ಬೆಂಗಳೂರು:ಹಲಾಲ್ ವಿವಾದಕ್ಕೆ ಸಂಬಂಧಿಸಿದಂತೆ ರಾಜ್ಯದಲ್ಲಿ ಚರ್ಚೆ ಮುಂದುವರಿದಿದೆ. ಹಲಾಲ್ ಅನ್ನು ಮತೀಯ ಉದ್ದೇಶಕ್ಕೆ ಬಳಸಿಕೊಳ್ಳಲಾಗುತ್ತಿದೆ. ಪಾಕಿಸ್ತಾನದಲ್ಲಿ ಬೇಕಾದರೆ ಹಲಾಲ್ ಮಾಡಿಕೊಳ್ಳಲಿ, ಇಲ್ಲಿ ಬೇಡ. ಹಲಾಲ್ ಇಲ್ಲದ ಮಾಂಸವನ್ನು ಮುಸ್ಲಿಮರು ತಿನ್ನಲ್ಲವಾದರೆ, ಆ ಮಾಂಸವನ್ನೇ ಖರೀದಿ ಮಾಡಬೇಡಿ ಎಂದು ಜಾಗೃತಿ ಮೂಡಿಸುವ ಅಧಿಕಾರ ಇನ್ನೊಬ್ಬರಿಗಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೇಳಿದ್ದಾರೆ.
ಮಲ್ಲೇಶ್ವರಂನಲ್ಲಿರುವ ರಾಜ್ಯ ಬಿಜೆಪಿ ಕಚೇರಿಯಲ್ಲಿ ನಡೆದ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಹಲಾಲ್ ಅಂದ್ರೇನು? ಅದರ ಉದ್ದೇಶ ಏನು? ಅದು ಎಲ್ಲಿ, ಯಾರಿಂದ ಶುರು ಆಯ್ತು?. ಉತ್ಪನ್ನಗಳಿಗೆ ಐಎಸ್ಐ ಸರ್ಟಿಫಿಕೆಟ್ ಯಾಕೆ ಕೊಡಲಾಗುತ್ತದೆ. ಇದನ್ನು ಸರ್ಕಾರ ಕೊಡುತ್ತದಾ? ಸರ್ಕಾರ ಕೊಡೋದಾದ್ರೆ ಯಾಕೆ ಕೊಡುತ್ತದೆ ಎಂಬುದಕ್ಕೆ ಉತ್ತರಿಸಬೇಕು ಎಂದರು.