ಕರ್ನಾಟಕ

karnataka

By

Published : Feb 4, 2021, 6:57 PM IST

Updated : Feb 4, 2021, 8:12 PM IST

ETV Bharat / city

ವಸತಿ ಯೋಜನೆ ಅವ್ಯವಹಾರ: ವಿಧಾನಸಭೆಯಲ್ಲಿ ಸೋಮಣ್ಣ- ಖಂಡ್ರೆ ವಾಕ್ಸಮರ!

ವಸತಿ ಯೋಜನೆಯಲ್ಲಿ ಮಂಜೂರಾದ ಮನೆಗಳ ಅನುದಾನ ವಾಪಸ್ ಪಡೆಯಲಾಗಿದೆ. ವೈಯಕ್ತಿಕ ದ್ವೇಷದಿಂದ, ದುರುದ್ದೇಶಪೂರಿತವಾಗಿ ಈ ರೀತಿ ಮಾಡಲಾಗುತ್ತಿದೆ ಎಂದು ಈಶ್ವರ್ ಖಂಡ್ರೆ ಆರೋಪಿಸಿದರು. ಇದೇ ವಿಚಾರವಾಗಿ ವಿಧಾನಸಭೆಯಲ್ಲಿ ಸಚಿವ ವಿ.ಸೋಮಣ್ಣ ಮತ್ತು ಈಶ್ವರ್ ಖಂಡ್ರೆ ಮಧ್ಯೆ ಮಾತಿನ ಜಟಾಪಟಿ ನಡೆಯಿತು.

clashes-between-minister-v-somanna-and-ishwar-khandre
ವಸತಿ ಸಚಿವ ವಿ.ಸೋಮಣ್ಣ-ಈಶ್ವರ್ ಖಂಡ್ರೆ ಮಧ್ಯೆ ವಾಕ್ಸಮರ!

ಬೆಂಗಳೂರು: ವಸತಿ ಯೋಜನೆ ವಿಚಾರವಾಗಿ ವಿಧಾನಸಭೆಯಲ್ಲಿ ಸಚಿವ ವಿ. ಸೋಮಣ್ಣ ಮತ್ತು ಈಶ್ವರ್ ಖಂಡ್ರೆ ಮಧ್ಯೆ ಜಟಾಪಟಿ ನಡೆಯಿತು.

ವಸತಿ ಯೋಜನೆ ಅವ್ಯವಹಾರ: ವಿಧಾನಸಭೆಯಲ್ಲಿ ಸೋಮಣ್ಣ- ಖಂಡ್ರೆ ವಾಕ್ಸಮರ!

ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣ ವಂದನಾ ನಿರ್ಣಯ ಮೇಲೆ ಚರ್ಚೆ ವೇಳೆ ಮಾತನಾಡಿದ ಈಶ್ವರ್ ಖಂಡ್ರೆ, ವಸತಿ ಯೋಜನೆಯಲ್ಲಿ ಮಂಜೂರಾದ ಮನೆಗಳ ಅನುದಾನ ವಾಪಸ್ ಪಡೆಯಲಾಗಿದೆ. ವೈಯಕ್ತಿಕ ದ್ವೇಷದಿಂದ, ದುರುದ್ದೇಶಪೂರಿತವಾಗಿ ಈ ರೀತಿ ಮಾಡಲಾಗುತ್ತಿದೆ ಎಂದು ಆರೋಪಿಸಿದರು.

