ಕರ್ನಾಟಕ

karnataka

'ಬರ್ನಿಂಗ್ ಸಿಸ್ಟಮ್' ತಂದು ಕಸದ ಸಮಸ್ಯೆ ಪರಿಹರಿಸಿ: ಸಚಿವ ನಾರಾಯಣಗೌಡ

By

Published : Sep 8, 2020, 7:56 PM IST

ಜರ್ಮನ್ ಟೆಕ್ನಾಲಜಿಯ ವ್ಯವಸ್ಥೆಯಲ್ಲಿ ಕಸವನ್ನು ಸುಟ್ಟರೆ ಕೆಟ್ಟವಾಸನೆ ಹಬ್ಬುವುದಿಲ್ಲ. ಹೀಗಾಗಿ, ಕಸದ ಸಮಸ್ಯೆ ಪರಿಹರಿಸಲು ಬರ್ನಿಂಗ್ ಸಿಸ್ಟಮ್ ಅಳವಡಿಸಬೇಕು ಎಂದು ಪೌರಾಡಳಿತ ಮತ್ತು ತೋಟಗಾರಿಕೆ ಇಲಾಖೆ ಸಚಿವ ನಾರಾಯಣಗೌಡ ಅಧಿಕಾರಿಗಳಿಗೆ ಸೂಚಿಸಿದರು‌.

Progress review meeting
ಪ್ರಗತಿ ಪರಿಶೀಲನಾ ಸಭೆ

ಬೆಂಗಳೂರು: ಕಸದ ಸಮಸ್ಯೆ ಪರಿಹರಿಸಲು ಬರ್ನಿಂಗ್ ಸಿಸ್ಟಮ್ ಅಳವಡಿಸಬೇಕು. ಇದರಿಂದ ಗ್ಯಾಸ್ ಹಾಗೂ ಎಲೆಕ್ಟ್ರಿಕಲ್ ಉತ್ಪಾದನೆ ಕೂಡ ಸಾಧ್ಯವಿದೆ‌. ಪೌರಾಡಳಿತ ಇಲಾಖೆ ವ್ಯಾಪ್ತಿಯಲ್ಲಿ ಇದು ಶೀಘ್ರವೇ ಜಾರಿಗೆ ಬರಬೇಕು ಎಂದು ಪೌರಾಡಳಿತ ಮತ್ತು ತೋಟಗಾರಿಕೆ ಇಲಾಖೆ ಸಚಿವ ನಾರಾಯಣಗೌಡ ಅಧಿಕಾರಿಗಳಿಗೆ ಸೂಚಿಸಿದರು‌.

ವಿಕಾಸಸೌಧದಲ್ಲಿ ಇ‌ಂದು ಸಂಜೆ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಕಸದ ಸಮಸ್ಯೆ ಪರಿಹರಿಸುವ ಸಂಬಂಧ ತೆಗೆದುಕೊಂಡಿರುವ ಕ್ರಮದ ಬಗ್ಗೆ ಮಾಹಿತಿ ಪಡೆದ ಸಚಿವರು, ಹಸಿ ಕಸವನ್ನು ಗೊಬ್ಬರ ಮಾಡಬಹುದು. ಆದರೆ, ಪ್ಲಾಸ್ಟಿಕ್ ಕಸ ಪರಿಸರಕ್ಕೆ ಮಾರಕ. ಅದನ್ನು ತಡೆಗಟ್ಟಲು ಬರ್ನಿಂಗ್ ಸಿಸ್ಟಮ್ ಉತ್ತಮ ಮಾರ್ಗ. ಜರ್ಮನ್ ಟೆಕ್ನಾಲಜಿಯ ವ್ಯವಸ್ಥೆಯಲ್ಲಿ ಬರ್ನಿಂಗ್ ಮಾಡಿದರೆ ಕೆಟ್ಟವಾಸನೆ ಕೂಡ ಹರಡಲ್ಲ. ಜೊತೆಗೆ ವಿದ್ಯುತ್ ಹಾಗೂ ಗ್ಯಾಸ್ ಉತ್ಪಾದನೆಗೂ ಸಹಕಾರಿ. ಯಾವ ರೀತಿಯಲ್ಲಿ ಕಾರ್ಯರೂಪಕ್ಕೆ ತರಬಹುದು ಎಂದು ಯೋಜನೆ ರೂಪಿಸಿ ಎಂದು ಅಧಿಕಾರಿಗಳಿಗೆ ತಿಳಿಸಿದರು.

