ಕರ್ನಾಟಕ

karnataka

By

Published : Feb 17, 2021, 5:29 AM IST

ETV Bharat / city

ರಾಜ್ಯದಲ್ಲಿ ಅಕ್ರಮ ಪಡಿತರ ಚೀಟಿ ಹಾವಳಿ: ಈವರೆಗೆ ಪತ್ತೆ ಮಾಡಿದ ಅಕ್ರಮ ಪಡಿತರ ಚೀಟಿ ಎಷ್ಟು ಗೊತ್ತಾ?

ಪತ್ತೆ ಹಚ್ಚಲಾದ ಈ ಅಕ್ರಮ ಪಡಿತರ ಚೀಟಿಗಳನ್ನು ರದ್ದು ಪಡಿಸಲಾಗಿದ್ದು, ಆರೋಪಿಗಳಿಂದ 1,04,41,996 ದಂಡವನ್ನು ವಸೂಲಿ‌ ಮಾಡಲಾಗಿದೆ.

ಅಕ್ರಮ ಪಡಿತರ ಚೀಟಿ
ಅಕ್ರಮ ಪಡಿತರ ಚೀಟಿ


ಬೆಂಗಳೂರು: ಅಕ್ರಮ ಪಡಿತರ ಚೀಟಿ ಮೂಲಕ ಅದೆಷ್ಟೋ ಮಂದಿ ಸರ್ಕಾರಿ ಸೌಲಭ್ಯಗಳನ್ನು ಪಡೆಯುತ್ತಿದ್ದಾರೆ. ಉಳ್ಳವರೇ ಬಿಪಿಎಲ್‌ ಕಾರ್ಡ್ ಪಡೆದು ಸರ್ಕಾರದ‌ ಬೊಕ್ಕಸಕ್ಕೆ ಕೋಟ್ಯಾಂತರ ರೂಪಾಯಿ ನಷ್ಟ ಮಾಡುತ್ತಿದ್ದಾರೆ. ರಾಜ್ಯದಲ್ಲಿನ ಅಕ್ರಮ ಪಡಿತರ ಚೀಟಿ ಹಾವಳಿ ಕುರಿತ ಸಮಗ್ರ ವರದಿ ಇಲ್ಲಿದೆ.

ಅಕ್ರಮ ಪಡಿತರ ಚೀಟಿ. ಇದು ರಾಜ್ಯದಲ್ಲಿ ದಶಕದಿಂದ ಕೇಳಿ ಬರುತ್ತಿರುವ ಅಕ್ರಮ. ಅಕ್ರಮವಾಗಿ ಪಡಿತರ ಚೀಟಿ ಪಡೆಯುವ ಮೂಲಕ ಸರ್ಕಾರಿ ಸೌಲಭ್ಯಗಳನ್ನು ಗಿಟ್ಟಿಸಿಕೊಳ್ಳುತ್ತಿದ್ದಾರೆ. ಆರ್ಥಿಕವಾಗಿ ಸದೃಢವಾಗಿರುವವರೇ ಬಿಪಿಎಲ್ ಕಾರ್ಡ್ ಪಡೆದು ವಂಚನೆ ಮಾಡುತ್ತಿದ್ದಾರೆ. ಆಹಾರ ಇಲಾಖೆಗೆ ತಪ್ಪು ಮಾಹಿತಿ ನೀಡಿ ಬಿಪಿಎಲ್ ಕಾರ್ಡ್ ಪಡೆಯುತ್ತಿದ್ದಾರೆ. ಇಂಥ ಬೋಗಸ್ ಪಡಿತರ ಕಾರ್ಡ್​ಗಳು ರಾಜ್ಯದಲ್ಲಿ ಅವ್ಯಾಹತವಾಗಿ ಚಾಲ್ತಿಯಲ್ಲಿದ್ದು, ಸರ್ಕಾರದ ಬೊಕ್ಕಸಕ್ಕೆ ಕನ್ನ ಹಾಕುತ್ತಿವೆ. ಪ್ರತಿ ಸರ್ಕಾರಗಳು ಈ ಬೋಗಸ್ ಬಿಪಿಎಲ್ ಕಾರ್ಡ್​ಗಳ ವಿರುದ್ಧ ಕಾರ್ಯಾಚರಣೆ ನಡೆಸುತ್ತಲೇ ಇರುತ್ತವೆ. ಆದರೆ, ಮತ್ತೆ ಮತ್ತೆ ಅಕ್ರಮ ಪಡಿತರ ಚೀಟಿಗಳ ಪ್ರಕರಣಗಳಿಗೆ ಬ್ರೇಕ್ ಹಾಕಲು ಮಾತ್ರ ಸಾಧ್ಯವಾಗಿಲ್ಲ.

