್ನು ಮೆಚ್ಚಿಸಲು ಮೀರ್‌ ಸಾದಿಕ್‌ನಿಂದ ಈ ಆಡಿಯೋ ತಂತ್ರವೇ? ಎಂದು ಹೇಳಿದೆ.

ಕಾಮಿಡಿ ಪಾತ್ರ

ಕಾಂಗ್ರೆಸ್ ಪಕ್ಷ ಮುಂದುವರಿದು, ಬಿಜೆಪಿ ಪಕ್ಷದ ಮೀರ್ ಸಾದಿಕ್ ನಳಿನ್ ಕುಮಾರ್ ಕಟೀಲು ಬಗ್ಗೆ ಬಿಎಸ್ ಯಡಿಯೂರಪ್ಪ ಅವರಿಗೆ ಈ ಹಿಂದೆಯೇ ಮನವರಿಕೆಯಾಗಿತ್ತು. ಆದರೆ, ಸಚಿವರಾದ ಜಗದೀಶ್ ಶೆಟ್ಟರ್ ಹಾಗೂ ಕೆಎಸ್ ಈಶ್ವರಪ್ಪ ಅವರು ತಮ್ಮ ಬಗಲಿನಲ್ಲಿಯೇ ಬೆಂಕಿ ಇದ್ದಿದ್ದನ್ನು ಅರಿತಿರಲಿಲ್ಲ. ಕಾಮಿಡಿ ಪಾತ್ರ ಮಾಡುತ್ತಿದ್ದ ಕಟೀಲ್, ಈಗ ಬಿಜೆಪಿಯ ಹಲವರಿಗೆ ವಿಲ್ಲನ್ ಪಾತ್ರಧಾರಿಯಾಗಿದ್ದಾರೆ ಎಂದಿದೆ.

ಇದಕ್ಕೆ ಪ್ರತಿಯಾಗಿ ಟ್ವೀಟ್ ಮಾಡಿದ ಬಿಜೆಪಿ, ಮಹಾನಾಯಕನ ಸುತ್ತ ಐದು ಕಾರ್ಯಾಧ್ಯಕ್ಷರ ನೇಮಕವಾಗುವಂತೆ ನೋಡಿಕೊಂಡಿದ್ದು ಮೀರ್ ಸಾದಿಕ್‌ನ ತಂತ್ರದ ಒಂದು ಭಾಗ. ಕಾರ್ಯಕರ್ತರಿಗೆ ಕಪಾಳ ಮೋಕ್ಷ ಮಾಡುವುದರಲ್ಲೇ ನೆಮ್ಮದಿ ಕಾಣುತ್ತಿರುವ ಮಹಾನಾಯಕನಿಗೆ ಉಡಿಯಲ್ಲಿ ಮೀರ್‌ ಸಾದಿಕ್‌ನಂತಹ ಕೆಂಡ ಕಟ್ಟಿಕೊಂಡಿರುವ ಬಗ್ಗೆ ಅರಿವಿಲ್ಲ. ಹೋರಾಟವಿಲ್ಲದೇ ಹುದ್ದೆ ಬಯಕೆ, ಕದ್ದ ವಾಚು ಧರಿಸಿ ಶೋಕಿ ಮೆರೆಯುವಿಕೆ, ಮಿಮಿಕ್ರಿ ಕಲಾವಿದರ ಮೂಲಕ ನಕಲಿ ಆಡಿಯೋ ತಯಾರಿಕೆ. ಮೀರ್ ಸಾದಿಕ್ ಸೃಷ್ಟಿಸುವ ಕಪಟ ನಾಟಕಗಳು ಒಂದೋ ಎರಡೋ!? ಎಂದು ಕೇಳಿದೆ.

