ಕರ್ನಾಟಕ

karnataka

ETV Bharat / city

ಗೋವಿಂದ‌ಪುರದಲ್ಲಿ ನೂತನ ಪೊಲೀಸ್​​ ಠಾಣೆ ಉದ್ಘಾಟಿಸಿದ ಬಸವರಾಜ ಬೊಮ್ಮಾಯಿ

ನೂತನವಾಗಿ ನಾಗವಾರ ರಸ್ತೆಯಲ್ಲಿ ನಿರ್ಮಿಸಿರುವ ಗೋವಿಂದಪುರ ಪೊಲೀಸ್ ಠಾಣೆಯನ್ನು ಇಂದು ರಾಜ್ಯ ಗೃಹ ಸಚಿವ ಬಸವರಾಜ ಬೊಮ್ಮಾಯಿ ಉದ್ಘಾಟಿಸಿದರು.

By

Published : Jan 27, 2021, 3:18 PM IST

Basavaraj Bommai
ಬಸವರಾಜ ಬೊಮ್ಮಾಯಿ

ಬೆಂಗಳೂರು: ನಗರದ ಡಿಜೆ ಹಳ್ಳಿ ಹಾಗೂ ಕೆಜಿ ಹಳ್ಳಿ ಗಲಭೆ ಪರಿಣಾಮ ಕೆ.ಜಿ.ಹಳ್ಳಿ ವ್ಯಾಪ್ತಿಯಲ್ಲಿ ಮತ್ತೊಂದು ಪೊಲೀಸ್ ಠಾಣೆ ಕಾರ್ಯಾರಂಭಗೊಂಡಿದೆ. ನೂತನವಾಗಿ ನಾಗವಾರ ರಸ್ತೆಯಲ್ಲಿರುವ ಗೋವಿಂದಪುರ ಪೊಲೀಸ್ ಠಾಣೆಯನ್ನು ರಾಜ್ಯ ಗೃಹ ಸಚಿವ ಬಸವರಾಜ ಬೊಮ್ಮಾಯಿ ಇಂದು ಉದ್ಘಾಟಿಸಿದರು.

ಗೋವಿಂದ‌ಪುರ ಠಾಣೆ ಉದ್ಘಾಟಿಸಿದ ಬಸವರಾಜ ಬೊಮ್ಮಾಯಿ

ಠಾಣೆ ಉದ್ಘಾಟನೆ ಬಳಿಕ ಮಾತನಾಡಿದ ಬಸವರಾಜ ಬೊಮ್ಮಾಯಿ, ಬೆಂಗಳೂರು ದಿನದಿಂದ ದಿನಕ್ಕೆ ಬೆಳವಣಿಗೆ ಆಗುತ್ತಿದೆ‌‌. ಭೂ ಪ್ರದೇಶವೂ ಜಾಸ್ತಿಯಾಗುತ್ತಿದೆ. ಪೊಲೀಸ್ ಆಡಳಿತ ಫುನರ್ ವಿಂಗಡನೆ ಆಗಬೇಕಿದೆ‌‌. ಡ್ರಗ್ಸ್, ದರೋಡೆ‌ ಹಾಗೂ ಮಹಿಳೆಯರ ಮೇಲೆ ಆತ್ಯಾಚಾರ ಮುಂತಾದ ಪ್ರಕರಣಗಳಲ್ಲಿ ಭಾಗಿಯಾದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ‌‌. ಅಪರಾಧ ಸಂಖ್ಯೆ ಹೆಚ್ಚಾದಂತೆ ಅಪರಾಧಗಳ ಸ್ವರೂಪ ಬದಲಾಗುತ್ತಿದೆ‌. ಹೊಸ ಹೊಸ ಸವಾಲುಗಳಿಗೆ ಪೊಲೀಸರನ್ನು ಅಣಿಗೊಳಿಸಬೇಕಿದೆ. ಇದಕ್ಕಾಗಿ ಸೈಬರ್ ತಂತ್ರಜ್ಞಾನ ಸೇರಿದಂತೆ ಆಧುನಿಕ‌ ರೀತಿಯ ತರಬೇತಿ ನೀಡುವುದು ಅಗತ್ಯ. ಈ ಹಿನ್ನೆಲೆ ಒಂದೂವರೆ ವರ್ಷದೊಳಗೆ‌ 16 ಸಾವಿರ ಪೊಲೀಸ್ ಸಿಬ್ಬಂದಿ ನೇಮಕಾತಿ ಮಾಡಲಾಗುವುದು ಎಂದರು.

