ಕರ್ನಾಟಕ

karnataka

ETV Bharat / city

ಸಂಪುಟ ಸರ್ಕಸ್​​ಗೆ ಬೀಳದ ತೆರೆ.. ತಿಂಗಳಾಂತ್ಯಕ್ಕೆ ಬೊಮ್ಮಾಯಿ ಕ್ಯಾಬಿನೆಟ್​ ವಿಸ್ತರಣೆ?

ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಪಕ್ಷದ ರಾಷ್ಟ್ರೀಯ ನಾಯಕರ ಬಳಿ ಚರ್ಚಿಸಿದ ಬಳಿಕವೂ ರಾಜ್ಯ ಸಂಪುಟ ವಿಸ್ತರಣೆಗೆ ಕಾಲ ಕೂಡಿಬಂದಂತಿಲ್ಲ. ಈ ಮೂಲಕ ರಾಜ್ಯ ಸಂಪುಟ ವಿಸ್ತರಣೆ ಬಗ್ಗೆ ಬಳಿಕ ಹೇಳುವುದಾಗಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಸಿ ಎಂ ಬಸವರಾಜ ಬೊಮ್ಮಾಯಿಗೆ ಹೇಳಿದ್ದಾರೆ ಎನ್ನಲಾಗ್ತಿದೆ.

By

Published : Apr 18, 2022, 6:46 AM IST

bjp-executive-meeting-jp-nadda-present-in-the-meeting
ಸಂಪುಟ ಸರ್ಕಸ್ ಗೆ ಬೀಳದ ತೆರೆ:ತಿಂಗಳಾಂತ್ಯಕ್ಕೆ ವಿಸ್ತರಣೆ ಸಾಧ್ಯತೆ ?

ಬೆಂಗಳೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಇನ್ನೂ ಕಾಲ ಕೂಡಿ ಬಂದಿಲ್ಲ. ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಬಂದರೂ ಸಂಪುಟ ವಿಸ್ತರಣೆಗೆ ಮಾತ್ರ ತೆರೆ ಬಿದ್ದಿಲ್ಲ. ವಿಷಯ ಚರ್ಚೆಗೆ ಬಂದರೂ ದೆಹಲಿಗೆ ತೆರಳಿ ನಂತರ ಸಂದೇಶ ಕಳುಹಿಸಿಕೊಡುವ ಭರವಸೆಗಷ್ಟೇ ಸಿಎಂ ಬಸವರಾಜ ಬೊಮ್ಮಾಯಿ ತೃಪ್ತಿಪಡಬೇಕಾಗಿದೆ.

ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಭಾಗವಹಿಸಿದ್ದರಿಂದ ಅಲ್ಲಿಯೇ ಸಂಪುಟ ಸಂಕಷ್ಟಕ್ಕೆ ಪರಿಹಾರ ಸಿಗಲಿದೆ ಎನ್ನುವ ಸಿಎಂ ಬೊಮ್ಮಾಯಿ ಮತ್ತು ಸಚಿವ ಸ್ಥಾನದ ಆಕಾಂಕ್ಷಿಗಳಿಗೆ ಮತ್ತೆ ನಿರಾಸೆಯಾಗಿದೆ. ಯಾವುದೇ ಸ್ಪಷ್ಟ ಭರವಸೆ ನೀಡದೆ ಜೆ ಪಿ ನಡ್ಡಾ ನವದೆಹಲಿಗೆ ವಾಪಸಾಗಿದ್ದಾರೆ‌.

