ಕರ್ನಾಟಕ

karnataka

ಬೆಂಗಳೂರಿನ ಪೊಲೀಸ್‌ ವಸತಿ ಸಮುಚ್ಚಯದಲ್ಲಿ ಬಿರುಕು, ವಾಲಿದ ಕಟ್ಟಡ: 32 ಕುಟುಂಬಗಳ ಸ್ಥಳಾಂತರ

By

Published : Oct 17, 2021, 7:52 AM IST

Updated : Oct 17, 2021, 8:28 AM IST

ಬಿನ್ನಿಮಿಲ್ ಸಮೀಪದಲ್ಲಿ ಬಿರುಕುಬಿಟ್ಟ ಪೊಲೀಸ್ ವಸತಿ ಸಮುಚ್ಚಯದ ಬಿ ಬ್ಲಾಕ್‌ನಲ್ಲಿರುವ 32 ಕುಟುಂಬವನ್ನು ಅನ್ನಪೂರ್ಣೇಶ್ವರಿನಗರದ ನಾಗರಬಾವಿಯಲ್ಲಿ ನಿರ್ಮಿಸಿರುವ ಸಿ ಬ್ಲಾಕ್‌ನ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ.

bangalore police quarters
ಪೊಲೀಸ್ ವಸತಿ ಸಮುಚ್ಚಯ

ಬೆಂಗಳೂರು: ನಗರದಲ್ಲಿ ಮತ್ತೊಂದು ಕಟ್ಟಡ ಕುಸಿಯುವ ಹಂತದಲ್ಲಿ ಕಂಡುಬಂದಿದೆ. ಮೂರು ವರ್ಷಗಳ ಹಿಂದಷ್ಟೇ ನಿರ್ಮಾಣಗೊಂಡಿದ್ದ ಪೊಲೀಸ್ ವಸತಿ ಸಮುಚ್ಚಯದಲ್ಲಿ ಬಿರುಕುಂಟಾಗಿದ್ದು ಸುಮಾರು ಎರಡು ಅಡಿಯಷ್ಟು ಎಡಕ್ಕೆ ವಾಲಿದೆ.

ಪೊಲೀಸ್ ಇಲಾಖೆ ಕಟ್ಟಡದಲ್ಲಿದ್ದ 32 ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯ ಕುಟುಂಬವನ್ನು ಅನ್ನಪೂರ್ಣೇಶ್ವರಿ ನಗರದಲ್ಲಿರುವ ಪೊಲೀಸ್ ಕ್ವಾರ್ಟರ್ಸ್‌ಗೆ ಸ್ಥಳಾಂತರಿಸಿದೆ.

ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಭೂತ ಸೌಲಭ್ಯ ಅಭಿವೃದ್ಧಿ ನಿಗಮ ನಿಯಮಿತದಿಂದ 2016ರಲ್ಲಿ ಬಿನ್ನಿಮಿಲ್ ಸಮೀಪದಲ್ಲಿ ನೂತನ ಮಾದರಿಯಲ್ಲಿ 7 ಅಂತಸ್ತಿನ ಕಟ್ಟಡ ನಿರ್ಮಾಣಕ್ಕೆ ಶಂಕು ಸ್ಥಾಪನೆ ಮಾಡಲಾಗಿತ್ತು. ಸುಮಾರು ಎರಡು ವರ್ಷಗಳ ಕಾಲ ನಿರ್ಮಾಣ ಕಾರ್ಯ ನಡೆದಿದ್ದು, 2018ರಲ್ಲಿ ಪೂರ್ಣಗೊಂಡಿತ್ತು. ನಂತರ ನಗರ ಸಶಸ್ತ್ರ ಮೀಸಲು ಪಡೆ, ಸಿವಿಲ್ ಪೊಲೀಸ್ ಸೇರಿ ಪೊಲೀಸ್ ಇಲಾಖೆಯ ವಿವಿಧ ವಿಭಾಗಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸುಮಾರು 64 ಮಂದಿ ಅಧಿಕಾರಿಗಳು, ಸಿಬ್ಬಂದಿಯ ಕುಟುಂಬ ವಾಸವಾಗಿತ್ತು. ಇದೀಗ 32 ಕುಟುಂಬ ವಾಸವಾಗಿರುವ ಕಟ್ಟಡದಲ್ಲಿ ಬಿರುಕು ಬಿಟ್ಟಿದ್ದು, ಎಡಕ್ಕೆ ಎರಡು ಅಡಿಯಷ್ಟು ವಾಲಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಹಂತ ಹಂತವಾಗಿ ವಾಲಿದ ಕಟ್ಟಡ:

ಎರಡು ವರ್ಷಗಳಿಂದ ಕಟ್ಟಡದಲ್ಲಿ ಸಣ್ಣ ಪ್ರಮಾಣದಲ್ಲಿ ಬಿರುಕು ಬಿಟ್ಟಿದ್ದು, ಹಂತ ಹಂತವಾಗಿ ವಾಲಿದೆ. ಶುಕ್ರವಾರ ಮಧ್ಯಾಹ್ನ ಬಿರುಕಿನ ಶಬ್ದ ಕೇಳಿ ಬಂದಿದ್ದು, ಆತಂಕಗೊಂಡ ಕಟ್ಟಡ ನಿವಾಸಿಗಳು ಹೊರಗಡೆ ಬಂದು ನೋಡಿದಾಗ ಕಟ್ಟಡದ ಕೆಲವೆಡೆ ಬಿರುಕು ಬಿಟ್ಟಿದ್ದು ಮತ್ತು ವಾಲಿರುವುದು ಗಮನಕ್ಕೆ ಬಂದಿದೆ. ಈ ಸಂಬಂಧ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್, ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ್ ಎಂ.ಪಾಟೀಲ್ ಭೇಟಿ ನೀಡಿ ಪರಿಶೀಲಿಸಿದರು.

ತಾಂತ್ರಿಕ ತಂಡದಿಂದ ಅಧ್ಯಯನ:

ಎರಡು ವರ್ಷಗಳ ಹಿಂದೆಯೇ ಕಟ್ಟಡದಲ್ಲಿ ಬಿರುಕು ಬಿಟ್ಟಿರುವ ಸಂಬಂಧ ಕಟ್ಟಡ ನಿರ್ಮಿಸಿದ ಸಂಸ್ಥೆಯ ಇಂಜಿನಿಯರ್‌ಗಳು ಮತ್ತು ಭಾರತೀಯ ವಿಜ್ಞಾನ ಸಂಸ್ಥೆ(ಐಐಎಸ್‌ಸಿ)ಯ ಅಧಿಕಾರಿಗಳ ತಾಂತ್ರಿಕ ತಂಡ ಅಧ್ಯಯನ ನಡೆಸಲು ಆರಂಭಿಸಿದ್ದರು.

ಎರಡು ವರ್ಷಗಳ ಹಿಂದೆ ಪೊಲೀಸ್ ಕುಟುಂಬ ವಾಸಿಸಲು ಆರಂಭಿಸಿದ ಬಳಿಕ ಕಟ್ಟಡದ ಕಳಪೆ ಕಾಮಗಾರಿ ಬಗ್ಗೆ ಅಪಸ್ಪರ ಕೇಳಿಬಂದಿತ್ತು. ಆದರೆ, ವಸತಿ ಸಮುಚ್ಚಯ ನಿರ್ಮಾಣದ ಉಸ್ತುವಾರಿ ಹೊತ್ತಿದ್ದ ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಭೂತ ಸೌಲಭ್ಯ ಅಭಿವೃದ್ಧಿ ನಿಗಮ ನಿಯಮಿತ ಅಧ್ಯಕ್ಷರು ಹಾಗೂ ಸದಸ್ಯರು ಯಾವುದೇ ಕ್ರಮ ಕೈಗೊಳ್ಳದೇ, ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಹೆಸರು ಹೇಳಲಿಚ್ಚಿಸದ ಸಿಬ್ಬಂದಿ ತಿಳಿಸಿದ್ದಾರೆ. ಕಟ್ಟಡವನ್ನು ಸಿಮೆಂಟ್ ಬ್ಲಾಕ್​​ಗಳಿಂದ ನಿರ್ಮಿಸಲಾಗಿದ್ದು, ಎರಡು ಗೋಡೆಗಳ ನಡುವೆ ಬೀಮ್ ಹಾಕಿಲ್ಲ. ಹೀಗಾಗಿ ಸಪೋರ್ಟ್ ಕೂಡ ಇಲ್ಲ. ಇದೀಗ ಕಟ್ಟಡದ ವಿವಿಧೆಡೆ ಸುಮಾರು ಆರುವರೆ ಇಂಚಿನಷ್ಟು ಬಿರುಕು ಬಿಟ್ಟಿದೆ ಎಂದು ತಿಳಿದು ಬಂದಿದೆ.

32 ಕುಟುಂಬಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗಿದೆ. ಇಂಜಿನಿಯರ್‌ಗಳು, ಇಂಡಿಯನ್ ಇನ್ಸ್​​‌ಟಿಟ್ಯೂಟ್ ಸೈನ್ಸ್​ ತಜ್ಞರು ಪರಿಶೀಲಿಸುತ್ತಿದ್ದು, ಈ ಕುರಿತು ವರದಿ ನೀಡಲಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಕಮಲ್‌ ಪಂತ್ ತಿಳಿಸಿದ್ದಾರೆ.

ಇದನ್ನೂ ಓದಿ:ಬೆಂಗಳೂರಲ್ಲಿ ಮತ್ತೊಂದು ಕಟ್ಟಡ ಕುಸಿಯುವ ಭೀತಿ: ಒಂದು ಅಡಿಯಷ್ಟು ವಾಲಿದ ಪೊಲೀಸ್ ಕ್ವಾಟರ್ಸ್

Last Updated : Oct 17, 2021, 8:28 AM IST

ABOUT THE AUTHOR

...view details