ಬೆಂಗಳೂರು :ರಾಜ್ಯದ ಎಲ್ಲ ಪ್ರಾದೇಶಿಕ ವಲಯಗಳಲ್ಲಿ ಕ್ಯಾನ್ಸರ್ ಚಿಕಿತ್ಸಾ ಕೇಂದ್ರವನ್ನು ಪ್ರಾರಂಭಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ವಿಶ್ವ ಕ್ಯಾನ್ಸರ್ ದಿನದ ಅಂಗವಾಗಿ ಬೆಂಗಳೂರಿನ ಉತ್ತರಹಳ್ಳಿಯಲ್ಲಿ ಆಯೋಜಿಸಲಾಗಿದ್ದ ಜನಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿದ ಸಿಎಂ ಬೊಮ್ಮಾಯಿ, ಇದೇ ವೇಳೆ 'ಆರೈಕೆಯ ಅಂತರವನ್ನು ಕಡಿತಗೊಳಿಸಿ' ಎಂಬ ಘೋಷ ವಾಕ್ಯವನ್ನು ಬಿಡುಗಡೆ ಮಾಡಿದರು.
ಅಗ್ಗದ ದರದಲ್ಲಿ ಪೆಟ್ ಸ್ಕ್ಯಾನ್ ಪರೀಕ್ಷೆ: ಉದ್ಘಾಟನೆ ಬಳಿಕ ಮಾತನಾಡಿದ ಬೊಮ್ಮಾಯಿ, ಕಿದ್ವಾಯಿ ಸಂಸ್ಥೆಯ ಆಧುನೀಕರಣಕ್ಕಾಗಿ ಎರಡು ಪೆಟ್ ಸ್ಕ್ಯಾನ್ ಮೆಷಿನ್ ಖರೀದಿಗೆ ಕ್ರಮ ಕೈಗೊಳ್ಳಲಾಗಿದೆ.
ಕ್ಯಾನ್ಸರ್ ರೋಗವನ್ನು ಪತ್ತೆಹಚ್ಚುವ ಪೆಟ್ ಸ್ಕ್ಯಾನ್ ಪರೀಕ್ಷೆ ಖಾಸಗಿ ಆಸ್ಪತ್ರೆಯಲ್ಲಿ 25,000 ರೂ.ಗಳವರೆಗೆ ವೆಚ್ಚವಾಗುತ್ತದೆ. ಬಡರೋಗಿಗಳಿಗೆ ಸಹಾಯ ಒದಗಿಸುವ ಉದ್ದೇಶದಿಂದ ಸರ್ಕಾರ ಈ ದುಬಾರಿ ಸ್ಕ್ಯಾನ್ ಸೌಲಭ್ಯವನ್ನು ಕೇವಲ 8 ರಿಂದ 10 ಸಾವಿರ ರೂ.ಒಳಗೆ ನೀಡಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.
'ಆರೈಕೆಯ ಅಂತರವನ್ನು ಕಡಿತಗೊಳಿಸಿ' ಎಂಬ ಘೋಷ ವಾಕ್ಯ ಬಿಡುಗಡೆ ಮಾಡಿದ ಸಿಎಂ ಬೊಮ್ಮಾಯಿ ಜನೌಷಧಿ ಕೇಂದ್ರದಲ್ಲಿ ಕ್ಯಾನ್ಸರ್ ಔಷಧಿ ಲಭ್ಯತೆಗೆ ಚಿಂತನೆ :ಕ್ಯಾನ್ಸರ್ ಚಿಕಿತ್ಸೆಯ ದುಬಾರಿ ಔಷಧಿಗಳನ್ನು ಜನಸಾಮಾನ್ಯರಿಗೆ ಕೈಗೆಟಕುವ ದರದಲ್ಲಿ ಲಭ್ಯವಾಗಿಸಲು ಸಂಬಂಧಪಟ್ಟ ತಯಾರಿಕಾ ಸಂಸ್ಥೆ ಹಾಗೂ ಕೇಂದ್ರ ಸರ್ಕಾರದ ಚರ್ಚಿಸಿ ಕ್ರಮಕೈಗೊಳ್ಳಲಾಗುವುದು.
ಜನೌಷಧಿ ಕೇಂದ್ರಗಳಲ್ಲಿ ಕ್ಯಾನ್ಸರ್ ಔಷಧಿಗಳು ಸುಲಭ ದರದಲ್ಲಿ ದೊರಕಿಸಿಕೊಡಲು ಚಿಂತನೆ ನಡೆಸಲಾಗಿದೆ. ಇಡೀ ರಾಜ್ಯದಲ್ಲಿ ಅಗ್ಗದ ದರದಲ್ಲಿ ಕ್ಯಾನ್ಸರ್ ಔಷಧಿಗಳನ್ನು ಪೂರೈಸುವ ಸೊಸೈಟಿಯನ್ನು ಸ್ಥಾಪಿಸುವ ಯೋಜನೆಯಿದೆ.
ಕ್ಯಾನ್ಸರ್ ಹಾಗೂ ಇನ್ನಿತರ ಸಾಂಕ್ರಾಮಿಕ ರೋಗಗಳ ಬಗ್ಗೆ ಜಾಗೃತಿ ಕಾರ್ಯಕ್ರಮಗಳೂ ಸೇರಿದಂತೆ ಆರೋಗ್ಯ ಮೂಲಸೌಕರ್ಯವನ್ನು ತಾಲ್ಲೂಕು ಮಟ್ಟದಿಂದ ಅಭಿವೃದ್ಧಿ ಮಾಡುವ ಮೂಲಕ ಆರೋಗ್ಯ ಕರ್ನಾಟಕದ ನಿರ್ಮಾಣಕ್ಕೆ ಸರ್ಕಾರ ಬದ್ಧವಾಗಿದೆ ಎಂದು ಸಿಎಂ ಮಾಹಿತಿ ನೀಡಿದರು.
