ಕರ್ನಾಟಕ

karnataka

ETV Bharat / city

ಬಿಜೆಪಿ ಸರ್ಕಾರ ರೈತರ ಸಮಸ್ಯೆಗಳಿಗೆ ಪರಿಹಾರ ನೀಡಿದೆ: ನಳಿನ್​ ಕಟೀಲ್

ಜಿಲ್ಲಾ ಪಂಚಾಯತ್, ವಿಧಾನಸಭೆ, ಲೋಕಸಭಾ ಚುನಾವಣೆಗಳು ಮುಂದಿನ 2 ವರ್ಷಗಳಲ್ಲಿ ನಡೆಯಲಿದ್ದು, ರಾಜಕೀಯ ಪಕ್ಷದ ಶಕ್ತಿ ಮತ್ತು ಅಸ್ತಿತ್ವ ತೋರಿಸಲು ಇವು ಮಹತ್ವದ ದಿನಗಳು. ಈ ಸಂದರ್ಭದಲ್ಲಿ ನಮ್ಮ ಶಕ್ತಿ ಮತ್ತು ಸಂಘಟನೆಯನ್ನು ತೋರಿಸಿಕೊಡಬೇಕು - ಬಿಜೆಪಿ ನಾಯಕರ ಕರೆ

By

Published : Jul 7, 2022, 8:01 PM IST

Farmers workshop was inaugurated by MP Nalin Kumar Kateel
ರೈತ ಕಾರ್ಯಾಗಾರವನ್ನು ಸಂಸದ ನಳಿನ್​ ಕುಮಾರ್​ ಕಟೀಲ್​ ಉದ್ಘಾಟಿಸಿದರು

ಬೆಂಗಳೂರು: ರೈತರು ಬೆಳೆದ ಉತ್ಪನ್ನಗಳಿಗೆ ಮಾರುಕಟ್ಟೆ ನಿರ್ಮಾಣ ಮಾಡಿದ್ದು, ರಾಜ್ಯದಲ್ಲಿ 1,093 ರೈತ ಉತ್ಪಾದಕ ಸಂಸ್ಥೆಗಳನ್ನು (ಎಫ್‍ಪಿಒ) ರಚಿಸಲಾಗಿದೆ. ಎಫ್‍ಪಿಒಗಳಿಗೆ ಕೇಂದ್ರ ಮತ್ತು ರಾಜ್ಯದ ಬಿಜೆಪಿ ಸರ್ಕಾರಗಳಿಂದ ಒಟ್ಟು ಸುಮಾರು 80 ಲಕ್ಷ ರೂಪಾಯಿ ನೀಡಲಾಗುತ್ತಿದೆ. ರೈತರ ವಾರ್ಷಿಕ ಆದಾಯ ದುಪ್ಪಟ್ಟುಗೊಳಿಸಲು ಪ್ರಧಾನಿಯವರು ದೃಢಸಂಕಲ್ಪ ಮಾಡಿದ್ದು, ಕಾರ್ಯ ಪ್ರವೃತ್ತರಾಗಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ.

ಬಿಜೆಪಿ ರಾಜ್ಯ ರೈತ ಮೋರ್ಚಾದ ವತಿಯಿಂದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ರೈತ ಉತ್ಪಾದಕ ಸಂಸ್ಥೆಗಳಿಗೆ ಇರುವ ಮಾರುಕಟ್ಟೆ ಅವಕಾಶಗಳು ಕುರಿತ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. ಬಿಜೆಪಿ ಸರ್ಕಾರ ರೈತರ ಸಮಸ್ಯೆಗಳಿಗೆ ಪರಿಹಾರ ನೀಡಿದೆ. ಕಿಸಾನ್ ಸಮ್ಮಾನ್ ಯೋಜನೆಯಡಿ ಕೇಂದ್ರ ಸರ್ಕಾರ ಆರು ಸಾವಿರ ರೂಪಾಯಿ ಮತ್ತು ರಾಜ್ಯದ ಯಡಿಯೂರಪ್ಪ-ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಸರ್ಕಾರಗಳು 4 ಸಾವಿರ ರೂಪಾಯಿ ನೆರವನ್ನು ಖಾತೆಗೆ ಜಮಾ ಮಾಡುತ್ತಿವೆ ಎಂದರು.

