ಬೆಂಗಳೂರು: ಮೆಟ್ರೋ ರೈಲು ಮಾರ್ಗ ಪರೀಕ್ಷೆಗೆ ತೆರಳಿದ್ದ ವೇಳೆ ಸಿಎಂ ಹಾಗೂ ಸಚಿವರು ಕೋವಿಡ್ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಮಂಡಿಸಿದ ವಾದವನ್ನು ಹೈಕೋರ್ಟ್ ಸಮ್ಮತಿಸಿದೆ.
ಮುಖ್ಯಮಂತ್ರಿಗಳು ಹಾಗೂ ಸಚಿವರು ಸರ್ಕಾರಿ ಕಾರ್ಯ ನಿರ್ವಹಣೆ ನಿಮಿತ್ತ ಮೆಟ್ರೋ ರೈಲು ಮಾರ್ಗ ಪರಿಶೀಲಿಸಲು ತೆರಳಿದ್ದರು. ಈ ವೇಳೆ, ಸ್ವಲ್ಪ ಮಟ್ಟಿಗೆ ಜನ ಸೇರಿದ್ದಾರೆ. ಉದ್ದೇಶಪೂರ್ವಕವಾಗಿ ಸಿಎಂ ಕೋವಿಡ್ ಮಾರ್ಗಸೂಚಿಗಳನ್ನು ಉಲ್ಲಂಘಿಸಿಲ್ಲ ಎಂದು ವಾದ ಮಂಡಿಸಿದ ರಾಜ್ಯ ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವದಗಿ ಅವರ ವಾದವನ್ನು ಹೈಕೋರ್ಟ್ ಸಮ್ಮತಿಸಿದೆ.
ಹಾಗೆಯೇ, ಈ ಸಂಬಂಧ ಅರ್ಜಿದಾರರು ಕುಂದು ಕೊರತೆ ಪರಿಹಾರ ಘಟಕಕ್ಕೆ ದೂರು ನೀಡಿರುವುದರಿಂದ ಕೋರ್ಟ್ ಯಾವುದೇ ಆದೇಶ ಹೊರಡಿಸುವ ಅಗತ್ಯವಿಲ್ಲ ಎಂದು ಮೌಖಿಕವಾಗಿ ಅಭಿಪ್ರಾಯ ವ್ಯಕ್ತಪಡಿಸಿದೆ.
ಎರಡನೇ ಹಂತದ ಮೆಟ್ರೋ ರೈಲು ಪರೀಕ್ಷಾರ್ಥ ಸಂಚಾರ ವೇಳೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹಾಗೂ ಇತರ ಸಚಿವರು ಕೋವಿಡ್ ಮಾರ್ಗಸೂಚಿ ಉಲ್ಲಂಘಿಸಿದ್ದಾರೆ ಎಂದು ವಕೀಲ ಜಿ.ಆರ್ ಮೋಹನ್ ಮೆಮೊ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.