ಕರ್ನಾಟಕ

karnataka

ಮಲ್ಲಿಕಾರ್ಜುನ ಖರ್ಗೆ ದಲಿತ ವಿರೋಧಿ ನಾಯಕ: ಟ್ವೀಟ್ ಮೂಲಕ ಬಿಜೆಪಿ ವಾಗ್ದಾಳಿ

By

Published : Apr 2, 2021, 7:48 PM IST

ಮಲ್ಲಿಕಾರ್ಜುನ ಖರ್ಗೆ ಅವರನ್ನು ದಲಿತ ವಿರೋಧಿ ನಾಯಕ. ದಕ್ಷಿಣ ಭಾರತದ ರಾಜಕೀಯದ ಬಗ್ಗೆ ಮಾತನಾಡುವ ನೀವು ಕಲ್ಯಾಣ ಕರ್ನಾಟಕಕ್ಕೆ ಏನು ಮಾಡಿದ್ದೀರಿ?, ಸಾಕಷ್ಟು ಅಧಿಕಾರ ಅನುಭವಿಸಿದ ಮೇಲೂ ಮೀಸಲು ಕ್ಷೇತ್ರವನ್ನು ಮಗನಿಗೆ ಧಾರೆ ಎರೆಯುವುದೇಕೆ ? ಎಂದು ಖರ್ಗೆ ಅವರನ್ನು ಬಿಜೆಪಿ ಪ್ರಶ್ನಿಸಿದೆ.

BJP tweet against mallikarjun kharge
BJP tweet against mallikarjun kharge

ಬೆಂಗಳೂರು: ಕಾಂಗ್ರೆಸ್​ನ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ದಲಿತ ವಿರೋಧಿ ನಾಯಕ ಎಂದು ಬಿಜೆಪಿ ಟೀಕಿಸಿದ್ದು ಸರಣಿ ಟ್ವೀಟ್ ಮೂಲಕ ಖರ್ಗೆ ವಿರುದ್ಧ ವಾಗ್ದಾಳಿ ನಡೆಸಿದೆ.

ದಕ್ಷಿಣ ಭಾರತದ ರಾಜಕೀಯದ ಬಗ್ಗೆ ಮಾತನಾಡುವ ನೀವು ಕಲ್ಯಾಣ ಕರ್ನಾಟಕಕ್ಕೆ ಏನು ಮಾಡಿದ್ದೀರಿ?, ದಲಿತರ ಬಗ್ಗೆ ಕಾಳಜಿ ಇದ್ದರೆ ಚಿತ್ತಾಪುರ ಮೀಸಲು ಕ್ಷೇತ್ರದಲ್ಲಿ ಮುಂದಿನ ಬಾರಿ ನಿಮ್ಮ ಕುಟುಂಬದಿಂದ ಹೊರತಾದವರಿಗೆ ಅವಕಾಶ ನೀಡಿ. ಸಾಕಷ್ಟು ಅಧಿಕಾರ ಅನುಭವಿಸಿದ ಮೇಲೂ ಮೀಸಲು ಕ್ಷೇತ್ರವನ್ನು ಮಗನಿಗೆ ಧಾರೆ ಎರೆಯುವುದೇಕೆ ? ಎಂದು ಮಲ್ಲಿಕಾರ್ಜುನ ಖರ್ಗೆ ಅವರನ್ನು ಬಿಜೆಪಿ ಪ್ರಶ್ನಿಸಿದೆ.

ಕಲ್ಯಾಣ ಕರ್ನಾಟಕ ಭಾಗದಲ್ಲಿ ನೀವು ನಡೆಸಿದ ದುರಾಚಾರ, ಕುಟುಂಬ ಪೋಷಣೆಯ ಫಲವಾಗಿ ಸ್ವ ಕ್ಷೇತ್ರವನ್ನು ಉಳಿಸಿಕೊಳ್ಳುವುದಕ್ಕೂ ನಿಮ್ಮಿಂದ ಸಾಧ್ಯವಾಗಿಲಿಲ್ಲ. ದಕ್ಷಿಣ ಭಾರತದಲ್ಲಿ ಬಿಜೆಪಿ ಪ್ರವೇಶಿಸುವುದನ್ನು ತಡೆಯವ ಕನಸು ಕಾಣುತ್ತಿರುವುದು ಹಾಸ್ಯಾಸ್ಪದ. ಅಂಗಳ ಅಳೆಯಲು ಅಸಮರ್ಥರಾದವರು, ಆಕಾಶ ಅಳೆಯಲು ಮುಂದಾದಂತಾಯಿತು ಎಂದು ಖರ್ಗೆ ವಿರುದ್ಧ ಬಿಜೆಪಿ ಹರಿಹಾಯ್ದಿದೆ.