ರೈತರ ಕಾರ್ಯಾಗಾರದಲ್ಲಿ ನಳಿನ್​ ಕುಮಾರ್​ ಕಟೀಲ್​ ಮಾತನಾಡಿದರು.

ಕುರಿ, ಮೇಕೆ, ಕೋಳಿ, ಮೀನು ಸಾಕಣೆಗೆ 87 ಲಕ್ಷ ರೂ. ಸಾಲ ನೀಡಿ ಅದರಲ್ಲಿ 50 ಲಕ್ಷ ರೂಪಾಯಿ ಸಬ್ಸಿಡಿ ಕೊಡುವ ಯೋಜನೆ ಜಾರಿಯಲ್ಲಿದೆ. ಕೃಷಿಗೆ ಆದ್ಯತೆ ಕೊಡುವ ಅದ್ಭುತ ಕೆಲಸವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ. ರೈತರಿಗಾಗಿ ಫಸಲ್ ಬಿಮಾ ಯೋಜನೆ ಜಾರಿ ಮಾಡಿ, ಕಿಸಾನ್ ಸಮ್ಮಾನ್ ಯೋಜನೆ ಮೂಲಕ ರೈತರ ಖಾತೆಗಳಿಗೆ ನೇರವಾಗಿ ಹಣ ಹಾಕಿದ ಮೊದಲ ಪ್ರಧಾನಿ ನರೇಂದ್ರ ಮೋದಿಯವರು. ರೈತರ ಉತ್ಪನ್ನ ಶೇಖರಣೆಗೆ ಜಿಲ್ಲೆಗೊಂದು ಕೋಲ್ಡ್ ಸ್ಟೋರೇಜ್ ನಿರ್ಮಾಣಕ್ಕೆ ಅವರು ಆದ್ಯತೆ ಕೊಟ್ಟಿದ್ದಾರೆ ಎಂದು ಮಾಹಿತಿ ನೀಡಿದರು.

ಸಿಎಂ ಬಸವರಾಜ ಬೊಮ್ಮಾಯಿ ಅವರ ಸರ್ಕಾರವು ರೈತ ಸಮುದಾಯದ ವಿದ್ಯಾರ್ಥಿಗಳಿಗೆ ರೈತ ವಿದ್ಯಾನಿಧಿ ಯೋಜನೆಯನ್ನು ಜಾರಿಗೆ ತಂದಿದೆ. ಹಾಲು ಉತ್ಪಾದಕರಿಗಾಗಿ ಬ್ಯಾಂಕ್ ನಿರ್ಮಿಸಿದ್ದು, ಇವೆರಡು ಯೋಜನೆಗಳೂ ದೇಶದಲ್ಲೇ ಮೊದಲ ಬಾರಿಗೆ ಜಾರಿಯಾಗಿವೆ. ಹಾಲಿಗೆ ಯಡಿಯೂರಪ್ಪ ಅವರ ಸರ್ಕಾರ 4 ರೂಪಾಯಿ ಬೆಂಬಲ ಬೆಲೆ ನೀಡಿ ಹೈನುಗಾರರನ್ನು ಪ್ರೋತ್ಸಾಹಿಸಿದೆ ಎಂದು ವಿವರಿಸಿದರು.

