ಕರ್ನಾಟಕ

karnataka

By

Published : Jul 24, 2021, 5:55 PM IST

ETV Bharat / city

ಬಾಡಿಗೆ ನೀಡದ ಅಗ್ನಿ ಏರೋ ಸ್ಪೋರ್ಟ್ಸ್ ಅಡ್ವೆಂಚರ್ ಅಕಾಡೆಮಿ ಆಸ್ತಿ ಮುಟ್ಟುಗೋಲು

ಬೆಂಗಳೂರಿನ ಜಕ್ಕೂರಿನಲ್ಲಿರುವ ಸರ್ಕಾರಿ ವೈಮಾನಿಕ ತರಬೇತಿ ಶಾಲೆ ಆವರಣದಲ್ಲಿ ಅಗ್ನಿ ಏರೋ ಸ್ಪೋರ್ಟ್ಸ್‌ಗೆ ಲೀಸ್ ಕಮ್ ಬಾಡಿಗೆ ಆಧಾರದಲ್ಲಿ 80×120 ಅಡಿ ಹಳತೆಯ ಎರಡು ಹ್ಯಾಂಗರ್ ನಿವೇಶನ ನೀಡಲಾಗಿತ್ತು. ಆದರೆ 2008 ರಿಂದ ಈವರೆಗೆ ಸರಿಯಾಗಿ ಬಾಡಿಗೆ ನೀಡದೆ, ಸ್ಥಳವನ್ನು ಒತ್ತುವರಿ ಮಾಡಿಕೊಂಡ ಹಿನ್ನೆಲೆಯಲ್ಲಿ ಅಗ್ನಿ ಏರೋ ಸ್ಪೋರ್ಟ್ಸ್‌ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.

Agni Aero Sports Adventure Academy
ಅಗ್ನಿ ಏರೋ ಸೋರ್ಟ್ಸ್ ಅಡ್ವೆಂಚರ್ ಅಕಾಡೆಮಿ ಆಸ್ತಿ ಮುಟ್ಟುಗೋಲು

ಬೆಂಗಳೂರು:ಕಳೆದ 12 ವರ್ಷಗಳಿಂದ ಸರಿಯಾಗಿ ಬಾಡಿಗೆ ನೀಡದೆ, ಕೊಟ್ಟ ನೋಟಿಸ್‌ಗೂ ಉತ್ತರಿಸದೆ ಉದ್ಧಟತನ ತೋರಿದ ಅಗ್ನಿ ಏರೋ ಸೋರ್ಟ್ಸ್ ಪ್ರೈವೆಟ್ ಲಿಮಿಟೆಡ್ ಸಂಸ್ಥೆಯ ಆಸ್ತಿಯನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಂಡಿದೆ.

ಬೆಂಗಳೂರಿನ ಜಕ್ಕೂರಿನಲ್ಲಿರುವ ಸರ್ಕಾರಿ ವೈಮಾನಿಕ ತರಬೇತಿ ಶಾಲೆ ಆವರಣದಲ್ಲಿ ಅಗ್ನಿ ಏರೋ ಸೋರ್ಟ್ಸ್‌ಗೆ ಗುತ್ತಿಗೆ, ಬಾಡಿಗೆ ಆಧಾರದಲ್ಲಿ 80×120 ಅಡಿ ಹಳತೆಯ ಎರಡು ಹ್ಯಾಂಗರ್ ನಿವೇಶನಗಳನ್ನು ನೀಡಲಾಗಿತ್ತು. ಆದರೆ 2008 ರಿಂದ ಈವರೆಗೆ ಸರಿಯಾಗಿ ಬಾಡಿಗೆ ನೀಡದೆ, ಸ್ಥಳವನ್ನು ಒತ್ತುವರಿ ಮಾಡಿಕೊಂಡ ಹಿನ್ನೆಲೆಯಲ್ಲಿ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.

