ಬೆಂಗಳೂರು: ಕಡಿಮೆ ಬೆಲೆಯಲ್ಲಿ ನಿವೇಶನ ಕೊಡಿಸುವುದಾಗಿ ಸಾವಿರಾರು ಜನರಿಂದ ಕೋಟ್ಯಂತರ ರೂಪಾಯಿ ಹೂಡಿಕೆ ಮಾಡಿಸಿಕೊಂಡಿದ್ದ ಬೃಂದಾವನ ಪ್ರಾಪರ್ಟೀಸ್ ವಿರುದ್ಧ ಈವರೆಗೂ 3,800 ದೂರು ಬಂದಿವೆ. 86 ಕೋಟಿ ರೂಪಾಯಿ ನಷ್ಟವಾಗಿರುವುದು ತನಿಖೆ ವೇಳೆ ರಾಜಾಜಿನಗರ ಪೊಲೀಸರು ಕಂಡುಕೊಂಡಿದ್ದಾರೆ.
ತಾವರೆಕೆರೆ, ಮಾಗಡಿರೋಡ್, ನೆಲಮಂಗಲ ಹಾಗೂ ಕಗ್ಗಲಿಪುರ ಸೇರಿದಂತೆ ಹಲವು ಕಡೆಗಳಲ್ಲಿ ಕಡಿಮೆ ಬೆಲೆಯಲ್ಲಿ ನಿವೇಶನ ಕೊಡಿಸುವುದಾಗಿ ಹೇಳಿ ಕಂಪನಿಯು ಜನರಿಂದ 1ರಿಂದ 5 ಲಕ್ಷದವರೆಗೆ ಹಣ ಪಡೆದಿತ್ತು. ಹಣ ನೀಡಿದ ಬಳಿಕ ನಿವೇಶನ ಕೇಳಿದರೆ ನೀಡಬೇಕಾಗಿರುವ ಬಡಾವಣೆ ಜಾಗ ಅಭಿವೃದ್ದಿಪಡಿಸುತ್ತಿದ್ದು, ಮುಗಿದ ಬಳಿಕ ನೀಡಲಾಗುವುದು ಎಂದು ಭರವಸೆ ನೀಡಿತ್ತು. ಹಲವು ವರ್ಷಗಳಾದರೂ ನಿವೇಶನ ಕೊಡಿಸದೆ ಸತಾಯಿಸಿತ್ತು.
ಆರೋಪಿ ದಿನೇಶ್ ಗೌಡ ಅರೆಸ್ಟ್ :ಮತ್ತೊಂದೆಡೆ ಕಂಪನಿ ಮುಖ್ಯಸ್ಥ ದಿನೇಶ್ ಗೌಡ ತಲೆಮರೆಸಿಕೊಂಡಿದ್ದರಿಂದ ರಾಜಾಜಿನಗರದಲ್ಲಿರುವ ಕಂಪನಿ ಮುಂದೆ ಹೂಡಿಕೆ ಮಾಡಿದ ಹಣ ಹಿಂತಿರುಗಿಸುವಂತೆ ಜನರು ಪ್ರತಿಭಟಿಸಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು, ಕಂಪನಿ ಮಾಲೀಕ ದಿನೇಶ್ ಗೌಡನನ್ನು ಪೊಲೀಸರು ಬಂಧಿಸಿದ್ದರು.