ಇದಕ್ಕೆ ತಿರುಗೇಟು ನೀಡಿದ ಸಚಿವ ವಿ. ಸೋಮಣ್ಣ, ಭಾಲ್ಕಿ ವಿಧಾನಸಭಾ ಕ್ಷೇತ್ರದಲ್ಲಿ ಯೋಜನೆಯಲ್ಲಿ ಅಕ್ರಮ ನಡೆದಿದೆ. ಶಾಸಕರೇ ವಸತಿ ಮಂಜೂರಾತಿ ಆದೇಶವನ್ನು ಫಲಾನುಭವಿಗಳಿಗೆ ನೀಡಿದ್ದಾರೆ. ಅನರ್ಹರು ವಸತಿ ಫಲಾನುಭವಿಗಳಾಗಿದ್ದಾರೆ‌. ಈ ಬಗ್ಗೆ ತನಿಖೆ ನಡೆಸಿ ಆರು ಜನ ಪಿಡಿಓಗಳನ್ನು ಅಮಾನತು ಮಾಡಲಾಗಿದೆ. ನಾನು ಬೀದರ್​ಗೆ ಹೋದಾಗ ಈ ಅವ್ಯವಹಾರದ ಮಾತು ಕೇಳಿಬಂತು. ಸಿಎಂ ತನಿಖೆ ನಡೆಸಲು ಸೂಚನೆ ನೀಡಿದರು. 17,000 ಮನೆಗಳನ್ನು ಏಕಕಾಲದಲ್ಲಿ ಮಂಜೂರಾತಿ ಮಾಡಲಾಗಿದೆ. 2017-18ನೇ ಸಾಲಿನಲ್ಲಿ ಚಿಂಚೋಡಿ ಗ್ರಾಮದಲ್ಲಿ ವ್ಯಕ್ತಿಯೊಬ್ಬರಿಗೆ ಶಾಸಕರ ಹೆಸರಲ್ಲಿ ಮನೆ ಮಂಜೂರಾತಿ ನೀಡಲಾಗಿದೆ ಎಂದರೆ ಏನರ್ಥ? ಇಒ ಕೊಡಬೇಕಾದ ಕಾರ್ಯಾದೇಶವನ್ನು ಶಾಸಕರೇ ಕೊಟ್ಟಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.

ಸಚಿವರ ಆರೋಪಕ್ಕೆ ಶಾಸಕ ಈಶ್ವರ್ ಖಂಡ್ರೆ ಕೆಂಡಾಮಂಡಲರಾದರು. ಸಚಿವರು ಸದನವನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ. ಸಚಿವರು ದುರುದ್ದೇಶಪೂರ್ವಕವಾಗಿ ಆರೋಪ ಮಾಡುತ್ತಿದ್ದಾರೆ. ವೈಯಕ್ತಿಕ ದ್ವೇಷದಿಂದ, ರಾಜಕೀಯ ವಿರೋಧಿಯಿಂದ ದೂರು ಪಡೆದುಕೊಂಡು ಕುತಂತ್ರದಿಂದ ಸುಳ್ಳು ವರದಿ ಸೃಷ್ಟಿಯಾಗಿದೆ. 17,000 ಮನೆ ಮಂಜೂರಾತಿ ಆಗಿದೆ. ತನಿಖೆ ನೆಪದಲ್ಲಿ ಯಾರಿಗೂ ಮನೆ ಕೊಡಬಾರದು ಎಂಬ ಹುನ್ನಾರ ನಡೆದಿದೆ. ಭ್ರಷ್ಟ ಅಧಿಕಾರಿ‌ ಮಹದೇವ ಪ್ರಸಾದ್ ಮೂಲಕ 17,000 ಮನೆ ಮಂಜೂರಾತಿ ಸಂಬಂಧ ತನಿಖೆ ನಡೆಸಿ, ವರದಿ ಸೃಷ್ಟಿಸಲಾಗಿದೆ ಎಂದು ತಿರುಗೇಟು ನೀಡಿದರು.

