ಕರ್ನಾಟಕ

karnataka

By

Published : May 26, 2020, 5:46 PM IST

ETV Bharat / city

ಆರೋಗ್ಯ ಸೇತು ಆ್ಯಪ್ ಇದ್ದರಷ್ಟೇ ಸಿಎಂ ಕಚೇರಿಗೆ ಎಂಟ್ರಿ

ಮುಖ್ಯಮಂತ್ರಿ ಅವರು ಕೊರೊನಾ ಮುಂಜಾಗ್ರತಾ ಕ್ರಮಗಳಲ್ಲಿ ಮತ್ತಷ್ಟು ಬಿಗಿ ಕ್ರಮಗಳನ್ನು ಕೈಗೊಂಡಿದ್ದಾರೆ. ಹ್ಯಾಂಡ್ ಸ್ಯಾನಿಟೈಸರ್, ಮಾಸ್ಕ್ ಮಾತ್ರವಲ್ಲದೆ ಆರೋಗ್ಯ ಸೇತು ಆ್ಯಪ್ ಕೂಡ ಡೌನ್​ಲೋಡ್​ ಮಾಡಿಕೊಂಡಿರುವುದು ಕಡ್ಡಾಯವಾಗಿದೆ. ಸಿಎಂ ಕಚೇರಿಗೆ ಪ್ರವೇಶಿಸುವ ಅತಿಥಿಗಳ ಮೊಬೈಲ್​ನಲ್ಲಿ ಆರೋಗ್ಯ ಸೇತು ಆ್ಯಪ್ ಅಳವಡಿಸಿಕೊಂಡಿರುವ ಕುರಿತು ಪರಿಶೀಲಿಸಿ, ನಂತರವೇ ಕಚೇರಿ ಒಳಗೆ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗುತ್ತಿದೆ.

Arogya Setu App
ಆರೋಗ್ಯ ಸೇತು ಆ್ಯಪ್

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಮುಂಜಾಗ್ರತಾ ಕ್ರಮಗಳನ್ನು ಮತ್ತಷ್ಟು‌ ಹೆಚ್ಚಿಸಿಕೊಂಡಿದ್ದಾರೆ. ತಮ್ಮ ಭೇಟಿಗೆಂದು ಕಚೇರಿಗೆ ಬರುವವರಿಗೆ ಆರೋಗ್ಯ ಸೇತು ಆ್ಯಪ್ ಅನ್ನು ಕಡ್ಡಾಯಗೊಳಿಸಿದ್ದಾರೆ.

ಸಿಎಂ ಕಚೇರಿ ಒಳಗೆ ಪ್ರವೇಶಕ್ಕೆ ಆರೋಗ್ಯ ಸೇತು ಆ್ಯಪ್ ಕಡ್ಡಾಯ

ಆ್ಯಪ್​ನಲ್ಲಿ ಗ್ರೀನ್ ಮಾರ್ಕ್ ಇದ್ದರಷ್ಟೇ ಸಿಎಂ ನಿವಾಸಕ್ಕೆ ಎಂಟ್ರಿ ಪಾಸ್ ನೀಡಲಾಗುತ್ತಿದ್ದು, ಇಲ್ಲದಿದ್ದಲ್ಲಿ ಗೇಟ್ ಪಾಸ್ ನೀಡಲಾಗುತ್ತಿದೆ. ಮುಖ್ಯಮಂತ್ರಿ ಅವರು ಕೊರೊನಾ ಮುಂಜಾಗ್ರತಾ ಕ್ರಮಗಳಲ್ಲಿ ಮತ್ತಷ್ಟು ಬಿಗಿಕ್ರಮಗಳನ್ನು ಅಳವಡಿಸಿದ್ದು ಹ್ಯಾಂಡ್ ಸ್ಯಾನಿಟೈಸರ್, ಮಾಸ್ಕ್ ಮಾತ್ರವಲ್ಲದೆ ಆರೋಗ್ಯ ಸೇತು ಆ್ಯಪ್ ಕೂಡ ಡೌನ್​ಲೋಡ್​ ಮಾಡಿಕೊಂಡಿರುವುದು ಕಡ್ಡಾಯ. ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣಾ ಮತ್ತು ಅಧಿಕೃತ ನಿವಾಸ ಕಾವೇರಿಗೆ ಪ್ರವೇಶ ಮಾಡುವ ಅತಿಥಿಗಳ ಮೊಬೈಲ್​ನಲ್ಲಿ ಆರೋಗ್ಯ ಸೇತು ಆ್ಯಪ್ ಅಳವಡಿಸಿಕೊಂಡಿರುವ ಕುರಿತು ಪರಿಶೀಲಿಸಿ ನಂತರವೇ ಒಳಗೆ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗುತ್ತದೆ.