ಅಕ್ರಮ ಪಡಿತರ ಚೀಟಿಗಳ ವಿವರ
ಅಕ್ರಮ ಪಡಿತರ ಚೀಟಿ ಹಾವಳಿ ಹೇಗಿದೆ?:ರಾಜ್ಯಾದ್ಯಂತ ಮೇ, 2019 ರಿಂದ ಮಾರ್ಚ್ 2020 ವರೆಗೆ ಸುಮಾರು 63,922 ಅನರ್ಹ ಪಡಿತರ ಚೀಟಿಗಳನ್ನು ಪತ್ತೆ ಮಾಡಲಾಗಿದೆ. ಈ ಅಕ್ರಮ ಪಡಿತರ ಚೀಟಿಗಳನ್ನು ಈಗಾಗಲೇ ರದ್ದು ಪಡಿಸಲಾಗಿದೆ. ಈ ಪೈಕಿ ಅತಿ ಹೆಚ್ಚು ಅಕ್ರಮ ಬಿಪಿಎಲ್ ಕಾರ್ಡ್ ಪತ್ತೆಯಾಗಿರುವುದು ಬೆಂಗಳೂರು ನಗರದಲ್ಲೇ.ಬೆಂಗಳೂರು ನಗರದಲ್ಲಿ 8308 ಅಕ್ರಮ ಪಡಿತರ ಚೀಟಿ ರದ್ದು ಪಡಿಸಲಾಗಿದೆ. ಇನ್ನು ವಿಜಯಪುದಲ್ಲಿ 6297 ಅಕ್ರಮ ಪಡಿತರವನ್ನು ರದ್ದುಪಡಿಸಲಾಗಿದೆ. ಇನ್ನುಳಿದಂತೆ ಚಿಕ್ಕಬಳ್ಳಾಪುರದಲ್ಲಿ, ಹಾಸನ, ಕೋಲಾರ, ಹಾವೇರಿ, ಶಿವಮೊಗ್ಗ, ಧಾರವಾಡ , ಬಳ್ಳಾರಿ, ಕಲಬುರ್ಗಿ, ಮೈಸೂರು, ಬೆಳಗಾವಿ, ಮಂಡ್ಯದಲ್ಲಿ ಕೂಡ ಅಕ್ರಮ ಪಡಿತರ ಚೀಟಿಗಳನ್ನು ಪತ್ತೆ ಹಚ್ಚಿ, ರದ್ದು ಪಡಿಸಲಾಗಿದೆ.ಕರ್ನಾಟಕ 2015-2017ರವರೆಗೆ ಸುಮಾರು 12,36,712 ನಕಲಿ ಕಾರ್ಡುಗಳನ್ನು ಪತ್ತೆ ಹಚ್ಚಿ ರದ್ದುಗೊಳಿಸಿದೆ. 2015ರಲ್ಲಿ 7,61,326 ನಕಲಿ ಪಡಿತರ ಕಾರ್ಡುಗಳನ್ನು ರದ್ದು ಪಡಿಸಲಾಗಿದೆ. 2016ರಲ್ಲಿ ಸುಮಾರು 1,44,432 ಅಕ್ರಮ ಪಡಿತರ ಚೀಟಿಗಳನ್ನು ರದ್ದು ಪಡಿಸಲಾಗಿದೆ. 2017ರಲ್ಲಿ 3,26,382 ಅಕ್ರಮ ಕಾರ್ಡ್ ಗಳನ್ನು ರದ್ದು ಪಡಿಸಲಾಗಿದೆ. 