ಬೆಂಗಳೂರು: ಹಣದಾಸೆ ತೋರಿಸಿ ಬಡ ಪೋಷಕರನ್ನು ಪುಸಲಾಯಿಸಿ ಮಕ್ಕಳನ್ನು ಖರೀದಿಸಿ ಬೆಂಗಳೂರು, ತಮಿಳುನಾಡು ಸೇರಿದಂತೆ ವಿವಿಧೆಡೆಗಳಲ್ಲಿ ಮಾರಾಟ ಮಾಡುತ್ತಿದ್ದ ಗ್ಯಾಂಗ್ ಅನ್ನು ನಗರ ದಕ್ಷಿಣ ವಿಭಾಗದ ಪೊಲೀಸರು ಪತ್ತೆ ಹಚ್ಚಿದ್ದಾರೆ.
ಇತ್ತೀಚಿನ ವರ್ಷಗಳಲ್ಲಿ ನಗರದಲ್ಲಿ ಮಕ್ಕಳ ಮಾರಾಟ ದಂಧೆ ಅವ್ಯಾಹತವಾಗಿ ನಡೆಯುತ್ತಿದೆ. ಮಹಿಳೆಯರೇ ಅಕ್ರಮದಲ್ಲಿ ಭಾಗಿಯಾಗುತ್ತಿರುವುದು ಆತಂಕಕಾರಿ ಬೆಳವಣಿಗೆ.
ಐವರ ಬಂಧನ, 11ಮಕ್ಕಳ ರಕ್ಷಣೆ:
ಕಳೆದ ವರ್ಷ ಚಾಮರಾಜಪೇಟೆ ಸರ್ಕಾರಿ ಹೆರಿಗೆ ಅಸ್ಪತ್ರೆಯೊಂದರಲ್ಲಿ ಮಗು ಕಳ್ಳತನ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸ್ ತನಿಖೆಯ ಮುಂದುವರೆದ ಭಾಗವಾಗಿ ಮಕ್ಕಳ ಮಾರಾಟ ದಂಧೆಯಲ್ಲಿ ತೊಡಗಿದ್ದ ಐವರನ್ನು ಬಂಧಿಸಿ 11 ಮಕ್ಕಳನ್ನು ರಕ್ಷಿಸಿ ಮಕ್ಕಳ ಕಲ್ಯಾಣ ಸಮಿತಿ ಆದೇಶದಂತೆ ಪೋಷಕರಿಗೆ ಹಸ್ತಾಂತರಿಸಿದ್ದಾರೆ. ಈ ದಂಧೆಯಲ್ಲಿ ಭಾಗಿಯಾಗಿದ್ದ ದೇವಿ ಷಣ್ಮುಗಂ, ಮಹೇಶ್ ಕುಮಾರ್, ರಂಜನಾ ದೇವಿಪ್ರಸಾದ್, ಜನಾರ್ಧನ್, ಧನಲಕ್ಷ್ಮೀ ಎಂಬುವರನ್ನು ಬಂಧಿಸಲಾಗಿದೆ. ಪ್ರಕರಣದ ಕಿಂಗ್ ಪಿನ್ ರತ್ನಾ ಎಂಬಾಕೆ ಕಳೆದ ಮೇ ತಿಂಗಳಲ್ಲಿ ಕೊರೊನಾಗೆ ಬಲಿಯಾಗಿದ್ದಳು.
ತನಿಖೆ ಹೇಗಾಯಿತು?
ಮಗು ಕಳ್ಳತನ ಪ್ರಕರಣವೊಂದರ ತನಿಖೆ ನಡೆಸುತ್ತಿದ್ದ ಪೊಲೀಸರು ಮಕ್ಕಳ ಮಾರಾಟ ದಂಧೆ ಬಗ್ಗೆ ಅರಿಯಲು ಆಸ್ಪತ್ರೆ ಹಾಗೂ ಅದರ ಸುತ್ತಮುತ್ತಲು ಅನುಮಾನಾಸ್ಪದವಾಗಿ ಓಡಾಡುವ ವ್ಯಕ್ತಿಗಳ ಮೇಲೆ ನಿಗಾ ವಹಿಸಿದ್ದರು. ಈ ವೇಳೆ ಕೆಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆರೋಪಿತರ ಬಗ್ಗೆ ಬಾಯ್ಬಿಟ್ಟಿದ್ದಾರೆ. ಖಚಿತ ಮಾಹಿತಿ ಆಧರಿಸಿ ರತ್ನ ಹಾಗೂ ದೇವಿ ಗ್ಯಾಂಗ್ ಅನ್ನು ಪೊಲೀಸರು ಬಂಧಿಸಿದ್ದರು. ಆ ವೇಳೆ ರತ್ನಾಳ ಮನೆಯಲ್ಲಿ ಪರಿಶೀಲನೆ ನಡೆಸಿದಾಗ 28 ನಕಲಿ ತಾಯಿ ಕಾರ್ಡ್ಗಳು ಪತ್ತೆಯಾಗಿದ್ದವು. ಇದರ ಬಗ್ಗೆ ತೀವ್ರ ವಿಚಾರಣೆ ನಡೆಸಿದಾಗ ಮಕ್ಕಳ ಮಾರಾಟ ದಂಧೆಯಲ್ಲಿ ತೊಡಗಿರುವ ವಿಷಯ ಬಯಲಾಗಿತ್ತು.