ಕರ್ನಾಟಕ

karnataka

By

Published : Apr 11, 2022, 11:17 AM IST

ETV Bharat / city

ಪಿಎಸ್ಐ ನೇಮಕಾತಿ ಅಕ್ರಮ ಕುರಿತು ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದ ಸಮಿತಿಯಿಂದ ತನಿಖೆ: ಸಿಎಂ ಬೊಮ್ಮಾಯಿ

ಈಗಾಗಲೇ 545 ಪಿಎಸ್ಐ ಹುದ್ದೆಗಳ ನೇಮಕಾತಿ ಅಕ್ರಮ ಸಂಬಂಧ ತನಿಖೆಗೆ ಸಿಐಡಿಗೆ ವಹಿಸಲಾಗಿದೆ. ಆಯ್ಕೆಯಾಗಿರುವ ಅಭ್ಯರ್ಥಿಗಳು ಬಂದು ಮನವಿ ಕೊಟ್ಟಿದ್ದಾರೆ. ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಕಮಿಟಿ ರಚಿಸಿ, ವರದಿ ಬಂದ ನಂತರ ಪರಾಮರ್ಶಿಸಿ ಮುಂದಿನ ನಿರ್ಧಾರ ಕೈಗೊಳ್ಳಲು ನಿರ್ಧರಿಸಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಸಿಎಂ ಬೊಮ್ಮಾಯಿ
ಸಿಎಂ ಬೊಮ್ಮಾಯಿ

ಬೆಂಗಳೂರು: ಪಿಎಸ್ಐ ನೇಮಕಾತಿಯಲ್ಲಿ ಅಕ್ರಮ ನಡೆದಿರುವ ಆರೋಪ ಕುರಿತು ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಕಮಿಟಿ ರಚಿಸಿ, ವರದಿ ಬಂದ ನಂತರ ಪರಾಮರ್ಶಿಸಿ ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ. ಆರ್.ಟಿ ನಗರ ನಿವಾಸದಲ್ಲಿ ಜನತಾ ದರ್ಶನ ನಡೆಸಿದ ಸಿಎಂ, ಸಾರ್ವಜನಿಕರಿಂದ ಅಹವಾಲು ಸ್ವೀಕಾರ ಮಾಡಿದರು. ಈ ವೇಳೆ ಆರೋಗ್ಯ ಸಿಬ್ಬಂದಿ, ಪಿಎಸ್ಐಗೆ ಆಯ್ಕೆಯಾದ ಅಭ್ಯರ್ಥಿಗಳು ನೀಡಿದ ಮನವಿಯನ್ನು ಸ್ವೀಕರಿಸಿದರು.

ಪಿಎಸ್ಐಗೆ ಆಯ್ಕೆಯಾದರೂ ಇನ್ನೂ ನೇಮಕಾತಿ ಆದೇಶ ಸಿಕ್ಕಿಲ್ಲ, 545 ಹುದ್ದೆಗಳಿಗೆ ಆಯ್ಕೆ ಪ್ರಕ್ರಿಯೆ ನಡೆದಿದ್ದು, 3 ತಿಂಗಳು ಕಳೆದರೂ ಆಯ್ಕೆಯಾದವರು ನೇಮಕವಾಗಿಲ್ಲ. ಹಾಗಾಗಿ, ಕೂಡಲೇ ನೇಮಕಾತಿ ಪ್ರಕ್ರಿಯೆ ನಡೆಸುವಂತೆ ಮನವಿ ಮಾಡಿದರು. ಇವರೊಂದಿಗೆ ಹೊರಗುತ್ತಿಗೆ ಆಧಾರ ಮೇಲೆ ಆರೋಗ್ಯ ಸಿಬ್ಬಂದಿ ನೇಮಕ ಮಾಡಿದ್ದು, ಈಗ ಕೋವಿಡ್ ಇಲ್ಲ ಎಂದು ಏಕಾಏಕಿ ಕೈಬಿಡಲಾಗಿದೆ. ಇದು ಸರಿಯಲ್ಲ, ಕೂಡಲೇ ಮರು ನೇಮಕ ಮಾಡುವಂತೆ ಆರೋಗ್ಯ ಸಿಬ್ಬಂದಿ ಮನವಿ ಮಾಡಿದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ

ಮನವಿ ಸ್ವೀಕರಿಸಿದ ನಂತರ ಮಾತನಾಡಿದ ಸಿಎಂ ಬೊಮ್ಮಾಯಿ, ಈಗಾಗಲೇ 545 ಪಿಎಸ್ಐ ಹುದ್ದೆಗಳ ನೇಮಕಾತಿ ಅಕ್ರಮ ಸಂಬಂಧ ತನಿಖೆಯನ್ನು ಸಿಐಡಿಗೆ ವಹಿಸಲಾಗಿದೆ. ಆಯ್ಕೆಯಾಗಿರುವ ಅಭ್ಯರ್ಥಿಗಳು ಬಂದು ಮನವಿ ಕೊಟ್ಟಿದ್ದಾರೆ. ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಕಮಿಟಿ ರಚಿಸಿ, ವರದಿ ಬಂದ ನಂತರ ಪರಾಮರ್ಶಿಸಿ ಮುಂದಿನ ನಿರ್ಧಾರ ಕೈಗೊಳ್ಳಲು ನಿರ್ಧರಿಸಿದ್ದೇನೆ ಎಂದರು. ಆ ಮೂಲಕ ಪಿಎಸ್ಐ ನೇಮಕಾತಿ ವಿಳಂಬವಾಗಲಿದೆ ಎನ್ನುವ ಸುಳಿವು ನೀಡಿದರು.

