ಕರ್ನಾಟಕ

karnataka

ವರಿಷ್ಠರು ಹೇಳಿದಾಗ ಸಂಪುಟ ವಿಸ್ತರಣೆ, ಪಕ್ಷ ಹೇಳಿದಾಗ ನಿಗಮ ಮಂಡಳಿ ನೇಮಕಾತಿ : ಸಿಎಂ ಬೊಮ್ಮಾಯಿ

By

Published : Jan 24, 2022, 11:50 AM IST

ಸಂಪುಟದಲ್ಲಿ ನಾಲ್ಕು ಸ್ಥಾನಗಳು ಖಾಲಿ ಇವೆ. ಹಾಗಾಗಿ, ಆಕಾಂಕ್ಷಿಗಳು ಸಚಿವರಾಗಬೇಕು ಎಂದುಕೊಳ್ಳುವುದು ಸಹಜ. ಯಾವಾಗ ಸಂಪುಟ ವಿಸ್ತರಣೆ ಮಾಡಬೇಕು, ಯಾವ ರೀತಿ ಮಾಡುವುದು ಎಂದು ಪಕ್ಷದ ವರಿಷ್ಠರ ಗಮನದಲ್ಲಿದೆ. ನಾನು ಕೂಡ ಪಕ್ಷದ ವರಿಷ್ಠರ ಗಮನಕ್ಕೆ ಇದನ್ನು ಮತ್ತೊಮ್ಮೆ ತರುತ್ತಿದ್ದೇನೆ..

ಬಸವರಾಜ ಬೊಮ್ಮಾಯಿ
ಬಸವರಾಜ ಬೊಮ್ಮಾಯಿ

ಬೆಂಗಳೂರು: ವರಿಷ್ಠರು ಹೇಳಿದಾಗ ರಾಜ್ಯ ಸಚಿವ ಸಂಪುಟ ವಿಸ್ತರಣೆ ಮಾಡುತ್ತೇನೆ. ನಿಗಮ ಮಂಡಳಿ ನೇಮಕದ ಕುರಿತು ಯಾವುದೇ ಪ್ರಸ್ತಾವನೆ ನನ್ನ ಮುಂದಿಲ್ಲ. ಪಕ್ಷದ ನಾಯಕರು ಈ ಬಗ್ಗೆ ಚರ್ಚಿಸುತ್ತಾರೆ. ಅವರ ವರದಿಯನುಸಾರ ನೇಮಕಾತಿ ಕುರಿತು ಕ್ರಮ ವಹಿಸಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.

ತಮ್ಮ ಆರ್.ಟಿ ನಗರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಪುಟದಲ್ಲಿ ನಾಲ್ಕು ಸ್ಥಾನಗಳು ಖಾಲಿ ಇವೆ. ಹಾಗಾಗಿ, ಆಕಾಂಕ್ಷಿಗಳು ಸಚಿವರಾಗಬೇಕು ಎಂದುಕೊಳ್ಳುವುದು ಸಹಜ, ಅದರಲ್ಲಿ ತಪ್ಪೇನಿಲ್ಲ.

ಯಾವಾಗ ಸಂಪುಟ ವಿಸ್ತರಣೆ ಮಾಡಬೇಕು, ಯಾವ ರೀತಿ ಮಾಡುವುದು ಎಂದು ಪಕ್ಷದ ವರಿಷ್ಠರ ಗಮನದಲ್ಲಿದೆ. ನಾನು ಕೂಡ ಪಕ್ಷದ ವರಿಷ್ಠರ ಗಮನಕ್ಕೆ ಇದನ್ನು ಮತ್ತೊಮ್ಮೆ ತರುತ್ತಿದ್ದೇನೆ. ವರಿಷ್ಠರು ಯಾವಾಗ ನಮ್ಮನ್ನ ಕರೆದು ಮಾತನಾಡುತ್ತಾರೋ ಆ ಸಂದರ್ಭದಲ್ಲಿ ನಾನು ಎಲ್ಲ ವಿವರಗಳನ್ನು ಕೊಡಲಿದ್ದೇನೆ. ಅವರು ಹೇಳಿದಾಗ ಸಂಪುಟ ವಿಸ್ತರಣೆ ಮಾಡುತ್ತೇನೆ ಎಂದರು.

ಸಂಪುಟ ವಿಸ್ತರಣೆ ಕುರಿತಂತೆ ಸುದ್ದಿಗಾರರೊಂದಿಗೆ ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡಿರುವುದು..

