ಕರ್ನಾಟಕ

karnataka

ETV Bharat / city

ಮತ್ತೊಮ್ಮೆ 3+2 ಮಾದರಿ ಸಂಪುಟ ವಿಸ್ತರಣೆ ಪ್ರಸ್ತಾಪಕ್ಕೆ ಸಿಎಂ ಚಿಂತನೆ; ಕತ್ತಿ, ಸಿಪಿವೈಗೂ ಸಿಗುತ್ತಾ ಅವಕಾಶ?

ಸಚಿವ ಸಂಪುಟ ವಿಸ್ತರಣೆಗೆ ಗುರುವಾರ ಹೈಕಮಾಂಡ್ ಅನುಮತಿ ಕೊಡದೇ ಇದ್ದಲ್ಲಿ ಡಿ.5ರಂದು ಪಕ್ಷದ ಕೋರ್ ಕಮಿಟಿ ಸಭೆಯಲ್ಲಿ ಚರ್ಚಿಸಿ ಹೈಕಮಾಂಡ್​​ಗೆ ಮತ್ತೊಮ್ಮೆ ಮನವಿ ಮಾಡಬೇಕು ಎಂದು ಸಿಎಂ ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.

By

Published : Dec 1, 2020, 10:49 PM IST

Cabinet expansion
ಸಂಪುಟ ವಿಸ್ತರಣೆ

ಬೆಂಗಳೂರು: ಸಂಪುಟ ಸರ್ಕಸ್ ಮುಂದುವರೆದಿರುವ ನಡುವೆ 3+2 ಮಾದರಿಯಲ್ಲಿ ಗುರುವಾರ ಸಂಪುಟ ವಿಸ್ತರಣೆ ಮಾಡಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತೊಮ್ಮೆ ಚಿಂತನೆ ನಡೆಸಿದ್ದು, ಮತ್ತೊಮ್ಮೆ ಹಳೆ ಪ್ರಸ್ತಾಪವನ್ನೇ ವರಿಷ್ಠರ ಮುಂದಿಡಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಸಚಿವ ಸಂಪುಟ ವಿಸ್ತರಣೆ, ಪುನಾರಚನೆ ಯತ್ನದ ನಡುವೆ ಗ್ರಾಮ ಪಂಚಾಯಿತಿ ಚುನಾವಣಾ ದಿನಾಂಕ ಪ್ರಕಟವಾದ ಹಿನ್ನೆಲೆಯಲ್ಲಿ ಸಂಪುಟ ಪುನಾರಚನೆ ಸರ್ಕಸ್ ಮತ್ತಷ್ಟು ವಿಳಂಬವಾಗುವ‌ ಸಾಧ್ಯತೆ ದಟ್ಟವಾಗಿದೆ. ಹೀಗಾಗಿ, ಸದ್ಯಕ್ಕೆ ಪುನಾರಚನೆ ಬೇಡವೆಂದಾದರೂ ವಿಸ್ತರಣೆ ಮಾಡುವುದಕ್ಕಾದರೂ ಅನುಮತಿ ಕೊಡಿ ಎನ್ನುವ ಮನವಿಯನ್ನು ಮತ್ತೊಮ್ಮೆ ವರಿಷ್ಠರ ಮುಂದಿಡಲು ಬಿಎಸ್​​ವೈ ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.

ಎಂಟಿಬಿ ನಾಗರಾಜ್, ಆರ್.ಶಂಕರ್ ಮತ್ತು ಮುನಿರತ್ನರನ್ನು ಸಂಪುಟಕ್ಕೆ ಸೇರಿಸಿಕೊಳ್ಳಬೇಕಿದೆ. ಹೆಚ್.ವಿಶ್ವನಾಥ್​​ಗೂ ಅವಕಾಶ ನೀಡಬೇಕು ಎನ್ನುವ ವಲಸಿಗರ ಒತ್ತಾಯಕ್ಕೆ ಹೈಕೋರ್ಟ್ ತಾತ್ಕಾಲಿಕವಾಗಿ ಪರಿಹಾರ ನೀಡುವ ರೀತಿ ಮಧ್ಯಂತರ ಆದೇಶ ನೀಡಿದ್ದು, ಸಿಎಂ ನಿರಾಳರಾಗುವಂತೆ ಮಾಡಿದೆ. ಹಾಗಾಗಿ 3+2 ಮಾದರಿಯಲ್ಲಿ ಸಂಪುಟ ವಿಸ್ತರಣೆಗೆ ಸಿಎಂ ಉತ್ಸುಕರಾಗಿದ್ದಾರೆ ಎನ್ನಲಾಗಿದೆ.

