ಕರ್ನಾಟಕ

karnataka

ಅನುಭವದ ಅಂಟಿಂದ ರಾಜಾಹುಲಿ ಕುರ್ಚಿ ಗಟ್ಟಿ.. ಉಡುಗಿದ 'ಭಿನ್ನ'ರಾಗ, ಸಂಪುಟ ವಿಸ್ತರಣೆ ದಾರಿ ಸರಾಗ!!

By

Published : Jan 11, 2021, 3:30 PM IST

ಯಡಿಯೂರಪ್ಪ ಅವರೇ ಈ ಅವಧಿ ಪೂರ್ಣಗೊಳಿಸಲಿದ್ದಾರೆ ಎಂದು ಸ್ಪಷ್ಟಪಡಿಸಿದ್ದರು. ಅಲ್ಲದೆ ನಾಯಕತ್ವ ಬದಲಾವಣೆ ಕುರಿತು, ಸಿಎಂ ವಿರುದ್ಧ ಟೀಕೆ ಮಾಡುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್​ಗೂ ಅರುಣ್ ಸಿಂಗ್ ಸ್ಪಷ್ಟ ಎಚ್ಚರಿಕೆ ನೀಡಿವ ಮೂಲಕ ಭಿನ್ನ ಧ್ವನಿ ಎತ್ತುವವರ ಬಾಯಿ ಮುಚ್ಚಿಸುವಲ್ಲಿ ಸಿಎಂ ಯಡಿಯೂರಪ್ಪ ಸಫಲರಾದರು..

bjp-high-command-gave-green-signal-for-cabinet-extension
ಯಡಿಯೂರಪ್ಪ

ಬೆಂಗಳೂರು :ಪದೇಪದೆ ನಾಯಕತ್ವ ಬದಲಾವಣೆ ಕೂಗು, ಸಂಪುಟ ವಿಸ್ತರಣೆ ಮುಂದೂಡಿಕೆಯಿಂದ ಹಿನ್ನೆಡೆ ಅನುಭವಿಸಿದ್ದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಕಡೆಗೂ ಈ ಬಾರಿ ಮೇಲುಗೈ ಸಾಧಿಸಿದಂತಿದೆ. ಮಾತು ಉಳಿಸಿಕೊಳ್ಳುವ ಸಿಎಂ ಆಶಯಕ್ಕೆ ಹೈಕಮಾಂಡ್ ಅಸ್ತು ಎಂದಿದೆ. ನಾಯಕತ್ವ ಬದಲಾವಣೆ ವಿಷಯಕ್ಕೆ ಬ್ರೇಕ್ ಹಾಕಿ, ಖಾಲಿ ಇರುವ ಎಲ್ಲಾ ಸಚಿವ ಸ್ಥಾನಗಳ ಭರ್ತಿಗೆ ಗ್ರೀನ್ ಸಿಗ್ನಲ್ ಸಿಕ್ಕಿದೆ.

ಅಧಿಕಾರಕ್ಕೆ ಬಂದ ದಿನದಿಂದಲೂ ಪದೇಪದೆ ಸಿಎಂ ವಿರುದ್ಧ ಹೇಳಿಕೆ ನೀಡಿ ನಾಯಕತ್ವ ಬದಲಾವಣೆ ಕೂಗು ಎಬ್ಬಿಸುವುದು ಹಾಗೂ ಎಷ್ಟು ಬಾರಿ ದೆಹಲಿಗೆ ಅಲೆದ್ರೂ ಸಂಪುಟ‌ ವಿಸ್ತರಣೆ ಬೇಡಿಕೆಗೆ ವರಿಷ್ಠರು ಒಪ್ಪಿಗೆ ನೀಡದಿರೋದು, ಇವೆರಡರಿಂದ ಯಡಿಯೂರಪ್ಪ ಸಾಕಷ್ಟು ಬಾರಿ ಇರಿಸುಮುರಿಸು ಅನುಭವಿಸುವಂತಾಗಿತ್ತು.