ಯಂತ್ರೋಪಕರಣಗಳಿಗೆ ಸಹಾಯಧನ- ಸಹಕಾರ, ಮಾರ್ಗದರ್ಶನ ನೀಡಲಾಗುತ್ತಿದೆ. ರೈತರು ಪ್ರಯೋಗಶೀಲರಾಗಬೇಕು ಎಂದ ಕಟೀಲ್​, ದಕ್ಷಿಣ ಕನ್ನಡ ಜಿಲ್ಲೆಯ ರೈತರು ಹೆಚ್ಚು ಹೆಚ್ಚು ಪ್ರಯೋಗಶೀಲರಾಗಿರುವ ಕಾರಣ ಆ ಜಿಲ್ಲೆಯಲ್ಲಿ ರೈತರ ಆತ್ಮಹತ್ಯೆಯ ಪ್ರಕರಣಗಳು ದಾಖಲಾಗಿಲ್ಲ ಎಂದು ತಿಳಿಸಿದರು. ಬದಲಾವಣೆಯ ಅನ್ವೇಷಣೆ- ಹುಡುಕಾಟವೇ ಇದಕ್ಕೆ ಕಾರಣ ಎಂದರು.

ಬಿಜೆಪಿ ರೈತ ಮೋರ್ಚಾ ರಾಜ್ಯ ಅಧ್ಯಕ್ಷ ಮತ್ತು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅವರು ಮಾತನಾಡಿ, ರೈತರಿಗೆ ಉತ್ತಮ ಕಾರ್ಯಕ್ರಮಗಳ ಕುರಿತು ತಿಳಿಸಿ ರೈತರಲ್ಲಿ ಭರವಸೆ ತುಂಬುವ ಕಾರ್ಯವನ್ನು ರೈತ ಮೋರ್ಚಾ ಮಾಡುತ್ತಿದೆ. ನಮ್ಮ ಸರ್ಕಾರ ಯೋಜನೆಗಳ ಬಗ್ಗೆ ಮಾತನಾಡುವುವುದು ಮಾತ್ರವಲ್ಲ, ಯೋಜನೆಗಳನ್ನು ಕೆಳಹಂತದವರೆಗೆ ತಲುಪಿಸುವ ಕಾರ್ಯವನ್ನೂ ಮಾಡುತ್ತಿದೆ ಎಂದು ತಿಳಿಸಿದರು.

ಜಿಲ್ಲಾ ಪಂಚಾಯತ್, ವಿಧಾನಸಭೆ, ಲೋಕಸಭಾ ಚುನಾವಣೆಗಳು ಮುಂದಿನ 2 ವರ್ಷಗಳಲ್ಲಿ ನಡೆಯಲಿದ್ದು, ಭವಿಷ್ಯದಲ್ಲಿ ಸವಾಲು ಕಾದಿದೆ. ರಾಜಕೀಯ ಪಕ್ಷದ ಶಕ್ತಿ ಮತ್ತು ಅಸ್ತಿತ್ವ ತೋರಿಸಲು ಇವು ಮಹತ್ವದ ದಿನಗಳು. ಈ ಸಂದರ್ಭದಲ್ಲಿ ನಮ್ಮ ಶಕ್ತಿ ಮತ್ತು ಸಂಘಟನೆಯನ್ನು ತೋರಿಸಿಕೊಡಬೇಕು ಎಂದು ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಜಿ.ಕೆ.ವಿ.ಕೆ. ನಿವೃತ್ತ ಪ್ರಾಧ್ಯಾಪಕ ಡಾ.ಶ್ರೀಕಂಠಮೂರ್ತಿ, ವೆಂಕಟ್ ರೆಡ್ಡಿ, ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ಶಿವಪ್ರಸಾದ್ ಮತ್ತು ಗುರುಲಿಂಗ ಗೌಡರ, ರೈತ ಮೋರ್ಚಾ ಕಾರ್ಯದರ್ಶಿ ಡಾ ನವೀನ್ ಅವರು ಭಾಗವಹಿಸಿದ್ದರು.

ಇದನ್ನೂ ಓದಿ :'ನಮ್ಮ ಸರ್ಕಾರದಲ್ಲಿ ಅಕ್ರಮವಾಗಿದ್ದರೆ ಪ್ರತಿಪಕ್ಷ ಬಿಜೆಪಿ ಯಾಕೆ ಸುಮ್ಮನೆ ಕುಳಿತಿತ್ತು?'

ABOUT THE AUTHOR

...view details