ಕರ್ನಾಟಕ

karnataka

By

Published : Jan 16, 2021, 9:26 PM IST

ETV Bharat / city

ಆರ್​ಟಿಐ ಕಾಯ್ದೆಯಡಿ ಟರ್ಫ್ ಕ್ಲಬ್​ಗಳು ಮಾಹಿತಿ ನೀಡಲೇಬೇಕು; ಹೈಕೋರ್ಟ್​ ಐತಿಹಾಸಿಕ ತೀರ್ಪು

ಸಾರ್ವಜನಿಕ ಭೂಮಿಯನ್ನು ರಿಯಾಯಿತಿ ದರದಲ್ಲಿ ಪಡೆದಿರುವ ಸಂಸ್ಥೆಗಳು ಜನರಿಗೆ ಉತ್ತರದಾಯಿಗಳಾಗಿದ್ದು, ಮಾಹಿತಿ ನೀಡಬೇಕು ಎಂದಿರುವ ಹೈಕೋರ್ಟ್​​​​, ಅರ್ಜಿದಾರ ಸಂಸ್ಥೆಗಳು ಸಲ್ಲಿಸಿರುವ ಅರ್ಜಿಯನ್ನು ವಜಾ ಮಾಡಿ ಆದೇಶಿಸಿದೆ.

High court
ಹೈಕೋರ್ಟ್

ಬೆಂಗಳೂರು: ನಗರದ ಬೆಂಗಳೂರು ಟರ್ಫ್ ಕ್ಲಬ್, ಮೈಸೂರು ಟರ್ಫ್ ಕ್ಲಬ್ ಸೇರಿದಂತೆ ಸರ್ಕಾರಿ ಭೂಮಿಯನ್ನು ರಿಯಾಯಿತಿ ದರದಲ್ಲಿ ಗುತ್ತಿಗೆ ಪಡೆದಿರುವ ಸಂಸ್ಥೆಗಳು ಮಾಹಿತಿ ಹಕ್ಕು ಕಾಯ್ದೆಯಡಿ (ಆರ್​​ಟಿಐ) ಮಾಹಿತಿ ನೀಡುವ ಉತ್ತರದಾಯಿತ್ವವನ್ನು ಹೊಂದಿವೆ ಎಂದು ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.

ಕ್ಲಬ್​​​ಗಳಿಗೆ ಸಂಬಂಧಿಸಿದಂತೆ ಅರ್ಜಿದಾರರು ಕೋರಿರುವ ಮಾಹಿತಿ ನೀಡಲು ಆದೇಶಿಸಿದ್ದ ರಾಜ್ಯ ಮಾಹಿತಿ ಆಯೋಗದ ಕ್ರಮ ಪ್ರಶ್ನಿಸಿ ಬೆಂಗಳೂರು ಟರ್ಫ್ ಕ್ಲಬ್, ಮೈಸೂರು ಟರ್ಫ್ ಕ್ಲಬ್, ಲೇಡಿಸ್ ಕ್ಲಬ್ ಮತ್ತು ಇನ್​​​ಸ್ಟಿಟ್ಯೂಟ್ ಆಫ್ ಇಂಜಿನಿಯರ್ ಸಂಸ್ಥೆಗಳು ಸಲ್ಲಿಸಿದ್ದ ಅರ್ಜಿಗಳನ್ನು ವಿಚಾರಣೆ ನಡೆಸಿದ ನ್ಯಾ.ಪಿ.ಬಿ. ಭಜಂತ್ರಿ ಅವರಿದ್ದ ಏಕ ಸದಸ್ಯ ಪೀಠ ಈ ಆದೇಶ ಮಾಡಿದೆ.

