ಬೆಂಗಳೂರು: ಹಲವು ವರ್ಷಗಳಿಂದ ಅರಣ್ಯ ಇಲಾಖೆ ಪದೋನ್ನತಿ ಪಟ್ಟಿ ಬಾಕಿ ಉಳಿದಿದೆ. ಇದಕ್ಕಾಗಿ ವಿವಿಧ ಇಲಾಖೆಯ ತಜ್ಞರ ಸಮಿತಿ ರಚಿಸಿ ನಾಲ್ಕು ತಿಂಗಳ ಕಾಲ ಅಧ್ಯಯನ ನಡೆಸಿದ್ದೇವೆ ಎಂದು ಅರಣ್ಯ ಸಚಿವ ಆನಂದ್ ಸಿಂಗ್ ತಿಳಿಸಿದ್ದಾರೆ.
ಜೆಡಿಎಸ್ ಸದಸ್ಯ ಅಪ್ಪಾಜಿ ಗೌಡ ಕೇಳಿದ ಪ್ರಶ್ನೆಗೆ ಉತ್ತರಿಸಿ, ನನಗೆ ತಾವು ಕೇಳಿದ ಪ್ರಶ್ನೆಗೆ ಇನ್ನಷ್ಟು ಸ್ಪಷ್ಟೀಕರಣ ನೀಡುವ ಅಗತ್ಯ ಇಲ್ಲ. 540 ಆಕ್ಷೇಪಣೆ ಬಂದಿತ್ತು. 13 ವೃತ್ತದಿಂದ ಬಂದ ದೂರಿನ ಕುರಿತು ಸ್ಪಷ್ಟೀಕರಣ ನೀಡಲಾಗಿದೆ. ಸಮಿತಿ ವತಿಯಿಂದ ದೂರು ಸಂಬಂಧ ಸೂಕ್ತ ಕ್ರಮಕ್ಕೆ ಸೂಚಿಸಿದ್ದೇವೆ. ಪದೋನ್ನತಿ ಮೂರ್ನಾಲ್ಕು ವರ್ಷದಿಂದ ನಿಂತಿತ್ತು. ಈ ಹಿಂದೆಯೇ ಒಂದು ಪಟ್ಟಿ ಸಿದ್ಧಪಡಿಸಬೇಕೆಂದು ತಾವು ಹೇಳಿದ್ದಿರಿ. ಅದನ್ನು ಮಾಡಿದ್ದು, ತಮಗೆ ಕೊಟ್ಟ ಉತ್ತರದಲ್ಲಿ ಇರುವ ಗೊಂದಲ ನಿವಾರಿಸುತ್ತೇನೆ. ತಾವು ಕೇಳಿದ ಪ್ರಶ್ನೆ ಉತ್ತಮವಿದ್ದು, ಪ್ರತ್ಯೇಕವಾಗಿ ನಿಮ್ಮೊಂದಿಗೆ ಚರ್ಚಿಸುತ್ತೇನೆ ಎಂದು ಭರವಸೆ ನೀಡಿದರು.
ಸದಸ್ಯ ಅಪ್ಪಾಜಿ ಗೌಡ ಮಾತನಾಡಿ, ನಾನು ಕೇಳಿದ ಪ್ರಶ್ನೆಯನ್ನು ಅಧಿಕಾರಿಗಳು ತಿರುಚಿ ಉತ್ತರ ನೀಡಿದ್ದಾರೆ. ಸೂಕ್ತ ಉತ್ತರ ಬೇಕು ಎಂದರು.