2013-2020 ರವರೆಗೆ ರಾಜ್ಯದಲ್ಲಿ ಸುಮಾರು 29.8 ಲಕ್ಷ ಅಕ್ರಮ ಪಡಿತರ ಕಾರ್ಡುಗಳನ್ನು ರದ್ದು ಪಡಿಸಲಾಗಿದೆ. ಕಳೆದ 13 ತಿಂಗಳಲ್ಲಿ ಆಹಾರ ಹಾಗೂ ನಾಗರಿಕ ಪೂರೈಕೆ ಇಲಾಖೆ ಸುಮಾರು 94,800 ಅಕ್ರಮ ಪಡಿತರ ಚೀಟಿಯನ್ನು ರದ್ದುಗೊಳಿಸಿದೆ. ಆರ್ಥಿಕವಾಗಿ ಸದೃಢವಾಗಿರುವವರು, ಸರ್ಕಾರಿ ನೌಕರರೂ ಅಕ್ರಮವಾಗಿ ಬಿಪಿಎಲ್ ಪಡಿತರ ಚೀಟಿ ಪಡೆದಿದ್ದಾರೆ. ಸರ್ಕಾರಕ್ಕೆ ತಪ್ಪು ಮಾಹಿತಿ ನೀಡಿ ಹಲವರು ಬಿಪಿಎಲ್ ಪಡಿತರ ಚೀಟಿ ಪಡೆದಿದ್ದಾರೆ. ಹೀಗೆ ತಪ್ಪು ಮಾಹಿತಿ ನೀಡಿ ಪಡೆಯಲಾಗಿದ್ದ ಸುಮಾರು 94,800 ಬಿಪಿಎಲ್‌ ಹಾಗೂ ಎಎವೈ ಪಡಿತರ ಚೀಟಿಗಳನ್ನು ಸರ್ಕಾರ ರದ್ದುಗೊಳಿಸಿದೆ. ಪರಿಣಾಮ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಾಂತರ ರೂಪಾಯಿ ಉಳಿತಾಯವಾಗಿದೆ.ರಾಜ್ಯದಲ್ಲಿ ಕಳೆದ 2018-2020ರ 3 ವರ್ಷಗಳಲ್ಲಿ ಒಟ್ಟು 2,28,188 ಅನರ್ಹ ಬಿಪಿಎಲ್ ಪಡಿತರ ಚೀಟಿಗಳನ್ನು ಪತ್ತೆ ಹಚ್ಚಲಾಗಿದ್ದು, ಅವುಗಳನ್ನು ರದ್ದು ಪಡಿಸಲಾಗಿದೆ ಎಂದು ಆಹಾರ ಇಲಾಖೆ ತಿಳಿಸಿದೆ.
ಆರ್​ಟಿಐ ಹೋರಾಟಗಾರರಾದ ಸಾಯಿ ದತ್ತಾ
ಸರ್ಕಾರಿ ನೌಕರರಿಂದ ಅಕ್ರಮ:ಸರ್ಕಾರಿ ನೌಕರರೇ ಅಕ್ರಮ ಎಸಗಿ ಬಿಪಿಎಲ್ ಕಾರ್ಡ್ ಪಡೆಯುತ್ತಿರುವ ಪ್ರಕರಣಗಳು ಸಾಕಷ್ಟಿವೆ. ಆಹಾರ ಇಲಾಖೆ ನೀಡಿರುವ ಅಂಕಿಅಂಶದ ಪ್ರಕಾರ ಕಳೆದ 2 ವರ್ಷಗಳಲ್ಲಿ 3906 ಸರ್ಕಾರಿ ಅಥವಾ ಅನುದಾನಿತ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವವರು ಬಿಪಿಎಲ್ ಕಾರ್ಡ್ ಗಳನ್ನು ಅಕ್ರಮವಾಗಿ ಪಡೆದಿರುವುದನ್ನು ಪತ್ತೆ ಹಚ್ಚಲಾಗಿದೆ.