ಕಲ್ಯಾಣ ಕರ್ನಾಟಕದ ವಿರೋಧಿ ಮಲ್ಲಿಕಾರ್ಜುನ ಖರ್ಗೆ ಅವರೇ, ತಮಿಳುನಾಡಿನಲ್ಲಿ ಈಗಾಗಲೇ ಬಿಜೆಪಿ ಬೆಂಬಲಿತ ಸರ್ಕಾರವಿದೆ. ಪುದುಚೇರಿಯಲ್ಲಿ ಈ ಬಾರಿ ಬಿಜೆಪಿ ಜಯಭೇರಿ ಬಾರಿಸಲಿದೆ ಎಂದು ಸಮೀಕ್ಷೆಗಳು ಹೇಳುತ್ತಿವೆ. ಪುದುಚೇರಿಯಲ್ಲಿ ಕಾಂಗ್ರೆಸ್‌ ಶಾಶ್ವತವಾಗಿ ಬಾಗಿಲು ಮುಚ್ಚಲಿದೆ. ನಿಮ್ಮ ಪಕ್ಷವನ್ನು ಮೊದಲು ಉಳಿಸಿಕೊಳ್ಳಿ, ಮಾನವರಾರೂ ಚಿರಂಜೀವಿಗಳಲ್ಲ ಎಂದು ಟ್ವೀಟ್ ಮೂಲಕ ವಾಗ್ದಾಳಿ ನಡೆಸಿದೆ.

ನಮ್ಮದು ಒಂದು ಕುಟುಂಬದ ಹಿಡಿತದಲ್ಲಿರುವ ಪಕ್ಷವಲ್ಲ. ವಲಸೆ ನಾಯಕ ಸಿದ್ದರಾಮಯ್ಯ ಹಾಗೂ ಮಹಾನಾಯಕ ಡಿ.ಕೆ ಶಿವಕುಮಾರ್ ನಡುವೆ ಯುದ್ಧ ತಾರಕಕ್ಕೇರಿದೆ. ದಲಿತ ಶಾಸಕ ಅಖಂಡ ಅವರು ಪಕ್ಷದ ನೆರವು ಕೇಳಿದರೂ ಅವರ ವಿರುದ್ಧವೇ ನೋಟಿಸ್‌ ನೀಡುವ ಬೆದರಿಕೆ ಒಡ್ಡಿದ್ದೀರಿ. ಅಖಂಡಗೊಂದು ನ್ಯಾಯ, ಸೌಮ್ಯ ರೆಡ್ಡಿ, ಸಂಗಮೇಶ್‌ ಅವರಿಗೊಂದು ನ್ಯಾಯ ಎಂದು ಕಾಂಗ್ರೆಸ್ ನಡೆಯನ್ನು ಬಿಜೆಪಿ ಟೀಕಿಸಿದೆ.

ಇನ್ನು ಬರ,‌ ನೆರೆ, ಕೋವಿಡ್‌ ವಿಷಮ ಪರಿಸ್ಥಿತಿಯಲ್ಲೂ ಬಿಜೆಪಿ ಸರ್ಕಾರ ಉತ್ತಮ ಆಡಳಿತ ನೀಡಿದೆ. ಕಾಂಗ್ರೆಸ್‌ ಅಧಿಕಾರದಲ್ಲಿದ್ದಾಗ ಕರುಣಿಸಿದ ಭಾಗ್ಯಗಳಿವು ಎಂದು ಪಟ್ಟಿ ಮಾಡಿದ್ದು, ಅದರಲ್ಲಿ ಹಿಂದೂಗಳಿಗೆ ಹತ್ಯೆಯ ಭಾಗ್ಯ, ಅಲ್ಪಸಂಖ್ಯಾತರಿಗೆ ಶಾದಿ ಭಾಗ್ಯ, ಅಧಿಕಾರಿಗಳಿಗೆ ಆತ್ಮಹತ್ಯೆಯ ಭಾಗ್ಯ, ಜನತೆಯ ತಲೆಯ ಮೇಲೆ ಸಾಲದ ಹೊರೆಯ ಭಾಗ್ಯ ಎಂದು‌ ಬಿಜೆಪಿ ಸರಣಿ ಟ್ವೀಟ್ ಮೂಲಕ ವಾಗ್ದಾಳಿ ನಡೆಸಿದೆ.

ABOUT THE AUTHOR

...view details