ಬೆಂಗಳೂರು: ರಾಜ್ಯ ನೋಂದಣಿ ಹಾಗೂ ಮುದ್ರಾಂಕ ಇಲಾಖೆಯ ಸಬ್ ರಿಜಿಸ್ಟಾರ್ಗಳು ಕಾವೇರಿ ವೆಬ್ ಸೈಟ್ ತಿರುಚಿ ಅಕ್ರಮ ಎಸಗಿದ್ದಾರೆ ಎಂದು ಇಲಾಖೆಯ ಮಹಾ ನಿರೀಕ್ಷಕ ಡಾ.ಕೆ.ವಿ ತ್ರಿಲೋಕ್ ಚಂದ್ರ ದೂರು ನೀಡಿದ ಬೆನ್ನಲೇ ತನಿಖೆ ಚುರುಕುಗೊಳಿಸಿರುವ ಸಿಸಿಬಿ ಪೊಲೀಸರು ದಾಸನಪುರ ಹಾಗೂ ಲಗ್ಗೆರೆಯಲ್ಲಿರುವ ಸಬ್ ರಿಜಿಸ್ಟರ್ ಕಚೇರಿಗಳ ಮೇಲೆ ಇಂದು ದಾಳಿ ನಡೆಸಿದ್ದಾರೆ.
ದಾಳಿಯಲ್ಲಿ ಮಹತ್ವದ ದಾಖಲಾತಿಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ. ಅಲ್ಲದೇ, ಈವರೆಗೂ ಮುದ್ರಾಂಕ ಇಲಾಖೆಯ ಮುಖ್ಯ ಕಚೇರಿಯ ಐದು ಹಾಗೂ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಸಬ್ ರಿಜಿಸ್ಟ್ರಾರ್ ಕಚೇರಿಯ ಎರಡು ಸೇರಿ ಒಟ್ಟು ಏಳು ಕಂಪ್ಯೂಟರ್ಗಳನ್ನು ವಶಕ್ಕೆ ಪಡೆದು ಸೈಬರ್ ಲ್ಯಾಬ್ಗೆ ಕಳುಹಿಸಲಾಗಿದೆ. ಇಂದು ಎರಡು ಸಬ್ ರಿಜಿಸ್ಟ್ರಾರ್ ಕಚೇರಿಗಳ ಮೇಲೆ ದಾಳಿ ನಡೆಸಲಾಗಿದ್ದು, ಮುಂದಿನ ದಿನಗಳಲ್ಲಿ ಹಲವು ಉಪ ನೋಂದಣಿ ಕಚೇರಿಗಳ ಮೇಲೆ ದಾಳಿ ನಡೆಸಲಾಗುವುದು ಎಂದು ಸಿಸಿಬಿ ಡಿಸಿಪಿ ರವಿಕುಮಾರ್ ತಿಳಿಸಿದ್ದಾರೆ.
ಕಾವೇರಿ ಜಾಲತಾಣದಲ್ಲಿ ಆನ್ಲೈನ್ ಮೂಲಕ ಆಸ್ತಿ ನೋಂದಣಿ ಮಾಡಿಕೊಳ್ಳಬಹುದು. ಕೃಷಿ ಜಮೀನು ಅಭಿವೃದ್ಧಿಪಡಿಸಿ ಭೂ ಪರಿವರ್ತನೆ ಮಾಡಿಕೊಳ್ಳದೆ ರೆವಿನ್ಯೂ ಸೈಟ್ಗಳಾಗಿ ನೋಂದಣಿ ಮಾಡಿಕೊಳ್ಳುವುದು ಕಾನೂನು ಬಾಹಿರ. ರೆವಿನ್ಯೂ ಸೈಟ್ಗಳನ್ನು ನೋಂದಣಿ ಮಾಡಲು ಅಕ್ರಮವಾಗಿ ದಾಖಲೆಗಳನ್ನು ಅಪ್ಲೋಡ್ ಮಾಡುವುದಲ್ಲದೇ, ಕಾವೇರಿ ವೆಬ್ ಸೈಟ್ಅನ್ನು ತಮಗೆ ಬೇಕಾದ ರೀತಿಯಲ್ಲಿ ತಿರುಚಿದ ಆರೋಪದಡಿ 11 ಮಂದಿ ಸಬ್ ರಿಜಿಸ್ಟ್ರಾರ್ಗಳ ವಿರುದ್ಧ ತ್ರಿಲೋಕ್ ಚಂದ್ರ ಅವರು ಅ.18 ರಂದು ನಗರ ಸೈಬರ್ ಠಾಣೆಗೆ ದೂರು ನೀಡಿದ್ದರು. 2018 ರ ಡಿ.7 ರಿಂದ 18 ರ ನಡುವೆ ಕಾವೇರಿ ವೆಬ್ ಸೈಟ್ ತಿರುಚಲಾಗಿದೆ. ಅನುಮಾನದ ಮೇರೆಗೆ ಹಿರಿಯ ಅಧಿಕಾರಿಗಳು ಪರಿಶೀಲಿಸಿದಾಗ ಅಕ್ರಮ ಎಸಗಿರುವುದು ಗೊತ್ತಾಗಿದೆ. ಈ ಮೂಲಕ ಕೋಟ್ಯಂತರ ರೂ.ತೆರಿಗೆ ವಂಚಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು.