ಬೆಂಗಳೂರು: ಒಂದೇ ತಿಂಗಳಿನಲ್ಲಿ ಎರಡು ಸೆಮಿಸ್ಟರ್ ಪರೀಕ್ಷೆ ನಡೆಸುವ ಸರ್ಕಾರದ ನಿರ್ಧಾರಕ್ಕೆ ಎಐಡಿಎಸ್ಒ ವಿದ್ಯಾರ್ಥಿ ಸಂಘಟನೆ ವಿರೋಧ ವ್ಯಕ್ತಪಡಿಸಿದ್ದು,ಈ ನಿರ್ಧಾರವನ್ನು ಕೈ ಬಿಡದೇ ಇದ್ದಲ್ಲಿ ಪರೀಕ್ಷೆ ಬಹಿಷ್ಕಾರ ಮಾಡಿ ಹೋರಾಟ ನಡೆಸಬೇಕಾಗಲಿದೆ ಎಂದು ಎಚ್ಚರಿಕೆ ನೀಡಿದೆ.
ಸಿಎಂ ಗೃಹ ಕಚೇರಿ ಕೃಷ್ಣಾಗೆ ಭೇಟಿ ನೀಡಿದ ಎಐಡಿಎಸ್ಒ ವಿದ್ಯಾರ್ಥಿ ಸಂಘಟನೆ ನಿಯೋಗ,ಒಂದೇ ತಿಂಗಳಿನಲ್ಲಿ 2 ಸೆಮಿಸ್ಟರ್ ಪರೀಕ್ಷೆ ಸರಿಯಲ್ಲ, ಕೋವಿಡ್ ಸಮಯದಲ್ಲಿ ಸ್ನಾತಕೋತ್ತರ ಹಾಗೂ ಪದವಿ ವಿದ್ಯಾರ್ಥಿಗಳಿಗೆ ಒಂದೇ ತಿಂಗಳಿನಲ್ಲಿ ಎರಡು ಸೆಮಿಸ್ಟರ್ ಪರೀಕ್ಷೆ ಸರಿಯಾದ ನಿರ್ಧಾರವಲ್ಲ. ಇದನ್ನು ಪುನರ್ ಪರಿಶೀಲಿಸಬೇಕು ಎಂದು ಸಿಎಂ ಯಡಿಯೂರಪ್ಪಗೆ ಮನವಿ ಸಲ್ಲಿಕೆ ಮಾಡಿತು.
ಒಂದೇ ತಿಂಗಳಲ್ಲಿ ಎರಡು ಪರೀಕ್ಷೆಗಳು ಆಗಬಾರದು. ಪ್ರತಿಯೊಬ್ಬ ವಿದ್ಯಾರ್ಥಿಗೂ 2 ಲಸಿಕೆ ಕೊಡದೆ ಕಾಲೇಜು ಶುರು ಮಾಡಬಾರದು ಹಾಗೂ ಆಫ್ಲೈನ್ ಪರೀಕ್ಷೆಗಳನ್ನು ಮಾಡಬಾರದು ಎನ್ನುವ ಮನವಿಗೆ ಸ್ಪಂದಿಸಿದ ಸಿಎಂ, ಸಂಬಂಧಪಟ್ಟ ಅಧಿಕಾರಿಗಳು ಸಚಿವರ ಜೊತೆ ಮಾತನಾಡಿ ಪರಿಶೀಲಿಸಿ ಸಮಸ್ಯೆ ಪರಿಹರಿಸುವ ಭರವಸೆ ನೀಡಿದ್ದಾರೆ.