2019ರ ಜುಲೈ 26ಕ್ಕೆ ಮುಖ್ಯಮಂತ್ರಿ ಆಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದ ಯಡಿಯೂರಪ್ಪ, ನಂತರ ಮಂತ್ರಿ ಮಂಡಲ ರಚಿಸಲು ತಿಂಗಳು ಸಮಯ ತೆಗೆದುಕೊಳ್ಳಬೇಕಾಯಿತು. ಆಗಸ್ಟ್ 20 ರಂದು 17 ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದರು. ನಂತರ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಉಪ ಚುನಾವಣೆ ಎದುರಿಸಿ ಗೆದ್ದು ಬಂದವರಲ್ಲಿ 10 ಶಾಸಕರಿಗೆ 2ನೇ ಸಂಪುಟ ವಿಸ್ತರಣೆ ವೇಳೆ ಅವಕಾಶ ನೀಡಲಾಯಿತು.

ಫೆಬ್ರವರಿ 6 ರಂದು 10 ಶಾಸಕರು ಪ್ರಮಾಣ ವಚನ ಸ್ವೀಕರಿಸಿದರು. ಡಿಸಂಬರ್​ನಲ್ಲಿ ಗೆದ್ದವರೂ ಸಂಪುಟ ಸೇರಲು ತಿಂಗಳುಗಟ್ಟಲೆ ಕಾಯಬೇಕಾಯಿತು.‌ ಎರಡು ಮೂರು ಬಾರಿ ವರಿಷ್ಠರ ಸಂಪರ್ಕ ಮಾಡಿದ್ದ ಸಿಎಂ ಸಂಪುಟ ವಿಸ್ತರಣೆ ಕಸರತ್ತು ನಡೆಸಿದ್ದರು. ಆದರೆ, ಅಳೆದು ತೂಗಿ ನೋಡಿದ ಹೈಕಮಾಂಡ್ ಮೂಲ ಬಿಜೆಪಿಗರ ವಿಷಯಕ್ಕೆ ಕೈ ಹಾಕದಂತೆ ಸೂಚಿಸಿ ಕೇವಲ ವಲಸಿಗರಿಗೆ ಮಾತ್ರ ಅವಕಾಶ ಕಲ್ಪಿಸಲಾಯಿತು.

ಓದಿ-ಹೆತ್ತವರಿಗಾಗಿ ಗೀತಾ ಹುಡುಕಾಟ.. ಐದು ವರ್ಷದ ವನವಾಸಕ್ಕೆ ಅಂತ್ಯ ಯಾವಾಗ!?

2020ರ ಫೆಬ್ರವರಿ ನಂತರ ಸಂಪುಟ ವಿಸ್ತರಣೆಗೆ ಬರೋಬ್ಬರಿ 1 ವರ್ಷ ಕಾಯಬೇಕಾಯಿತು. ಎಂಟಿಬಿ ನಾಗರಾಜ್, ಆರ್.ಶಂಕರ್​ಗೆ ಪರಿಷತ್ ಸ್ಥಾನ ನೀಡಿದ ನಂತರ ಸಂಪುಟ ವಿಸ್ತರಣೆಗೆ ಸಿಎಂ ಸಾಕಷ್ಟು ಬಾರಿ ದೆಹಲಿಗೆ ಅಲೆದಾಡಿದ್ರೂ ಹೈಕಮಾಂಡ್ ನಾಯಕರು ಒಂದಲ್ಲ ಒಂದು ಕಾರಣ ಹೇಳಿ ವಾಪಾಸ್‌ ಕಳಿಸುತ್ತಿದ್ದರು. ಪ್ರತಿ ಬಾರಿಯೂ ಬಂದ ದಾರಿಗೆ ಸುಂಕವಿಲ್ಲ ಎನ್ನುವಂತೆ ಸಿಎಂ ಯಡಿಯೂರಪ್ಪ ಬರಿಗೈಲಿ ವಾಪಸ್ ಬರುತ್ತಿದ್ದರು.

ಹೈಕಮಾಂಡ್​ನ ಈ ಧೋರಣೆ ಸದ್ಯಕ್ಕೆ ಸಚಿವ ಸಂಪುಟ ವಿಸ್ತರಣೆ ಆಗಲ್ಲ ಎನ್ನುವ ಸ್ಥಿತಿಯೇ ಈ ಬಾರಿಯೂ ಇತ್ತು. ಸಂಕ್ರಾಂತಿ ನಂತರ ಬನ್ನಿ ಎಂದಿದ್ದ ವರಿಷ್ಠರು ಏಕಾಏಕಿ ಸಿಎಂ ಯಡಿಯೂರಪ್ಪರನ್ನು ದೆಹಲಿಗೆ ಕರೆಸಿಕೊಂಡರು. ಈ ಹಿಂದೆ ಯಾವಾಗ ಭೇಟಿ ನಡೆದರೂ ಕೆಲವೇ ನಿಮಿಷಗಳಿಗೆ ಸೀಮಿತವಾಗಿರುತ್ತಿದ್ದ ಭೇಟಿ, ಈ ಬಾರಿ ಸುದೀರ್ಘ 1 ಗಂಟೆ ನಡೆಯಿತು.