ಅಗ್ನಿ ಏರೋ ಸೋರ್ಟ್ಸ್ ಅಡ್ವೆಂಚರ್ ಅಕಾಡೆಮಿ ಆಸ್ತಿ ಮುಟ್ಟುಗೋಲು

ಅಗ್ನಿ ಏರೋ ಸ್ಪೋರ್ಟ್ಸ್‌ ಅಡ್ವೆಂಚರ್ ಬಾಡಿಗೆ ನೀಡದ ಕಾರಣ ನೋಟಿಸ್ ನೀಡಲಾಗಿತ್ತು. ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಡಾ.ನಾರಾಯಣಗೌಡ ಸಭೆ ನಡೆಸಿ, ತಕ್ಷಣ ಬಾಡಿಗೆ ವಸೂಲು ಮಾಡಬೇಕು. ಇಲ್ಲವೇ ಆಸ್ತಿ ಮುಟ್ಟುಗೋಲು ಹಾಕಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. 2008 ರಿಂದ ಇದುವರೆಗೆ ಅಗ್ನಿ ಏರೋ ಸ್ಪೋರ್ಟ್ 1,50,55,455 ರೂ. ಬಾಡಿಗೆ ಬಾಕಿ ಹಣ ನೀಡಿಲ್ಲ. ಈ ಹಿನ್ನೆಲೆಯಲ್ಲಿ ಕಾನೂನುನಾತ್ಮಕವಾಗಿ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಅಲ್ಲದೆ, ಅಕ್ರಮವಾಗಿ ವೈಮಾನಿಕ ತರಬೇತಿ ಶಾಲೆಯ ನಿವೇಶವನ್ನು ಒತ್ತುವರಿ ಮಾಡಿಕೊಂಡಿದ್ದರು. ಸರ್ವೇ ನಡೆಸಿದ ಅಧಿಕಾರಿಗಳು, 24,143 ಚದರ ಅಡಿ ಜಾಗ ಒತ್ತುವರಿಯಾಗಿರುವುದನ್ನ ಗುರುತಿಸಿದ್ದಾರೆ. ಬಾಡಿಗೆ ಬಾಕಿ ನೀಡುವಂತೆ ಹಾಗೂ ಒತ್ತುವರಿ ತೆರವುಗೊಳಿಸುವಂತೆ ನೋಟಿಸ್‌ ನೀಡಿದರೂ ಉತ್ತರ ನೀಡಿರಲಿಲ್ಲ.

ಸರ್ಕಾರಿ ವೈಮಾನಿಕ ತರಬೇತಿ ಶಾಲೆ ಆವರಣದಲ್ಲಿ ಸಕ್ಷಮ ಪ್ರಾಧಿಕಾರಗಳ ಅನುಮತಿ ಪಡೆಯದೆ, ತಮ್ಮ ಸಂಸ್ಥೆಯ ಕಚೇರಿಯನ್ನು ಅನಧಿಕೃತವಾಗಿ ನಿರ್ಮಿಸಿಕೊಂಡಿದ್ದರು. ಡಿಜಿಸಿಎ ನಿಯಮ ಉಲ್ಲಂಘಿಸಿ ವಾಣಿಜ್ಯ ಮಾದರಿಯಲ್ಲಿ ಅನಧಿಕೃತವಾಗಿ ಮೈಕ್ರೋಲೈಟ್ ವಿಮಾನಗಳಲ್ಲಿ ಸಾರ್ವಜನಿಕರಿಗೆ ಜಾಲಿ ರೈಡ್ ಆಯೋಜಿಸುತ್ತಿದ್ದರು. ಇದರಿಂದ ವಾರ್ಷಿಕ ಕೋಟ್ಯಾಂತರ ರೂಪಾಯಿ ಆದಾಯ ಗಳಿಸುತ್ತಿದ್ದು, ಸರ್ಕಾರಕ್ಕೆ ತೆರಿಗೆ ವಂಚನೆ ಮಾಡುತ್ತಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ.