ಪ್ರವೇಶ ದ್ವಾರದಲ್ಲಿ ಮೆಟಲ್ ಡಿಟೆಕ್ಟರ್ ಮೂಲಕ ಹಾದು ಹೋದ ನಂತರ ಹ್ಯಾಂಡ್ ಸ್ಯಾನಿಟೈಸರ್ ನೀಡಲಾಗುತ್ತದೆ. ಬಳಿಕ ಸಿಎಂ ಕಚೇರಿ ಸಿಬ್ಬಂದಿ, ಅತಿಥಿಗಳ ಮೊಬೈಲ್​ಲ್ಲಿ ಆರೋಗ್ಯ ಸೇತು ಆ್ಯಪ್ ಆಕ್ಟೀವ್ ಇದೆಯಾ ಎಂದು ಪರಿಶೀಲನೆ ನಡೆಸುತ್ತಾರೆ. ಆರೋಗ್ಯ ಸೇತು ಗ್ರೀನ್ ತೋರಿಸುತ್ತಿದ್ದರಷ್ಟೇ ಸಿಎಂ ಕಚೇರಿ ಹಾಗು ನಿವಾಸದ ಆವರಣಕ್ಕೆ ಪ್ರವೇಶ, ಇಲ್ಲದಿದ್ದಲ್ಲಿ ಹಾಗೆಯೇ ವಾಪಸ್ ಕಳಿಸಲಾಗುತ್ತದೆ. ಆರೋಗ್ಯ ಸೇತು ಆ್ಯಪ್ ಓಕೆ ಆದ ನಂತರ ಕಚೇರಿ ಹಾಗು ನಿವಾಸದ ಒಳ ಪ್ರವೇಶದ ವೇಳೆ ಥರ್ಮಲ್ ಸ್ಕ್ರೀನಿಂಗ್ ಮಾಡಲಾಗುತ್ತದೆ. ದೇಹದ ಉಷ್ಣಾಂಶ ಸಾಮಾನ್ಯವಾಗಿದ್ದರಷ್ಟೇ ಪ್ರವೇಶಕ್ಕೆ ಅವಕಾಶ, ಇಲ್ಲದೇ ಇದ್ದಲ್ಲಿ ಅಲ್ಲಿಂದ ವಾಪಸ್ ಕಳಿಸಲಾಗುತ್ತದೆ.

ಆರೋಗ್ಯ ಸೇತು ಕಡ್ಡಾಯವೇಕೆ?:

ಆರೋಗ್ಯ ಸೇತು ಆ್ಯಪ್ ಆರೋಗ್ಯದ ಕುರಿತು ಮಾಹಿತಿ ನೀಡುವುದಲ್ಲದೆ ತಮ್ಮ ಸಮೀಪದಲ್ಲಿ ಇರುವವರ ಮಾಹಿತಿ ಸಹ ನೀಡಲಿದೆ. 500 ಮೀಟರ್ ವ್ಯಾಪ್ತಿಯಲ್ಲಿ ಎಷ್ಟು ಜನ ಆ್ಯಪ್ ಹಾಕಿಕೊಂಡಿದ್ದಾರೆ, 1 ಕಿ.ಮೀ, 2 ಕಿಲೋ ಮೀಟರ್, 5 ಕಿಲೋ ಮೀಟರ್, 10 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಎಷ್ಟು ಜನ ಆರೋಗ್ಯ ಸೇತು ಬಳಸುತ್ತಿದ್ದಾರೆ. ಅವರಲ್ಲಿ ಯಾರಾದರು ಕೊರೊನಾ ಸೋಂಕಿಗೆ ಸಿಲುಕಿದ್ದಾರಾ ಎನ್ನುವ ಮಾಹಿತಿ ಲಭ್ಯವಾಗಲಿದೆ. ಸಿಎಂ ಕಚೇರಿ‌ ಸಿಬ್ಬಂದಿ‌ 500 ಮೀಟರ್ ವ್ಯಾಪ್ತಿಯಲ್ಲಿ ಸದಾ ಆ್ಯಪ್ ಬಳಕೆದಾರರ ಬಗ್ಗೆ ಪರಿಶೀಲನೆ ನಡೆಸುತ್ತಿರುತ್ತಾರೆ.

