ಕರ್ನಾಟಕ

karnataka

By

Published : Apr 18, 2022, 5:32 PM IST

ETV Bharat / city

ಉಗ್ರ ಸಂಘಟನೆ ಜತೆ ನಂಟು: ಜಾಮೀನು ನಿರಾಕರಿಸಿದ ಹೈಕೋರ್ಟ್

ಐಸಿಎಸ್‌ ಜೊತೆ ಸಂಪರ್ಕ ಹೊಂದಿದ ಆರೋಪದಡಿ ಬಂಧನಕ್ಕೆ ಒಳಗಾದ ವ್ಯಕ್ತಿಗೆ ಜಾಮೀನು ನೀಡಲು ಹೈಕೋರ್ಟ್ ನಿರಾಕರಿಸಿದೆ.

ಜಾಮೀನು ನೀಡಲು ನಿರಾಕರಿಸಿದ ಹೈಕೋರ್ಟ್
ಜಾಮೀನು ನೀಡಲು ನಿರಾಕರಿಸಿದ ಹೈಕೋರ್ಟ್

ಬೆಂಗಳೂರು:ನಿಷೇಧಿತ ಉಗ್ರ ಸಂಘಟನೆ ಐಸಿಎಸ್‌ (ಇಸ್ಲಾಮಿಕ್‌ ಸ್ಟೇಟ್‌) ಜೊತೆ ಸಂಪರ್ಕ ಹೊಂದಿದ ಹಾಗೂ ಈ ಸಂಘಟನೆಗೆ ಮುಸ್ಲಿಂ ಯುವಕರನ್ನು ಸೇರಿಸುವ ಕೆಲಸ ಮಾಡುತ್ತಿದ್ದ ಆರೋಪದಡಿ ಬಂಧನಕ್ಕೆ ಒಳಗಾಗಿರುವ ವ್ಯಕ್ತಿಗೆ ಹೈಕೋರ್ಟ್ ಜಾಮೀನು ನೀಡಲು ನಿರಾಕರಿಸಿದೆ. ಪ್ರಕರಣದಲ್ಲಿ ಜಾಮೀನು ನೀಡುವಂತೆ ಕೋರಿ ಜುಹಾಬ್‌ ಹಮೀದ್‌ ಶಕೀಲ್‌ ಮನ್ನಾ ಅಲಿಯಾಸ್‌ ಜೋಹಿಬ್‌ ಮನ್ನಾ ಎಂಬಾತ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ನ್ಯಾ.ಎಂ.ನಾಗಪ್ರಸನ್ನ ಅವರಿದ್ದ ಪೀಠ ನಡೆಸಿತು.

ಅಲ್ಲದೇ, ಕಾನೂನು ಬಾಹಿರ ಚಟುವಟಿಕೆಗಳ ತಡೆ (ಯುಎಪಿಎ) ಕಾಯ್ದೆಯ ಸೆಕ್ಷನ್‌ 43(ಡಿ) ಅಡಿಯಲ್ಲಿ ಆರೋಪಿಯ ನ್ಯಾಯಾಂಗ ಬಂಧನ ಅವಧಿಯನ್ನು 90 ದಿನಗಳಿಂದ 180 ದಿನಗಳಿಗೆ ವಿಸ್ತರಿಸಿದ ಎನ್‌ಐಎ ವಿಶೇಷ ನ್ಯಾಯಾಲಯದ ಆದೇಶವನ್ನೂ ಹೈಕೋರ್ಟ್ ಎತ್ತಿಹಿಡಿದಿದೆ.