ನಾನೇ ಮಂಜೂರಾತಿ ಆದೇಶ ಕೊಟ್ಟಿದ್ದೇನೆ ಎಂದು ಆರೋಪಿಸಿದ್ದಾರೆ. ನಾನು ಮಂಜೂರಾತಿ ಆದೇಶ ಕೊಡುವುದಕ್ಕೆ ಆಗುತ್ತಾ? ನಾನು ಕೊಟ್ಟಿದ್ದು ಮಾಹಿತಿ ಪತ್ರ. ಸಚಿವರು ಸುಳ್ಳು ಹೇಳುತ್ತಿದ್ದಾರೆ. ಸಿಎಂರನ್ನೂ ದಾರಿ ತಪ್ಪಿಸಲಾಗುತ್ತಿದೆ. ಆದೇಶ ಪತ್ರ ಕೊಟ್ಟಿಲ್ಲ ಬದಲಾಗಿ ಮಾಹಿತಿ ಪತ್ರ ಕೊಟ್ಟಿದ್ದೇನೆ ಎಂದು ಸ್ಪಷ್ಟಪಡಿಸಿದರು.

ವಿಧಾನಸೌಧದ ಮುಂದೆ ಹ್ಯಾಂಗ್ ಮಾಡಿಕೊಳ್ಳುತ್ತೇನೆ:ಈ ಯೋಜನೆಯಲ್ಲಿ ನಾನು ಸಣ್ಣ ಅಪಚಾರವನ್ನೂ ಮಾಡಿಲ್ಲ. ಸಣ್ಣ ಅಪಚಾರ ಮಾಡಿದ್ರೂ ವಿಧಾನಸೌಧದ ಎದುರು ನೇಣು ಹಾಕಿಕೊಳ್ಳುತ್ತೇನೆ ಎಂದು ಸಚಿವ ವಿ. ಸೋಮಣ್ಣ ಹೇಳಿದರು.

ಸದನ ಸಮಿತಿ‌ ಮಾಡಿ, ಸತ್ಯ ಆಚೆ ಬರುತ್ತೆ. ನಾನು ಉದ್ದೇಶಪೂರ್ವಕವಾಗಿ ಏನಾದ್ರೂ ತಪ್ಪು ಮಾಡಿದ್ರೆ ಶಿಕ್ಷೆ ಕೊಡಿ. ಭಾಲ್ಕಿ ಕ್ಷೇತ್ರದಲ್ಲಿ ಶೇ 40ರಷ್ಟು ಯೋಗ್ಯರಲ್ಲದವರಿಗೆ ಮನೆ ಕೊಡಲಾಗಿದೆ. ನಾನು ದುರುದ್ದೇಶಪೂರ್ವಕ ಆರೋಪ ಮಾಡಿಲ್ಲ. ನಾನು ಯಾರಿಗೂ ಟೋಪಿ ಹಾಕಿಲ್ಲ, ನಾನು ತೆರೆದ ಪುಸ್ತಕ. ನಾನು ಉದ್ದೇಶಪೂರ್ವಕವಾಗಿ ತನಿಖೆ ಮಾಡುತ್ತಿದ್ದೇನೆ ಅಂದರೆ ರಾಜೀನಾಮೆ ನೀಡುತ್ತೇನೆ ಎಂದು ಸವಾಲು ಹಾಕಿದರು.

ನಾನು ರಾಜೀನಾಮೆ ನೀಡಲು ಸಿದ್ಧ:ನಾನು ಅಕ್ರಮದಲ್ಲಿ ಭಾಗಿಯಾಗಿದ್ದರೆ, ರಾಜೀನಾಮೆ ನೀಡುತ್ತೇನೆ. ಆರೋಪವನ್ನು ಸಾಬೀತು ಮಾಡಿ ಎಂದು ಈಶ್ಚರ್ ಖಂಡ್ರೆ ಸವಾಲು ಹಾಕಿದರು.

ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ. ಅರ್ಹರಿದ್ದವರಿಗೆ ಕಾಲಮಿತಿಯಲ್ಲಿ ಕಂತಿನ ಹಣ ಬಿಡುಗಡೆ ಮಾಡಬೇಕು ಎಂಬುದು ನನ್ನ ಒತ್ತಾಯ. 17,000 ಮನೆಗಳನ್ನು ಒಂದೇ ವರ್ಷದಲ್ಲಿ ಪಡೆದಿಲ್ಲ. ಮೂರು ವರ್ಷದಲ್ಲಿ ಅಂಬೇಡ್ಕರ್ ವಸತಿ ಯೋಜನೆ, ರಾಜೀವ್ ಗಾಂಧಿ ವಸತಿ ಯೋಜನೆ ಅಡಿಯಲ್ಲಿ ಪಡೆಯಲಾಗಿದೆ‌. ಮಂಜೂರಾತಿ ಪ್ರಕ್ರಿಯೆಯಲ್ಲಿ ನನ್ನ ಕೈವಾಡ ಇಲ್ಲ. ಎಲ್ಲವೂ ನಿಯಮಾವಳಿ ಪ್ರಕಾರ ನಡೆದಿದೆ. ಆನ್​​ಲೈನ್ ಪ್ರಕ್ರಿಯೆಯಂತೆ ನಡೆದಿದೆ. ಮಂಜೂರಾತಿ ಆದ ಮೇಲೆ ಮಧ್ಯವರ್ತಿಗಳಿಗೆ ದುಡ್ಡು ಕೊಡಬೇಡಿ ಎಂದು ಮಾಹಿತಿ ಪತ್ರ ಕೊಟ್ಟಿದ್ದು ತಪ್ಪಾ ಎಂದು ಪ್ರಶ್ನಿಸಿದರು. ಸದನ ಸಮಿತಿ ರಚನೆ ಮಾಡಲಿ, ಅಕ್ರಮಗಳಲ್ಲಿ ನನ್ನ ಪಾತ್ರ ಇದ್ದರೆ ರಾಜೀನಾಮೆ ನೀಡುತ್ತೇನೆ. ಇಲ್ಲಾಂದ್ರೆ ಸಚಿವರು ರಾಜೀನಾಮೆ ಕೊಡ್ತಾರಾ ಎಂದು ಸವಾಲು ಹಾಕಿದರು.

ಪರಸ್ಪರ ಆರೋಪ ಪ್ರತ್ಯಾರೋಪ ಹೆಚ್ಚಾಗುತ್ತಿದ್ದ ಹಾಗೇ ಮಧ್ಯಪ್ರವೇಶ ಮಾಡಿದ ರಮೇಶ್ ಕುಮಾರ್, ವೈಯಕ್ತಿಕ ಆರೋಪ ಮಾಡಬೇಡಿ. ವ್ಯಕ್ತಿತ್ವಕ್ಕೆ ಅಗೌರವ ಆಗುವ ರೀತಿಯಲ್ಲಿ ನಡೆದುಕೊಳ್ಳಬೇಡಿ ಎಂದು ಮನವಿ ಮಾಡಿದರು.

ಇಬ್ಬರ ಮಧ್ಯೆ ಜಟಾಪಟಿ ಮುಂದುವರಿದ ಹಿನ್ನೆಲೆ ಮಧ್ಯ ಪ್ರವೇಶಿಸಿದ ಸ್ಪೀಕರ್, ಇಲ್ಲಿ 224 ಸದಸ್ಯರಿದ್ದಾರೆ. ಬರೀ ನಿಮ್ಮ ಜಗಳ ನೋಡಲು ನಾನು ಇಲ್ಲಿ ಕೂತಿಲ್ಲ. ನಿಮ್ಮಿಬ್ಬರ ಆರೋಪ, ಪ್ರತ್ಯಾರೋಪದ ಬಗ್ಗೆ ತೀರ್ಪು ಕೊಡಲು ಆಗುತ್ತಾ ಎಂದು ಆಕ್ರೋಶ ವ್ಯಕ್ತಪಡಿಸಿದರು.

Last Updated : Feb 4, 2021, 8:12 PM IST

ABOUT THE AUTHOR

...view details