ಕರ್ನಾಟಕ

karnataka

ETV Bharat / city

EXCLUSIVE- ವಿದ್ಯಾರ್ಥಿಗಳಿಗೆ ವ್ಯಾಕ್ಸಿನ್ ಡ್ರೈವ್: ಸ್ನಾತಕೋತ್ತರ ಕಾಲೇಜು ಆರಂಭಕ್ಕೆ ಸಿದ್ಧವಾಯ್ತು ಪ್ಲಾನ್

ಕಾಲೇಜು ಪ್ರಾರಂಭದ ಕುರಿತು ರಾಜ್ಯ ಸರ್ಕಾರ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ. ಉನ್ನತ ಶಿಕ್ಷಣ ಮತ್ತು ವೈದ್ಯಕೀಯ ಶಿಕ್ಷಣ ಸಚಿವರ ಜೊತೆ ಸಭೆ ನಡೆಸಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಎರಡೂ ಇಲಾಖೆಯಲ್ಲಿ ಭೌತಿಕ ಶೈಕ್ಷಣಿಕ ವ್ಯವಸ್ಥೆ ಜಾರಿಗೊಳಿಸುವ ನಿರ್ಧಾರ ಕೈಗೊಂಡಿದ್ದಾರೆ. ಆರಂಭದಲ್ಲಿ ವೈದ್ಯ, ದಂತ ವೈದ್ಯ ಮತ್ತು ಇಂಜಿನಿಯರಿಂಗ್ ಕಾಲೇಜುಗಳನ್ನು ಆರಂಭಿಸಬೇಕು. ಅದರ ಜೊತೆಯಲ್ಲೇ ಇತರ ಸ್ನಾತಕೋತ್ತರ ಪದವಿ ತರಗತಿಗಳನ್ನು ಆರಂಭಿಸಬೇಕು. ಬಳಿಕ, ಎಲ್ಲಾ ಪದವಿ ಕಾಲೇಜುಗಳನ್ನು ಆರಂಭಿಸಬೇಕು ಎನ್ನುವ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.

By

Published : Jun 22, 2021, 4:39 PM IST

Updated : Jun 22, 2021, 4:47 PM IST

collage-states-with-vaccination-drive-in-karnataka
ಮುಖ್ಯಮಂತ್ರಿ ಯಡಿಯೂರಪ್ಪ

ಬೆಂಗಳೂರು: ಕಾಲೇಜುಗಳಲ್ಲೇ ವ್ಯಾಕ್ಸಿನ್ ಡ್ರೈವ್ ಮಾಡಿ ತರಗತಿಗಳನ್ನ ಆರಂಭಿಸಲು ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಮೂರನೇ ಅಲೆಯ ಮುನ್ನೆಚ್ಚರಿಕಾ ಕ್ರಮದ ಆಧಾರದ ಮೇಲೆ ಭೌತಿಕ ಹಾಗೂ ಶೈಕ್ಷಣಿಕ ವ್ಯವಸ್ಥೆಗೆ ಮರು ಚಾಲನೆ ನೀಡಲು ಮುಂದಾಗಿದೆ ಎಂದು ಉನ್ನತ ಮೂಲಗಳಿಂದ ಮಾಹಿತಿ ಲಭಿಸಿದೆ.