ವಿಶ್ವ ಕ್ಯಾನ್ಸರ್ ದಿನದ ಅಂಗವಾಗಿ ಆಯೋಜಿಸಲಾಗಿದ್ದ ಜನಜಾಗೃತಿ ಕಾರ್ಯಕ್ರಮ ಉದ್ಘಾಟನೆ ಸ್ತನ ಕ್ಯಾನ್ಸರ್ ಬಗ್ಗೆ ಜಾಗೃತಿ ಅಭಿಯಾನ:ಮಹಿಳೆಯರಲ್ಲಿ ಕಾಣಿಸಿಕೊಳ್ಳುವ ಸ್ತನ ಕ್ಯಾನ್ಸರ್ ಸೇರಿದಂತೆ ಯಾವುದೇ ರೀತಿಯ ಕ್ಯಾನ್ಸರ್ ಗೆ ಚಿಕಿತ್ಸೆ ಇದ್ದು, ಯಾರೂ ದೃತಿಗೆಡಬೇಕಾಗಿಲ್ಲ. ಚಿಕಿತ್ಸೆಯ ನಂತರ ಆರೋಗ್ಯಕರ ಜೀವನವನ್ನು ನಡೆಸಬಹುದಾಗಿದೆ. ತಾಲ್ಲೂಕು ಮಟ್ಟದ ಆಸ್ಪತ್ರೆಯಿಂದ ಹಿಡಿದು ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಯವರಗೆಗೂ ಒಂದು ವರ್ಷಗಳ ಕಾಲ, ಮಹಿಳೆಯರಲ್ಲಿ ಕಾಣಿಸಿಕೊಳ್ಳುವ ಸ್ತನ ಕ್ಯಾನ್ಸರ್ ನಿವಾರಣೆಯ ಬಗ್ಗೆ ಜಾಗೃತಿ ಅಭಿಯಾನ ಹಾಗೂ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.
ಸಮೃದ್ಧ ಹಾಗೂ ಸದೃಢ ರಾಜ್ಯ ನಿರ್ಮಾಣ: ಸಮೃದ್ಧ ಹಾಗೂ ಸದೃಢ ರಾಜ್ಯ ನಿರ್ಮಾಣವಾಗಲು ಆರೋಗ್ಯವಂತ ಕರ್ನಾಟಕ ಬಹಳ ಮುಖ್ಯ. ಶೈಕ್ಷಣಿಕ ಹಾಗೂ ಆರೋಗ್ಯ ಕ್ಷೇತ್ರದ ಅಭಿವೃದ್ಧಿಗೆ ಸರ್ಕಾರ ವಿಶೇಷ ಗಮನ ಹರಿಸಲಿದೆ. ಜನರನ್ನು ಸರ್ವರೀತಿಯಲ್ಲೂ ಸಶಕ್ತಗೊಳಿಸಿ ಕರ್ನಾಟಕದ ವಿಕಾಸದಲ್ಲಿ ಪಾಲುದಾರರಾಗುವಂತೆ ಮಾಡಲಾಗುವುದು. ಸಮುದಾಯ ಹಾಗೂ ಸರ್ಕಾರ ಒಟ್ಟುಗೂಡಿ ಕ್ಯಾನ್ಸರ್ ಪೀಡೆಯನ್ನು ಸಮಾಜದಿಂದ ದೂರವಾಗಿಸಬಹುದು. ಜಾಗೃತಿ ಅಭಿಯಾನ ಈ ಉದ್ದೇಶದ ಈಡೇರಿಕೆಗೆ ಪೂರಕವಾಗಲಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಸಿಎಂಗೆ ಸನ್ಮಾನ ಕ್ಯಾನ್ಸರ್ ಗೆದ್ದ ಮಹಿಳೆಯ ಆತ್ಮಸ್ಥೈರ್ಯವನ್ನು ಪ್ರಶಂಸಿದ ಸಿಎಂ :ಕಳೆದ 10 ರಿಂದ 12 ವರ್ಷಗಳಿಂದ ಧ್ವನಿಪಟಲದ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಮಹಿಳೆಯೊಬ್ಬರು ಚಿಕಿತ್ಸೆಯ ನಂತರ ಮಾತನಾಡಬಲ್ಲವರಾಗಿದ್ದಾರೆ. ಮಾನಸಿಕವಾಗಿ ಗಟ್ಟಿಯಾಗಿದ್ದ ಮಹಿಳೆ, ತಮ್ಮ ಕ್ಯಾನ್ಸರ್ ನ ಅನುಭವಗಳನ್ನು, ಮನೋಬಲವನ್ನು ಹಾಗೂ ಧೂಮಪಾನದ ಅಪಾಯಗಳು ಹಾಗೂ ಕ್ಯಾನ್ಸರ್ ಅನ್ನು ತಡೆಗಟ್ಟಬಹುದಾದ ಬಗೆಯ ಕುರಿತು ಆತ್ಮಸ್ಥೈರ್ಯದಿಂದ ಕಾರ್ಯಕ್ರಮದಲ್ಲಿ ಮಾತನಾಡಿದನ್ನು ಮುಖ್ಯಮಂತ್ರಿಗಳು ಪ್ರಶಂಸಿದರು.