ಕರ್ನಾಟಕ

karnataka

By

Published : May 20, 2021, 2:01 AM IST

ETV Bharat / city

ಬೆಂಗಳೂರು ನಗರದ ಕ್ಷೇಮಾಭಿವೃದ್ಧಿ ಸಂಘಗಳ ಜೊತೆ ಬಿಬಿಎಂಪಿ ಮುಖ್ಯ ಆಯುಕ್ತ ಸಭೆ

ಕೋವಿಡ್ ದೃಢಪಟ್ಟವರು ಪಾಲಿಕೆ ಸ್ಥಾಪಿಸಿರುವ ಟ್ರಯಾಜ್ ಸೆಂಟರ್‌ಗಳಿಗೆ ನೇರವಾಗಿ ಭೇಟಿ ನೀಡಬಹುದಾಗಿದ್ದು, ವೈದ್ಯರು ಸೋಂಕಿತರ ಆರೋಗ್ಯ ಸ್ಥಿತಿಯನ್ನು ಅವಲೋಕಿಸಿ ಹೋಮ್ ಐಸೋಲೇಷನ್, ಕೋವಿಡ್ ಆರೈಕೆ ಕೇಂದ್ರ ಅಥವಾ ಆಸ್ಪತ್ರೆಗೆ ದಾಖಲಿಸುವ ವ್ಯವಸ್ಥೆ ಮಾಡುತ್ತಾರೆ.

bbmp-commissioner-gaurav-gupta-meeting
ಬೆಂಗಳೂರು ನಗರದ ಕ್ಷೇಮಾಭಿವೃದ್ಧಿ ಸಂಘಗಳ ಜೊತೆ ಬಿಬಿಎಂಪಿ ಮುಖ್ಯ ಆಯುಕ್ತ ಸಭೆ

ಬೆಂಗಳೂರು : ಈಗಾಗಲೇ ನಗರದ ಬಹುತೇಕ ಕಡೆ ಸ್ಥಳಗಳನ್ನು ಗುರುತಿಸಿ ಸಾರ್ವಜನಿಕ ಸ್ಥಳಗಳಲ್ಲಿ ವ್ಯಾಕ್ಸಿನೇಷನ್ ನೀಡಲಾಗುತ್ತಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ತಿಳಿಸಿದ್ದಾರೆ.

ಬಿಬಿಎಂಪಿ ವ್ಯಾಪ್ತಿಯ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕೋವಿಡ್ ಪರೀಕ್ಷೆ ಹಾಗೂ ವ್ಯಾಕ್ಸಿನೇಷನ್ ಎರಡನ್ನೂ ಮಾಡಲಾಗುತ್ತಿದ್ದು, ವ್ಯಾಕ್ಸಿನೇಷನ್ ಪಡೆಯಲು ಹೆಚ್ಚು ಸಂಖ್ಯೆಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸೌಲಭ್ಯ ಕಲ್ಪಿಸಲಾಗಿದೆ.

ಈ ನಿಟ್ಟಿನಲ್ಲಿ ಹೆಚ್ಚು ಸೌಲಭ್ಯ ಒದಗಿಸುವ ದೃಷ್ಟಿಯಿಂದ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಹತ್ತಿರವಿರುವ ಉದ್ಯಾನವನ, ಸಮುದಾಯ ಭವನ, ವಾರ್ಡ್ ಕಚೇರಿ, ಆಟದ ಮೈದಾನ ಸೇರಿದಂತೆ ಹೆಚ್ಚು ಸ್ಥಳಾವಕಾಶವಿರುವ ಸಾರ್ವಜನಿಕ ಸ್ಥಳವನ್ನು ಗುರುತಿಸಿ, ಅಲ್ಲಿಯೂ ವ್ಯಾಕ್ಸಿನೇಷನ್ ನೀಡಲು ಅಗತ್ಯ ಕ್ರಮ ವಹಿಸಲು ಎಲ್ಲಾ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಗೌರವ್ ಗುಪ್ತ ಹೇಳಿದ್ದಾರೆ.

ನಗರದ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಜೊತೆ ಬುಧವಾರ ನಡೆದ ವರ್ಚುವಲ್ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮುಖ್ಯ ಆಯುಕ್ತ, ನಗರದಲ್ಲಿ ವ್ಯಾಕ್ಸಿನೇಷನ್ ನೀಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. 45 ವರ್ಷ ಮೇಲ್ಪಟ್ಟ 2ನೇ ಡೋಸ್ ಪಡೆಯುವವರಿಗೆ ಪ್ರಮುಖ ಆದ್ಯತೆ ನೀಡಲಾಗಿದ್ದು, ಆ ನಂತರ 45 ವರ್ಷದವರಿಗೆ ಮೊದಲನೇ ಡೋಸ್ ನೀಡಲು ಕ್ರಮವಹಿಸಲಾಗುತ್ತಿದೆ. ಪ್ರತಿಯೊಬ್ಬರೂ ಪೋರ್ಟಲ್‌ನಲ್ಲಿ ನೋಂದಣಿ ಮಾಡಿಕೊಂಡು ಸ್ಲಾಟ್ ನಿಗದಿಯಾದ ಬಳಿಕ ವ್ಯಾಕ್ಸಿನೇಷನ್ ಪಡೆಯಲು ಬರಬೇಕು ಎಂದು ಹೇಳಿದರು.

