ಕರ್ನಾಟಕ

karnataka

ಆದಷ್ಟು ಬೇಗ ಕರ್ತವ್ಯಕ್ಕೆ ಮರಳುತ್ತೇನೆ, ಯಾರೂ ಆತಂಕಕ್ಕೊಳಗಾಗಬೇಡಿ: ಸಿಎಂ ಬಿಎಸ್​ವೈ

ಭಾನುವಾರ ರಾತ್ರಿ ಕೊರೊನಾ ಸೋಂಕು ತಗುಲಿರುವುದು ದೃಢವಾಗುತ್ತಿದ್ದಂತೆಯೇ ಮಣಿಪಾಲ್ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ಸಿಎಂ ಯಡಿಯೂರಪ್ಪ, ಆಸ್ಪತ್ರೆಯಿಂದಲೇ ವಿಡಿಯೋವೊಂದನ್ನು ಮಾಡಿ ಯಾರೂ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ.

By

Published : Aug 3, 2020, 2:54 PM IST

Published : Aug 3, 2020, 2:54 PM IST

CM BSY shares video message
ಸಿಎಂ ಬಿಎಸ್​ವೈ

ಬೆಂಗಳೂರು: ಆರೋಗ್ಯವಾಗಿದ್ದೇನೆ, ಆದಷ್ಟು ಬೇಗ ಗುಣಮುಖನಾಗಿ ಹೊರಬರಲಿದ್ದೇನೆ. ಯಾರೂ ಕೂಡ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲವೆಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿಡಿಯೋ ಸಂದೇಶ ರವಾನಿಸಿದ್ದಾರೆ.

ಸಿಎಂ ಬಿಎಸ್​ವೈ ವಿಡಿಯೋ ಸಂದೇಶ

ಭಾನುವಾರ ರಾತ್ರಿ ಕೊರೊನಾ ಸೋಂಕು ತಗುಲಿರುವುದು ದೃಢವಾಗುತ್ತಿದ್ದಂತೆಯೇ ಮಣಿಪಾಲ್ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ಸಿಎಂ, ಆಸ್ಪತ್ರೆಯಿಂದಲೇ ವಿಡಿಯೋ ಮಾಡಿದ್ದಾರೆ. ಇಂದು ಬೆಳಗ್ಗೆ ವೈದ್ಯರು ಪರೀಕ್ಷೆ ಮಾಡಿದ್ದಾರೆ. ಯಾವುದೇ ತೊಂದರೆ ಇಲ್ಲ, ಬೇಗ ಗುಣಮುಖರಾಗುತ್ತೀರಿ ಎಂದಿದ್ದಾರೆ. ಈಗಾಗಲೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಜೆ ಪಿ ನಡ್ಡಾ, ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್, ಮಾಜಿ ಪ್ರಧಾನಿ ದೇವೇಗೌಡ, ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಕುಮಾರಸ್ವಾಮಿ ಸೇರಿದಂತೆ ಅನೇಕರು ಬೇಗ ಚೇತರಿಸಿಕೊಳ್ಳುವಂತೆ ಹಾರೈಸಿದ್ದಾರೆ. ಜೊತೆಗೆ ಮಠಾಧಿಪತಿಗಳು ಆಶೀರ್ವಾದ ಮಾಡಿದ್ದಾರೆ ಎಂದು ಸಿಎಂ ಯಡಿಯೂರಪ್ಪ ಅವರು ವಿಡಿಯೋ ಸಂದೇಶದಲ್ಲಿ ತಿಳಿಸಿದ್ದಾರೆ.

ನಿನ್ನೆಯಿಂದಲೂ ಅಧಿಕಾರಿಗಳ ಜೊತೆ ದೂರವಾಣಿ ಸಂಪರ್ಕದಲ್ಲಿದ್ದೇನೆ. ಸರ್ಕಾರಿ ಕೆಲಸಗಳಿಗೆ ಅಡ್ಡಿ-ಆತಂಕ ಆಗಬಾರದು ಎಂದು ಸೂಚನೆ ನೀಡಿದ್ದೇನೆ. ಯಾರೂ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ, ಆದಷ್ಟು ಬೇಗ ನಾನು ಗುಣಮುಖನಾಗಿ ಆಸ್ಪತ್ರೆಯಿಂದ ಹೊರಬಂದು ಕೆಲಸ ಕಾರ್ಯದಲ್ಲಿ ತೊಡಗಲಿದ್ದೇನೆ. ನಿಮ್ಮೆಲ್ಲರ ಆಶೀರ್ವಾದ, ಬೆಂಬಲ ಸದಾ ನನ್ನ ಮೇಲಿರಲಿ ಎಂದು ರಾಜ್ಯದ ಜನರಲ್ಲಿ ಕೇಳಿಕೊಳ್ಳುತ್ತೇನೆ. ನನಗೆ ನಾಡಿನ ಜನರ ಆರೋಗ್ಯ ಮುಖ್ಯ. ದಯಮಾಡಿ ವ್ಯಕ್ತಿಗತ ಅಂತರ ಕಾಯ್ದುಕೊಳ್ಳಿ, ಮಾಸ್ಕ್ ಧರಿಸಿ. ಆಗ ಮಾತ್ರ ಕೊರೊನಾದಿಂದ ಪಾರಾಗಲು ಸಾಧ್ಯವೆಂದು ಬಿಎಸ್​ವೈ ಸಲಹೆಯನ್ನೂ ನೀಡಿದ್ದಾರೆ.

ABOUT THE AUTHOR

...view details