ಕೇರಳದಿಂದ ಬಂದು ಚಾಮರಾಜನಗರದಲ್ಲಿ ತ್ಯಾಜ್ಯ ಸುರಿದು ಹೋಗುತ್ತಿದ್ದಾರೆ. ಅದಕ್ಕೆ ಅವಕಾಶ ಕೊಡಬಾರದು. ತಕ್ಷಣ ಅದನ್ನು ತಡೆಗಟ್ಟಬೇಕು. ಹಸಿ ಕಸ ಗೊಬ್ಬರ ಮಾಡುವ ಬಗ್ಗೆಯೂ ಒಂದು ಸ್ಥಳ ನಿಗದಿ ಮಾಡಬೇಕು. ರಾಜ್ಯದ ಎಲ್ಲ ಕಡೆಯಲ್ಲೂ ಈ ವ್ಯವಸ್ಥೆ ಜಾರಿಗೆ ಬರಲಿ. ಅದಕ್ಕಿಂತ ಮುಂಚಿತವಾಗಿ ಬರ್ನಿಂಗ್ ಸಿಸ್ಟಮ್ ಅಳವಡಿಸುವ ಬಗ್ಗೆ ನೀಲನಕ್ಷೆ ರೂಪಿಸಿ ಎಂದು ಹೇಳಿದರು.

ಅವೈಜ್ಞಾನಿಕ ಬಾಡಿಗೆ ದರ:ರಾಜ್ಯದಲ್ಲಿ ಪೌರಾಡಳಿತ ಇಲಾಖೆ ಅಡಿಯಲ್ಲಿರುವ ವಾಣಿಜ್ಯ ಮಳಿಗೆಗಳಿಗೆ ಅವೈಜ್ಞಾನಿಕ ಬಾಡಿಗೆ ಇದೆ. ಆದರೆ, ಬಹಿರಂಗ ಹರಾಜಿನಲ್ಲಿ ವಾಣಿಜ್ಯ ಮಳಿಗೆ ಪಡೆದವರು ಇದನ್ನು ದುಪ್ಪಟ್ಟು ಬಾಡಿಗೆಗೆ ಬೇರೆಯವರಿಗೆ ನೀಡಿದ್ದಾರೆ. ಹೀಗಾಗಿ, ಸರ್ಕಾರಕ್ಕೆ ಬರಬೇಕಾದ ಬಾಡಿಗೆ ಹಣ ಮದ್ಯವರ್ತಿಗಳ ಪಾಲಾಗುತ್ತಿದೆ. ಎಲ್ಲ ಕಡೆ ಸ್ಥಳೀಯ ಮಾರುಕಟ್ಟೆ ದರಕ್ಕೆ ಅನುಗುಣವಾಗಿ ಮಳಿಗೆಗೆ ಕನಿಷ್ಠ ಬಾಡಿಗೆ ನಿಗದಿ ಮಾಡಬೇಕು‌ ಎಂದರು.

ಕೆಲವು ಕಡೆ ಮನಬಂದಂತೆ ಹರಾಜು ಕೂಗುತ್ತಾರೆ. ತಿಂಗಳ ಬಾಡಿಗೆ 40-50 ಸಾವಿರಕ್ಕೆ ಹರಾಜು ಕೂಗುತ್ತಾರೆ‌. ಯಾರೂ ಬಂದಿಲ್ಲ ಎಂಬ ನೆಪವೊಡ್ಡಿ ನಾಲ್ಕಾರು ಸಾವಿರ ನಿಗದಿಪಡಿಸಿ ತಮ್ಮವರಿಗೇ ಮಳಿಗೆಯನ್ನು ಬಾಡಿಗೆಗೆ ನೀಡಿರುವ ಉದಾಹರಣೆಗಳಿವೆ. ಇದಕ್ಕೆಲ್ಲ ಕಡಿವಾಣ ಹಾಕಬೇಕು ಎಂದು ಸಚಿವರು ಸೂಚಿಸಿದರು.

ತೆರಿಗೆ ಸಂಗ್ರಹ ಕೂಡ ಸರಿಯಾದ ರೀತಿಯಲ್ಲಿ ಆಗಬೇಕು. ಪ್ರತಿ ವರ್ಷ ಸ್ಥಳೀಯ ಮಾರುಕಟ್ಟೆಗೆ ಅನುಗುಣವಾಗಿ ಪರಿಷ್ಕರಣೆ ಕೂಡ ಆಗಬೇಕು. ಆ ನಿಟ್ಟಿನಲ್ಲಿ ಅಧಿಕಾರಿಗಳು ಗಮನ ಹರಿಸಿ ಎಂದು ಸಭೆಯಲ್ಲಿ ಅವರು ಹೇಳಿದರು. ಸಭೆಯಲ್ಲಿ ಇಲಾಖೆ ಕಾರ್ಯದರ್ಶಿ ರವಿಶಂಕರ್, ನಿರ್ದೇಶಕಿ ಕಾವೇರಿ ಹಾಗೂ ಮತ್ತಿತರ ಅಧಿಕಾರಿಗಳು ಇದ್ದರು.

ABOUT THE AUTHOR

...view details