ಪ್ರಕರಣದ ಹಿನ್ನೆಲೆ: ಬೆಂಗಳೂರಿನ ಜಯನಗರ ನಿವಾಸಿ ಜುಹಾಬ್‌ ಹಮೀದ್‌ ಶಕೀಲ್‌ ಜೀವನೋಪಾಯಕ್ಕಾಗಿ ಕುಟುಂಬದೊಂದಿಗೆ ಸೌದಿ ಅರೇಬಿಯಾಗೆ ತೆರಳಿದ್ದ. ಐಸಿಎಸ್‌ ಸಂಘಟನೆ ಜೊತೆ ನಂಟು ಹೊಂದಿದ್ದಲ್ಲದೇ ಅದಕ್ಕೆ ಮುಸ್ಲಿಂ ಯುವಕರನ್ನು ಸೇರಿಸುವ ಕೆಲಸದಲ್ಲಿ ಜುಹಾಬ್‌ ತೊಡಗಿಕೊಂಡಿದ್ದ. ಈ ಬಗ್ಗೆ ಮಾಹಿತಿ ಕಲೆಹಾಕಿದ ಎನ್‌ಐಎ ಅಧಿಕಾರಿಗಳು 2020ರ ಅಕ್ಟೋಬರ್ 5ರಂದು ಸೌದಿ ಅರೇಬಿಯಾದಲ್ಲಿ ಬಂಧಿಸಿದ್ದರು. 2021ರ ನವೆಂಬರ್ 11ರಂದು ಆತನನ್ನು ಭಾರತಕ್ಕೆ ಗಡಿಪಾರು ಮಾಡಲಾಗಿತ್ತು. ಅಲ್ಲಿಂದ ಕರೆತಂದು ನಗರದ ಎನ್‌ಐಎ ವಿಶೇಷ ನ್ಯಾಯಾಲಯದ ಮುಂದೆ ಆರೋಪಿಯನ್ನು ಹಾಜರುಪಡಿಸಲಾಗಿತ್ತು. ವಿಶೇಷ ನ್ಯಾಯಾಲಯ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು. ಆ ಬಳಿಕ ಆರೋಪಿ ಜಾಮೀನು ಕೋರಿ ಹೈಕೋರ್ಟ್‌‌ ಮೆಟ್ಟಿಲೇರಿದ್ದ.

ಹೈಕೋರ್ಟ್ ಆದೇಶ: ಆರೋಪಿಯ ಅರ್ಜಿ ತಿರಸ್ಕರಿಸಿರುವ ಹೈಕೋರ್ಟ್, ಆರೋಪಿ ಇರಾಕ್‌ ಹಾಗೂ ಸಿರಿಯಾದ ಐಸಿಎಸ್‌ ಸಂಘಟನೆಯೊಂದಿಗೆ ಸಂಬಂಧ ಹೊಂದಿದ್ದು, ಮುಸ್ಲಿಂ ಯುವಕರನ್ನು ಪ್ರಚೋದಿಸಿ ಐಸಿಎಸ್‌ಗೆ ಸೇರಿಸಿದ ಹಾಗೂ ಸಂಘಟನೆಗೆ ಹಣ ಸಂಗ್ರಹಿಸುವ ಕಾರ್ಯದಲ್ಲಿ ತೊಡಗಿದ್ದ ಎಂಬ ಗಂಭೀರ ಆರೋಪ ಹೊತ್ತಿದ್ದಾನೆ. ಹೀಗಾಗಿ ವಿಚಾರಣಾ ನ್ಯಾಯಾಲಯ ಜಾಮೀನು ನಿರಾಕರಿಸಿರುವ ಆದೇಶ ಸೂಕ್ತವಾಗಿದೆ. ಇನ್ನು, ವಿಚಾರಣೆ ವೇಳೆ ಆರೋಪಿಯು ಅಪರಾಧಿಕ ಪಿತೂರಿಯಲ್ಲಿ ತೊಡಗಿದ್ದಾನೆ ಎಂಬುದು ಕಂಡು ಬಂದರೆ, ಅಂತಹ ಸಂದರ್ಭದಲ್ಲಿ ತನಿಖಾಧಿಕಾರಿ ಯುಪಿಎ ಕಾಯ್ದೆಯಡಿ ನ್ಯಾಯಾಂಗ ಬಂಧನ ಅವಧಿಯನ್ನು 90 ದಿನಗಳಿಂದ 180 ದಿನಗಳಿಗೆ ವಿಸ್ತರಿಸಲು ಅರ್ಜಿ ಸಲ್ಲಿಸಬಹುದು. ಅದರಂತೆ ಈ ಪ್ರಕರಣದಲ್ಲೂ ತನಿಖಾಧಿಕಾರಿ ಸಲ್ಲಿಸಿದ ಅರ್ಜಿಯನ್ನು ಎನ್‌ಐಎ ವಿಶೇಷ ನ್ಯಾಯಾಲಯ ಪುರಸ್ಕರಿಸಿದೆ. ಅದರಲ್ಲಿ ಯಾವುದೇ ಲೋಪವಿರದ ಕಾರಣ ಅಧೀನ ನ್ಯಾಯಾಲಯದ ಆದೇಶದಲ್ಲಿ ಹಸ್ತಕ್ಷೇಪ ಮಾಡಲಾಗದು ಎಂದು ಹೈಕೋರ್ಟ್ ಸ್ಪಷ್ಟಪಡಿಸಿ, ಜಾಮೀನು ಅರ್ಜಿ ವಜಾಗೊಳಿಸಿದೆ.

ABOUT THE AUTHOR

...view details