ಚಾಮರಾಜಪೇಟೆಯ ಡಕೋಟಾ ಗಾಡಿ ಡ್ರೈವರ್‌ನಂತಹ ಶಿಷ್ಯರಿಗೆ ತಾನು ತಕ್ಕ ಗುರು ಎಂದು ಮೀರ್ ಸಾದಿಕ್ ಸಾಬೀತು ಪಡಿಸಿದ್ದಾರೆ. ನಕಲಿ ದಾಖಲೆ ಸೃಷ್ಟಿಸುವವರಿಗೆ ರಾಜ್ಯ ಕಾಂಗ್ರೆಸ್ ಪಕ್ಷದಲ್ಲಿ ಉತ್ತಮವಾದ ವೇದಿಕೆ ದೊರೆಯುತ್ತದೆ. ನಕಲಿ ಸಿಡಿ ತಯಾರಿಸಿದ ನರೇಶ್ ಗೌಡನಿಗೆ ತುಮಕೂರಿನಲ್ಲಿ ಕಾಂಗ್ರೆಸ್ ಯುವ ನಾಯಕನ ಪಟ್ಟ ಕಟ್ಟಲಾಗಿದೆ. ಇದೇ ರೀತಿ, ಈ ನಕಲಿ ಆಡಿಯೋ ಜನಕನಿಗೆ ಕಾಂಗ್ರೆಸ್ ಪಕ್ಷ ಭರ್ಜರಿ ಉಡುಗೊರೆ ನೀಡಬಹುದು ಎಂದು ಬಿಜೆಪಿ ಹೇಳಿದೆ.

ಕಾಂಗ್ರೆಸ್ ಪಕ್ಷದಲ್ಲಿರುವ ಈ ಮೀರ್ ಸಾದಿಕ್ ಯಾರ ವಿರುದ್ಧ ಬೇಕಾದರೂ ಸಂಚು ರೂಪಿಸಬಲ್ಲ. 2013ರ ವಿಧಾನಸಭಾ ಚುನಾವಣೆಯಲ್ಲಿ ಕೊರಟಗೆರೆಯಲ್ಲಿ‌ ದಲಿತ ನಾಯಕ ಪರಮೇಶ್ವರ್ ಅವರನ್ನು ಮೋಸದಿಂದ ಸೋಲಿಸಿದ ಈ ವ್ಯಕ್ತಿಯ ಮೀರ್ ಸಾದಿಕತನ ಎಲ್ಲಿ ಹೋಗುತ್ತದೆ? ಮಹಾನಾಯಕನ ವಿರುದ್ಧ ತೊಡೆ ತಟ್ಟುತ್ತಿರುವ ಮೀರ್ ಸಾದಿಕ್‌ ಈಗ ಕಾಂಗ್ರೆಸ್ ಮಹಾನಾಯಕಿಯ ಮೆಚ್ಚುಗೆ ಪಡೆಯಲು ಕುತಂತ್ರದ ಮೊರೆ ಹೋಗಿದ್ದಾರೆ. ಮಹಾನಾಯಕನ ಮಟ್ಟ ಹಾಕುವುದಕ್ಕೆ ಸೆಟೆದು ನಿಂತಿರುವ ಮೀರ್‌ ಸಾದಿಕ್‌ ದೆಹಲಿ ಪ್ರವಾಸದ ಮುನ್ನಾ ದಿನ ಬಿಜೆಪಿ ರಾಜ್ಯಾಧ್ಯಕ್ಷರ ಹೆಸರಿನಲ್ಲಿ ನಕಲಿ ಆಡಿಯೋ ಹರಿಬಿಟ್ಟಿದ್ದಾರೆ ಎಂದು ಲೇವಡಿ ಮಾಡಿದೆ.

ಬಿಜೆಪಿ ರಾಜ್ಯಾಧ್ಯಕ್ಷರ ಹೆಸರಿನಲ್ಲಿ ಸೃಷ್ಟಿಯಾದ ನಕಲಿ ಆಡಿಯೋ ಹಿಂದಿರುವ ಹಸ್ತ, ಕಾಂಗ್ರೆಸ್ ಪಕ್ಷದ ಮಹಾನಾಯಕನದ್ದೋ ಅಥವಾ ಮೀರ್ ಸಾದಿಕ್‌ನದ್ದೋ? ಮಹಾನಾಯಕನ ಪ್ರಭಾವ ಕಡಿಮೆ ಮಾಡಲು ಮತ್ತು ದೆಹಲಿಯ ಮಹಾನಾಯಕಿಯನ್ನು ಮೆಚ್ಚಿಸಲು ಮೀರ್‌ ಸಾದಿಕ್‌ನಿಂದ ಈ ಆಡಿಯೋ ತಂತ್ರವೇ? ಎಂದು ಕೇಳಿದೆ.

