ಬೆಂಗಳೂರು:ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದ ವರ್ಷ ಮಗು ಕೊಂದು ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಸಾಕಷ್ಟು ಸದ್ದು ಮಾಡಿತ್ತು. ಪ್ರಕರಣದಡಿ ಮನೆಯ ಯಾಜಮಾನ ಹಲ್ಲೆಗೆರೆ ಶಂಕರ್ ಹಾಗೂ ಆತನ ಅಳಿಯಂದಿರು ಆತ್ಮಹತ್ಯೆಗೆ ಪ್ರಚೋದನೆಗೆ ನೀಡಿದ ಆರೋಪದಡಿ ಜೈಲುಪಾಲಾಗಿದ್ದಾರೆ.
ಈ ನಡುವೆ ಆಂಧ್ರಹಳ್ಳಿಯಲ್ಲಿರುವ ಕೋಟ್ಯಂತರ ರೂಪಾಯಿ ಬೆಲೆಬಾಳುವ ಶಂಕರ್ ಒಡೆತನದ ಮನೆ ಅನಾಥವಾಗಿದ್ದು, ಬಂಗಲೆಯಂತಹ ಮನೆಯಲ್ಲಿ ದೆವ್ವ- ಭೂತ ಇದೆ ಅಂತ ಸ್ಥಳೀಯರು ಒಂದಷ್ಟು ಕತೆಯನ್ನೂ ಕಟ್ಟಿದ್ದರು. ಅಮಾವಾಸ್ಯೆ ದಿನ ಹತ್ತಿರವಾಗುತ್ತಿದ್ದಂತೆ ಅಕ್ಕಪಕ್ಕದ ಜನ ಓಡಾಡೋಕೂ ಭಯಪಡುತ್ತಿದ್ದರು. ಕಳೆದ ಅಮಾವಾಸ್ಯೆ ಮಾರನೇ ದಿನ ಕೂಡ ಅಂತಹದ್ದೇ ಒಂದು ಘಟನೆ ನಡೆದಿದೆ. ಅದು ಮಧ್ಯರಾತ್ರಿ ಶಂಕರ್ ಮನೆಯಲ್ಲಿ ಕಗ್ಗತ್ತಿನಲ್ಲಿಯೂ ಮಂದಬೆಳಕು ನೋಡಿ ಜನರು ಗಾಬರಿಗೊಂಡಿದ್ದರು.
ಶಂಕರ್ ಮನೆಯಲ್ಲಿ ಕರೆಂಟ್ ಕಟ್ ಆಗಿ ನಾಲ್ಕು ತಿಂಗಳಾಗಿವೆ. ಹಾಗಿದ್ದರೂ ಬೆಳಕನ್ನು ನೋಡಿ ಸ್ಥಳೀಯರು ಗಾಬರಿಯಾಗಿದ್ದರು. ಕೂಡಲೇ ಶಂಕರ್ ಸಂಬಂಧಿಗೆ ಕರೆ ಮಾಡಿ ಮನೆಗೆ ಬರುವಂತೆ ಸೂಚಿಸಿದ್ದರು. ನಂತರ ಮೂರ್ನಾಲ್ಕು ಜನರು ಗಟ್ಟಿ ಮನಸ್ಸು ಮಾಡಿ ಮನೆಯೊಳಗೆ ಹೋಗಿ ಜಾಲಾಡಿದ್ರೂ ಏನೂ ಸಿಕ್ಕಿರಲಿಲ್ಲ. ಕೊನೆಗೆ ದೇವರ ಮನೆ ಬಳಿ ಬಂದಾಗ ದೆವ್ವ ದೆವ್ವ ಅಂತಾ ಚೀರುತ್ತಾ ಅಪರಿಚಿತ ವ್ಯಕ್ತಿ ಹೊರಬಂದಿದ್ದ.