ರಾಜ್ಯ ಕಾರ್ಯಕಾರಿಣಿ ಸಭೆ ನಂತರ ಜೆ ಪಿ ನಡ್ಡಾ ಜೊತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತ್ಯೇಕವಾಗಿ ಮಾತುಕತೆ ನಡೆಸಿದ್ದಾರೆ. ‌ಸಚಿವ ಸಂಪುಟ ವಿಸ್ತರಣೆ ಕುರಿತು ಸಮಾಲೋಚನೆ ನಡೆಸಿದ್ದಾರೆ. ಈಶ್ವರಪ್ಪ ರಾಜೀನಾಮೆಯಿಂದ ಸಂಪುಟದಲ್ಲಿ ಐದು ಸ್ಥಾನಗಳು ಖಾಲಿ ಆದಂತಾಗಿದ್ದು, ಅವುಗಳ ಭರ್ತಿಗೆ ಅನುಮತಿ ನೀಡುವಂತೆ ನಡ್ಡಾಗೆ ಸಿಎಂ ಮನವಿ ಮಾಡಿದ್ದಾರೆ. ಆದರೆ ಆಕಾಂಕ್ಷಿಗಳ ಸಂಖ್ಯೆ ಎರಡು ಡಜನ್ ದಾಟಿದ್ದು, ದೆಹಲಿ ಪರೇಡ್ ಮಾಡುತ್ತಿರುವವರ ಸಂಖ್ಯೆಯೇ ಡಜನ್ ದಾಟಿದೆ. ಹಾಗಾಗಿ ತಕ್ಷಣಕ್ಕೆ ಯಾವ ನಿರ್ಧಾರ ಕೈಗೊಳ್ಳಬೇಡಿ ಎಂದು ನಡ್ಡಾ ಸೂಚನೆ ನೀಡಿ, ಬಳಿಕ ದೆಹಲಿಗೆ ತೆರಳಿ ಸಂದೇಶ ಕಳುಹಿಸುವ ಬಗ್ಗೆ ಭರವಸೆ ನೀಡಿದ್ದಾರೆ ಎನ್ನಲಾಗ್ತಿದೆ.

ಪಕ್ಷದ ಮೂಲಗಳ ಪ್ರಕಾರ ಸದ್ಯ ಸಂಪುಟ ಪುನಾರಚನೆ ಮಾಡದೆ ಖಾಲಿಯಿರುವ ಸ್ಥಾನಗಳನ್ನು ಭರ್ತಿ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ. ಈ ತಿಂಗಳ 22 ಅಥವಾ 25 ರಂದು ಸಂಪುಟ ವಿಸ್ತರಣೆಯಾಗುವ ಸಾಧ್ಯತೆ ಇದೆ ಎಂಬ ಮಾಹಿತಿ ಲಭ್ಯವಾಗಿದೆ.

ತಿಂಗಳಿಗೊಮ್ಮೆ ಕೋರ್ ಕಮಿಟಿ ಸಭೆ: ಪಕ್ಷ ಮತ್ತು ಸರ್ಕಾರದ ನಡುವೆ ಸಮನ್ವಯತೆ ಕೊರತೆ ಆಗದಂತೆ ನೋಡಿಕೊಳ್ಳಲು ಕನಿಷ್ಠ ತಿಂಗಳಿಗೆ ಒಮ್ಮೆಯಾದರೂ ಕೋರ್ ಕಮಿಟಿ ಸಭೆ ನಡೆಸಬೇಕು, ಸಾಧ್ಯವಾದಲ್ಲಿ 15 ದಿನಕ್ಕೊಮ್ಮೆ ನಡೆಸಿದರೂ ಒಳ್ಳೆಯದು. ಚುನಾವಣಾ ವರ್ಷವಾಗಿರುವ ಹಿನ್ನೆಲೆಯಲ್ಲಿ ಕೋರ್ ಕಮಿಟಿ ಸಭೆಯಲ್ಲಿ ಚರ್ಚಿಸಿಯೇ ಪ್ರಮುಖ ನಿರ್ಧಾರ ಕೈಗೊಳ್ಳಬೇಕು ಎಂದು ಪಕ್ಷ ಮತ್ತು ಸರ್ಕಾರ ಪ್ರತಿನಿಧಿಸುವ ನಾಯಕರಿಗೆ ಜೆ ಪಿ ನಡ್ಡಾ ಕಿವಿಮಾತು ಹೇಳಿದ್ದಾರೆ.

ಓದಿ :ಪ್ರಕರಣದ ತನಿಖೆ ಮುಗಿದ ಬಳಿಕವಷ್ಟೇ 402 ಪಿಎಸ್​ಐ ನೇಮಕಾತಿಗೆ ಪರೀಕ್ಷೆ: ಪ್ರವೀಣ್ ಸೂದ್

ABOUT THE AUTHOR

...view details