ಆರೋಗ್ಯ ಸೇತು ಆ್ಯಪ್ ನೀಡುವ ಮಾಹಿತಿ:

ಆರೋಗ್ಯ ಸೇತು ಆ್ಯಪ್ ಪ್ರತಿ ವ್ಯಕ್ತಿಗೂ ಕೆಲ ಪ್ರಶ್ನೆಗಳನ್ನು ಕಾಲ ಕಾಲಕ್ಕೆ ಕೇಳುತ್ತಿರುತ್ತದೆ. ಅವುಗಳಿಗೆ ನೀಡುವ ಉತ್ತರದ ಆಧಾರದ ಮೇಲೆ ಕೊರೊನಾ ಕುರಿತು ಮಾಹಿತಿ ನೀಡುತ್ತದೆ. ಉದಾಹರಣೆಗೆ ಕೆಮ್ಮು, ಜ್ವರ, ಉಸಿರಾಟದಲ್ಲಿ ತೊಂದರೆ ಇದೆಯಾ?, ಮಧುಮೇಹ, ಅಧಿಕ‌ ರಕ್ತದೊತ್ತಡ, ಶ್ವಾಸಕೋಶದ ಖಾಯಿಲೆ, ಹೃದಯರೋಗ ಇದೆಯಾ?, ಕಳೆದ 28-45 ದಿನದಲ್ಲಿ ಅಂತಾರಾಷ್ಟ್ರೀಯ ಪ್ರಯಾಣ ಮಾಡಿದ್ದೀರಾ?, ಕೋವಿಡ್ ಸೋಂಕಿತ ವ್ಯಕ್ತಿಯ ಸಂಪರ್ಕ ಅಥವಾ ಆತನೊಂದಿಗೆ ವಾಸ ಮಾಡುತ್ತಿದ್ದೀರಾ? ಈ ರೀತಿಯ ಇನ್​ಪುಟ್​ಗಳನ್ನು ಆ್ಯಪ್ ದಾಖಲಿಸಿಕೊಳ್ಳಲಿದೆ. ಆ್ಯಪ್ ಬಳಕೆದಾರರಿಗೆ ಅನಾರೋಗ್ಯದ ಲಕ್ಷಣಗಳು ಇದ್ದರೆ ಅಥವಾ ಸೋಂಕಿತರ ಸನಿಹ ಇದ್ದ ಮಾಹಿತಿ ಹಂಚಿಕೊಂಡಿದ್ದರೆ ಅಂತಹ ವ್ಯಕ್ತಿಯ ಆ್ಯಪ್​ನಲ್ಲಿ ರಿಸ್ಕ್ ಎಂದು ತೋರಿಸಿ ಆತನನ್ನು ಎಚ್ಚರಿಸುವ ಕೆಲಸ ಮಾಡಲಿದೆ.

ಒಂದು ವೇಳೆ ಆ್ಯಪ್ ಬಳಕೆದಾರನ ಸಮೀಪದಲ್ಲಿ ಸೋಂಕಿತ ವ್ಯಕ್ತಿ ಇದ್ದರೆ ಆ ಮಾಹಿತಿಯನ್ನು ಆ್ಯಪ್ ನೀಡಲಿದೆ. ಸುತ್ತಮುತ್ತ ಎಷ್ಟು ಜನ ರಿಸ್ಕ್​ನಲ್ಲಿದ್ದಾರೆ ಎನ್ನುವ ಮಾಹಿತಿ ನೀಡಲಿದೆ. ನಿತ್ಯ ಸಭೆಗಳನ್ನು ನಡೆಸಿ ಹತ್ತಾರು ಸಚಿವರು, ಅಧಿಕಾರಿಗಳು, ನಿಯೋಗಗಳು ಸಿಎಂ ಭೇಟಿ ಮಾಡುತ್ತಿರುತ್ತಾರೆ. ಹಾಗಾಗಿ ಮುಂಜಾಗ್ರತಾ ಕ್ರಮವಾಗಿ ಕೊರೊನಾ ಸೋಂಕು ಕೃಷ್ಣಾ ಹಾಗು ಕಾವೇರಿ ಒಳಗೆ ನುಸುಳದಂತೆ ಭಾರಿ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗಿದೆ. ಅದಕ್ಕಾಗಿಯೇ ಆರೋಗ್ಯ ಸೇತು ಆ್ಯಪ್ ಇದ್ದರಷ್ಟೇ ಪ್ರವೇಶ ಎನ್ನುವ ಸೂಚನೆಯನ್ನು ಅಧಿಕೃತವಾಗಿ ಪ್ರಕಟಿಸಲಾಗಿದೆ. ಒಟ್ಟಿನಲ್ಲಿ ರಾಜ್ಯದಲ್ಲಿ ಕೊರೊನಾ ಮುಂಜಾಗ್ರತಾ ಕ್ರಮಗಳ ಕುರಿತು ವಿಶೇಷ ಆಸಕ್ತಿ ತೋರುತ್ತಿರುವ ರೀತಿ ವೈಯಕ್ತಿಕ ಮುಂಜಾಗ್ರತಾ ಕ್ರಮಕ್ಕೂ ಸಿಎಂ ಆದ್ಯತೆ ನೀಡಿದ್ದಾರೆ‌.

ABOUT THE AUTHOR

...view details