ಅಪರಾಧ ಪ್ರಕರಣಗಳನ್ನು ನಿಯಂತ್ರಿಸಲು ಗೋವಿಂದಪುರ ಪೊಲೀಸ್ ಠಾಣೆ ಸಹಕಾರಿಯಾಗಲಿದೆ. ಸದ್ಯ ಬಾಡಿಗೆ ಕಟ್ಟಡದಲ್ಲಿ ನೂತನ ಠಾಣೆ ಕಾರ್ಯನಿರ್ವಹಿಸುತ್ತಿದೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ವೈಯಾಲಿಕಾವಲ್ ಸೊಸೈಟಿಯಲ್ಲಿ ನಾಗರಿಕ ನಿವೇಶನ (ಸಿಎ) ನೀಡುವುದಾಗಿ ಅಧ್ಯಕ್ಷ ವಿಶ್ವನಾಥ್ ಭರವಸೆ ನೀಡಿದ್ದಾರೆ. ನಿವೇಶನ ದೊರೆತ ಬಳಿಕ ಮುಂದಿನ ಬಜೆಟ್​ನಲ್ಲಿ ಅ‌ನುದಾನ ಮೀಸಲಿರಿಸಿ, ಸುಸಜ್ಜಿತ ಪೊಲೀಸ್‌ ಠಾಣೆ‌ ನಿರ್ಮಿಸಲಾಗುವುದು ಎಂದು ಭರವಸೆ‌ ನೀಡಿದರು.

ಪ್ರಶ್ನೆ ಪತ್ರಿಕೆ ಸ್ವೀಕರಿಸಿದ್ದ ಆರೋಪಿಗಳ ಪತ್ತೆ ಕಾರ್ಯ ಚುರುಕು:

ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಗೃಹ ಸಚಿವರು, ಪ್ರಕರಣ ಕುರಿತಂತೆ ಸಮಗ್ರ ತನಿಖೆ ನಡೆಸಲು ಈಗಾಗಲೇ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಸೋರಿಕೆಗೆ ಮೂಲ ಕಾರಣರಾದವರನ್ನು ಬಂಧಿಸಲಾಗಿದೆ. ಈಗಾಗಲೇ ಪ್ರಶ್ನೆ ಪತ್ರಿಕೆ ಸ್ವೀಕರಿಸಿದ ಆರೋಪಿಗಳ ಪತ್ತೆ ಕಾರ್ಯ ಮಾಡಲಾಗುತ್ತಿದ್ದು, ಶೀಘ್ರದಲ್ಲಿ ಅವರನ್ನು ಬಂಧಿಸಲಾಗುವುದು ಎಂದರು.

ಇನ್ನು ದೆಹಲಿಯಲ್ಲಿ ಪೊಲೀಸರ ಮೇಲೆ ನಡೆದ ಹಲ್ಲೆ ಖಂಡನೀಯ. ಯಾರೇ ಆಗಲಿ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಈ ನಿಟ್ಟಿನಲ್ಲಿ‌ ಕೇಂದ್ರ ಗೃಹ ಸಚಿವರು ಸಂಬಂಧಪಟ್ಟ ಅಧಿಕಾರಿಗಳೊಡನೆ ಸಭೆ ನಡೆಸಿ, ಮುಂದಿನ ಕಾನೂನು‌ ಕ್ರಮ ಕೈಗೊಳ್ಳಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಶಾಸಕ ಕೆ.ಜೆ.ಜಾರ್ಜ್ ಮಾತನಾಡಿ, ಕೆಜಿ ಹಳ್ಳಿ ಹಾಗೂ ಡಿಜೆ ಹಳ್ಳಿ ಗಲಭೆಗೆ ಸಂಬಂಧಿಸಿದಂತೆ ಪ್ರಕರಣದಲ್ಲಿ ಭಾಗಿಯಾದವ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಿ. ಆದರೆ ಗಲಭೆಯಲ್ಲಿ ಭಾಗಿಯಾಗದ ಅಮಾಯಕರನ್ನು ಬಂಧಿಸಲಾಗಿದೆ. ಹೀಗಾಗಿ ಕೂಡಲೇ ಅವರನ್ನು ಬಿಡುಗಡೆ ಮಾಡಬೇಕು ಎಂದು ಗೃಹ ಸಚಿವರಲ್ಲಿ ಮನವಿ ಮಾಡಿಕೊಂಡರು.

ABOUT THE AUTHOR

...view details