ಅಗ್ನಿ ಏರೋ ಸೋರ್ಟ್ಸ್ ಅಡ್ವೆಂಚರ್ ಅಕಾಡೆಮಿ ಆಸ್ತಿ ಮುಟ್ಟುಗೋಲು

ಸರ್ಕಾರಿ ವೈಮಾನಿಕ ತರಬೇತಿ ಶಾಲೆ ಆವರಣದೊಳಗೆ ಅನಧಿಕೃತ ವ್ಯಕ್ತಿಗಳಿಗೆ ಪ್ರವೇಶ ನೀಡಿದ್ದಾರೆ. ತಮ್ಮ ವಿಮಾನಗಳಲ್ಲಿ ಅಕ್ರಮ ಹಾರಾಟಕ್ಕೆ ಅವಕಾಶ ನೀಡಿ, ರಾಷ್ಟ್ರೀಯ ಭದ್ರತೆಗೆ ಧಕ್ಕೆಯಾಗುವ ರೀತಿ ನಡೆದುಕೊಂಡಿದ್ದಾರೆ. ವೈಮಾನಿಕ ಉದ್ದೇಶಕ್ಕೆ ನೀಡಿದ್ದ ಹ್ಯಾಂಗರ್ ಸ್ಥಳಗಳನ್ನು ಅನಧಿಕೃತ ಚಟುವಟಿಕೆಗಳಿಗೆ ಬಳಸಿ ಬಾಡಿಗೆ ಷರತ್ತು ಉಲ್ಲಂಘಿಸಿದ್ದಾರೆ. ಖಾಸಗಿ ವ್ಯಕ್ತಿಗಳ ವಿಮಾನ, ಮೈಕ್ರೋಲೈಟ್, ಪ್ಯಾರಾಮೋಟಾರ್ ಗ್ಲೈಡರ್ ಮತ್ತಿತರ ವೈಮಾನಿಕ ಉಪಕರಣಗಳನ್ನು ತಮ್ಮ ಹ್ಯಾಂಗರ್‌ನಲ್ಲಿ ಇಡಲು ಅವಕಾಶ ಕಲ್ಪಿಸಿ ಖಾಸಗಿ ವ್ಯಾಜ್ಯಗಳಿಗೆ ಅವಕಾಶ ನೀಡಿದ್ದಾರೆ.

ನಿವೇಶನ ರದ್ದು, ಬಾಕಿ ನೀಡುವವರೆಗೆ ಆಸ್ತಿ ಮುಟ್ಟುಗೋಲು

ಅಗ್ನಿ ಏರೋ ಸ್ಪೋರ್ಟ್ಸ್ ಅಡ್ವೆಂಚರ್ ಅಕಾಡೆಮಿ ಪ್ರೈವೇಟ್ ಲಿಮೆಟೆಡ್ ಸಂಸ್ಥೆ ನಿಯಮಗಳನ್ನೆಲ್ಲ ಉಲ್ಲಂಘಿಸಿ, ನೋಟಿಸ್‌ಗೂ ಉತ್ತರಿಸದೆ ಷರತ್ತಿಗೆ ವಿರುದ್ಧವಾಗಿ ನಡೆದುಕೊಂಡಿದೆ. ಆದ್ದರಿಂದ ಸಂಸ್ಥೆಗೆ ಗುತ್ತಿಗೆ ಹಾಗೂ ಬಾಡಿಗೆ ಆಧಾರದಲ್ಲಿ ನೀಡಿದ್ದ 19,200 ಚದರ್ ಆಡಿ ನಿವೇಶನವನ್ನು ರದ್ದುಪಡಿಸಲಾಗಿದೆ. ಬಾಡಿಗೆ ಹಣವನ್ನು ಪಾವತಿಸುವವರೆಗೆ ಸಂಸ್ಥೆಯ ಎಲ್ಲಾ ಸ್ವತ್ತುಗಳನ್ನು ಯಥಾಸ್ಥಿತಿಯಲ್ಲಿ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಸಂಸ್ಥೆಯ ಎಲ್ಲಾ ಚಟುವಟಿಕೆಗಳನ್ನು ಸ್ಥಗಿತಗೊಳಿಸಲಾಗಿದೆ.