ನಿಗಮ ಮಂಡಳಿ ನೇಮಕಾತಿ ಕುರಿತು ಪಕ್ಷದಲ್ಲಿ ಚರ್ಚೆಯಾಗಬೇಕು. ಪಕ್ಷದಲ್ಲಿ ಚರ್ಚೆಯಾದ ತಕ್ಷಣವೇ ನೇಮಕಾತಿ ಮಾಡಲಾಗುತ್ತದೆ. ಪಕ್ಷದಲ್ಲಿ ಯಾವಾಗ ಚರ್ಚೆಯಾಗುತ್ತದೆಯೋ ಅದರ ಮೇಲೆ ನೇಮಕಾತಿ ನಿರ್ಧಾರ ಅವಲಂಬನೆಯಾಗುತ್ತದೆ. ನಳಿನ್ ಕುಮಾರ್ ಕಟೀಲ್ ಸೇರಿದಂತೆ ಎಲ್ಲರೂ ಕುಳಿತು ಚರ್ಚೆ ಮಾಡುತ್ತಾರೆ.

ಅದರ ಆಧಾರದಲ್ಲಿ ನಾವು ಮುಂದುವರೆಯುತ್ತೇವೆ. ಸದ್ಯ ನನ್ನ ಮುಂದೆ ನಿಗಮ-ಮಂಡಳಿ ನೇಮಕಾತಿ ಸಂಬಂಧ ಯಾವುದೇ ಪ್ರಸ್ತಾವನೆ ಇಲ್ಲ, ಪಕ್ಷದವರು ಅದನ್ನು ನೋಡುತ್ತಿದ್ದಾರೆ. ಅವರು ಪರಾಮರ್ಶೆ ಮಾಡಿ ವರದಿ ಕೊಡಲಿದ್ದಾರೆ. ಅದರ ಆಧಾರದಲ್ಲಿ ಮುಂದುವರೆಯುತ್ತೇವೆ ಎಂದರು.

ಓದಿ:ಹೆಂಡ್ತಿ ಇದ್ದರೂ ನಾದಿನಿ ಮೇಲೆ ಕಣ್ಣಾಕಿ ಅಪಹರಿಸಿದ್ದ ಭೂಪನ ಬಂಧನ

ನಾಳೆಯಿಂದ ಮೂರು ದಿನ ಬಿಜೆಪಿ ಕಚೇರಿಯಲ್ಲಿ ಸಭೆ ಇದೆ, ಬಿಬಿಎಂಪಿ ವಿಚಾರದಲ್ಲಿ ಸಭೆ ನಡೆಯಲಿದೆ. ಬೇರೆ ಇನ್ಯಾವುದೇ ವಿಚಾರದ ಕುರಿತ ಸಭೆ ಇಲ್ಲ, ಇದಕ್ಕೂ ಸಂಪುಟ ವಿಸ್ತರಣೆ, ನಿಗಮ ಮಂಡಳಿ ನೇಮಕಕ್ಕೂ ಯಾವುದೇ ಸಂಬಂಧ ಇಲ್ಲ ಎಂದರು.

ನಾಳೆ ಬಜೆಟ್ ಸಿದ್ಧತಾ ಸಭೆ :ಬಜೆಟ್ ಸಿದ್ಧತಾ ಕಾರ್ಯ ಆರಂಭವಾಗಿದೆ. ಕಳೆದ ಡಿಸೆಂಬರ್ ತಿಂಗಳಲ್ಲಿಯೇ ಆಂತರಿಕ ಸಭೆಗಳನ್ನು ನಡೆಸಿದ್ದೇನೆ. ಹಣಕಾಸು ಇಲಾಖೆ ಸೇರಿ ಆದಾಯ ಬರುವ ಇಲಾಖೆಗಳ ಜೊತೆ ಸಭೆ ನಡೆಸಿ ಟಾರ್ಗೆಟ್ ಮುಟ್ಟಲು ಏನೆಲ್ಲ ಕ್ರಮಗಳನ್ನು ಕೈಗೊಳ್ಳಬೇಕೋ ಅದನ್ನು ಕೈಗೊಳ್ಳುವಂತೆ ಸೂಚನೆ ಕೊಟ್ಟಿದ್ದೇನೆ.

ಕೊರೊನಾ ಹಿನ್ನೆಲೆಯಲ್ಲಿ ಮತ್ತೆ ಸಭೆ ಕರೆದಿರಲಿಲ್ಲ. ಈಗ ಜನವರಿ 25ರಂದು ಮತ್ತೊಂದು ಸಭೆ ಮಾಡುತ್ತೇನೆ. ಹಣಕಾಸು ಇಲಾಖೆ ಜೊತೆ ಚರ್ಚಿಸಿ ನಂತರ ಎಲ್ಲ ಇಲಾಖೆಗಳ ಪ್ರಸ್ತಾವನೆ ಬಗ್ಗೆ ಸುದೀರ್ಘ ಚರ್ಚೆ ಮಾಡಿ, ಸಂಘ-ಸಂಸ್ಥೆಗಳ ಬಗ್ಗೆ ಚರ್ಚೆ ಮಾಡಿ ಬಜೆಟ್ ಸಿದ್ಧತೆ ಮಾಡಲಾಗುತ್ತದೆ ಎಂದರು.

