ಬೆಂಗಳೂರು: ಸನಾತನ ಧರ್ಮದ ಶ್ರೇಷ್ಠ ಧರ್ಮಗ್ರಂಥ ಭಗವದ್ಗೀತೆಯ ಎಲ್ಲ 700 ಶ್ಲೋಕಗಳನ್ನು ಕಂಠಪಾಠ ಮಾಡಿ, ಅದನ್ನು 2,200ಕ್ಕೂ ಹೆಚ್ಚು ಜನರು ಸಾಮೂಹಿಕವಾಗಿ ಹೇಳುವ ಜಾಗತಿಕ ಕಾರ್ಯಕ್ರಮ ಅಮೆರಿಕದ ಟೆಕ್ಸಾಸ್ ರಾಜ್ಯದ ಡಲ್ಲಾಸ್ನಲ್ಲಿ ಜರುಗಿದ್ದು, ಅಪರೂಪದ ಈ ಗೀತೆ ಗಾಯನ ಗಿನ್ನೆಸ್ ದಾಖಲೆ ಪುಟ ಸೇರಿದೆ.
ಮೈಸೂರಿನ ದತ್ತ ಪೀಠದ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರ ಮಾರ್ಗದರ್ಶನದಲ್ಲಿ ಇತ್ತೀಚೆಗೆ ಈ ಅಭೂತಪೂರ್ವ ಕಾರ್ಯಕ್ರಮ ನಡೆದಿದೆ. ಜಗತ್ತಿನ 30ಕ್ಕೂ ಅಧಿಕ ದೇಶಗಳ ಜನರು ಈ ಗಾಯನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಸನಾತನ ಧರ್ಮದ ವಿಶಿಷ್ಟ ಸಂದೇಶವನ್ನು ಜಗದಗಲಕ್ಕೆ ಪಸರಿಸುವ ಹಾಗೂ ಶ್ರೇಷ್ಠ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಂತಹ ನಿಟ್ಟಿನಲ್ಲಿ ನಡೆದಿರುವ ಪ್ರಯತ್ನದ ಭಾಗವಾಗಿ ಈ ಸಾಮೂಹಿಕ ಕಂಠಪಾಠ ಪಠಣ ನಡೆದಿದೆ.
ಪವಿತ್ರ ಧರ್ಮಗ್ರಂಥ ಭಗವದ್ಗೀತೆ. ಕೃಷ್ಣ ಪರಮಾತ್ಮ ಅರ್ಜುನನಿಗೆ ಕರ್ಮ, ಜ್ಞಾನದ ಕುರಿತಂತೆ ನೀಡಿದ ತಿಳುವಳಿಕೆಯ ಭಾಗವಾಗಿರುವ ಈ ಶ್ಲೋಕಗಳನ್ನು ಕಂಠಪಾಠ ಮಾಡುವುದು ನಂತರ ಭಗವದ್ಗೀತೆಯಲ್ಲಿ ತಿಳಿಸಿದ ಬೋಧನೆಯನ್ನೇ ಜೀವನದಲ್ಲೂ ಅಳವಡಿಸಿಕೊಂಡರೆ ಜೀವನ ಸಾರ್ಥಕವಾಗಿಬಿಡುತ್ತದೆ. ಮನೆ, ಮನ ಹಾಗೂ ದಿನನಿತ್ಯದ ಬದುಕಿನಲ್ಲಿ ಗೀತೆಯ ಸಾರವನ್ನು ಕಾಯಾ, ವಾಚಾ, ಮನಸಾ ಅನುಸರಿಸುವಂತಾಗಬೇಕು ಎನ್ನುವ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರ ಆಶಯದ ಫಲವಾಗಿ ಇಂತಹದೊಂದು ಪ್ರಯತ್ನ ಅಮೆರಿಕದಲ್ಲಿ ನಡೆದಿದೆ.
5ರಿಂದ 80ರ ವಯಸ್ಸಿನ ವಯೋವೃದ್ಧರು ಭಾಗಿ:ಡಲ್ಲಾಸ್ನ ಅಲೆನ್ ಈವೆಂಟ್ ಸೆಂಟರ್ನಲ್ಲಿ ಕಳೆದ ವಾರ ಸಾಮೂಹಿಕ ಗೀತಾ ಕಂಠಪಾಠ ಪಠಣ ಜರುಗಿದೆ. ಸ್ವಾಮೀಜಿ ಅವರ ಮಾರ್ಗದರ್ಶದನದಲ್ಲಿ ಭಗವದ್ಗೀತೆಯ ಎಲ್ಲ 18 ಅಧ್ಯಾಯಗಳ ಎಲ್ಲ 700 ಶ್ಲೋಕಗಳನ್ನು ಕಂಠಪಾಠ ಮಾಡಲಾಗಿತ್ತು. ಇದರ ಪ್ರಮಾಣಪತ್ರ ಪಡೆದಂತಹ 5 ವರ್ಷದಿಂದ 80 ವರ್ಷದೊಳಗಿನ 1,500 ಮಂದಿ ಹಾಗೂ ಭಗವದ್ಗೀತೆಯ ಎಲ್ಲಾ ಶ್ಲೋಕಗಳನ್ನು ಕಂಠಪಾಠ ಮಾಡಿ, ಪ್ರಮಾಣಪತ್ರ ಪಡೆಯಲು ಬಾಕಿ ಇರುವ 700ಕ್ಕೂ ಅಧಿಕ ಮಂದಿ ಈ ಮಹಾನ್ ಗೀತಾಯಜ್ಞದಲ್ಲಿ ಪಾಲ್ಗೊಂಡರು. ಜೊತೆಗೆ ಅವರ ಮನೆಯವರು, ಸ್ನೇಹಿತರ ಸಹಿತ 7 ಸಾವಿರಕ್ಕೂ ಅಧಿಕ ಜನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.