ಕಾಂಗ್ರೆಸ್ ಪ್ರತಿಕ್ರಿಯೆ

ಬಿಜೆಪಿಯ ಈ ಸರಣಿ ಟ್ವೀಟ್​ಗೆ ಖಾರವಾಗಿ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಪಕ್ಷ, ಬಿಎಸ್ ಯಡಿಯೂರಪ್ಪ ಜಗದೀಶ್ ಶೆಟ್ಟರ್ ಹಾಗೂ ಕೆಎಸ್ ಈಶ್ವರಪ್ಪ ಆವರು ರಾಜಕಾರಣಕ್ಕೆ ಬಂದಾಗ ನಳಿನ್ ಕುಮಾರ್ ಕಟೀಲು ಗೋಲಿ ಆಡುವುದನ್ನೂ ಕಲಿತಿರಲಿಲ್ಲ. ಮಂಗಳೂರು ಬಾಗದಲ್ಲಿ ಅಬ್ಬೇಪಾರಿಯಾಗಿ ತಿರುಗುತ್ತಿದ್ದ ಕಟೀಲ್, ಇಂದು ಪಕ್ಷ ಕಟ್ಟಿದವರನ್ನೇ ಮೂಲೆಗುಂಪು ಮಾಡಲು ಸಜ್ಜಾಗಿದ್ದಾರೆ. ಬಿಜೆಪಿಯನ್ನ ಮುಳುಗಿಸಲು ಬೇರೆ ಯಾರ ಪ್ರಯತ್ನವೂ ಬೇಡ, ಕಟೀಲ್ ಒಬ್ಬರೇ ಸಾಕು ಎಂದಿದೆ.

ಇವರೇ ಸಂಚುಕೋರ... ಕಾಂಗ್ರೆಸ್​ ಲೇವಡಿ

ರಾಜ್ಯ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಅವರೇ ಬಿಎಸ್ ಯಡಿಯೂರಪ್ಪ ಅವರಿಗೆ ದ್ರೋಹ ಬಗೆಯುತ್ತಿರುವ ನಾಯಕತ್ವ ಬದಲಾವಣೆಯ ಸಂಚುಕೋರ ಎನ್ನುವುದು ಆಡಿಯೋದಿಂದ ಬಯಲಾಗಿದೆ. ಜೊತೆಗೆ ಶೆಟ್ಟರ್, ಈಶ್ವರಪ್ಪರನ್ನೂ ಮಾರ್ಗದರ್ಶಕ ಮಂಡಳಿಗೆ ಕಳಿಸುವ ಹುನ್ನಾರ ನಡೆಸಿದ ಮೀರ್ ಸಾದಿಕ್ ಕಟೀಲ್‌ರ ಹಿಂದೆ ಇರುವುದು ಅ'ಸಂತೋಷಗೊಂಡ ವ್ಯಕ್ತಿ ಎಂದಿದೆ.

ಬಿಎಸ್ ಯಡಿಯೂರಪ್ಪ ಅವರು ಕಚೇರಿ ಸಿಬ್ಬಂದಿಗೆ ಔತಣಕೂಟ ಏರ್ಪಡಿಸಿದ್ದು, ನಳಿನ್ ಕುಮಾರ್ ಕಟೀಲು ನಾಯಕತ್ವ ಬದಲಾವಣೆಯ ಮಾತನಾಡಿದ್ದು ಕಾಕತಾಳಿಯವೇನಲ್ಲ. ಇಲ್ಲಿಯವರಲ್ಲ ದಿಲ್ಲಿಯಲ್ಲಿರುವವರು ಸಿಎಂ ಆಗುತ್ತಾರೆ ಎಂದರೆ ಯಾರು ರಾಜ್ಯ ಬಿಜೆಪಿ ನಾಯಕರೇ? ಜೋಶಿ, ಸಂತೋಷ್ ಅವರಾ ಅಥವಾ ಉತ್ತರ ಭಾರತದವರನ್ನು ಇಲ್ಲಿನ ಸಿಎಂ ಮಾಡುವಿರಾ? ಎಂದು ಕೇಳಿದೆ.