ಕತ್ತಿ ರಹಸ್ಯ ಸಭೆ ಮಾಹಿತಿ ಇಲ್ಲ :ಬೆಳಗಾವಿಯಲ್ಲಿ ಉಮೇಶ್ ಕತ್ತಿ ನಿವಾಸದಲ್ಲಿ ರಹಸ್ಯ ಸಭೆ ನಡೆದಿರುವ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ, ನನಗೆ ಆ ಬಗ್ಗೆ ಏನೂ ಗೊತ್ತಿಲ್ಲ, ನಾಯಕರು ಹಲವಾರು ಸಂದರ್ಭದಲ್ಲಿ ಸೇರುತ್ತಾರೆ. ಅದನ್ನೇ ಸಭೆ ಎಂದು ವ್ಯಾಖ್ಯಾನಿಸುವುದು ಸರಿಯಲ್ಲ. ಕಾಂಗ್ರೆಸ್ ಪಕ್ಷದ ಹಲವಾರು ನಾಯಕರು ಬೇರೆ ಬೇರೆ ಕಡೆ ಸೇರುತ್ತಾರೆ. ಅದೇ ರೀತಿ ಬಿಜೆಪಿಯವರು ಸೇರುತ್ತಾರೆ. ಇದೇನು ಹೊಸದಲ್ಲ, ನಮ್ಮಲ್ಲಿ ಯಾವುದೇ ಗೊಂದಲ ಇಲ್ಲ ಎಂದು ಬಿಜೆಪಿ ಗುಂಪುಗಾರಿಕೆ ಆರಂಭ ಕುರಿತಾದ ವಿಷಯವನ್ನು ಸಿಎಂ ತಳ್ಳಿ ಹಾಕಿದರು.

ಓದಿ:ಲಸಿಕೆ ಹಾಕಿಸಿಕೊಳ್ಳದವರಿಗೆ ಕೋವಿಡ್​​ನಿಂದ ಹೆಚ್ಚು ನಷ್ಟ: WHO ಎಚ್ಚರಿಕೆ

ಉಡುಪಿ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ ವಿಚಾರ ಕುರಿತು ಶಿಕ್ಷಣ ಸಚಿವರಿಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲು ಸೂಚನೆ ನೀಡಿದ್ದೇನೆ. ಅವರೇ ಈ ಬಗ್ಗೆ ನಿರ್ಧಾರ ಮಾಡಲಿದ್ದಾರೆ ಎಂದರು.

ಆರು ತಿಂಗಳ ಸಾಧನಾ ಹೊತ್ತಿಗೆ ಬಿಡುಗಡೆ :ನಾನು ಅಧಿಕಾರಕ್ಕೆ ಬಂದು ಜನವರಿ 28ಕ್ಕೆ ಆರು‌ ತಿಂಗಳಾಗಲಿದೆ. ಪತ್ರಿಕಾಗೋಷ್ಠಿ ಮಾಡಿ ನಾನು ಎಲ್ಲ ವಿವರ ನೀಡುತ್ತೇನೆ. ನಾವು ಆರು ತಿಂಗಳಲ್ಲಿ ಏನೆಲ್ಲಾ ನಿರ್ಧಾರ ಮಾಡಿದ್ದೇವೆ?, ಏನಿಲ್ಲ ಎನ್ನುವ ಎಲ್ಲಾ ವಿವರಗಳನ್ನು ಒಂದು ಪುಸ್ತಕದ ರೂಪದಲ್ಲಿ ನಾವು ಬಿಡುಗಡೆ ಮಾಡುತ್ತೇವೆ ಎಂದರು.

ಕಾಂಗ್ರೆಸ್ ಪಾದಯಾತ್ರೆ ಕುರಿತು ಪ್ರತಿಕ್ರಿಯೆ ನೀಡಿದ ಸಿಎಂ, ಅವರವರ ಪಕ್ಷದವರು ಅವರವರ ನಿರ್ಣಯ ಮಾಡಿಕೊಳ್ಳುತ್ತಾರೆ. ನಾನು ಅದಕ್ಕೆ ಯಾವುದೇ ಪ್ರತಿಕ್ರಿಯೆ ಮಾಡುವುದಿಲ್ಲ ಎಂದರು.

ಕೊರೊನಾ ಬಗ್ಗೆ ಈಗಾಗಲೇ ಕೆಲವು ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ವೀಕೆಂಡ್ ಕರ್ಫ್ಯೂ ವಾಪಸ್ ಪಡೆಯಲಾಗಿದೆ. ಈಗ ಕೋವಿಡ್ ಯಾವ ರೀತಿ ಹರಡುತ್ತಿದೆ, ಸ್ಥಿತಿಗತಿ ಏನು ಎಂದು ಎಲ್ಲವನ್ನು ಕೂಡ ನಾವು ನೋಡಬೇಕಾಗಿದೆ. ಎಲ್ಲ ಆಯಾಮದಲ್ಲಿಯೂ ಪರಿಶೀಲಿಸಿ, ಅಧ್ಯಯನ ಮಾಡಿ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ABOUT THE AUTHOR

...view details