ಶಿಕ್ಷಣ ತಜ್ಞರು, ಸಾಹಿತಿಗಳು ಬರಹಗಾರರು ಕೂಡ ಎರಡು ಪರೀಕ್ಷೆ ನಡೆಸಬಾರದು ಎಂದು ಹೇಳುತ್ತಿದ್ದಾರೆ. ನಮ್ಮ ಉಪನ್ಯಾಸಕರು, ಪ್ರಾಂಶುಪಾಲರು, ಉಪಕುಲಪತಿಗಳು ಕೂಡ 2 ಪರೀಕ್ಷೆ ನಡೆಸಬಾರದು ಸರ್ಕಾರದಿಂದ ನಿರ್ದೇಶನ ಬೇಕು ಎಂದು ಕೇಳುತ್ತಿದ್ದಾರೆ ಇದನ್ನು ಸಿಎಂ ಗಮನಕ್ಕೆ ತಂದಿದ್ದೇವೆ ಇದನ್ನು ಪರಿಹರಿಸುವ ಭರವಸೆ ನೀಡಿದ್ದಾರೆ. ಸರ್ಕಾರ ನಮ್ಮ ಬೇಡಿಕೆ ಈಡೇರಿಸದಿದ್ದಲ್ಲಿ ಮುಂದಿನ ಹಂತದ ಹೋರಾಟ ನಡೆಸಬೇಕಾಗುತ್ತದೆ ಪರೀಕ್ಷೆ ಬಹಿಷ್ಕರಿಸಲು ನಾವು ಸಿದ್ದರಿದ್ದೇವೆ ಎಂದು ಎಚ್ಚರಿಕೆ ನೀಡಿದೆ.
ಇದೇ ವೇಳೆ ಶಾಲಾ ಶುಲ್ಕ ಕಡಿತ ಮಾಡುವಂತೆ ಸಿಎಂ ಯಡಿಯೂರಪ್ಪಗೆ ಕರ್ನಾಟಕ ರಾಜ್ಯ ಖಾಸಗಿ ಶಾಲಾ ಪೋಷಕರ ಸಂಘಟನೆಗಳ ಸಮನ್ವಯ ವೇದಿಕೆಯ ಮನವಿ ಸಲ್ಲಿಸಿತು. ಕೊವಿಡ್ ಮಹಾ ಸಾಂಕ್ರಾಮಿಕ ಆರ್ಥಿಕ ಸಂಕಷ್ಟದ ಹಿನ್ನೆಲೆಯಲ್ಲಿ 2021-22 ನೆ ಸಾಲಿನ ಶೈಕ್ಷಣಿಕ ವರ್ಷದ ಶುಲ್ಕವನ್ನು ಕಡಿತಗೊಳಿಸುವಂತೆ ಮನವಿ ಮಾಡಿದ ನಿಯೋಗ, ಸರ್ಕಾರೀ ಆದೇಶಗಳನ್ನು ಪಾಲಿಸದ ಖಾಸಗಿ ಶಿಕ್ಷಣ ಸಂಸ್ಥೆಗಳ ವಿರುದ್ಧ ಕಟ್ಟುನಿಟ್ಟಾಗಿ ಕ್ರಮ ಜರುಗಿಸುವಂತೆ ಒತ್ತಾಯಿತು. ಇತರೆ ರಾಜ್ಯಗಳಲ್ಲಿ ಇರುವಂತೆ ನಮ್ಮ ರಾಜ್ಯದಲ್ಲಿಯೂ ಶಿಕ್ಷಣ ಶುಲ್ಕ ನಿಯಂತ್ರಣ ಕಾನೂನನ್ನು ಶೀಘ್ರವಾಗಿ ಜಾರಿಗೆ ತರುವಂತೆ ಮನವಿ ಮಾಡಿತು.ರಾಜ್ಯದ ಕೋವಿಡ್ ತಜ್ಞರ ಸಮಿತಿಯ ಶಿಫಾರಸಿನಂತೆ ರಾಜ್ಯದ ಎಲ್ಲ ಶಾಲೆಗಳನ್ನು ಹಂತಹಂತವಾಗಿ ಆರಂಭಿಸಿ ಮಕ್ಕಳ ಪರಿಪೂರ್ಣ ಶಿಕ್ಷಣಕ್ಕೆ ಅನುವು ಮಾಡಿಕೊಡುವಂತೆ ಮನವಿ ಮಾಡಿತು.