ಬಿಜೆಪಿಯವರು ತಮ್ಮ ಆಡಿಯೋ ವಿಡಿಯೋ ಒಪ್ಪುವುದಿಲ್ಲ

ಬಿಜೆಪಿ ಪಕ್ಷದವರೆಲ್ಲ ಒಮ್ಮೆಲೇ ತಮ್ಮ ಆಡಿಯೋ, ವಿಡಿಯೋಗಳನ್ನು ಒಪ್ಪುವುದಿಲ್ಲ. ರಮೇಶ್ ಜಾರಕಿಹೊಳಿ ಕೂಡ ತಮ್ಮ ವಿಡಿಯೋ ನಕಲಿ ಎಂದಿದ್ದರು. ನಂತರ ತಮ್ಮದೇ ಎಂದು ಒಪ್ಪಿಕೊಂಡರು. ಈಗ ನಳಿನ್ ಕುಮಾರ್ ಕಟೀಲು ಕೂಡ ತಮ್ಮದಲ್ಲ ಎನ್ನುತ್ತಿದ್ದಾರೆ. ಮುಂದೆ ಒಪ್ಪುತ್ತಾರೆ. ಇವರ ಸರ್ಕಾರದ ಫೋನ್ ಕದ್ದಾಲಿಕೆ ಬಗ್ಗೆ ಬೆಲ್ಲದ್ ಹೇಳಿರಲಿಲ್ಲವೇ? ಎಂದಿದೆ.

ಪ್ರಹ್ಲಾದ್ ಜೋಶಿ ಮನೆಯಲ್ಲಿ ಭಿನ್ನಮತದ ನಾಯಕರು ಸಭೆ ನಡೆಸುತ್ತಾರೆ. ಬಿಎಸ್ ಯಡಿಯೂರಪ್ಪ ದೆಹಲಿಗೆ ದೌಡಾಯಿಸುತ್ತಾರೆ. ಫೋನ್ ಕದ್ದಾಲಿಕೆಯ ಬಗ್ಗೆ ಬೆಲ್ಲದ್ ಆರೋಪಿಸುತ್ತಾರೆ. ಕಟೀಲ್ ಸಂಭಾಷಣೆಯ ಆಡಿಯೋ ಬಿಡುಗಡೆಯಾಗುತ್ತದೆ. ದಿಲ್ಲಿಯವರು ಸಿಎಂ ಆಗುತ್ತಾರೆ ಎಂದು ಕಟೀಲ್ ಹೇಳುತ್ತಾರೆ. ರಾಜ್ಯ ಬಿಜೆಪಿ ಆಡಳಿತದಲ್ಲಿ ಫೋನ್ ಕದ್ದಾಲಿಕೆಯಾಗುತ್ತಿದೆ ಎಂದು ಬಿಜೆಪಿಗರೇ ಆರೋಪಿಸಿದ್ದರು.

ಕಟೀಲ್ ಆಡಿಯೋ ಬಿಡುಗಡೆಯ ಮೂಲಕ ಅದು ಸಾಬೀತಾಯಿತು. ಭಿನ್ನಮತದ ಹೇಳಿಕೆ ನೀಡಿದವರ ವಿರುದ್ಧ ಪಕ್ಷದ ಅಧ್ಯಕ್ಷನಾಗಿ ಕ್ರಮ ಕೈಗೊಳ್ಳದೆ ಇರುವುದರಿಂದ ಇದರ ಹಿಂದಿರುವುದು ಕಟೀಲ್‌ ಅವರೇ ಎಂಬ ಗುಮಾನಿ ಇತ್ತು, ಈಗ ಅಡಿಯೋದಿಂದ ಬಯಲಾಗಿದೆ.

ನಳಿನ್ ಕುಮಾರ್ ಕಟೀಲು ಆಡಿಯೋ ಹೊರ ಬಂದಿದ್ದು ವಿಶೇಷವೇನೂ ಅಲ್ಲ, ಅವರು ಕತ್ತಿ ಮಸೆಯುತ್ತಿದ್ದಿದ್ದು, ತಿಳಿದ ವಿಷಯ. ಈಗ ಅದಕ್ಕೆ ಪೂರಕ ಸಾಕ್ಷ್ಯ ಸಿಕ್ಕಿದೆ ಅಷ್ಟೇ. ಬಿಜೆಪಿಯನ್ನು ಹಣಿಯಲು ವಿರೋಧ ಪಕ್ಷಗಳು ಶ್ರಮಪಡುವ ಅಗತ್ಯವೇ ಇಲ್ಲ. ಬಿಜೆಪಿ ವರ್ಸಸ್ ಬಿಜೆಪಿ ಕಿತ್ತಾಟ ಎನ್ನುವುದು ಅವರ ಪಂಚೆಯೊಳಗಿನ ಕೆಂಡದಂತೆ! ಅದೇ ಅವರನ್ನು ಸುಟ್ಟು ಹಾಕಲಿದೆ ಎಂದಿದೆ.

ABOUT THE AUTHOR

...view details