ಪೀಠ ತನ್ನ ತೀರ್ಪಿನಲ್ಲಿ, ಸರ್ಕಾರ ಈ ಸಂಸ್ಥೆಗಳಿಗೆ ರಿಯಾಯಿತಿ ದರದಲ್ಲಿ ಭೂಮಿ ಗುತ್ತಿಗೆ ನೀಡಿದೆ. ಸರ್ಕಾರಿ ಭೂಮಿ ಸಾರ್ವಜನಿಕರ ಭೂಮಿ ಇದ್ದಂತೆ. ಇಂತಹ ಭೂಮಿಯನ್ನು ಸರ್ಕಾರ ಮಾರುಕಟ್ಟೆ ಮೌಲ್ಯಕ್ಕಿಂತ ಸಾಕಷ್ಟು ಕಡಿಮೆ ಬಾಡಿಗೆಗೆ ಗುತ್ತಿಗೆ ನೀಡಿದೆ. ಈ ಮೂಲಕ ಪರೋಕ್ಷವಾಗಿ ರಿಯಾಯಿತಿ ನೀಡಿದ್ದು, ಭೂಮಿ ಗುತ್ತಿಗೆ ಪಡೆದವರು ಜನರಿಗೆ ಉತ್ತರದಾಯಿ‌ಯಾಗುತ್ತಾರೆ. ಹೀಗಾಗಿ, ಈ ಸಂಸ್ಥೆಗಳನ್ನು ಸಾರ್ವಜನಿಕ ಪ್ರಾಧಿಕಾರಗಳಂತೆ ಪರಿಗಣಿಸಬಹುದಾಗಿದೆ. ಅದರಂತೆ ಸಾರ್ವಜನಿಕರು ಆರ್​​ಟಿಐ ಕಾಯ್ದೆಯಡಿ ಮಾಹಿತಿ ಪಡೆಯಬಹುದು ಎಂದು ಆದೇಶಿಸಿದೆ. ಈ ಮೂಲಕ ಮಾಹಿತಿ ನೀಡುವಂತೆ ಆದೇಶಿಸಿದ್ದ ಮಾಹಿತಿ ಆಯೋಗದ ಆದೇಶವನ್ನು ಎತ್ತಿ ಹಿಡಿದಿದೆ.

ಇದನ್ನೂ ಓದಿ...ರಾಜ್ಯದ 30 ಸಾವಿರ ಹಳ್ಳಿಗಳಿಗೂ ಬ್ಯಾಂಕಿಂಗ್ ಸೌಲಭ್ಯ: ಗ್ರಾಮೀಣ ಸೇವೆ ವಿಸ್ತರಿಸಲು ಸರ್ಕಾರದ ಒತ್ತಾಯ

ನಗರದ ವಕೀಲ ಉಮಾಪತಿ ಹಾಗೂ ಡಾ.ಕುದೂರು ವೆಂಕಟೇಶ್ ಎಂಬುವರು ಬೆಂಗಳೂರು ಟರ್ಫ್ ಕ್ಲಬ್, ಮೈಸೂರು ಟರ್ಫ್ ಕ್ಲಬ್, ಲೇಡಿಸ್ ಕ್ಲಬ್ ಹಾಗೂ ಇನ್​​ಸ್ಟಿಟ್ಯೂಟ್ ಆಫ್​ ಇಂಜಿನಿಯರ್ ಸಂಸ್ಥೆಗಳಿಂದ ಕೆಲ ಮಾಹಿತಿ ಕೋರಿ 2012ರಲ್ಲಿ ಅರ್ಜಿ ಸಲ್ಲಿಸಿದ್ದರು. ಆದರೆ, ಸಂಸ್ಥೆಗಳು ಯಾವುದೇ ಮಾಹಿತಿ ನೀಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಅರ್ಜಿದಾರರು ರಾಜ್ಯ ಮಾಹಿತಿ ಆಯೋಗಕ್ಕೆ 2013ರಲ್ಲಿ ದೂರು ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ರಾಜ್ಯ ಮಾಹಿತಿ ಆಯೋಗ 2013ರ ಜುಲೈ 1ರಂದು ಮಾಹಿತಿ ನೀಡುವಂತೆ ಸಂಸ್ಥೆಗಳಿಗೆ ಆದೇಶಿಸಿತ್ತು.

ಮಾಹಿತಿ ಆಯೋಗದ ಈ ಆದೇಶ ಪ್ರಶ್ನಿಸಿ ಅರ್ಜಿದಾರ ಸಂಸ್ಥೆಗಳು ನಾವು ಸಾರ್ವಜನಿಕ ಪ್ರಾಧಿಕಾರಗಳಲ್ಲ. ಹೀಗಾಗಿ, ಮಾಹಿತಿ ಹಕ್ಕು ಕಾಯ್ದೆ-2005ರ ಸೆಕ್ಷನ್ 2(ಎಚ್) ಅಡಿ ಮಾಹಿತಿ ನೀಡುವ ಬಾಧ್ಯತೆ ಹೊಂದಿಲ್ಲ ಎಂದು ವಾದಿಸಿದ್ದವು. ವಾದ ಅಲ್ಲಗಳೆದಿರುವ ಪೀಠ, ಸಾರ್ವಜನಿಕ ಭೂಮಿಯನ್ನು ರಿಯಾಯಿತಿ ದರದಲ್ಲಿ ಪಡೆದಿರುವ ಸಂಸ್ಥೆಗಳು ಜನರಿಗೆ ಉತ್ತರದಾಯಿಗಳಾಗಿದ್ದು, ಮಾಹಿತಿ ನೀಡಬೇಕು ಎಂದಿದ್ದು, ಅರ್ಜಿ ವಜಾ ಮಾಡಿ ಆದೇಶಿಸಿದೆ.

ABOUT THE AUTHOR

...view details