ಪತ್ತೆ ಹಚ್ಚಲಾದ ಈ ಅಕ್ರಮ ಪಡಿತರ ಚೀಟಿಗಳನ್ನು ರದ್ದು ಪಡಿಸಲಾಗಿದ್ದು, ಆರೋಪಿಗಳಿಂದ 1,04,41,996 ದಂಡವನ್ನು ವಸೂಲಿ‌ ಮಾಡಲಾಗಿದೆ.ಅಕ್ರಮ ಬಿಪಿಎಲ್ ಕಾರ್ಡ್ ಪಡೆಯುವ ಉದ್ದೇಶ:ಆರ್ಥಿಕವಾಗಿ ಸದೃಢವಾಗಿರುವವರು ಬಿಪಿಎಲ್ ಕಾರ್ಡ್ ಪಡೆದು ಅಕ್ರಮ ಎಸಗುತ್ತಿದ್ದಾರೆ. ಅಕ್ರಮ ಬಿಪಿಎಲ್ ಕಾರ್ಡ್ ಪಡೆದು ಸರ್ಕಾರದ ನಾನಾ ಸೌಲಭ್ಯಗಳನ್ನು ಪಡೆಯುತ್ತಿದ್ದಾರೆ. ಆಯುಷ್ಮಾನ್ ಭಾರತ್ ಆರೋಗ್ಯ ವಿಮೆ ಪಡೆಯಲು ಹಲವರು ಅಕ್ರಮವಾಗಿ ಬಿಪಿಎಲ್ ಕಾರ್ಡನ್ನು ಪಡೆಯುತ್ತಿದ್ದಾರೆ. ಉಳಿದಂತೆ ಸಿಎಂ ಪರಿಹಾರ ನಿಧಿ ಪಡೆಯಲು ಅನೇಕರು ಆರ್ಥಿಕವಾಗಿ ಸದೃಢವಾಗಿದ್ದರೂ ತಪ್ಪು ಮಾಹಿತಿ ನೀಡಿ ಬಿಪಿಎಲ್ ಕಾರ್ಡ್ ಮಾಡಿಸಿಕೊಳ್ಳುತ್ತಾರೆ. ಬಿಪಿಎಲ್ ಕಾರ್ಡ್ ದಾರರಿಗೆ ಹಲವು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸೌಲಭ್ಯಗಳು ಸಿಗುತ್ತವೆ. ಅದೇ ಉದ್ದೇಶಕ್ಕಾಗಿನೇ ಆರ್ಥಿಕವಾಗಿ ಸದೃಢರೇ ಬಿಪಿಎಲ್ ಕಾರ್ಡ್ ಅಕ್ರಮವಾಗಿ ಮಾಡಿಸಿಕೊಳ್ಳುತ್ತಿದ್ದಾರೆ. ಇದರಲ್ಲಿ ಸರ್ಕಾರಿ ನೌಕರರು ಸೇರಿದ್ದು, ಈ ಅಕ್ರಮದಲ್ಲಿ ಆಹಾರ ಇಲಾಖೆ ಅಧಿಕಾರಿಗಳೇ ಶಾಮೀಲಾಗಿದ್ದಾರೆ ಎಂದು ಆರ್​ಟಿಐ ಕಾರ್ಯಕರ್ತ ಸಾಯಿ ದತ್ತಾ ಅವರು ಆರೋಪಿಸಿದ್ದಾರೆ. ಈ‌ ಅಕ್ರಮ ಬಿಪಿಎಲ್ ಪಡಿತರದಾರರ ವಿರುದ್ಧ ಸರ್ಕಾರ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ಆಗ್ರಹಿಸಿದ್ದಾರೆ.

ABOUT THE AUTHOR

...view details