3ನೇ ಅಲೆಗೆ ಕೈಗೊಳ್ಳಬೇಕಿರುವ ಸಿದ್ಧತೆ ಬಗ್ಗೆ ತಜ್ಞರ ಸಮಿತಿ ಮಧ್ಯಂತರ ವರದಿ ನೀಡುತ್ತಿದ್ದಂತೆ ಕೆಲವೊಂದು ಮಹತ್ವದ ನಿರ್ಧಾರವನ್ನು ರಾಜ್ಯ ಸರ್ಕಾರ ಕೈಗೊಂಡಿದೆ. ಉನ್ನತ ಶಿಕ್ಷಣ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಅಶ್ವತ್ಥ್​ ನಾರಾಯಣ್ ಅವರ ಜೊತೆ ಸಭೆ ನಡೆಸಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಎರಡೂ ಇಲಾಖೆಯಲ್ಲಿ ಭೌತಿಕ ಶೈಕ್ಷಣಿಕ ವ್ಯವಸ್ಥೆ ಜಾರಿಗೊಳಿಸುವ ನಿರ್ಧಾರ ಕೈಗೊಂಡಿದ್ದಾರೆ. ಆರಂಭದಲ್ಲಿ ವೈದ್ಯ, ದಂತ ವೈದ್ಯ ಮತ್ತು ಇಂಜಿನಿಯರಿಂಗ್ ಕಾಲೇಜುಗಳನ್ನು ಆರಂಭಿಸಬೇಕು, ಅದರ ಜೊತೆಯಲ್ಲೇ ಇತರ ಸ್ನಾತಕೋತ್ತರ ಪದವಿ ತರಗತಿಗಳನ್ನು ಆರಂಭಿಸಬೇಕು. ನಂತರ ಎಲ್ಲಾ ಪದವಿ ಕಾಲೇಜುಗಳನ್ನು ಆರಂಭಿಸಬೇಕು ಎನ್ನುವ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.

ಕಾಲೇಜುಗಳಲ್ಲಿ ವ್ಯಾಕ್ಸಿನ್​ ಡ್ರೈವ್​​​:ಜುಲೈ ತಿಂಗಳಿನಲ್ಲಿ ರಾಜ್ಯಕ್ಕೆ 60 ಲಕ್ಷ ಡೋಸೇಜ್ ವ್ಯಾಕ್ಸಿನ್ ಲಭ್ಯವಾಗಲಿದೆ. ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಎರಡೂ ಮಾದರಿಯ ಲಸಿಕೆ ದೊಡ್ಡ ಪ್ರಮಾಣದಲ್ಲಿ ರಾಜ್ಯಕ್ಕೆ ಕೇಂದ್ರದಿಂದ ಸರಬರಾಜಾಗಲಿದೆ. ಭೌತಿಕ ಶೈಕ್ಷಣಿಕ ವ್ಯವಸ್ಥೆ ಆರಂಭಕ್ಕೆ ಈ ಲಸಿಕೆಯಲ್ಲಿ ಆದ್ಯತೆ ನೀಡಬೇಕು ಎನ್ನುವ ತೀರ್ಮಾನ ಕೈಗೊಳ್ಳಲಾಗಿದೆ. ವ್ಯಾಕ್ಸಿನ್ ಡ್ರೈವ್ ಮಾಡಿ ಕಾಲೇಜುಗಳನ್ನು ಆರಂಭಿಸಬೇಕು. ಲಸಿಕೆ ಪಡೆಯದ ವಿದ್ಯಾರ್ಥಿಗಳಿಗೆ ಕಾಲೇಜಿನಲ್ಲೇ ಲಸಿಕೆ ನೀಡಿ ತರಗತಿ ಪ್ರವೇಶಕ್ಕೆ ಅವಕಾಶ ನೀಡಬೇಕು ಎನ್ನುವ ನಿರ್ಧಾರ ಕೈಗೊಳ್ಳಲಾಗಿದೆ ಎಂಬ ಮಾಹಿತಿ ಉನ್ನತ ಮೂಲಗಳಿಂದ ತಿಳಿದುಬಂದಿದೆ.