ಯುವ ಸಬಲೀಕರಣ ಮತ್ತು ಕ್ರೀಡೆ, ಯೋಜನೆ, ಕಾರ್ಯಕ್ರಮ ಸಂಯೋಜನೆ ಹಾಗೂ ಸಾಂಖ್ಯಿಕ ಇಲಾಖೆ ಸಚಿವ ನಾರಾಯಣಗೌಡ ವೈಮಾನಿಕ ತರಬೇತಿ ಶಾಲೆ ಆವರಣದಲ್ಲಿರುವ ಎಲ್ಲಾ ಸಂಸ್ಥೆಗಳ ಬಾಡಿಗೆ ಬಾಕಿ ಹಣದ ವಿಚಾರವಾಗಿ ಮೂರ್ನಾಲ್ಕು ಸಭೆ ನಡೆಸಿದ್ದರು. ಸಚಿವರ ಸೂಚನೆಯಂತೆ ಅಧಿಕಾರಿಗಳು ಮೇಲಿಂದ ಮೇಲೆ ನೋಟಿಸ್‌ ನೀಡಿದ್ದರು. ಆದರೆ ಸದರಿ ಸಂಸ್ಥೆ ಮಾತ್ರ ಷರತ್ತು ಉಲ್ಲಂಘಿಸಿ ವರ್ತಿಸಿದೆ. ಈ ಕಾರಣದಿಂದ ಸಚಿವರು ನೋಟಿಸ್ ಅವಧಿ ಮುಗಿದ ತಕ್ಷಣ ಕಾನೂನು ರೀತಿಯಲ್ಲಿ ಕ್ರಮ ಜರುಗಿಸುವಂತೆ ಸೂಚಿಸಿದ್ದರು. ಅಂತೆಯೇ ಜಕ್ಕೂರು ಸರ್ಕಾರಿ ವೈಮಾನಿಕ ತರಬೇತಿ ಶಾಲೆ ಮತ್ತು ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಅಧಿಕಾರಿಗಳು ಸರ್ವೇ ನಡೆಸಿ, ಸಚಿವರಿಗೆ ವರದಿ ನೀಡಿದ್ದರು. ಬಾಡಿಗೆ ಬಾಕಿ ಮತ್ತು ಅಕ್ರಮವಾಗಿ ನಿವೇಶನ ಒತ್ತುವರಿ ಕಾರಣ ಆಗ್ನಿ ಏರೋಸ್ಪೋರ್ಟ್ಸ್‌ ಆಸ್ತಿಯನ್ನು ಮುಟ್ಟುಗೋಲು ಹಾಕಿ ಬೀಗ ಹಾಕಿದ್ದಾರೆ.

ಅಗ್ನಿ ಏರೋ ಸೋರ್ಟ್ಸ್ ಅಡ್ವೆಂಚರ್ ಅಕಾಡೆಮಿ ಆಸ್ತಿ ಮುಟ್ಟುಗೋಲು

ಷರತ್ತಿನಂತೆ ನಡೆಯದಿದ್ದರೆ ಉಳಿದ ಸಂಸ್ಥೆಗಳ ಮೇಲೂ ಇದೇ ಕ್ರಮ

ವೈಮಾನಿಕ ತರಬೇತಿ ಶಾಲೆ ಆವರಣದಲ್ಲಿರುವ ಎಲ್ಲಾ ಕಂಪನಿಗಳಿಗೂ ಈಗಾಗಲೇ ನೋಟಿಸ್ ನೀಡಲಾಗಿದೆ. ಉಳಿದ ಕಂಪನಿಗಳು ನೋಟಿಸ್‌ಗೆ ಉತ್ತರಿಸಿ ಅಲ್ಪ ಪ್ರಮಾಣದಲ್ಲಿ ಬಾಡಿಗೆಯನ್ನು ಪಾವತಿಸಿವೆ. ಆದರೆ, ಸಂಪೂರ್ಣ ಬಾಡಿಗೆ ಹಣ ಪಾವತಿಸಬೇಕು. ನಿಯಮ ಉಲ್ಲಂಘನೆಯಾಗಿದ್ದಲ್ಲಿ ತಕ್ಷಣ ಸರಿಪಡಿಸಿಕೊಳ್ಳಬೇಕು. ಇದಕ್ಕೆ 15 ದಿನಗಳ ಕಾಲಾವಕಾಶ ನೀಡಲಾಗಿದೆ. ಅಷ್ಟರೊಳಗೆ ಬಾಕಿ ಹಣ ಪಾವತಿಯಾಗದಿದ್ದಲ್ಲಿ ಎಲ್ಲಾ ಚಟುವಟಿಕೆ ಸ್ಥಗಿತಗೊಳಿಸಿ, ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲಾಗುವುದು. ಉದ್ಧಟತನ ತೋರಿದ ಅಗ್ನಿ ಏರೋ ಸ್ಪೋರ್ಟ್ಸ್‌ ಮೇಲೆ ನಿಯಮಾನುಸಾರ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಸಚಿವ ಡಾ. ನಾರಾಯಣಗೌಡ ತಿಳಿಸಿದ್ದಾರೆ.

ಇದನ್ನೂ ಓದಿ:ಉ.ಕ ಭಾಗದ ಪಂಚಮಸಾಲಿ ಸಮುದಾಯಕ್ಕೆ ಸಿಎಂ ಸ್ಥಾನಕ್ಕೆ ಬಸವಜಯ ಮೃತ್ಯುಂಜಯ ಸ್ವಾಮೀಜಿ ಒತ್ತಾಯ

ABOUT THE AUTHOR

...view details