ಸೋಂಕಿದ್ದರೆ ಟ್ರಯಾಜ್ ಕೇಂದ್ರಗಳಿಗೆ ತೆರಳಿ..

ಕೋವಿಡ್ ದೃಢಪಟ್ಟವರು ಪಾಲಿಕೆ ಸ್ಥಾಪಿಸಿರುವ ಟ್ರಯಾಜ್ ಸೆಂಟರ್‌ಗಳಿಗೆ ನೇರವಾಗಿ ಭೇಟಿ ನೀಡಬಹುದಾಗಿದ್ದು, ವೈದ್ಯರು ಸೋಂಕಿತರ ಆರೋಗ್ಯ ಸ್ಥಿತಿಯನ್ನು ಅವಲೋಕಿಸಿ ಹೋಮ್ ಐಸೋಲೇಷನ್, ಕೋವಿಡ್ ಆರೈಕೆ ಕೇಂದ್ರ ಅಥವಾ ಆಸ್ಪತ್ರೆಗೆ ದಾಖಲಿಸುವ ವ್ಯವಸ್ಥೆ ಮಾಡಲಾಗುವುದು. ನಿಮ್ಮಲ್ಲಿ ಯಾರಿಗಾದರೂ ಕೋವಿಡ್ ಸೋಂಕು ಲಕ್ಷಣಗಳು ಕಂಡುಬಂದರೆ ಕೂಡಲೇ ಟೆಸ್ಟ್ ಮಾಡಿಸಿಕೊಂಡು ಪಾಸಿಟಿವ್ ಆದರೆ ಹೋಮ್ ಐಸೋಲೇಟ್ ಆಗಿ. ಪಾಸಿಟಿವ್ ಬಂದ ನಂತರ ಪಾಲಿಕೆಯ ತಂಡವು ಸ್ಥಳಕ್ಕೆ ಭೇಟಿ ನೀಡಿ, ಪ್ರಾಥಮಿಕ ಸಂಪರ್ಕಿತರನ್ನು ಗುರುತಿಸಿ ಕಡ್ಡಾಯವಾಗಿ ಟೆಸ್ಟ್ ಮಾಡಲಿದ್ದಾರೆ ಎಂದರು.

ಇದನ್ನೂ ಓದಿ:ಬೆಂಗಳೂರು ನಗರದಲ್ಲಿ 941 ವಾಹನಗಳು ಜಪ್ತಿ : 6 ಮಂದಿ ಮೇಲೆ ಕೇಸ್

ಕೋವಿಡ್ ಆರೈಕೆ ಕೇಂದ್ರಗಲ್ಲಿ ಆಕ್ಸಿಜನ್ ಸಿಲಿಂಡರ್ ಹಾಗೂ ಆಕ್ಸಿಜನ್ ಕಾನ್ಸನ್ ಟ್ರೇಟರ್‌ಗಳ ವ್ಯವಸ್ಥೆ ಮಾಡಲಾಗಿದ್ದು, ಸೋಂಕಿತರಿಗೆ ಆಕ್ಸಿಜನ್ ವ್ಯವಸ್ಥೆ ನೀಡುವ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಇದಲ್ಲದೆ ಹೋಟೆಲ್ ಗಳು ಆಸ್ಪತ್ರೆಗಳ ಜೊತೆ ಒಪ್ಪಂದ ಮಾಡಿಕೊಂಡು ಸ್ಟೆಪ್ ಡೌನ್ ಆಸ್ಪತ್ರೆಗಳನ್ನು ತೆರೆಯಲಾಗಿದೆ. ಹೆಚ್ಚು ಪ್ರಕರಣಗಳು ಕಂಡು ಬಂದ ಕಡೆ ಮೈಕ್ರೊ ಕಂಟೈನ್ಮೆಂಟ್ ಮಾಡಲಾಗುತ್ತಿದ್ದು, ಸೋಂಕಿತ ವ್ಯಕ್ತಿಗಳ ಕೈಗೆ ಸೀಲ್ ಹಾಕಲಾಗುತ್ತಿದೆ ಎಂದು ಗೌರವ್ ಗುಪ್ತ ಸ್ಪಷ್ಟನೆ ನೀಡಿದ್ದಾರೆ.

ABOUT THE AUTHOR

...view details