ಸಾಹುಕಾರನ ಮಾತಿಗೆ ಕಟ್ಟುಬಿದ್ದ ಸಿಎಂ:ಇನ್ನು ಸಚಿವ ಸಂಪುಟಕ್ಕೆ ಸಿ.ಪಿ.ಯೋಗೇಶ್ವರ್ ಅವರನ್ನು ಸೇರಿಸಿಕೊಳ್ಳುವುದಾಗಿ ಇದೇ ಮೊದಲ ಬಾರಿಗೆ ಯಡಿಯೂರಪ್ಪ ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದ್ದಾರೆ. ಸೈನಿಕನಿಗೆ ಸಚಿವ ಸ್ಥಾನ ನೀಡದಂತೆ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ನೇತೃತ್ವದಲ್ಲಿ ಕೆಲ ಶಾಸಕರು ಬಿಎಸ್​​​​ವೈ, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ದುಂಬಾಲು ಬಿದ್ದಿದ್ದರು.

ಜೊತೆಗೆ ರಮೇಶ್ ಜಾರಕಿಹೊಳಿ ನಿವಾಸದಲ್ಲಿ ಸಭೆ ನಡೆಸಿಯೂ ಒತ್ತಾಯಿಸಿದ್ದರು. ಆದರೆ ಇದಕ್ಕೆ ಅಸಮ್ಮತಿ ವ್ಯಕ್ತಪಡಿಸಿದ್ದ ಜಾರಕಿಹೊಳಿ ಸಿ.ಪಿ.ಯೋಗೇಶ್ವರ್ ಪರ ಕೊನೆ ಕ್ಷಣದವರೆಗೂ ಹೋರಾಟ ನಡೆಸುವುದಾಗಿ ಹೇಳಿದ್ದರು. ಅಷ್ಟು ಮಾತ್ರವಲ್ಲದೆ, ದೆಹಲಿ ಮಟ್ಟದಲ್ಲೂ ಲಾಬಿ ನಡೆಸಿದ್ದು, ಗುಟ್ಟಾಗೇನು ಉಳಿದಿಲ್ಲ. ಇದೀಗ ಸಿಎಂ ಕಡೆಗೂ ಜಾರಕಿಹೊಳಿ ಒತ್ತಡಕ್ಕೆ ಮಣಿದು ಸೈನಿಕನನ್ನು ಸಂಪುಟಕ್ಕೆ ತೆಗೆದುಕೊಳ್ಳುವ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ.

ಇಷ್ಟೆಲ್ಲದರ ನಡುವೆಯೂ ಸಂಪುಟ ಸರ್ಕಸ್​​ಗೆ ತೆರೆ ಎಳೆಯುವ ಪ್ರಯತ್ನವನ್ನು ಸಿಎಂ ಮುಂದುವರೆಸಿದ್ದಾರೆ. ಅಧಿವೇಶನಕ್ಕೂ ಮೊದಲೇ ಸಂಪುಟ ವಿಸ್ತರಣೆ ಮಾಡಬೇಕು ಎನ್ನುವ ನಿರೀಕ್ಷೆಯಲ್ಲಿದ್ದಾರೆ. ಒಂದು ವೇಳೆ ಗುರುವಾರ ಹೈಕಮಾಂಡ್ ಅನುಮತಿ ಕೊಡದೇ ಇದ್ದಲ್ಲಿ ಡಿ.5ರಂದು ಪಕ್ಷದ ಕೋರ್ ಕಮಿಟಿ ಸಭೆಯಲ್ಲಿ ಚರ್ಚಿಸಿ ಹೈಕಮಾಂಡ್​​ಗೆ ಮತ್ತೊಮ್ಮೆ ಮನವಿ ಮಾಡಬೇಕು ಎಂದು ಸಿಎಂ ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.

ಕತ್ತಿ, ಸೈನಿಕನಿಗೆ ಅವಕಾಶ:ಖಾಲಿ ಇರುವ ಏಳು ಸ್ಥಾನಗಳಲ್ಲಿ ಐದು ಸ್ಥಾನ ಭರ್ತಿಗೆ ಸಿಎಂ ನಿರ್ಧರಿಸಿದ್ದಾರೆ. ವಲಸಿಗ ಮೂವರ ಜೊತೆ ಹಿರಿಯ ಶಾಸಕ ಉಮೇಶ್ ಕತ್ತಿ ಹಾಗು ಇಂದು ಹೇಳಿಕೆ ನೀಡಿದಂತೆ ಸಿ.ಪಿ.ಯೋಗೇಶ್ವರ್​ಗೆ ಅವಕಾಶ ನೀಡಿ ಸಂಪುಟ ವಿಸ್ತರಣೆ ಮಾಡಲಾಗುತ್ತದೆ ಎನ್ನಲಾಗುತ್ತಿದೆ.

ABOUT THE AUTHOR

...view details