ಕಾಂಗ್ರೆಸ್​ಗೆ ಪ್ರತಿಭಟನೆ ಮಾಡುವ ನೈತಿಕ ಹಕ್ಕಿಲ್ಲ: ಕಾಂಗ್ರೆಸ್ ಪಕ್ಷಕ್ಕೆ ಬೆಲೆ ಎರಿಕೆ ವಿರುದ್ಧ ಪ್ರತಿಭಟನೆ ಮಾಡುವ ನೈತಿಕ ಹಕ್ಕಿಲ್ಲ. ದೇಶದಲ್ಲಿ ಅತಿ ಹೆಚ್ಚು ಬೆಲೆ ಏರಿಕೆ ಮಾಡಿದ ಖ್ಯಾತಿ, ಕೀರ್ತಿ, ದಾಖಲೆ ಕಾಂಗ್ರೆಸ್ ಹೆಸರಿನಲ್ಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವ್ಯಂಗ್ಯವಾಡಿದರು.

ಅನಂತ್ ಕುಮಾರ್ ಹೆಗಡೆ ಜೊತೆ ಚರ್ಚೆ: ಮುಸ್ಕಾನ್ ಬಗ್ಗೆ ಅನಂತ್ ಕುಮಾರ್ ಹೆಗಡೆ ಪತ್ರ ಬರೆದ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದ ಸಿಎಂ, ಈ ಬಗ್ಗೆ ಅನಂತ್ ಕುಮಾರ್ ಹೆಗಡೆಯವರ ಬಳಿ ಚರ್ಚೆ ಮಾಡುತ್ತೇನೆ. ಅವರ ಬಳಿ ಏನು ಮಾಹಿತಿ ಇದೆ ತಿಳಿದುಕೊಳ್ಳುತ್ತೇನೆ, ಅದರ ಆಧಾರದ ಮೇಲೆ ಏನು ಕ್ರಮ ಕೈಗೊಳ್ಳಬೇಕೋ ತಗೆದುಕೊಳ್ಳುತ್ತೇವೆ ಎಂದರು.

ಉಡುಪಿ ಪ್ರವಾಸ: ಇವತ್ತು ಉಡುಪಿಯಲ್ಲಿ ನಡೆಯಲಿರುವ ಹಲವು ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದೇನೆ. ನಾಳೆ ಮಂಗಳೂರಿನಲ್ಲಿ ಪಕ್ಷದ ಸಂಘಟನಾತ್ಮಕ ಸಭೆಗಳು ಇವೆ. ಇಡೀ ದಿನ ಸಭೆಗಳಲ್ಲಿ ನಾನು ಭಾಗಹಿಸಿ, ಏಪ್ರಿಲ್ 13 ರಂದು ಮಧ್ಯಾಹ್ನ ವಾಪಸ್​ ಬರುತ್ತೇನೆ ಎಂದರು.

ಸುಮಲತಾ ಬಿಜೆಪಿ ಸೇರ್ಪಡೆ ಚರ್ಚೆಯಾಗಿಲ್ಲ: ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಬಿಜೆಪಿ ಸೇರ್ಪಡೆ ಕುರಿತು ಯಾವುದೇ ಮಾತುಕತೆ ನಡೆದಿಲ್ಲ, ಅವರು ತಮ್ಮ, ತಂಗಿಯ ಮಗಳ ಮದುವೆಗೆ ಆಹ್ವಾನ ನೀಡಲು ಬಂದಿದ್ದರು. ಜೊತೆಗೆ ಜಿಲ್ಲೆಯ ಅಭಿವೃದ್ಧಿ ಕಾಮಗಾರಿಗಳ ಕುರಿತು ಚರ್ಚಿಸಿದರು ಎಂದರು.

ಇದನ್ನೂ ಓದಿ:ನೆರೆ ರಾಜ್ಯಗಳಿಗಿಂತ 10 ಪಟ್ಟು ಹೆಚ್ಚು ವಿದೇಶಿ ನೇರ ಹೂಡಿಕೆ: ಕರ್ನಾಟಕ ಬಿಟ್ಟು ಬನ್ನಿ ಎಂದ ರಾಜ್ಯಗಳಿಗೆ ಸಿಎಂ ಟಾಂಗ್

ABOUT THE AUTHOR

...view details