ಬೆಂಗಳೂರು: ಪಿಎಸ್ಐ ಪರೀಕ್ಷಾ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ನಮ್ಮ ಸಹೋದರ ಸತೀಶ್ ಅವರ ಮೇಲೆ ಆರೋಪ ಮಾಡಿದಾರಲ್ಲ, ಸಾಕ್ಷ್ಯ ಕೊಟ್ಟಿದ್ದಾರಾ?. ಇದೊಂದು ಮ್ಯಾಚ್ ಫಿಕ್ಸಿಂಗ್ ಎಂದು ಸಚಿವ ಅಶ್ವತ್ಥ್ ನಾರಾಯಣ್ ತಿಳಿಸಿದ್ದಾರೆ.
ವಿಕಾಸಸೌಧದಲ್ಲಿ ಮಾತನಾಡಿದ ಅವರು, ನಮ್ಮ ಕುಟುಂಬದಲ್ಲಿ ಭ್ರಷ್ಟಾಚಾರ ಪದ್ಧತಿ, ಅಧಿಕಾರ ದುರ್ಬಳಕೆ ಪದ್ಧತಿ ಇಲ್ಲ. ನಮ್ಮದು ಡಿಕೆಶಿ ಕುಟುಂಬ ಅಲ್ಲ, ಇದೆಲ್ಲ ಪದ್ಧತಿ ಇರೋದಿಕ್ಕೆ. ನಾವು ಸಹಾಯ ಮಾಡ್ತೀವಿ ಅಂತ ಒಬ್ಬೇ ಒಬ್ಬರಿಗೂ ಹೇಳಿಲ್ಲ. ಪಿಎಸ್ಐ ನೇಮಕಾತಿ ವಿಚಾರದಲ್ಲಿ ಯಾವುದೇ ವ್ಯಕ್ತಿಗೂ ಶಿಫಾರಸು, ನೆರವು ಕೊಡೋ ಪ್ರಶ್ನೆ ಉದ್ಭವಿಸಲ್ಲ ಎಂದು ಡಿಕೆಶಿಗೆ ಸಚಿವ ಅಶ್ವತ್ಥ್ ನಾರಾಯಣ ತಿರುಗೇಟು ನೀಡಿದರು.
ಈ ಆರೋಪ ಮಾಡಿರೋರು ಸ್ಪಷ್ಟತೆ ಕೊಡಲಿ. ಯಾವುದನ್ನೂ ಸ್ಪಷ್ಟವಾಗಿ ಹೇಳುತ್ತಿಲ್ಲ. ಇರಬಹುದು, ಮಾಡಿರಬಹುದು, ಅವರ ತಮ್ಮ ಇರಬಹುದು ಅಂತಿದ್ದಾರೆ. ಹೇಳಿಕೆ ಸ್ಪಷ್ಟವಾಗಿ ಇರಲಿ. ಮಸಿ ಬಳಿಯಲು ಹೇಳೋದು ಬೇಡ. ಹೆಸರು ಹೇಳದೇ ಸುಳ್ಳು ಆರೋಪ ಮಾಡಲಾಗಿದೆ. ಗಾಳಿಯಲ್ಲಿ ಗುಂಡು ಹೊಡೆದಿದ್ದಾರೆ ಕೈ ನಾಯಕರು. ಸಂಪೂರ್ಣ ದುರುದ್ದೇಶದ ಹೇಳಿಕೆ ಕೊಟ್ಟಿದ್ದಾರೆ. ನಿರಾಧಾರ ಹೇಳಿಕೆ, ಸುಳ್ಳು ಹೇಳಿಕೆ ಕೊಟ್ಟಿದ್ದಾರೆ. ಇದೊಂದು ಷಡ್ಯಂತ್ರವಾಗಿದೆ ಎಂದು ಸಚಿವರು ವಾಗ್ದಾಳಿ ನಡೆಸಿದ್ದಾರೆ.
ನನ್ನ ರಾಜಕೀಯ ಬೆಳವಣಿಗೆ ಸಹಿಸದೇ ಸುಳ್ಳು ಆರೋಪ ಮಾಡಲಾಗಿದೆ. ತನಿಖೆಯ ವರದಿ ಬರಲಿ, ಉಪ್ಪು ತಿಂದೋನು ನೀರು ಕುಡಿದೇ ಕುಡೀತಾನೆ. ಒಂದು ಹೇಳಿಕೆ ಕೊಡಲು ಧೈರ್ಯ, ಸ್ಥೈರ್ಯ ಬೇಕು. ಅವರ ನಿರಾಧಾರ ಹೇಳಿಕೆಗೆ ನನ್ನ ಪ್ರಯಿಕ್ರಿಯೆ ಕೇಳಿದ್ದೇ ತಪ್ಪು. ಶಿವಕುಮಾರ್ ಬಾಯಿಯಲ್ಲಿ ಹೇಳಿಕೆ ಬರುತ್ತೆ ಅಂದ್ರೆ ಅದರಲ್ಲಿ ದುರುದ್ದೇಶ ಇದೆ ಅಂತರ್ಥ. ಅಶ್ವತ್ಥ್ ನಾರಾಯಣ ಮುಖ್ಯಮಂತ್ರಿ ಆಗಿಬಿಡ್ತಾನೆ ಅನ್ನೋ ಭಯ ಇದೆ ಡಿಕೆಶಿಗೆ. ನಮ್ಮ ನಾಯಕತ್ವ, ಗುಣದ ಭಯ ಇರಲಿ ಅವರಿಗೆ ಎಂದು ಕಿಡಿಕಾರಿದರು.
ಇದನ್ನೂ ಓದಿ:ನಾವು ಗಂಡಸರಲ್ಲ, ಅವರೋಬ್ಬರೇ ಗಂಡಸರು. ಹೀಗಾಗಿ ನಮಗೆ ಭಯ ಆಗುತ್ತಿದೆ: ಡಿಕೆಶಿ