ಅಲ್ಲದೆ ಈ ಹಿಂದೆ ಪ್ರತ್ಯೇಕವಾಗಿ ನಾಯಕರನ್ನು ಭೇಟಿ ಮಾಡುತ್ತಿದ್ದ ಸಿಎಂ, ಈ ಬಾರಿ ಮಾತ್ರ ಕೇಂದ್ರ ಗೃಹ ಸಚಿವ ಅಮಿತ್ ಶಾ, ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ, ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಜೊತೆ ಒಟ್ಟಿಗೆ ಸಭೆ ನಡೆಸಿ ಎಲ್ಲವನ್ನೂ ಪರಿಹರಿಸಿಕೊಂಡಿದ್ದಾರೆ. ಪಟ್ಟುಹಿಡಿದು ಹಠ ಸಾಧಿಸಿದ್ದಾರೆ‌.

ಶಿವಮೊಗ್ಗ ಸಭೆ ಪ್ಲಸ್ ಪಾಯಿಂಟ್ :ಜನವರಿ ಆರಂಭದಲ್ಲಿ ಶಿವಮೊಗ್ಗದಲ್ಲಿ ನಡೆದ ಪಕ್ಷದ ರಾಜ್ಯ ಕಾರ್ಯಕಾರಿಣಿ ಸಭೆ, ವಿಶೇಷ ಸಭೆ, ಕೋರ್ ಕಮಿಟಿ ಸಭೆ ಯಡಿಯೂರಪ್ಪ ಪಾಲಿಗೆ ವರದಾನವಾಯಿತು. ಪದೇಪದೆ ನಾಯಕತ್ವ ಬದಲಾವಣೆ ಸುದ್ದಿ ಬರುತ್ತಿದ್ದ ಕುರಿತು ಸ್ವತಃ ರಾಜ್ಯ ಉಸ್ತುವಾರಿ ಸಿಂಗ್‌ ಅವರೇ ತೆರೆ ಎಳೆದರು.

ಯಡಿಯೂರಪ್ಪ ಅವರೇ ಈ ಅವಧಿ ಪೂರ್ಣಗೊಳಿಸಲಿದ್ದಾರೆ ಎಂದು ಸ್ಪಷ್ಟಪಡಿಸಿದ್ದರು. ಅಲ್ಲದೆ ನಾಯಕತ್ವ ಬದಲಾವಣೆ ಕುರಿತು, ಸಿಎಂ ವಿರುದ್ಧ ಟೀಕೆ ಮಾಡುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್​ಗೂ ಅರುಣ್ ಸಿಂಗ್ ಸ್ಪಷ್ಟ ಎಚ್ಚರಿಕೆ ನೀಡಿವ ಮೂಲಕ ಭಿನ್ನ ಧ್ವನಿ ಎತ್ತುವವರ ಬಾಯಿ ಮುಚ್ಚಿಸುವಲ್ಲಿ ಸಿಎಂ ಯಡಿಯೂರಪ್ಪ ಸಫಲರಾದರು.

ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆದಂತೆ ನಾಯಕತ್ವ ಬದಲಾವಣೆ ಮತ್ತು ಸಂಪುಟ ವಿಸ್ತರಣೆ ಎರಡೂ ವಿಚಾರದಲ್ಲಿಯೂ ಚಾಣಾಕ್ಷತನದಿಂದ ಹೆಜ್ಜೆ ಇಟ್ಟಿರುವ ಸಿಎಂ ಮೇಲುಗೈ‌ ಸಾಧಿಸಿದ್ದಾರೆ. ಆಕಾಂಕ್ಷಿಗಳಿಗೆ ಅವಕಾಶ ಹಾಗೂ ನಾಯಕತ್ವ ಬದಲಾವಣೆ ವಿವಾದಕ್ಕೆ ತೆರೆ ಎಳೆಯುವಲ್ಲಿ ಸಿಎಂ ಯಡಿಯೂರಪ್ಪ ಯಶಸ್ವಿಯಾಗಿದ್ದಾರೆ.

ABOUT THE AUTHOR

...view details