ಉಪನ್ಯಾಸರಿಗೆ ಲಸಿಕೆ:ಉಪನ್ಯಾಸಕರು ಲಸಿಕೆ ಪಡೆಯದೇ ಇದ್ದಲ್ಲಿ ಅವರಿಗೂ ಕಾಲೇಜುಗಳಲ್ಲಿಯೇ ವ್ಯಾಕ್ಸಿನ್ ನೀಡುವ ವ್ಯವಸ್ಥೆ ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ. ಬೋಧಕ-ಬೋಧಕೇತರ ಸಿಬ್ಬಂದಿಗೂ ಲಸಿಕೆ ಕಡ್ಡಾಯವಾಗಿದ್ದು, ಕನಿಷ್ಠ ವ್ಯಾಕ್ಸಿನ್​ನ ಒಂದು ಡೋಸ್ ಅನ್ನಾದರೂ ಪಡೆದಿರಬೇಕು ಎನ್ನುವ ನಿಯಮದೊಂದಿಗೆ ಸ್ನಾತಕೋತ್ತರ ಪದವಿಯ ಭೌತಿಕ ಶೈಕ್ಷಣಿಕ ವ್ಯವಸ್ಥೆ ಜಾರಿಗೆ ನಿರ್ಧಾರ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಹೈಕೋರ್ಟ್​​ ಸೂಚನೆಯಂತೆ ಫಲಿತಾಂಶ ಪ್ರಕಟ:ಸದ್ಯ ದ್ವಿತೀಯ ಪಿಯುಸಿಗೆ ಪರೀಕ್ಷೆ ಇಲ್ಲದೆ ಎಲ್ಲ ವಿದ್ಯಾರ್ಥಿಗಳನ್ನು ಉತ್ತೀರ್ಣ ಮಾಡುವ ನಿರ್ಧಾರವನ್ನು ರಾಜ್ಯ ಸರ್ಕಾರ ಕೈಗೊಂಡಿದ್ದು, ಹೈಕೋರ್ಟ್ ಸೂಚನೆ ನೀಡುತ್ತಿದ್ದಂತೆ ಫಲಿತಾಂಶ ಪ್ರಕಟಗೊಳ್ಳಲಿದೆ. ಸಿಇಟಿ ಪರೀಕ್ಷೆ ಆಗಸ್ಟ್ ಅಂತ್ಯಕ್ಕೆ ನಿಗದಿಯಾಗಿದ್ದು, ಸೆಪ್ಟೆಂಬರ್​ನಲ್ಲಿ ಫಲಿತಾಂಶ ಬರುವ ಸಾಧ್ಯತೆ ಇದೆ. ಮೆಡಿಕಲ್, ಇಂಜಿನಿಯರಿಂಗ್ ಸೇರಿ ಎಲ್ಲಾ ಸ್ನಾತಕೋತ್ತರ ಪದವಿ ಕಾಲೇಜಿನ ಮೊದಲ ವರ್ಷದ ತರಗತಿ ಹೊರತುಪಡಿಸಿ ಇತರ ವರ್ಷದ ತರಗತಿಗಳನ್ನು ಜುಲೈ ಅಂತ್ಯ ಅಥವಾ ಆಗಸ್ಟ್​ ಮೊದಲಿನಲ್ಲಿ ಆರಂಭಿಸಬೇಕು ಎನ್ನುವ ನಿರ್ಧಾರಕ್ಕೆ ಬರಲಾಗಿದೆ.

ಮುಖ್ಯಮಂತ್ರಿಗಳ ಅಭಿಪ್ರಾಯಕ್ಕೆ ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥ್​ ನಾರಾಯಣ್​ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಸಮ್ಮತಿ ನೀಡಿದ್ದಾರೆ. ಸದ್ಯ 18 ವರ್ಷದೊಳಗಿನವರಿಗೆ ಲಸಿಕೆ ಇನ್ನೂ ಕ್ಲಿನಿಕಲ್ ಟ್ರಯಲ್ ಹಂತದಲ್ಲಿರುವ ಕಾರಣ ಪ್ರಾಥಮಿಕ ಹಾಗು ಪ್ರೌಢ ಶಿಕ್ಷಣ ಇಲಾಖೆಯಡಿ ಬರುವ ಶಾಲಾ-ಕಾಲೇಜುಗಳ ಭೌತಿಕ ತರಗತಿ ಆರಂಭ ಕುರಿತು ಈಗಲೇ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎನ್ನಲಾಗ್ತಿದೆ.

Last Updated : Jun 22, 2021, 4:47 PM IST

ABOUT THE AUTHOR

...view details